ಮಾಡಿದ್ದುಣ್ಣೋ ಮಹರಾಯ

ಮಾಡಿದ್ದುಣ್ಣೋ ಮಹರಾಯ

ಎಂಥ ಸತ್ಯ ಎಂಥ ಸತ್ಯ ಎಂಥ ಸತ್ಯವು |

ಅಟ್ಟಿದ್ದೇ ಉಣಬೇಕು ಎಂಬ ಸತ್ಯವು || ಪ ||

ಒಂಬತ್ತು ಬಾಗಿಲಿನ ದೇವಮಂದಿರ

ಮಂದಿರದ ಅಧಿಪತಿಯೆ ಸತ್ಯಸುಂದರ |

ಸುತ್ತೆಲ್ಲ ಹರಿದಿಹುದು ನವರಸಧಾರಾ

ಮಾಯೆಯ ಮುಸುಕಿನಲಿ ಜೀವನಸಾರ || ೧ ||

ಮಂದಿರದ ಒಳಗಿಹುದು ಕಾಣದ ಪಾತ್ರೆ

ಅಂಕಿಲ್ಲದ ಡೊಂಕಿಲ್ಲದ ಸೋರದ ಪಾತ್ರೆ |

ದೇವನ ಲೆಕ್ಕದಲಿ ದೋಷವೆಂಬುದಿಲ್ಲ

ಬೇಯುತಿದೆ ಪಾತ್ರೆಯಲಿ ಮಾಡಿದಡುಗೆಯೆಲ್ಲ || ೨ ||

ಮಾಡಿದ ಕರ್ಮವದು ಬೆನ್ನನು ಬಿಡದು

ಧನಕನಕ ಬಂಧು ಬಳಗ ನೆರವಿಗೆ ಬರದು |

ಅಟ್ಟಡುಗೆಯುಣ್ಣದೆ ವಿಧಿಯೆ ಇಲ್ಲವು

ರಸಪಾಕವ ಮಾಡುವುದೆ ಇರುವ ದಾರಿಯು || ೩ ||

-ಕ.ವೆಂ.ನಾ.

*************

ಪ್ರೇರಣೆ:

ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ | ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ ||  (ಅಥರ್ವ.೧೨.೩.೪೮)

     ಅರ್ಥ:  ಈಶ್ವರೀಯ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ. ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ ಮಧ್ಯೆ ಸೇರಿಕೊಂಡು, ಕ್ಷೇಮವಾಗಿದ್ದೇನೆಂದುಕೊಂಡು ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಕೂಡ ಇಲ್ಲ. ನಮ್ಮ ಈ ಒಡಕಿಲ್ಲದ ಅಂತಃಕರಣದ ಪಾತ್ರೆ ಗೂಢವಾಗಿ ಇಡಲ್ಪಟ್ಟಿದೆ. ಬೇಯಿಸಿದ ಅನ್ನ (ಕರ್ಮಫಲವಿಪಾಕ) ಅದನ್ನು ಪಾಕ ಮಾಡಿದವನನ್ನು ಪುನಃ ಮರಳಿ ಪ್ರವೇಶಿಸಿಯೇ ತೀರುತ್ತದೆ.

 

Rating
No votes yet

Comments

Submitted by sathishnasa Fri, 03/21/2014 - 21:05

ನಾವು ಬೆಳೆಸಿದ ಮರದ ಪಲ ನಾವೆ ತಿನ್ನ ಬೇಕು
ನಾವು ಮಾಡಿದಡಿಗೆಯನ್ನು ನಾವೇ ಉಣ್ಣ ಬೇಕು
ನಾವು ನೆಟ್ಟ ಮುಳ್ಳ ಗಿಡ ನಮ್ಮ ಕಾಲಡಿಗೆ
ನಾವು ಮಾಡಿದ ಪಾಪ ನಮ್ಮ ಸಂತತಿಗೆ ....ನೆನಪಿಗೆ ಬಂದ ಸಾಲುಗಳು ( " ನೀ " ಎನ್ನುವ ಕಡೆ " ನಾವು " ಎಂದು ಸೇರಿಸಿದ್ದೇನೆ)
ಸುಂದರ ಸಾಲುಗಳು ನಾಗರಾಜ್ ರವರೇ ........................ಸತೀಶ್

Submitted by lpitnal Sun, 03/23/2014 - 09:32

ಕವಿನಾರವರಿಗೆ, ಲಕ್ಷ್ಮೀಕಾಂತ ಇಟ್ನಾಳರ ವಂದನೆಗಳು. ಕವನ ಗಹನಾರ್ಥಗಳ, ಗೂಡಾರ್ಥಗಳ ಎಳೆಗಳ ಹೆಣಿಕೆ. ಬಿಡಿಸಿದಷ್ಟೂ ಬಿಡಿಸಿಕೊಳ್ಳುತ್ತದೆ. ಅವರವರ ಸಾಮರ್ಥ್ಯಕ್ಕೆ ತಕ್ಕಂತೆ. ಧನ್ಯವಾದಗಳು.