ಕಯ್ಯಾರ ಕಿಞ್ಞಣ್ಣ ರೈ
ಓದುಗರೆ, ಸಂಪದ ಸಂದರ್ಶನಗಳ ಸರಣಿಯ ೧೨ನೇ ಸಂಚಿಕೆ ಇಗೋ ನಿಮ್ಮ ಮುಂದಿದೆ.
ಕಾಸರಗೋಡಿನ ಕನ್ನಡಪರ ಹೋರಾಟದಲ್ಲಿ ಕೇಳಿ ಬರುವ ಮೊದಲ ಹೆಸರು ಕಯ್ಯಾರ ಕಿಞ್ಞಣ್ಣ ರೈ. ಕಾಸರಗೋಡು ಜಿಲ್ಲೆಯು ಕರ್ನಾಟಕದ ಭಾಗವಾಗಿದ್ದ ಕಾಲದಿಂದಲೂ ತಮ್ಮ ಸಾಹಿತ್ಯ, ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡವರು. ಇಂತಹ ಕಯ್ಯಾರರಿಗೆ ತುಳು ಭಾಷೆ ಹೆತ್ತ ತಾಯಿಯಾದರೆ, ಕನ್ನಡ ಭಾಷೆ ಸಾಕುತಾಯಿ. ಕಯ್ಯಾರರು ತಮ್ಮನ್ನು ಬೆಳೆಸಿದ ಈ ಇಬ್ಬರು ತಾಯಂದಿರನ್ನು ಇಂದಿಗೂ ಸ್ಮರಿಸಿಕೊಳ್ಳುತ್ತಲೇ ಮಾತನ್ನು ಆರಂಭಿಸುತ್ತಾರೆ.
ಬದಿಯಡ್ಕ ಸಮೀಪದ ಪೆರಡಾಲ ಎಂಬ ಗ್ರಾಮದಲ್ಲಿರುವ ಕವಿತಾ ಕುಟೀರದಲ್ಲಿ ಇವರ ವಾಸ. ೯೬ ರ ಪ್ರಾಯದಲ್ಲೂ ಜಿಗಿಯುವ ಜೀವನ ಉತ್ಸಾಹ. ಕಿಞ್ಞಣ್ಣ ಎಂದರೆ ತುಳುವಿನಲ್ಲಿ ಕಿರಿಯವನು ಎಂದರ್ಥ. ಹೆಸರಿಗೆ ತಕ್ಕಂತೆ ಕಯ್ಯಾರರು ಬಹು ವಿಧೇಯ ವ್ಯಕ್ತಿತ್ವವುಳ್ಳ ಚೇತನ.
ಕನ್ನಡನಾಡಿನ ಭಾಗವಾಗಿದ್ದ ಕಾಸರಗೋಡು ಕೇರಳಕ್ಕೆ ಸೇರಿದಾಗ ಕನ್ನಡಿಗರನ್ನು ಸಂಘಟಿಸಿ ಹೋರಾಟ ಮಾಡಿದರೂ ಸಿಗದ ಯಶಸ್ಸು, ಅದರ ಹಿಂದಿನ ಹಲವು ಕಾರಣಗಳು, ಕರ್ನಾಟಕ ಸರ್ಕಾರ ಇದಕ್ಕಾಗಿ ಮಾಡಬೇಕಾದ ಕಾರ್ಯಗಳ ಕುರಿತ ಹಾಗೆ ಸಂಪದದೊಂದಿಗೆ ಮಾತನಾಡಿದ್ದಾರೆ. ಬನ್ನಿ ಈ ಹಿರಿಯರ ಅನುಭವ, ಹೋರಾಟದ ಬದುಕಿನ ಕುರಿತು ಅವರಿಂದಲೇ ಕೇಳಿ ತಿಳಿಯೋಣ.
ಕಯ್ಯಾರರ ಸಂದರ್ಶನಕ್ಕಾಗಿ ಕಾಸರಗೋಡು ಜಿಲ್ಲೆ ಬದಿಯಡ್ಕ ಸಮೀಪದ ಪೆರಡಾಲ ಗ್ರಾಮದ ಅವರ ಮನೆ ಕವಿತಾ ಕುಟೀರದಲ್ಲಿ ಭೇಟಿಯಾದ ತಂಡದ ಭಾವಚಿತ್ರ. (ಎಡದಿಂದ) ಹರಿಪ್ರಸಾದ್ ನಾಡಿಗ್, ಕಯ್ಯಾರರು, ಸಾತ್ವಿಕ್ ಎನ್ ವಿ ಮತ್ತು ಪ್ರತಾಪಚಂದ್ರಶೆಟ್ಟಿ ಹಳ್ನಾಡು