ಸಂಕ್ರಮಣ; ಕುರಿಗಳಿಗೆ ಸ್ನಾನ ಭಾಗ್ಯ ಒದಗಿಸುವ ಉತ್ತರಾಯಣ.
ಸಂಕ್ರಾಂತಿ!
ಅಬ್ಬಾ..ಮಕರ ಮಾಸ ಕಾಲಿಡುತ್ತಿದ್ದಂತೆಯೇ ಧನುರ್ಮಾಸದ ಮೈ ಕೊರೆಯುವ ಛಳಿಯಿಂದ ವಿನಾಯ್ತಿ. ಹಾಗೆಯೇ ದಕ್ಷಿಣಾಯಣ ಕಳೆದು ಉತ್ತರಾಯಣ ಪುಣ್ಯ ಪರ್ವ ಆರಂಭಗೊಳ್ಳುವ ಸಮಯ. ಕೃಷಿಕರ ಪಾಲಿಗಂತೂ ಇದು ವಿಶೇಷ ತಿಂಗಳು. ಗದ್ದೆಯ ಕೃಷಿ ಚಟುವಟಿಕೆಗಳೆಲ್ಲ ಮುಗಿದು, ಸುಗ್ಗಿಯ ಬೆಳೆ ಕಣ್ಣು ತುಂಬಿಸಿಕೊಳ್ಳುವ ತವಕದಲ್ಲಿ ರೈತಾಪಿ ಸಮೂಹ. ಭತ್ತದ ರಾಶಿ, ಗೋಮಾತೆ ಹಾಗು ಬಸವಣ್ಣ (ಎತ್ತುಗಳು) ನ್ನು ಪೂಜಿಸುತ್ತ "ಬೆಳಗಾಗ ಎದ್ದು ಯಾರ್ಯಾರ ನೆನೆಯಲಿ, ಎಳ್ಳು ಜೀರಿಗೆ ಬೆಳೆಯೋಳ, ಭೂಮಿ ತಾಯಿ ಎದ್ದೊಂದು ಘಳಿಗೆ ನೆನೆದೇನ" ಎನ್ನುತ್ತ ಅನಾಮಿಕ ಜಾನಪದ ಕವಿಯ ಮಾತನ್ನು ಸ್ಮರಿಸುವ ದಿನವದು.
ಅದಿರಲಿ..ಸಂಕ್ರಮಣ ಮುಗಿದು ಒಂದು ವಾರದ ಮೇಲೆ ಸಂಪದದಲ್ಲಿ ಈ ಹಬ್ಬದ ಪ್ರಸ್ತಾಪ! ಸಂಪದಿಗರು ಹುಬ್ಬೇರಿಸಬಹುದು.
ಆದರೆ, ಸಂಕ್ರಾಂತಿಯ ಆಚರಣೆಯ ಕುರಿತು ಇಲ್ಲೊಂದು ವಿಶೇಷ ಹೊತ್ತು ತಂದಿದ್ದೇನೆ. ಅದೇನೆಂದರೆ..‘ವಾಕಿಂಗ್ ಬ್ಯಾಂಕರ್ ’ ಗಳೆಂದೇ ಪ್ರಸಿದ್ಧಿ ಪಡೆದಿರುವ ಕುರಿಗಾರರಿಗೂ ಇದೊಂದು ವಿಶೇಷ ಹಬ್ಬ. ಸದಾ ನೂರಾರು ಕುರಿಗಳನ್ನು ಬೆನ್ನಿಗೆ ಕಟ್ಟಿಕೊಂಡು ಹುಲ್ಲು, ನೀರು ಹಾಗು ತಮ್ಮ ಬದುಕು ಹೀಗೆಯೇ ಮೂರನ್ನೂ ಅರಸುತ್ತ ಹೋಗುವ ಇವರಿಗೆ ಯಾವ ಹಬ್ಬ ಆಚರಿಸಲು ಪುರುಸೊತ್ತು ಸಿಕ್ಕೀತು? ಆದರೂ ಸಂಕ್ರಮಣ ಸಂದರ್ಭದಲ್ಲಿ ವಿಶೇಷ ಪುರುಸೊತ್ತು ಮಾಡಿಕೊಂಡು ಅವರು ಕರ್ನಾಟಕದ ಬಯಲು ಸೀಮೆಯ ರೀತ್ಯಾ ಹಬ್ಬ ಆಚರಿಸುತ್ತಾರೆ.