ಕನ್ನಡ ಮಹಿಳಾ ಕಾವ್ಯ

ಕನ್ನಡ ಮಹಿಳಾ ಕಾವ್ಯ

ಪುಸ್ತಕದ ಲೇಖಕ/ಕವಿಯ ಹೆಸರು
ಸಂ: ಪ್ರೊ. ಸಬೀಹಾ ಭೂಮಿಗೌಡ
ಪ್ರಕಾಶಕರು
ಕವಿ ಪ್ರಕಾಶನ, ಕವಲಕ್ಕಿ ಅಂಚೆ, ಹೊನ್ನಾವರ, ಉ.ಕ. ೫೮೧೩೬೧
ಪುಸ್ತಕದ ಬೆಲೆ
ರೂ. ೨೫೦.೦೦, ಮುದ್ರಣ: ೨೦೨೩

ಕನ್ನಡ ಮಹಿಳಾ ಕಾವ್ಯ’ ಪ್ರಾತಿನಿಧಿಕ ಸಂಗ್ರಹ ೨೦೨೦-೨೦೨೧- ಎಚ್.ಎಸ್. ಅನುಪಮಾ ಅವರ ಕವಿ ಪ್ರಕಾಶನದಿಂದ ಪ್ರಕಟಗೊಂಡಿರುವ ಈ ಕೃತಿಯನ್ನು ಪ್ರೊ. ಸಬಿಹಾ ಭೂಮಿಗೌಡ ಅವರು ಸಂಪಾದಿಸಿದ್ದಾರೆ. ಈ ಕೃತಿಯ ಕುರಿತು ತಿಳಿಸುತ್ತಾ ‘ಕನ್ನಡ ಸಾಹಿತ್ಯದ ಪ್ರಾತಿನಿಧಿಕ ಕವನ ಸಂಪುಟಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ತೀರ ಸೊರಗಿರುವುದನ್ನು ಸ್ತ್ರೀವಾದಿಗಳು ಆಧಾರ ಸಹಿತವಾಗಿ ದಾಖಲಿಸಿದ್ದಾರೆ. ಆ ಕಾರಣಕ್ಕಾಗಿ ಮಹಿಳೆಯರ ಬರಹಗಳಿಗೆ ಉತ್ತೇಜನ ನೀಡಲು ಆರಂಭವಾದ ಪ್ರತ್ಯೇಕ ಕಾವ್ಯ ಸಂಪುಟಗಳು ಅನಂತರದಲ್ಲಿ ಅಸ್ಮಿತೆಯ ಕಾರಣದಿಂದ ಪ್ರಕಟಿಸುವ ತುರ್ತನ್ನು ಎದುರುಗೊಂಡವು ಎಂಬುದು ವಾಸ್ತವ. ಆದರೆ ಇದೊಂದೇ ಕಾರಣವಲ್ಲ. ಕಳೆದ ಶತಮಾನದ ಎಪ್ಪತ್ತು-ಎಂಬತ್ತರ ದಶಕಗಳ ವಾರ್ಷಿಕ ಸಾಹಿತ್ಯ ಸಮೀಕ್ಷೆಗಳಲ್ಲಿ `ಈ ವರ್ಷದಲ್ಲಿ ಮಹಿಳೆಯರು ಕೆಲವು ಮುಖ್ಯ ಕಾದಂಬರಿ ಮತ್ತು ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ' ಎಂಬ ಒಂದು ಸಾಲಿನ ಶಿಫಾರಸು ನೀಡುತ್ತಿದ್ದ ಕ್ರಮ ಇಂದಿಗೂ ಹೆಚ್ಚೇನೂ ಬದಲಾಗಿಲ್ಲ.

ಮಹಿಳೆಯರ ಮಹತ್ವದ, ಹೊಸ ನೋಟದ, ಅಸ್ಮಿತೆಯ, ಕೃತಿಗಳನ್ನು ಪುರುಷ ವಿಮರ್ಶಕರು ಗಮನಿಸಿಯೇ ಇಲ್ಲ; ಇನ್ನು ವಿಮರ್ಶೆ ಬರೆಯುವುದು ದೂರದ ಮಾತು. ಮುನ್ನುಡಿ, ಬೆನ್ನುಡಿ ಬರೆದ ಕೆಲವು ವಿಮರ್ಶಕರನ್ನು ಹೊರತುಪಡಿಸಿದರೆ, ಆ ಕೊರತೆಯನ್ನು ತುಂಬಿದ್ದು ವಿಮರ್ಶಕಿಯರೇ ಎಂಬುದನ್ನು ಗಮನಿಸಬೇಕು. ಇಂತಹ ಪೂರ್ವಗ್ರಹ, ಜಾಣ ಕುರುಡುತನ ಮತ್ತು ಮರೆವು ಇಂದಿಗೂ ವಿಮರ್ಶಕರಲ್ಲಿ ವ್ಯಾಪಕವಾಗಿರುವ ಹೊತ್ತಲ್ಲಿ ಕವಯಿತ್ರಿಯರ ಪ್ರಾತಿನಿಧಿಕ ಕವನ ಸಂಗ್ರಹಗಳಿಗೆ ಮಹತ್ವವೂ ಇದೆ; ಅವುಗಳ ಪ್ರಕಟಣೆಯ ಅಗತ್ಯವೂ ಇದೆ ಎಂದಿದ್ದಾರೆ ಪ್ರೊ. ಸಬಿಹಾ ಭೂಮಿಗೌಡ.

ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಸಾಹಿತಿ ಎಚ್ ಎಸ್ ಅನುಪಮಾ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳು ನಿಮ್ಮ ಓದಿಗಾಗಿ ಇಲ್ಲಿದೆ.."ಕವಿತೆ ಭಾವದಾಸಗದ ಹಕ್ಕಿ. ಅದನ್ನು ಶಬ್ಧಗಳಲ್ಲಿ ಪೂರ್ಣ ಹಿಡಿಯಬಹುದೆಂಬುದೇ ಭ್ರಮೆ. ಕವಿತೆಯ ಸನಿಹಕ್ಕೆ ಶಬ್ಧ ಕೊಂಡೊಯ್ಯಬಲ್ಲದು. ಶಬ್ಧ ಪಂಜರದಲ್ಲಿ ಕೂರಿಸಿದರೆ ಕವಿತೆ ರೆಕ್ಕೆ ಬಿಚ್ಚಬಲ್ಲದು. ಆದರೆ ಅದು ಸ್ವಚ್ಛಂದ ಹಾರುವುದು ಓದುವವರ ಮನದಾಗಸದಲ್ಲಿ ಮಾತ್ರ.

ಕವಿತೆ ಹಕ್ಕಿ.
ನಮ್ಮೆಲ್ಲರ ಹೊರಗೆ ದಿನನಿತ್ಯ ಸಂತೆ ನೆರೆಯುತ್ತದೆ, ಚದುರುತ್ತದೆ. ಹಾಗೇ ಒಳಗೂ ಒಂದು ಸಂತೆ ನೆರೆಯುತ್ತದೆ, ಆದರೆ ನೆರೆಯುತ್ತಲೇ ಹೋಗುತ್ತದೆ. ಎಲ್ಲೋ ಒಮ್ಮೊಮ್ಮೆ ಚದುರಿದಾಗ ಮಹಾಮೌನ ಹುಟ್ಟುತ್ತದೆ. ಆಗ ಬದುಕಿನ ನಗ್ನಸತ್ಯಗಳ ದರ್ಶನವಾಗುತ್ತವೆ. ಮಹಾಮೌನ ತೋರಿಸಿದ ಸತ್ಯಗಳಿಗೆ ಅಕ್ಷರ ಬಟ್ಟೆ ತೊಡಿಸುತ್ತೇವೆ. ಕತೆ, ಕವಿತೆ ಎನ್ನುತ್ತೇವೆ.

ಕವಿತೆ ಬಟ್ಟೆ.

ಕವಿತೆ ನೆಲದಾಳದ ಶುದ್ಧ ನೀರು. ಅದರ ಬಳಿ ಹೋಗಲು ಸೋಪಾನ ಕಟ್ಟಬಹುದು, ಆದರೆ ಸಂಗ್ರಹಿಸಿ ತರಲಾಗದು. ದಾಹ ಇಂಗಬೇಕಿದ್ದರೆ, ಜೀವ ತಂಪಾಗಬೇಕಿದ್ದರೆ ನೀರು ಕುಡಿಯಬೇಕು.

ಕವಿತೆ ನೀರು. ಶಬ್ದ ಸೋಪಾನ.
ಕವಿತೆ ಈ ಲೋಕವನ್ನು ಬದಲಿಸುವುದೋ ಇಲ್ಲವೋ ಗೊತ್ತಿಲ್ಲ
ಕವಿತೆ ಚರಿತ್ರೆಯನ್ನು ಬದಲಿಸುವುದೋ ಇಲ್ಲವೋ ಗೊತ್ತಿಲ್ಲ
ಕವಿತೆ ವರ್ತಮಾನವನ್ನು ಬದಲಿಸುವುದೋ ಇಲ್ಲವೋ ತಿಳಿದಿಲ್ಲ
ಆದರೆ ಅದು ಕವಿಯನ್ನು ಮಾತ್ರ ಬದಲಾಯಿಸಬಲ್ಲದು

- ಪ್ಯಾಲೆಸ್ಟೀನ್ ಕವಿ ಮಹಮೂದ್ ದರವೇಶ್

ಹೀಗೆ ಕವಿತೆಗಳನ್ನು ಕವಿಜೀವಗಳು, ಕಾವ್ಯಾಸಕ್ತಿಯಿರುವವರು ನಾನಾ ರೀತಿಗಳಲ್ಲಿ ಬಣ್ಣಿಸಿದ್ದಾರೆ, ವ್ಯಾಖ್ಯಾನಿಸಿದ್ದಾರೆ. ಕನ್ನಡ ನೆಲವಂತೂ ಸಾವಿರಾರು ಕವಿಗಳಿಂದ ತುಂಬಿ ತುಳುಕುತ್ತಿದೆ. ಕವಿಗೋಷ್ಟಿಗಳು ಸಾಕಷ್ಟು ನಡೆಯುತ್ತಿವೆ. ಕವಿತೆಯ ಬಗೆಗೆ ಚರ್ಚೆ, ಸಂವಾದಗಳು ಏರ್ಪಡುತ್ತಲಿವೆ. ಆದರೂ ಪ್ರಕಟಿಸಲು ಪ್ರಕಾಶಕರು ಸಿಗುವುದಿಲ್ಲ ಎನ್ನುವುದು ಬಹುತೇಕ ಕವಿಗಳ ಅಳಲಾಗಿದೆ. ಕವಿತೆ ಪುಸ್ತಕ ಖಾಲಿಯಾಗುವುದಿಲ್ಲ ಎನ್ನುವುದು ಪ್ರಕಾಶಕರ ಕಷ್ಟವಾಗಿದೆ. ಅದು ನಿಜವೂ ಹೌದು, ಕವಿತೆ ಪುಸ್ತಕಗಳನ್ನು ಕೊಂಡು ಓದುವವರು ಕನ್ನಡದಲ್ಲಿ ಅತಿಕಡಿಮೆ ಇದ್ದಾರೆ. ಏಕೆ ಹೀಗೆ? ಜನರಿಂದ ಕವಿತೆ ದೂರವಾಗತೊಡಗಿದೆಯೇ? ಕಾವ್ಯವನ್ನು ಬಾಯಲ್ಲಿಟ್ಟುಕೊಂಡು ಜತನ ಮಾಡಿದ ಮೌಖಿಕ ಪರಂಪರೆಯ ಕನ್ನಡ ನೆಲಕ್ಕೆ ಇದೇನಾಯಿತು? ಓಲೆಗರಿಗಳಲ್ಲಿ ವಚನಗಳನ್ನೂ, ಕನ್ನಡ ಕಾವ್ಯ-ಪುರಾಣಗಳನ್ನು ಬರೆಸಿ ಕಾಪಿಟ್ಟ, 'ಶಾಸ್ತ್ರದಾನ' ಮಾಡಿದ ಕನ್ನಡ ಕಾವ್ಯ ಸಂಸ್ಕೃತಿ ಹೀಗೇಕೆ ಬಡವಾಯಿತು? ಖಡ್ಗವಾಗಲಿ ಕಾವ್ಯ ಎಂದು ಹೋರಾಟಕ್ಕೂ, ಕಾವ್ಯಕ್ಕೂ ನಂಟು ಬೆಸೆದ ಸಂವೇದನೆಗೆ ಏನಾಯಿತು? ಕವಿತೆ ಜನರನ್ನು ತಲುಪದೇ ಇರಲು ಜನಸಮೂಹದ ಬದಲಾದ ಆದ್ಯತೆ, ಅಭಿರುಚಿಗಳು ಕಾರಣವೋ? ಕವಿಗಳ ಕಾವ್ಯಾಭಿವ್ಯಕ್ತಿಯ, ಸಂವೇದನೆಯ ಸೋಲೂ ಕಾರಣವೋ? ಕೇವಲ ಪದಗಳನ್ನು ಹಿಡಿದುಕೊಂಡು ಹೊರಟ ಕವಿತೆ ಅರ್ಥ, ಲಯ, ಗತಿ, ಗುರುತುಗಳನ್ನು ಮರೆತು ಹೀಗಾಯಿತೇ?

ಇಂತಹ ಹತ್ತಾರು ಪ್ರಶ್ನೆಗಳು ಚುಚ್ಚುತ್ತಿರುವ ಕಾವ್ಯಾತಂಕದ ಹೊತ್ತಿನಲ್ಲಿ ಕವಿತೆಯನ್ನು ಜನರ ಬಳಿ ಕೊಂಡೊಯ್ಯುವ ಕಿರುಪ್ರಯತ್ನವನ್ನು 'ಕವಿ' ಪ್ರಕಾಶನ ನಡೆಸುತ್ತ ಬಂದಿದೆ. ಅದರ ಭಾಗವಾಗಿ ಕವಿತೆಗಳನ್ನು ಪ್ರಕಟಿಸುವುದು, ಕವಿಕಾವ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು, ಮಹಿಳಾ ಧ್ವನಿಗೆ ವೇದಿಕೆಯಾಗಲು ಮಹಿಳಾ ಕಾವ್ಯ ಸಂಗ್ರಹಗಳನ್ನು ಪ್ರಕಟಿಸುವುದು, 'ಆಧುನಿಕ ಕನ್ನಡ ಮಹಿಳಾ ಕಾವ್ಯ' ಕುರಿತು ಕವಿ, ವಿಮರ್ಶಕರೊಡನೆ ಸಂವಾದ ಏರ್ಪಡಿಸುವಂತಹ ಕೆಲಸ ಮಾಡುತ್ತಿದೆ.

ಇದು ನಮ್ಮ ನಾಲ್ಕನೆಯ ಸಂಗ್ರಹ, ಮಾರುಕಟ್ಟೆಯ ದೃಷ್ಟಿಯಿಂದ ಮಹಿಳಾ ಕಾವ್ಯ ಸಂಗ್ರಹಗಳ ಪ್ರಕಟಣೆ ಏನೇನೂ ಸಫಲ ಪ್ರಯತ್ನವಲ್ಲ. ಅದಕ್ಕೆ ಸಿಗುವ ಸಹೃದಯರ ಬೆಂಬಲವೂ ನಗಣ್ಯ. ಪ್ರಾತಿನಿಧಿಕ ಸಂಗ್ರಹಕ್ಕೆ ಕವನ ಕೊಟ್ಟ ಕವಿಗಳೂ, ಸಾಮೂಹಿಕತೆಯತ್ತ ತುಡಿಯುವ ಮಹಿಳಾ ಮನಸ್ಸುಗಳೂ, ಮಹಿಳಾಪರ ಚಿಂತಕರೂ, ಕಾವ್ಯ ವಿಮರ್ಶಾ ಕ್ಷೇತ್ರವೂ ನಮ್ಮ ಈ ಮೊದಲ ಮಹಿಳಾ ಕಾವ್ಯ ಸಂಗ್ರಹಗಳನ್ನು ಪರಿಚಯಿಸಿದ್ದು, ಚರ್ಚೆ ಮಾಡಿದ್ದು, ಕಾವ್ಯಾಸಕ್ತರನ್ನು ತಲುಪಲು ನೆರವಾದದ್ದು ಇಲ್ಲವೆನ್ನುವಷ್ಟು ಕಡಿಮೆ. ಇಂತಹ ವಿಷಾದಕರ ವಾಸ್ತವ ಎದುರಿಗಿದ್ದರೂ ಮಹಿಳಾ ಸಾಹಿತ್ಯ ಚರಿತ್ರೆ ಮತ್ತು ಈ ಕಾಲದ ಚರಿತ್ರೆ ಕಟ್ಟುವ ದೃಷ್ಟಿಯಿಂದ ಇದು ಆಗಲೇಬೇಕಾದ ಕೆಲಸ ಎಂದು ನಾಲ್ಕನೆಯ ಸಂಗ್ರಹ ಪ್ರಕಟಿಸುತ್ತಿದ್ದೇವೆ.

ಕವಿ ಪ್ರಕಾಶನಕ್ಕಾಗಿ ಈ ಸಲದ ಪ್ರಾತಿನಿಧಿಕ ಸಂಕಲನ ಸಂಪಾದನೆ ಮಾಡಲು ಅಕ್ಕ ಪ್ರೊ. ಸಬಿಹಾ ಅವರನ್ನು ಕೇಳಿದಾಗ ಪ್ರೀತಿಯಿಂದಲೇ ಒಪ್ಪಿಕೊಂಡರು. ಶಿಸ್ತುಬದ್ಧ, ಯೋಜನಾಬದ್ಧ, ಕಾಲಮಿತಿಯಲ್ಲಿ ಕೆಲಸ ಮುಗಿಸುವ ಶ್ರದ್ಧೆಗೆ ಅವರು ಹೆಸರುವಾಸಿ. ತಾವು ವಹಿಸಿಕೊಂಡ ಜವಾಬ್ದಾರಿಯುತ ಸ್ಥಾನಗಳನ್ನು, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಗಳಾದಾಗ ಮಾಡಿದ ಕೆಲಸದ ಪರಿಯನ್ನು ಹತ್ತಿರದಿಂದ ಗಮನಿಸಿದವರೆಲ್ಲರೂ ಇದನ್ನು ತಿಳಿದಿರುತ್ತಾರೆ.” ಸುಮಾರು ೨೨೦ ಪುಟಗಳ ಈ ಕೃತಿಯನ್ನು ಕವನಗಳ ಬಗ್ಗೆ ಆಸಕ್ತಿ ಇರುವವರು ಮುಖ್ಯವಾಗಿ ಹೊಸ ಕವಿಯತ್ರಿಯರು ಓದಿದರೆ ಬಹಳ ಉತ್ತಮ.