ಜೀವಜಾಲದ ಸಗ್ಗ

ಜೀವಜಾಲದ ಸಗ್ಗ

ಪುಸ್ತಕದ ಲೇಖಕ/ಕವಿಯ ಹೆಸರು
ಡಿ. ಅರುಂಧತಿ
ಪ್ರಕಾಶಕರು
ಧಾನ್ಯ ಪ್ರಕಾಶನ, ವಕ್ಕೋಡಿ, ತುಮಕೂರು - ೫೭೨೧೦೭
ಪುಸ್ತಕದ ಬೆಲೆ
ರೂ. ೫೦.೦೦, ಮುದ್ರಣ: ೨೦೨೨

ಕೇವಲ ೫೨ ಪುಟಗಳಲ್ಲಿ ಬಹಳ ಸೊಗಸಾದ ಕವಿತೆಗಳನ್ನು ಕಟ್ಟಿಕೊಟ್ಟಿದ್ದಾರೆ ಉದಯೋನ್ಮುಖ ಕವಯತ್ರಿ ಡಿ. ಅರುಂಧತಿ. ಇವರು ಬರೆದ ಕವನಗಳ ಸಂಕಲನ “ಜೀವಜಾಲದ ಸಗ್ಗ” ದ ಬಗ್ಗೆ ಲೇಖಕರಾದ ಜಿ ವಿ ಆನಂದಮೂರ್ತಿ ತಮ್ಮ ಮುನ್ನುಡಿಯಲ್ಲಿ ಹೀಗೆ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ...

“ಸಾರ್ವಜನಿಕ ಜೀವನ, ದಲಿತ ಮತ್ತು ರೈತ ಚಳವಳಿಗಳೊಂದಿಗಿನ ನಿರಂತರ ಸಂಪರ್ಕ, ಮಹಿಳಾ ಸಂಘಟನೆ, ಸಾಹಿತಿ ಕಲಾವಿದರೊಂದಿಗೆ ಬೆರೆವ ಗುಣ, ನಿರ್ಲಕ್ಷಿತ ಸಮುದಾಯಗಳಿಗೆ ತೋರುವ ಕಾರುಣ್ಯ ಹಾಗೂ ವೈದ್ಯ ವೃತ್ತಿಯಲ್ಲಿ ಹಲವಾರು ದಶಕಗಳಿಂದ ತಮ್ಮನ್ನು ಇಡಿಯಾಗಿ ತೊಡಗಿಸಿಕೊಂಡಿರುವ ಡಾ. ಅರುಂಧತಿ ತುಮಕೂರಿನ ಪ್ರಗತಿಪರ ವಲಯದಲ್ಲಿ ಕೇಳಿಬರುವ ಗೌರವದ ಹೆಸರು. ಸಂಕೋಚ ಹಾಗೂ ಸದಾ ಮೌನದಲ್ಲೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಡಾ. ಅರುಂಧತಿ ಹಲವಾರು ದಶಕಗಳಿಂದ ತಾವು ಅಲ್ಲಲ್ಲಿ ಬರೆದ ಕವಿತೆಗಳನ್ನು ಒಗ್ಗೂಡಿಸಿ ಇದೀಗ ತಮ್ಮ ‘ಜೀವ ಜಾಲದ ಸಗ್ಗ’ ಚೊಚ್ಚಲು ಕವನ ಸಂಕಲನದೊಂದಿಗೆ ನಮ್ಮ ಮುಂದೆ ನಿಂತಿದ್ದಾರೆ. ಹೊಸಗನ್ನಡದ ಯಾವ ಪಂಥಗಳಿಗೂ, ವರ್ಗೀಕರಣಕ್ಕೂ ಸೇರದ ಹಾಗೂ ಯಾವ ಕವಿಗಳ ಪ್ರಭಾವದಲ್ಲೂ ಕಾಣಿಸಿಕೊಳ್ಳದ ಈ ಸಂಕಲನದ ಕವಿತೆಗಳು ಪ್ರಯೋಗಶೀಲತೆಯ ದೃಷ್ಟಿಯಿಂದ ತಾಜಾ ತನದಿಂದ ಕೂಡಿವೆ.

ಸಿದ್ಧಗೊಂಡ ಮಾದರಿಯಲ್ಲಿ ಕಾವ್ಯ ರಚಿಸುವುದು ಒಂದು ಹಂತದಲ್ಲಿ ಸುಲಭವೆನಿಸಬಹುದು! ಆದರೆ, ಈ ಔದಾರ್ಯದ ದಾರಿ ಕವಿಯೊಬ್ಬನ ವ್ಯಕ್ತಿ ವೈಶಿಷ್ಟ್ಯಗಳನ್ನು ಮರೆಮಾಚಿಸುತ್ತದೆ. ಈ ಅಪಾಯದಿಂದ ಬಿಡಿಸಿಕೊಂಡು, ರೂಢಿಗತವಾದ ಯೋಚನಾಕ್ರಮಗಳನ್ನು ಬಿಟ್ಟು, ಸಕಲಜೀವರಾಶಿಗಳ ವಿಮೋಚನೆಯ ಬೆಳಕಿನತ್ತ ನಡೆಯುವುದೇ ಕಲೆಯ ದಾರಿ. ಈ ತಿಳಿವು ಡಾ. ಅರುಂಧತಿ ಅವರಿಗೆ ಇದೆ ಎಂದು ಭಾವಿಸಿದ್ದೇನೆ.

ಡಾ. ಅರುಂಧತಿ ಅವರು ತಮ್ಮ ಕವಿತೆಗಳಲ್ಲಿ ಬಾಲ್ಯದ ಜ್ಞಾಪಕ ಚಿತ್ರಶಾಲೆಯನ್ನೆಲ್ಲಾ ಕೆದಕಿ, ಆಪ್ತವಾಗಿ ರೂಪಿಸಿರುವ ಕವಿತೆಗಳ ಜೊತೆಗೆ, ವರ್ತಮಾನದ ಸಮಾಜದ ಜುಗುಪ್ಸೆ ಹುಟ್ಟಿಸುವ ಎಲ್ಲ ಬರ್ಬರತೆಯ ಬಗೆಗೆ ಪ್ರತಿರೋಧ ತೋರುತ್ತಾ ಹಾಗೂ ಇದರ ಜೊತೆಗೆ ಸ್ವಾತಂತ್ಯ್ರ ಸಮಾನತೆ ಹಾಗೂ ಲಿಂಗ ಸಮಾನತೆಯು ಭವಿಷ್ಯದ ಅಲೆಯಾಗಿರಬೇಕು ಎಂಬುದನ್ನು ಅಂತರ್ಗತ ಮಾಡಿಕೊಂಡಿರುವ ಕವಿತೆಗಳಾಗಿವೆ. ಎಳೆತನದ ನೆನಪುಗಳು, ತಾರುಣ್ಯದ ಕನಸುಗಳು, ತಾಯ್ತನದ ಸಂತಸ, ಹೆಣ್ಣಿನ ತಲ್ಲಣ ಹೀಗೆ ವೈಯಕ್ತಿಕ ಅನುಭವ ಪ್ರಪಂಚದ ನಡುವಿನಿಂದ ಈ ಸಂಕಲನದ ಕವಿತೆಗಳು, ಶಿಶಿರ ಮಾಸದ ಚಂದ್ರನ ತಂಪು ಕಿರಣಗಳಂತೆ ಮೈ ಪಡೆದಿವೆ.

ಚಳವಳಿಗಾರರೇ ಕವಿಗಳಾದಾಗ ಅವರ ಕವಿತೆಗಳಲ್ಲಿ ಸೂಕ್ಷ್ಮಗಳಿಲ್ಲದ ದೊಡ್ಡದನಿ, ನೇರವಾಗಿ ಎಲ್ಲವನ್ನೂ ಹೇಳಿಬಿಡುವ ತವಕ, ಪ್ರತೀಕಾರ ಹಾಗೂ ತಮ್ಮ ನೆಲದ ಸಾಂಸ್ಕೃತಿಕ ವಿವರಗಳಲ್ಲಿ ಬೇರುಬಿಡದ ಕವಿತೆಗಳು ನಮ್ಮ ಮುಂದೆ ನಿಲ್ಲುತ್ತವೆ! ಆದರೆ ಈ ಗುಣ ಎಲ್ಲ ಹೋರಾಟಗಾರ ಕವಿಗಳಲ್ಲೂ ಇರುತ್ತದೆ ಎನ್ನುವುದು ನನ್ನ ಆರೋಪವಲ್ಲ! ಇದಕ್ಕೆ ಅಪವಾದವಾಗಿ ಹಲವಾರು ಕವಿಗಳು ನಮ್ಮ ಮುಂದಿದ್ದಾರೆ. ಇಂತಹ ತೊಡಕುಗಳನ್ನು ದಾಟಿದ ಶ್ರೇಷ್ಟ ಕವಿಗಳು ಕನ್ನಡದಲ್ಲೂ ಇದ್ದಾರೆ. ನೆರೂಡನ ಪ್ರಸಿದ್ದ ಮಾತುಗಳು ಇಲ್ಲಿ ನೆನಪಾಗುತ್ತಿವೆ ‘ವಾಸ್ತವವಾದಿಯಲ್ಲದ ಕವಿ ಸತ್ತಿರುತ್ತಾನೆ. ಕೇವಲ ವಾಸ್ತವವಾದಿಯಾದ ಕವಿಯೂ ಸತ್ತಿರುತ್ತಾನೆ. ಕೇವಲ ವಿಚಾರ ಮಾತ್ರವೇ ಆಗಿರುವ ಕವಿಯನ್ನು ಮೂರ್ಖರು ಮಾತ್ರ ಅರ್ಥಮಾಡಿಕೊಳ್ಳುತ್ತಾರೆ! ಇದೂ ಕೂಡ ವಿಷಾದದ ಸಂಗತಿ’. ಡಾ. ಅರುಂಧತಿ ಅವರ ಕವಿತೆಗಳೂ ಇಂತಹ ತೊಡಕುಗಳನ್ನು ದಾಟಿ, ಜಟಿಲತೆ, ಆರ್ಭಟ, ರೊಚ್ಚು ಹಾಗೂ ಪ್ರತೀಕಾರದ ಸೋಂಕಿಲ್ಲದೆ, ಸರಳತೆಯಲ್ಲಿ ಅರಳಿವೆ. ಇಲ್ಲಿ ‘ಸರಳತೆ’ ಎಂದರೆ ಸರಳೀಕರಿಸಿದ್ದು ಎನ್ನುವ ಅರ್ಥದಲ್ಲಿ ಅಲ್ಲ! ಅನುಕಂಪ-ಕ್ರರ‍್ಯ, ನಂಬಿಕೆ-ದ್ರೋಹ ಇವುಗಳೆಲ್ಲದರ ಸಂಘರ್ಷ. ಎಲ್ಲಕ್ಕಿಂತ ಮಿಗಿಲಾಗಿ ಮಾನವ ಕರುಣೆಯೇ ಶಿಖರದಲ್ಲಿರುವುದು ಈ ಸಂಕಲನದ ದೊಡ್ಡಗುಣ. ಸಾಮಾಜಿಕ ಬದಲಾವಣೆಯ ಧ್ವನಿಯನ್ನು ಮಂದ್ರ ಸ್ವರದಲ್ಲಿ ಒಳಗೊಂಡಿರುವ, ಬಹುಪಾಲು ಮೆದು ಮಾತಿನ ರೂಪದಲ್ಲಿರುವ ಡಾ. ಅರುಂಧತಿ ಅವರ ಕವಿತೆಗಳು ಈ ಕಾರಣಕ್ಕಾಗಿ ನಮ್ಮ ಓದಿಗೆ ಹೆಚ್ಚು ಸಮೀಪವಾಗುತ್ತವೆ.

....ಬೆಳೆದು ನಿಂತ ಎಳೆಜೀವದ ಸಾವು
ತಾಯಿ ಹೃದಯದ ಬೆಚ್ಚಿ ಬೀಳಿಸುತ್ತಿದೆಯೇ
ನಕ್ಷತ್ರಗಳ ನಾಡಿನಲ್ಲಿ ಪಯಣಿಸುವ
ಜೀವವೊಂದು ಅವಮಾನದಲಿ ಬೆಂದು
ಇಲ್ಲವಾಗಿದ್ದು ನನ್ನ ಎದಯುರಿಯೇ
ಒಂದು ಹತ್ತಾಗಿ ಹತ್ತು ಕೋಟಿಯಾಗಿ
ದಿಕ್ಕುಗಳ ಆವರಿಸುವ ಈ ಹೊತ್ತಿನಲ್ಲಿ
ನಿನ್ನ ನಿರ್ಗಮನ ಕೆಲಹೊತ್ತು
ಶೂನ್ಯವುಂಟು ಮಾಡಿದ ದುಗುಡವೇ
ನಿನ್ನ ಕಪ್ಪು ಕಂಗಳ ಅಂತಸತ್ವಕೆ
ಎಂಥಾ ಶಕ್ತಿಯಿತ್ತು! ವೇಮುಲ
(ರೋಹಿತ್ ವೇಮುಲ)

ಗಾಯಗೊಂಡಿರುವ ತನ್ನ ಮಗುವನ್ನು ಸಂತೈಸುವ ತಾಯಿಯ ಧ್ವನಿಯಂತಿದೆ. ವ್ಯವಸ್ಥೆಯ ದಮನಕಾರಿ ಪ್ರವೃತ್ತಿಗೆ ಬಲಿಯಾದ ರೋಹಿತ್ ವೇಮುಲನಂಥ ಸಾವಿರಾರು ತರುಣರ ಮರುಹುಟ್ಟನ್ನು ಈ ಕವಿತೆಯ ತಾಯಿ ಬಯಸುತ್ತಿದ್ದಾಳೆ. ತನ್ನೊಳಗಿನ ಆದ್ರತೆಯಿಂದಲೇ ಈ ಕವಿತೆ ಸಾಮಾಜಿಕ ಬದಲಾವಣೆಯಲ್ಲಿ ಅಚಲ ನಂಬಿಕೆಯಿಟ್ಟಿರುವ ಡಾ. ಅರುಂಧತಿ ಅವರ ಎಲ್ಲ ಕವಿತೆಗಳ ಮುಖ್ಯ ಆಶಯದಂತಿದೆ. ಈ ಹಿನ್ನೆಲೆಯಲ್ಲಿ ‘ಪ್ರಶ್ನೆ’, ‘ಮನೆಗೊಂದು ಹಿರಿಜೀವ’, ‘ಅಮ್ಮ’, ‘ಅವ್ವನ ಗಡಿಯಾರ’, ‘ರೋಹಿತ್ ವೇಮುಲ’, ‘ವಸಂತ’, ‘ಅಂಬೇಡ್ಕರ್’ ಸಂಕಲನದ ಮುಖ್ಯ ಕವಿತೆಗಳಾಗಿವೆ.

ಡಾ. ಅರುಂಧತಿ ಅವರ ಕೆಲವು ಕವಿತೆಗಳು ವ್ಯಕ್ತಿಗತ ಪ್ರತಿರೋಧಕ್ಕೆ ಸೀಮಿತವಾಗಿಲ್ಲ. ಇವು ವ್ಯಕ್ತಿ ಸ್ವಾತಂತ್ಯ್ರ ಮತ್ತು ಸಮಾಜದ ಕ್ರಿಯಾಶೀಲತೆಯನ್ನು ಒಳಗೊಳ್ಳಬೇಕಾಗಿರುವುದನ್ನು ಸೂಚಿಸುತ್ತವೆ. ಈ ಪ್ರತಿರೋಧದ ಅಲೆಯು ಸಮಷ್ಟಿ ಬದುಕಿನ ಸ್ವಾವಲಂಬನೆಯನ್ನು ಹಾಗೂ ಚೈತನ್ಯದ ಎಲ್ಲ ಮೂಲಗಳನ್ನು ಉಳಿಸಿಕೊಳ್ಳಬೇಕೆನ್ನುವುದನ್ನೇ ಹೇಳುತ್ತವೆ. ಬಹಿರಂಗದಲ್ಲಿ ಎದ್ದುಕಾಣುವ ಲಿಂಗ ತಾರತಮ್ಯ, ಅಸ್ಪೃಶ್ಯತೆಯ ಭೀಕರತೆ, ಭಿನ್ನ ಅಭಿಪ್ರಾಯಗಳನ್ನು ದಮನ ಮಾಡುವ ಪ್ರಭುತ್ವದ ಕರ‍್ಯ ಹಾಗೂ ಸ್ತ್ರೀ ಲೋಕದ ಒಳಗುದಿಗಳನ್ನು ಸಣ್ಣ ಪ್ರಮಾಣದಲ್ಲಾದರೂ ಹಿಡಿಯುವ ಪ್ರಾಮಾಣಿಕ ಪ್ರಯತ್ನ ಡಾ. ಅರುಂಧತಿ ಅವರ ಮೊದಲ ಸಂಕಲನದ ಸ್ಥಾಯಿ ಗುಣವಾಗಿದೆ. ಒಂದು ನಿರ್ದಿಷ್ಟ ವಿಚಾರದ ಚೌಕಟ್ಟಿನಲ್ಲಿ ಬರೆಯುವುದಕ್ಕೂ, ಬದುಕಿನ ಅನುಭವಗಳು ಕಟ್ಟಿಕೊಡುವ ದರ್ಶನಗಳ ಮೂಲಕವೇ ವ್ಯಕ್ತವಾಗುವ ಕವಿತೆಗಳಿಗೂ ವ್ಯತ್ಯಾಸವಿರುವುದು ಸಹಜವೇ. ಇದರಲ್ಲಿ ಡಾ. ಅರುಂಧತಿ ಅವರ ಕಾವ್ಯ ಮಾರ್ಗ ಎರಡನೆಯದು ಎಂಬುದನ್ನು ಈ ಸಂಕಲನದ ಕೆಲವು ಕವಿತೆಗಳು ನಮ್ಮ ತಿಳಿವಿಗೆ ತರುತ್ತವೆ. ಉಪಭೋಗ ಸಂಸ್ಕೃತಿಯೊಂದಿಗೆ ಬಳುವಳಿಯಾಗಿ ಬಂದಿರುವ ಒಂಟಿತನ, ಆತ್ಮರತಿಯಂಥ ನಕಾರಾತ್ಮಕ ವ್ಯಂಜನಗಳಿಂದ ದೂರ ಸರಿದಿರುವ ಡಾ. ಅರುಂಧತಿ ಅವರ ಕವಿತೆಗಳು ಬದುಕಿನ ಕ್ರಿಯಾಶೀಲತೆ ಮತ್ತು ತರತಮಗಳಿಲ್ಲದ ಮಾನವೀಯ ಸಂಬಂಧಗಳಿಗಾಗಿ ಕೈ ಚಾಚುತ್ತದೆ.

ಆಧುನಿಕೋತ್ತರವಾದದ ಅಪಾಯಕಾರಿ ತಿಳಿವಿಗೆ ಪ್ರತಿರೋಧವಾಗಿ ತಮ್ಮ ಸಾಂಪ್ರದಾಯಿಕ ಸಮಾಜದ ಸಂಸ್ಕೃತಿಯ ಮೂಲಕ ಉತ್ತರಿಸುವ ಪ್ರಯತ್ನವನ್ನು ಡಾ. ಅರುಂಧತಿ ಅವರ ಕಾವ್ಯ ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲಿ. ಏಕೆಂದರೆ, ಈ ಸಾಂಪ್ರದಾಯಿಕ ಸಮುದಾಯಗಳ ಲೋಕದೃಷ್ಟಿಯೇ ವಿಶಿಷ್ಟವಾದದ್ದು. ಇದನ್ನು ಅವರ ‘ಪ್ರಶ್ನೆ’ ಎನ್ನುವ ಕವಿತೆ ಕಟ್ಟಿಕೊಡುತ್ತದೆ. ಕೌಶಲವನ್ನೇ ಜ್ಞಾನ ಪರಂಪರೆಯನ್ನಾಗಿ ರೂಪಿಸಿಕೊಂಡಿರುವ ಕೆಳ ಸಮುದಾಯಗಳು ಇವು. ಹೀಗೆ ತಮ್ಮ ವೃತ್ತಿ ಕೌಶಲಗಳ ಮೂಲಕವೇ ಲೌಕಿಕ ಮತ್ತು ಅಧ್ಯಾತ್ಮಿಕ ಮಾರ್ಗಕ್ಕೆ ಚಲಿಸುವ ಈ ಸಮುದಾಯಗಳ ಲೋಕದರ್ಶನವು ಗಮನಾರ್ಹವಾದದ್ದು. ಈ ಮಾತಿಗೆ ಕನ್ನಡದ ವಚನಕಾರರು ಮತ್ತು ತತ್ತ್ವಕಾರರ ಪರಂಪರೆಯೇ ನಮಗೆ ಉತ್ಕೃಷ್ಟ ಉದಾಹರಣೆಯಾಗಿದೆ. ತಾವು ಹೇಳುವುದಷ್ಟೇ ‘ಸತ್ಯ’, ಉಳಿದೆಲ್ಲವೂ ‘ಮಿಥ್ಯೆ’ ಎಂಬ ಏಕರೂಪಿ ಪರಂಪರೆಗೆ ತೀವ್ರವಾದ ಪ್ರತಿರೋಧವನ್ನು ತೋರಿದ, ಕನ್ನಡ ಸಮಾಜದ ಬಹುತ್ವದ ಪರಂಪರೆಗಳಿವು. ಡಾ. ಅರುಂಧತಿ ಅವರಲ್ಲಿ ಈ ಬಹುತ್ವದ ಪರಂಪರೆಯ ಬಗ್ಗೆ ಅರಿವಿದೆ. ಅದನ್ನು ಅವರು ಮುಂದಿನ ದಿನಗಳಲ್ಲಿ ಸಮರ್ಥವಾಗಿ ತಮ್ಮ ಕವಿತೆಗಳಲ್ಲಿ ತರಬಲ್ಲರು.