೨೦೦೭-೦೮ ರಣಜಿ ಋತು ಮತ್ತು ಕರ್ನಾಟಕ
೭೪ನೇ ರಣಜಿ ಋತು ನವೆಂಬರ್ ೩ ರಂದು ಆರಂಭಗೊಂಡಿದೆ. ಈ ಬಾರಿಯಾದರೂ ಮುಂಬೈ ಬಿಟ್ಟು ಬೇರೆ ತಂಡ ರಣಜಿ ಟ್ರೋಫಿ ಗೆಲ್ಲುವುದೋ ... ಕಾದು ನೋಡಬೇಕು. ಕಳೆದ ಋತುವಿನಲ್ಲಿ ಸೆಮಿಫೈನಲ್ ನಲ್ಲಿ ತನ್ನ ಅಭಿಯಾನ ಮುಗಿಸಿದ ಕರ್ನಾಟಕ, ಈ ಋತುವಿನಲ್ಲಿ ಸೆಮಿಫೈನಲ್ ಪ್ರವೇಶಿಸಿದರೆ ಅದೇ ದೊಡ್ಡ ಸಾಧನೆ.
ಕಳೆದ ಋತುವಿನಲ್ಲಿ ಕರ್ನಾಟಕದ ಉತ್ತಮ ಪ್ರದರ್ಶನಕ್ಕೆ ಕಾರಣ ರಾಬಿನ್ ಉತ್ತಪ್ಪ. ಪ್ರಮುಖ ಪಂದ್ಯಗಳಲ್ಲಿ ರಾಬಿನ್ ನೀಡಿದ ಉತ್ತಮ ಆರಂಭದಿಂದ ಕರ್ನಾಟಕ ಉತ್ತಮ ಮೊತ್ತಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಗಿತ್ತು. ಆದ್ದರಿಂದ ಬೌಲರ್ ಗಳಿಗೂ ಉತ್ತಮ ಮೊತ್ತದ ಬೆಂಬಲವಿದ್ದರಿಂದ ಎದುರಾಳಿ ತಂಡಗಳನ್ನು ಕಬಳಿಸುವಲ್ಲಿ ಕರ್ನಾಟಕ ಸಾಕಷ್ಟು ಯಶಸ್ವಿಯಾಗಿತ್ತು.
ಅದೇನು ಯೇಸು ಕ್ರಿಸ್ತನ ಮಾಯೆಯೋ, ಆ ರೋಲಂಡ್ ಬ್ಯಾರಿಂಗ್ಟನ್ ಮತ್ತೆ ತಂಡದಲ್ಲಿ ಸ್ಥಾನ ಪಡೆದದ್ದು ಮಹಾದಾಶ್ಚರ್ಯ! ಕಳೆದೆರಡು ಋತುವಿನಲ್ಲಿ ಕಳಪೆ ಪ್ರದರ್ಶನ ನೀಡಿದರೂ ಬ್ಯಾರಿಂಗ್ಟನ್ ಮತ್ತೆ ತನ್ನ ಸ್ಥಾನ ಕಾಯ್ದುಕೊಂಡಿದ್ದಾರೆ. ರೋಲಂಡ್ ಬ್ಯಾರಿಂಗ್ಟನ್ ಒಬ್ಬ ಕಲಾತ್ಮಕ ಆರಂಭಿಕ ಆಟಗಾರ. ತನ್ನಲ್ಲಿರುವ ಪ್ರತಿಭೆಗೆ ತಕ್ಕಂತೆ ಆಡಿದರೆ ಈತನನ್ನು ಔಟ್ ಮಾಡಲು ಎದುರಾಳಿ ಬೌಲರ್ ಗಳು ಹೆಣಗಾಡಬೇಕಾಗುತ್ತದೆ. ಆದರೆ ಕಳೆದೆರಡು ಋತುಗಳಿಂದ ಕ್ರಿಕೆಟ್ ಬಗ್ಗೆ ಮಾತನಾಡುವುದು ಮತ್ತು ಯೋಚಿಸುವುದನ್ನು ಬಿಟ್ಟು ತನ್ನ ಧರ್ಮದ ಬಗ್ಗೆ ಅತಿಯಾಗಿ ಮಾತನಾಡುವುದು ಮತ್ತು ಯೋಚಿಸುವುದನ್ನು ಮಾಡುತ್ತಿರುವುದರಿಂದ ಬ್ಯಾರಿಂಗ್ಟನ್ ಆಟದ ಮೇಲೆ ಗಮನ ಕಳೆದುಕೊಳ್ಳುತ್ತಿದ್ದಾರೆ. ಬ್ಯಾರಿಂಗ್ಟನ್ ಈಗ ಸೀನಿಯರ್ ಆಟಗಾರ. ಅದರಂತೆಯೇ ಅವರು ನಡೆದುಕೊಳ್ಳುವುದೂ ಲೇಸು. ಈ ಋತುವಿನಲ್ಲಾದರೂ ರೋಲಂಡ್, ಕರ್ನಾಟಕಕ್ಕೆ ಒಂದೆರಡಾದರೂ ಉತ್ತಮ ಆರಂಭವನ್ನು ದೊರಕಿಸಿಕೊಡಲಿ. ಆಮೆನ್.
- Read more about ೨೦೦೭-೦೮ ರಣಜಿ ಋತು ಮತ್ತು ಕರ್ನಾಟಕ
- 1 comment
- Log in or register to post comments