ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೩
ಶ್ರೀ ಮುತ್ತುಸ್ವಾಮಿ ದೀಕ್ಷಿತರು (೧೭೭೫ - ೧೮೩೫): ತಿರುವಾರೂರಿನಲ್ಲೇ ಜನಿಸಿದ ಶ್ರೀ ಮುತ್ತುಸ್ವಾಮಿ ದೀಕ್ಷಿತರು ಸಂಗೀತ ತ್ರಿಮೂರ್ತಿಗಳಲ್ಲಿ ಕಿರಿಯರು. ಸಂಗೀತ ವಿದ್ವಾಂಸರಾದ, ವಾಗ್ಗೇಯಕಾರರಾದ ರಾಮಸ್ವಾಮಿ ದೀಕ್ಷಿತರ ಹಾಗೂ ಭಾಗಿರಥಮ್ಮನವರ ಪುತ್ರರಾಗಿ ಜನಿಸಿದರು. ತಂದೆಯಿಂದಲೇ ಸಂಗೀತವನ್ನು ಕಲಿತರು. ವೈಣಿಕರಾಗಿ, ಗಾಯಕರಾಗಿ, ಸಂಸ್ಕೃತ, ತಂತ್ರಶಾಸ್ತ್ರ, ಮಂತ್ರಶಾಸ್ತ್ರ, ಜ್ಯೋತಿಶಾಸ್ತ್ರ, ಅಲಂಕಾರ ಶಾಸ್ತ್ರಗಳಲ್ಲಿ ನಿಷ್ಣಾತರಾಗಿದ್ದರು. ಚಿದಂಬರನಾಥ ಯೋಗಿಗಳಿಂದ ಶ್ರೀವಿದ್ಯಾಮಂತ್ರೋಪದೇಶವನ್ನು ಪಡೆದರು. ಗುರುಗಳೊಡನೆ ಕಾಶಿಗೆ ತೆರಳಿ ಅಲ್ಲಿ ಐದು ವರ್ಷಗಳ ಕಾಲ ಮಂತ್ರಜಪವನ್ನು ನಡೆಸಿದರು. ಗಂಗಾನದಿಯಲ್ಲಿ ನಿಂತು ಜಪವನ್ನು ಮಾಡಿ ಮುಗಿಸಿದಾಗ ಅವರ ಕೈಗೆ ವೀಣೆಯು ತಾನಾಗಿಯೇ ಬಂದಿತ್ತು. ಕಾಶಿಯಲ್ಲಿದ್ದಾಗ ದೀಕ್ಷಿತರು ಕರ್ನಾಟಕ ಸಂಗೀತದ ಜೊತೆ ಹಿಂದೂಸ್ಥಾನಿ ಸಂಗೀತವನ್ನು ಅಭ್ಯಾಸ ಮಾಡಿದರು. ಚಿಕ್ಕಂದಿನಲ್ಲೇ ಇವರಿಗೆ ಪಾಶ್ಚಾತ್ಯ ಸಂಗೀತದ ಪರಿಚಯವಾಯಿತು. ತಂದೆಗೆ ಆಪ್ತಮಿತ್ರರಾದ ಚರ್ಚಿನ ಪಾದರಿಗಳ ಸಹವಾಸದಲ್ಲಿ ಪಾಶ್ಚಾತ್ಯ ಸಂಗೀತದ ರೂಢಮೂಲಗಳನ್ನು ಅರಿತುಕೊಂಡರು. ಹೀಗೆ ಮೂರು ಮುಖ್ಯವಾದ ಶಾಸ್ತ್ರೀಯ ಸಂಗೀತ ಪದ್ಧತಿಗಳ ಪರಿಚಯವಾಯಿತು.
- Read more about ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೩
- 13 comments
- Log in or register to post comments