ಚಂದ್ರವ್ವಳ "ಶಿವನ ಸಭಾ" ಕನಸು.
ಜೀವನದ ಸಿಂಹಪಾಲು ಸಮಯ ಹುಟ್ಟಿದ ಹಳ್ಳಿಯ ಹೊರಗೇ ಕಳೆದರೂ ಊರಿನ ಅವಿಸ್ಮರಣೀಯ ಅನುಭವಗಳು ನನ್ನನ್ನು ಸೆರೆಹಿಡಿದಿವೆ. ತಿಳುವಳಿಕೆ ಬಂದಾಗಿನಿಂದ ಸಮಾಜವನ್ನು ಅರ್ಥೈಸಿಕೊಳ್ಳಬೇಕೆಂಬ ಹಂಬಲ ಬರೆಯಲು ಪ್ರೇರೇಪಿಸಿದರೂ ಸಮಯದ ಒತ್ತಡಕ್ಕೆ ಸಿಕ್ಕು ಮೈಗಳ್ಳಾನಾಗಿದ್ದ ನನಗೆ ಕಣ್ತೆರೆಸಿದವಳು ಚಂದ್ರವ್ವ ಮುದುಕಿ. ಪ್ರತಿ ಸಲ ಊರಿಗೆ ಹೋದಾಗಲೆಲ್ಲಾ ಊರಿನ ಹಿರಿಯರ ಜೊತೆ ಸ್ವಲ್ಪ ಕಾಲ ಕಳೆಯುವ ಹವ್ಯಾಸ ನನ್ನದು. ಹಾಗೆಯೇ ಎಲ್ಲರಿಗೂ ಹಾಜರಿ ಕೊಟ್ಟು ಬರುವ ನೆಪದಲ್ಲಿ ಚಂದ್ರವ್ವ ಮುದುಕಿಯನ್ನು ಕಾಣಲು ಹೋದೆ.ಹೋದವನೆ "ಆರಾಮಿದ್ದೀ ಆಯಿ?" ಎಂದೆ. ಬೇಸಿಗೆಯಾದರೂ ಮುಂಜಾವಿನ ಎಳೆಬಿಸಿಲಿಗೆ ಮೈಒಡ್ಡಿ ಮನೆಯ ಮುಂದೆ ಕುಳಿತಿದ್ದ ಚಂದ್ರವ್ವ ಕೊರಳಲ್ಲಿ ಸಿಕ್ಕಿಸಿಕೊಂಡಿದ್ದ ಕನ್ನಡಕ ಧರಿಸಿಕೊಂಡಾಗಲೇ ಅವಳಿಗೆ ನನ್ನ ಗುರುತು ಹತ್ತಿದ್ದು ಅಂತ ಕಾಣುತ್ತೆ. " ಅಯ್ಯ ಹಡದಯ್ಯ, ಯಾವಾಗ ಬಂದ್ಯೋ ನನಕೂಸ?" ಎನ್ನುವ ಮಾತಿನಲ್ಲಿದ್ದ ಅಪಾರವಾದ ಪ್ರೀತಿ ನನ್ನ ಹೃದಯವನ್ನು ಅಪೂರ್ವ ಆನಂದಕ್ಕೆ ಗುರಿ ಮಾಡಿತು.
"ನೀ ಒಬ್ಬನೇ ನೋಡಪಾ ನನಗ ಹುಡಕ್ಯಾಡಕೊಂಡ ಬಂದ ಮಾತ್ಯಾಡ್ಸಂವ" ಎನ್ನುತ್ತಾ ಮತ್ತಷ್ಟು ಹತ್ತಿರ ಸರಿದು ನನ್ನ ತಲೆಯ ಮೇಲೆ ಕೈಯಾಡಿಸುತ್ತಾ ಯಾವುದೋ ವಿಚಾರದಲ್ಲಿ ಮಗ್ನಳಾಗಿಬಿಟ್ಟಳು.ಅಷ್ಟರಲ್ಲೇ ಕುಡಿದ ನಶೆ ಇನ್ನೂ ಇಳಿಯದಂತಿದ್ದ ಅವಳ ಮಗ ಯಮನಪ್ಪ ನಮ್ಮ ಹತ್ತಿರ ಬಂದು ನನ್ನನ್ನೂ ಮಾತನಾಡಿಸಿ, "ಏ ಯವ್ವಾ, ದೊಡ್ಡಪ್ಪಗೋಳ ಮನಿಗಿ ಬಂದವರ ಮುಂದ ನನ್ನ ಬಗ್ಗೆ ಏನೂ ಹೇಳಬ್ಯಾಡ ನೋಡು ಎಂದಾಗ ಮುದುಕಿಯ ಕಣ್ತುಂಬಿತು. "ಆಯೀ ಯಾಕ ಅಳತಿ ಸುಮ್ ಇರು" ಎಂದೆ. "ನಿಮ್ಮುತ್ಯಾ ಇದ್ದಾಗ ಶಿವನ ಸಭಾ ಇದ್ದಾಂಗ ಇತ್ತಪಾ ಈ ಮನಿ; ಪ್ರತೀ ವರ್ಷ ಹುಚ್ಚಯ್ಯನ ಜಾತ್ರ್ಯಾಗ ಅಗ್ಗಿ ಹಾಯ್ದು ಬೆಂಕಿ ಹಾಂಗ ಪವಿತ್ರ ಇದ್ದವನ ಹೋಟ್ಯಾಗ ಯಮನಪ್ಪನಂಥ ಬೂದಿ ಹುಟ್ಟಿ ಈ ಮನಿ ಸ್ಮಶಾನಆಗಿಬಿಟ್ಟೈತಿ" ಎಂದಾಗ ಅವಳ ಹೃದಯಾಂತರಾಳದಲ್ಲಿದ್ದ ನೋವು ಅವಳ ಕಣ್ಣೀರಲ್ಲಿ ಪ್ರತಿಬಿಂಬಿಸಿದಂತಾಯಿತು. ಅವಳನ್ನು ಸಮಾಧಾನ ಪಡಿಸುವಷ್ಟು ಅನುಭವವಾಗಲಿ, ಮಾತುಗಳಾಗಲಿ ನನ್ನಲ್ಲಿ ಹುಟ್ಟಲಿಲ್ಲ.
- Read more about ಚಂದ್ರವ್ವಳ "ಶಿವನ ಸಭಾ" ಕನಸು.
- Log in or register to post comments