ಕಾಡುನೆಲದ ಕಾಲಮಾನ

ಕಾಡುನೆಲದ ಕಾಲಮಾನ

ಪುಸ್ತಕದ ಲೇಖಕ/ಕವಿಯ ಹೆಸರು
ಶಿವಾನಂದ ಕಳವೆ
ಪ್ರಕಾಶಕರು
ಮಿತ್ರ ಮಾಧ್ಯಮ, ಬೆಂಗಳೂರು
ಪುಸ್ತಕದ ಬೆಲೆ
ರೂ.36/-

“ಕಾಲಮಾನದ ಮೊದಲು" ಎಂಬ ಆರಂಭದ ಬರಹದಲ್ಲಿ ಲೇಖಕ ಶಿವಾನಂದ ಕಳವೆ ಬರೆದಿರುವ ಒಂದು ಮಾತು: "ಈಸ್ಟ್ ಇಂಡಿಯಾ ಕಂಪೆನಿ ನಿರ್ದೇಶನದಂತೆ ಡಾ. ಫ್ರಾನ್ಸಿಸ್ ಬುಕಾನನ್ ಎಂಬ ವಿದೇಶಿ ಪ್ರವಾಸಿ ಕ್ರಿ.ಶ.1801ರಲ್ಲಿ ಉತ್ತರ ಕನ್ನಡದಲ್ಲಿ ಪ್ರವಾಸ ಮಾಡಿದ್ದರು. ಅವರು ಫೆಬ್ರವರಿ 18ರಿಂದ ಮಾರ್ಚ್ 16ರ ವರೆಗೆ ಆಗ ಭಟ್ಕಳದಿಂದ ಬನವಾಸಿಯ ವರೆಗೆ ಕೃಷಿ - ಕಾಡು - ಜನಜೀವನದ ಬಗೆಗೆ ಅಧ್ಯಯನ ನಡೆಸಿದರು. ಸರಿಯಾಗಿ 200 ವರ್ಷಗಳ ಬಳಿಕ ಬುಕಾನನ್ ಮಾರ್ಗದಲ್ಲಿ ಮರುಪ್ರಯಾಣ ನಡೆಸಿರುವೆ…" ಆ ಮರುಪ್ರಯಾಣದ ದಾಖಲಾತಿ ಈ ಪುಸ್ತಕ. ಆದ್ದರಿಂದ ಇದು ತೀರಾ ಅಪರೂಪದ ಪುಸ್ತಕ.

2001ರಲ್ಲಿ ಪ್ರಕಟವಾದ ಇದು ಕೇವಲ ಮರುಪ್ರಯಾಣದ ದಾಖಲಾತಿ ಮಾತ್ರವಲ್ಲ ಎಂಬುದನ್ನು ಲೇಖಕರು “ಕಾಲಮಾನದ ಮೊದಲು" ಬರಹದಲ್ಲಿ ಸ್ಪಷ್ಟ ಪಡಿಸುತ್ತಾರೆ: "ನಿಜವಾಗಿ ಈ ಪ್ರವಾಸ ಯೋಜನೆ ರೂಪುಗೊಂಡದ್ದು ಕ್ರಿ.ಶ. 1999ರ ನವಂಬರಿನಲ್ಲಿ. ಎರಡು ಶತಮಾನಗಳ ಬಳಿಕ ವಿದೇಶಿ ಪ್ರವಾಸಿಯ ಜಾಡು ಹಿಡಿದು ಹೊರಡುವ ಮುನ್ನ ದಾರಿ ಖರ್ಚಿಗೆ ಅರಿವಿನ ಬುತ್ತಿ ಹೊರಬೇಕಿತ್ತು. ಹಾಗಾಗಿ ಹಳೆಯ ದಾಖಲೆಗಳನ್ನು ಓದುತ್ತ ಕುಳಿತಾಗಲೆಲ್ಲ (ಲೇಖಕರ ಉತ್ತರಕನ್ನಡದ ಮೂಲೆಮೂಲೆಗಳ ತಿರುಗಾಟದಲ್ಲಿ) ಹಳ್ಳಿಗಾಡಿನ ಜನ ಹೇಳುತ್ತಿದ್ದ ಮಾತುಗಳು ಇತಿಹಾಸ ಕೌತುಕಗಳ ಮಧ್ಯೆ ಇಣುಕಿದವು. ಅವರು ನಗುತ್ತ ಹಂಚಿಕೊಂಡ ನೋವುಗಳಲ್ಲಿ ಮರೆತ ಕಾಲವನ್ನು ಸಲೀಸಾಗಿ ಪಾತ್ರೆಯಲ್ಲಿ ಹಿಡಿದಿಡುವ ತವಕವಿತ್ತು. ಅಲ್ಲಿ ನಿಕ್ಕಿಯಾಗಿ ಇದ್ದುದು ಸಂಕಟ, ಸಂಭ್ರಮ, ವೈರುಧ್ಯ, ಸೋಜಿಗ, ತಮಾಷೆಯ ಪ್ರಸಂಗಗಳು. ನಿಜದ ಇತಿಹಾಸದಲ್ಲಿ ಅವಕ್ಕೆ ಇದ್ದದ್ದು ಇಕ್ಕಟ್ಟಿನ ಜಾಗ…" ಇಲ್ಲಿನ 42 ಬರಹಗಳಲ್ಲಿವೆ: ಆಯಾ ಜಾಗಕ್ಕೆ ಸರಿಯಾಗಿ 200 ವರುಷಗಳ ನಂತರ ಭೇಟಿಯಿತ್ತಾಗ ಕಂಡದ್ದನ್ನು ದಾಖಲಿಸಿದ್ದರ ಜೊತೆಗೆ, ಆ ಸಂದರ್ಭದಲ್ಲಿ ಮತ್ತು ಮುಂಚೆ ಯಾವತ್ತೋ ಯಾರೊಂದಿಗೋ ತಿರುಗಾಟದ ಹಾದಿಗುಂಟ ಹರಟೆ ಹೊಡೆಯುವಾಗ ದಕ್ಕಿದ ಅನುಭವಗಳು. ಯಾಕೆಂದರೆ, ಅಲೆಮಾರಿಯಂತೆ ತಿರುಗಾಡುವಾಗ "ದಾರಿಯಲ್ಲಿ ಜೊತೆಯಾದವರು ಅಕ್ಕರೆಯಲ್ಲಿ ದಾರಿ ಖರ್ಚಿಗೆಂದು ಎತ್ತಿಕೊಟ್ಟ ಕಾಲಮಾನದ ಕತೆಗಳನ್ನು.... ಎಲ್ಲ ಮರೆಯುವ ಮುನ್ನ ನೆಲದ ಮಾತುಗಳು ಒಂದಿಷ್ಟಾದರೂ ಈಚೆ ಬರಲೆಂದು” ಲೇಖಕರು ಬರೆದಿಡುತ್ತಿದ್ದರು.

ಪುಸ್ತಕದ ಮುನ್ನುಡಿಯಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷರೂ, ಖ್ಯಾತ ಇತಿಹಾಸ ಸಂಶೊಧಕರೂ ಆದ ಡಾ. ಸೂರ್ಯನಾಥ ಕಾಮತರು ಹೀಗೆಂದು ಬರೆದಿದ್ದಾರೆ: “ಬ್ರಿಟಿಷರ ಕಾಲದಲ್ಲಿ ಕಟ್ಟುನಿಟ್ಟಿನ ಅರಣ್ಯ ಕಾನೂನಿನಿಂದಾಗಿ ಉತ್ತರಕನ್ನಡದ ರೈತರಿಗೆ ಅಪಾರ ನಷ್ಟವಾಗಿ, ಹಿಂಸೆಯಾಗಿ 1887ರಲ್ಲಿ ವನದುಃಖ ನಿವಾರಣ ಸಂಘ ಸ್ಥಾಪಿಸಿದ್ದರು. “ಕಾನಡಾ ಧುರೀಣ” ಪತ್ರಿಕೆ ಇದಕ್ಕಾಗಿ - ವನದುಃಖಗಳ ನಿವಾರಣೆಗಾಗಿ - 1916ರ ಸುಮಾರಿಗೆ ಆರಂಭವಾಯಿತು. ಈ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ರೈತರು ವಹಿಸಿದ ಪಾತ್ರ ದೊಡ್ಡದು. ಅದಕ್ಕೆ ಅರಣ್ಯ ಇಲಾಖೆಯ ದೌರ್ಜನ್ಯವೂ ಒಂದು ಕಾರಣ. ಕೃಷಿಯ ಬಗ್ಗೆ, ಅರಣ್ಯ ರಕ್ಷಣೆಯ ಬಗ್ಗೆ ಬೇರೆಬೇರೆ ಕಾಲದಲ್ಲಿ ನಡೆದ ಪ್ರಯೋಗಗಳು, ನಿರ್ಣಯಗಳು, ಧೋರಣೆಗಳು, ನೀತಿಗಳು, ಇವುಗಳ ಸಾಫಲ್ಯ, ವೈಫಲ್ಯ, ಇವುಗಳ ಮೈಕ್ರೋಲೆವೆಲ್ (ತಳಮಟ್ಟದ) ಮಾಹಿತಿಯನ್ನು ಜನರ ಬಾಯಿಗಳಿಂದ, ಸರಕಾರಿ ದಾಖಲೆಗಳಿಂದ, ಈ ಬಗೆಗಿನ ಪುಸ್ತಕಗಳಿಂದ, ಪತ್ರಿಕೆಗಳಿಂದ, ಬಹಳ ಪರಿಶ್ರಮಪೂರ್ವಕ ಇಲ್ಲಿ ಲೇಖಕರು ಸಂಗ್ರಹಿಸಿದ್ದಾರೆ. …. ಜನಸಮುದಾಯದ ಸಂಕಲಿತ ಅನುಭವವೇ ಇತಿಹಾಸ. ಇಂಥ ಅನುಭವಗಳ ಸಂಕಲನಕ್ಕೆ ಈಗಿರುವಷ್ಟು ಅನುಕೂಲ ಹಿಂದಿರಲಿಲ್ಲ. ಶ್ರೀ ಶಿವಾನಂದ ಕಳವೆಯವರು ಇಂಥ ಅನುಭವಗಳ ಜೇನುಗೂಡು ಕಟ್ಟುವ ಹೆಜ್ಜೇನಾಗಿ ದುಡಿಯುತ್ತಿರುವುದಕ್ಕಾಗಿ ನಮ್ಮ ಕೃತಜ್ನತೆಗೆ ಪಾತ್ರರು."

ಇಲ್ಲಿನ 42 ಬರಹಗಳನ್ನು "ಹಕೀಕತ್ತು", "ಜಂಗಲ್ ದರ್ಬಾರ್” ಮತ್ತು “ಪೀಕ್ ಪಹಣಿ” ಎಂಬ ಮೂರು ಭಾಗಗಳಲ್ಲಿ ಲೇಖಕರು ಪ್ರಸ್ತುತಪಡಿಸಿದ್ದಾರೆ. ಅವುಗಳಲ್ಲಿ ಬಹುಪಾಲು ಬರಹಗಳು ಕನ್ನಡ ಸಾಹಿತ್ಯದಲ್ಲಿ ಬೇರೆಲ್ಲಿಯೂ ಓದಲು ಸಿಗದ ಮಾಹಿತಿ ಕಣಜಗಳು. ಮುಂದೊಂದು ದಿನ ಉತ್ತರಕನ್ನಡದ ಇತಿಹಾಸದ ದಾಖಲಾತಿಗೆ ಬಲ ನೀಡಬಲ್ಲ ಬರಹಗಳು. ಪುಸ್ತಕದ ಕೊನೆಯಲ್ಲಿ ಪಟ್ಟಿ ಮಾಡಿರುವ 33 ಆಕರ ಗ್ರಂಥಗಳೇ ಲೇಖಕರ ಅಧ್ಯಯನದ ಪುರಾವೆ. ಆದರೂ “ಕಾಲದ ಕೆಲವು ಕತೆಗಳನ್ನು ಅರಿಯಲು ಇದು ನೆರವಾಗಬಹುದು. ಹಾಗಂತ ಇದೇನು ಸಮಗ್ರ ಮಾಹಿತಿ ಕಣಜವಲ್ಲ. ಕಣದಲ್ಲಿ ಹರಗಿಟ್ಟ ಸುಗ್ಗಿಯ ಅಂದಾಜು ಗೊತ್ತಿಲ್ಲದೇ ಕಣಜ ಕಟ್ಟತೊಡಗಿದ ಉಮೇದಿ ರೈತನ ಒಂದು ಅವಸರ ಅಷ್ಟೇ” ಎಂದು ವಿನಯದಿಂದ ಬರೆದುಕೊಂಡಿದ್ದಾರೆ ಶಿವಾನಂದ ಕಳವೆ.

ಆಹಾರಕ್ಕಾಗಿ ಆಗಿನ ಕಾಲದಲ್ಲಿ ಜನರ ಪರದಾಟವನ್ನು "ತಾಳೆ ತಿಂದವನು ಬಾಳಿಯಾನು” ಬರಹದಲ್ಲಿ ಹೀಗೆ ದಾಖಲಿಸಿದ್ದಾರೆ: “ಕರಾವಳಿಯ ಹಿಂದುಳಿದ ಜನಾಂಗಗಳ ಜನ ತಾಳೆ ಮರದ ಹಿಟ್ಟು ತೆಗೆದು ಗಂಜಿ ಮಾಡಿ ಬದುಕುತ್ತಿದ್ದರು. ಹೊನ್ನಾವರ (ತೊಳಸಾಣಿ) ಹಾಗೂ ಕುಮಟಾ (ಯಾಣ)ದ ಕಾಡುಗಳಲ್ಲಿ ತಾಳೆಮರಗಳು ಹೇರಳವಾಗಿದ್ದವು. ಮರ ಕಡಿದು ಮರದ ಕಾಂಡವನ್ನು ಸೀಳಿ ಹಿಟ್ಟನ್ನು ಸಂಗ್ರಹಿಸುವುದು ಪದ್ಧತಿ. ಒಂದು ಮರದಿಂದ ಸುಮಾರು ಎರಡು ಕ್ವಿಂಟಾಲ್ ಹಿಟ್ಟು ದೊರೆಯುತ್ತಿತ್ತು. ಅದನ್ನು ಒಣಗಿಸಿ ಸಂಗ್ರಹಿಸಿಟ್ಟು ನಿತ್ಯ ಅಷ್ಟಿಷ್ಟಾಗಿ ಬಳಸುತ್ತಿದ್ದರು... ಬರಗಾಲ ಸಂದರ್ಭದಲ್ಲಿ ಜನ ಯಾವ ಆಹಾರ ತಿನ್ನುತ್ತಿದ್ದರು ಎಂಬುದನ್ನು ಬ್ರಿಟಿಷ್ ಸರಕಾರ ದಾಖಲಿಸುತ್ತಿತ್ತು. ಮುಂದೆ ಬರಗಾಲ ಬಂದಾಗ ಜನ ಹೇಗೆ ಬದುಕಬಹುದೆಂಬುದಕ್ಕೆ ಇಂತಹ ದಾಖಲಾತಿ ಮಾರ್ಗದರ್ಶಕ. ಬಾಳೆಹಣ್ಣಿನ ತೋಟೆ (ಸಿಪ್ಪೆ), ಬಾಳೆಕಾಯಿ, ಬಾಳೆಹೂ, ತೊಂಡಿಕಾಯಿ, ಮುಳಗಳ್ಳಿಕಾಯಿ, ಅಡವಿ ಬಾಳೆ ದಿಂಡು, ಹರಿವಾಳ (ಹಾಲವಾಣ)ದ ಬೀಜವನ್ನು ಕುದಿಸಿ ಉಸುಳಿಯ ಹಾಗೇ ತಿನ್ನುವುದು, ಬಿದಿರಿನ ಮೊಳಕೆ, ಸೂರ್ಮಾಂಡವೆಂಬ ತಾಳೆ ಮರದ ಮೊಳಕೆ ಹೀಗೆ ಪಟ್ಟಿ ಬೆಳೆಯುತ್ತದೆ.”

ಪ್ಲೇಗ್ ರೋಗದಿಂದಾಗಿ ಶಿರಸಿ ಪಟ್ಟಣವೇ ನಿರ್ಜನವಾದ ವಿವರಗಳು “1900 ಹುಟ್ಟಿದಾಗ ಶಿರಸಿ ನಿರ್ಜನ" ಬರಹದಲ್ಲಿವೆ: “ಶಿರಸಿ, ಕ್ರಿ.ಶ. 1900 ಜನವರಿ 1. ಹೌದು, ದಿನಾಂಕ ಸರಿಯಾಗಿಯೇ ಇದೆ. ಅನುಮಾನ ಬೇಡ. ಅಂದು ಪೇಟೆಯ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಊರಿನ ಜನರೆಲ್ಲ ಮನೆಯಿಂದ ಹೊರಬಿದ್ದು ದೂರ ಹೋಗಿದ್ದರು. ಮನೆಗಳಿಗೆ ಹೊದಿಸಿದ ಎಲ್ಲ ಹೆಂಚುಗಳನ್ನು ತೆಗೆದಿರಿಸಲಾಗಿತ್ತು. ಚೆನ್ನಾಗಿ ಮನೆಯೊಳಕ್ಕೆ ಗಾಳಿ, ಬೆಳಕು ಬರಲು ಈ ವ್ಯವಸ್ಥೆ. ಹೊಸ ಶತಮಾನದ ಸೂರ್ಯ ಮನೆಯ ಮೂಲೆಮೂಲೆಗಳ ಕತ್ತಲು ಕಳೆಯಲಿ ಎಂದು ಸ್ವಾಗತದ ಹೊಸ ಪರಿ ಹೀಗಿತ್ತೇ? … ಕತೆ ಸ್ವಾಗತದ್ದಲ್ಲ, ಸಾವಿನ ಸಂಕಟದ್ದು. ಕ್ರಿ.ಶ. 1892ರಲ್ಲಿ ಮೈಲಿ ಬೇನೆಯ ಪ್ರಥಮ ದರ್ಶನ ಮಾಡಿದ ಶಿರಸಿಗೆ ಕ್ರಿ.ಶ. 1899ರ ಅಕ್ಟೋಬರಿನಲ್ಲಿ ಪ್ಲೇಗ್ ಬಂತು. ಹಲವರು ಸಾವನ್ನಪ್ಪಿದರು. … ಪ್ಲೇಗ್ ನಿಯಂತ್ರಣಕ್ಕೆ ಪ್ರಯತ್ನಗಳು ಆರಂಭವಾದವು. ಕ್ರಿ.ಶ.1899ನೇ ಅಕ್ಟೋಬರ್  15ರ ಒಳಗಾಗಿ ನಗರದ ಎಲ್ಲರೂ ರೋಗ ನಿರೋಧಕ ಚುಚ್ಚುಮದ್ದು ಪಡೆಯಬೇಕೆಂದು ಜಿಲ್ಲಾ ನ್ಯಾಯಾಧೀಶರು ಆಜ್ನೆ ಹೊರಡಿಸಿದರು. “ನಮಗೆ ಸೂಜಿ ಚಿಕಿತ್ಸೆ ಬೇಡವೇ ಬೇಡ" ಎಂದು ಜನ ವಿರೋಧಿಸಿದರು. ಚುಚ್ಚುಮದ್ದು ಪಡೆಯದಿದ್ದವರು ನಗರದ ಹೊರಗಿನ ಶಿಬಿರಗಳಲ್ಲಿ ವಾಸಿಸಬೇಕೆಂದು ಸೂಚಿಸಲಾಯಿತು. ಹಾಗಾಗಿ ಮನೆಗಳನ್ನು ಖಾಲಿ ಮಾಡಿ ಜನ ಶಿಬಿರಗಳಿಗೆ ಹೋದರು…. ಐದು ತಿಂಗಳ ತರುವಾಯ ಕ್ರಿ.ಶ. 1900 ಮಾರ್ಚ್ 24ರಂದು ಅವರೆಲ್ಲ ಶಿರಸಿಗೆ ಮರಳಿದರು.”

"ತಹಶೀಲ್ದಾರ ಕಚೇರಿಯಲ್ಲಿ ಮಂಗನ ಬಾಲ ಎಣಿಕೆ”, “ಉಣುಗು ಕೊಲ್ಲುವ ಇಂಗ್ಲಿಷ್ ಯಂತ್ರ” - ಈಗಿನ ಕಾಲಘಟ್ಟದಲ್ಲಿ ನಂಬಲು ಸಾಧ್ಯವಿಲ್ಲದ ಘಟನೆಗಳ ವಿವರಗಳಿರುವ ಇಂತಹ ಹಲವಾರು ಲೇಖನಗಳು ನಮ್ಮನ್ನು ಯೋಚನೆಗೆ ಹಚ್ಚುತ್ತವೆ.
ಆಗಿನ ಕಾಲದಲ್ಲಿ ಬ್ರಿಟಿಷರಿಂದ ಆಗುತ್ತಿದ್ದ ದೌರ್ಜನ್ಯಗಳನ್ನೂ ಅನ್ಯಾಯಗಳನ್ನೂ ಕಣ್ಣಿಗೆ ಕಟ್ಟುವಂತೆ ಲೇಖಕರು ಚಿತ್ರಿಸಿರುವ ಬರಹಗಳೂ ಈ ಪುಸ್ತಕದಲ್ಲಿವೆ.

(ಗಮನಿಸಿ: ಅಂತಹ ಒಂದು ಬರಹ: “ನ್ಯಾಯಾಲಯದ ಮೆಟ್ಟಿಲೇರಿದ ಬಿಟ್ಟಿಗಾಡಿ”. ಇದನ್ನು “ಬ್ರಿಟಿಷರ ದಬ್ಬಾಳಿಕೆ ಮತ್ತು ದುಷ್ಟತನದ ಮಗದೊಂದು ಪುರಾವೆ: ಬಿಟ್ಟಿಗಾಡಿ ಪ್ರಕರಣಗಳು” ಎಂಬ ಶೀರ್ಷಿಕೆಯಲ್ಲಿ  “ಸಂಪದ”ದಲ್ಲಿ ಸ್ವಾತಂತ್ರ್ಯ ದಿನವಾದ 15-08-2023ರಂದು ಪ್ರಕಟಿಸಲಾಗಿದೆ.)