ಕೇಳಿಸದ ಸದ್ದುಗಳು

ಕೇಳಿಸದ ಸದ್ದುಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಜಯಶ್ರೀ ಬಿ ಕದ್ರಿ
ಪ್ರಕಾಶಕರು
ಸುಮಾ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೬೦.೦೦, ಮುದ್ರಣ: ೨೦೨೩

ಜಯಶ್ರೀ ಕದ್ರಿಯವರ ನೂತನ ಕವನ ಸಂಕಲನ ‘ಕೇಳಿಸದ ಸದ್ದುಗಳು'ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕವನ ಸಂಕಲನಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಕವಯತ್ರಿಯಾದ ಎಂ ಆರ್ ಕಮಲ. ಅವರ ಪ್ರಕಾರ “ಜಯಶ್ರೀ ಕದ್ರಿಯವರಿಗೆ ಕವಿತೆಯೆನ್ನುವುದು ತುದಿ ಬೆರಳಿಗಂಟಿದ ಪರಾಗ. ಹೂವಿನ ಘಮಲು. ರಾಗವೊಂದನ್ನು ಜೀವದಲ್ಲಿ ಮೆಲ್ಲನೆ ಅರಳಿಸುವ ಸೋಜಿಗ. ಒಳಗಿನ ಕುದಿತ,ಇರಿತಗಳಿಂದ ಬಿಡುಗಡೆಯನ್ನು ಪಡೆವ ಹಾದಿ. ನಿಶ್ಯಬ್ಧಕ್ಕೆ ಶಬ್ಧವನ್ನು ತುಂಬುವ, ಭಾವಕ್ಕೆ ಪದಗಳನ್ನು ನೇಯುವ ಬೆಡಗು. ಲೆಕ್ಕವಿಡದೆ ಕತ್ತಲಲ್ಲಿ ಉಳಿದು ಹೋದ ಹೆಣ್ಣು ಮಕ್ಕಳ ನಿಟ್ಟುಸಿರುಗಳನ್ನು ಬೆಳಕಿಗಿಟ್ಟು ತನ್ನನ್ನು, ಸಮಾಜವನ್ನು ಏಕಕಾಲದಲ್ಲಿ ಪರೀಕ್ಷಿಸಿಕೊಳ್ಳುವ ಪರಿ.”

ಜಯಶ್ರೀ ಕದ್ರಿಯವರ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಸಾಹಿತಿಯಾದ ಡಾ ಯು ಮಹೇಶ್ವರಿ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವದ ಆಯ್ದ ಭಾಗ…

“ಲೇಖಕಿ ಜಯಶ್ರೀ ಕದ್ರಿಯವರನ್ನು ನಾನು ಅವರ ವಿದ್ಯಾರ್ಥಿ ದಿನಗಳಿಂದ ಬಲ್ಲೆ, ತಾನು ಬರೆಯುತ್ತಿದ್ದ ಕವನಗಳನ್ನು ನನಗೆ ಅವರು ತೋರಿಸುವುದಿತ್ತು. ಭರವಸೆಯ ಕವಯಿತ್ರಿಯಾಗಿ, ಕವಿತಾ ಸ್ವರ್ಧೆಗಳಲ್ಲಿ ವಿಜೇತೆಯಾಗಿ ಭಿತ್ತಿಪತ್ರಿಕೆಗಳಲ್ಲಿ, ವಿದ್ಯಾರ್ಥಿ ಪತ್ರಿಕೆಯಾದ ಕನ್ನಡ ಧ್ವನಿಯ ವಿಶೇಷಾಂಕಗಳಲ್ಲಿ ಆಕೆ ಗುರುತಿಸಲ್ಪಟ್ಟಿದ್ದರು. ಅಂದಿನ ದಿನಗಳಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ನಡೆಯುತ್ತಿದ್ದ ಸಾಹಿತ್ಯ ಚಟುವಟಿಕೆಗಳು ವಿದ್ಯಾರ್ಥಿ ಪ್ರತಿಭೆಗಳನ್ನು ಗುರುತಿಸುವಲ್ಲಿ, ಪೋಷಿಸುವಲ್ಲಿ ಸದ್ದಿಲ್ಲದೆ ನಿರತವಾಗಿದ್ದವು. ಇಲ್ಲಿ ಆರಂಭಿಕ ಹೆಜ್ಜೆಗಳನ್ನೂರಿದ ಪ್ರತಿಭೆಗಳನೇಕರು ಮುಂದೆ ತಮ್ಮ ಗಟ್ಟಿ ನೆಲೆಯನ್ನು ಕಂಡುಕೊಂಡಿರುವುದು ಅಭಿಮಾನದ ವಿಚಾರ.

ವೃತ್ತಿಯಲ್ಲಿ ಆಂಗ್ಲ ಪ್ರಾಧ್ಯಾಪಕಿಯಾಗಿರುವ ಜಯಶ್ರೀಯವರು ತಮ್ಮ ಅಧ್ಯಯನ – ಅಧ್ಯಾಪನದ ನಡುವೆ ಸೃಜನಶೀಲ ಬರಹಗಳಿಗೆ ಎಡೆಯನ್ನು ಕಂಡುಕೊಂಡಿರುವುದು ಈ ಚಟುವಟಿಕೆಯು ಅವರಿಗೆ ಒಳಗಿನ ಒತ್ತಾಸೆಯಾಗಿರುವುದನ್ನು ಸಾರುತ್ತದೆ. ಯಾಕೆಂದರೆ ವಿದ್ಯಾರ್ಥಿ ದೆಸೆಯಲ್ಲಿ ಬರೆಯುತ್ತಿದ್ದ ಅನೇಕರು ಮುಂದೆ ಕಾಣೆಯಾಗಿದ್ದಾರೆ. ಹಾಗೆಯೇ ಜಾಲತಾಣಗಳು, ಫೇಸ್ ಬುಕ್‌ಗಳು ಈ ಹಿಂದೆ ಬರೆಯದವರನ್ನೂ ಬರೆಯಿಸಿವೆ ಎನ್ನುವುದೂ ಅಷ್ಟೇ ಸತ್ಯ. ಏನೇ ಇದ್ದರೂ ಒಡಲ ಘಮ ಬರವಣಿಗೆಯಲ್ಲಿ ಬೆರೆತಿದ್ದರೆ ಅದರ ಹೊಳಪು ಆಕರ್ಷಿಸದೆ ಬಿಡಲಾರದು.

ಪತ್ರಿಕೆಗಳಲ್ಲಿ ಹಾಗೂ ಜಾಲತಾಣಗಳಲ್ಲಿ ಜಯಶ್ರೀಯವರ ಗದ್ಯ ಮತ್ತು ಕವಿತೆಗಳು ಸಾಹಿತ್ಯ ಪ್ರಿಯರಿಗೆ ಈಗಾಗಲೇ ಪರಿಚಿತವಾಗಿವೆ. ಬದುಕಿನೊ೦ದಿಗೆ ಆರೋಗ್ಯಕರವಾದ ಅನುಸ೦ಧಾನದ ಹಾದಿಯನ್ನು ಲವಲವಿಕೆಯಿ೦ದಲೇ ತೆರೆದಿಡುವ ಅವರ ‘ತೆರೆದ ಹಾದಿ’ ಸಂಕಲನದ ಗದ್ಯ ಬರಹಗಳು ಮುದವನ್ನು ನೀಡುವುದರೊ೦ದಿಗೆ ಜೀವನ ಪ್ರೀತಿಯ ಧನಾತ್ಮಕ ಚಿ೦ತನೆಯನ್ನು ಓದುಗರಿಗೆ ನೀಡಿ ಬೆಳೆಸಿವೆ. ಅವರ ಮುಂದಿನ ಕೃತಿ ‘ಬೆಳಕು ಬಳ್ಳಿ’ ಎಂಬ ಲೇಖನಗಳ ಗುಚ್ಛ ಲಲಿತಪ್ರಬಂಧಗಳ ಧಾಟಿಯಲ್ಲಿ ಸರಸವಾಗಿ ಓದಿಸಿಕೊಂಡು ಬದುಕಿನ ಬಗ್ಗೆ ಸಕಾರಾತ್ಮಕ ಚಿಂತನೆಯನ್ನು ಬೆಳೆಸುವಲ್ಲಿ ಪೂರಕವಾಗಿದೆ. ಕವಿತೆಯೂ ಅವರ ಇಷ್ಟವಾದ ಪ್ರಕಾರವೆನ್ನುವುದನ್ನು ಈ ಸಂಕಲನದ ಕವಿತೆಗಳು ಸಾಬೀತು ಪಡಿಸುತ್ತವೆ.

ಜಯಶ್ರೀ ಕವಿತೆಯನ್ನು ಒಂದು ಮಾಧ್ಯಮವಾಗಿ ಬಳಸುವುದು ಯಾವಾಗೆಂದರೆ ಆ ವಸ್ತುವಿನಲ್ಲೇ ಕವಿತೆಯ ಸಾಧ್ಯತೆಯಿದ್ದಾಗ. ಅಂದರೆ ಒ೦ದು ಕವಿತೆಯ ಬೀಜ ಇರುವುದು ಸೂಕ್ಷ್ಮ ನಿರೀಕ್ಷಣೆಯಲ್ಲಿ, ಅದು ಹುಟ್ಟು ಹಾಕುವ ಕ೦ಪನಗಳಲ್ಲಿ, ಕವಿತೆಯ ವಸ್ತು ಕವಯತ್ರಿಯ ಭಾವಕೋಶದೊಳಗೆ ಆವರಿಸಿ ಕವಿತೆಯ ರೂಪದಲ್ಲಿ ಅವಿರ್ಭವಿಸುವ ಕ್ಷಣವನ್ನು ಮುಂಚಿತವಾಗಿ ಊಹೆ ಮಾಡಲು ಸಾಧ್ಯವಿಲ್ಲ. ಜಯಶ್ರೀಯವರ ಕವಿತೆಗಳು ಬಹುಮಟ್ಟಿಗೆ ಭಾವಕೇಂದ್ರಿತ. ಅವು ವ್ಯಾಖ್ಯಾನ ನಿರಪೇಕ್ಷ; ಭಾವಗಮ್ಯ, ಕವಿತೆಯೆಂದರೆ ಭವದ ಸಾಯುಜ್ಯಕ್ಕೆ ಉರಿವ ಹಣತೆ ಎಂದು ಅವರು ನ೦ಬಿದ್ದಾರೆ. ತಂತಿ ಕಂಪಿಸಿದ ಮೌನವನ್ನು ಅನುಭವಿಸುವ ಸೂಕ್ಷ್ಮತೆ ಇಲ್ಲಿನದು.

ಬೇರಿಗಿಳಿದ ನೀರನೇ ನೆಚ್ಚಿ ಕಾದು ಕಾದು
ಗಾಳಿನೇವರಿಕೆಯಲಿ ಮರಳಿಕನಸುವುದು

ಎಂಬಂಥಹ ಸಾಲುಗಳು ಮೂಡುವುದು ಇಂಥ ಧ್ಯಾನಸ್ಥ ಸ್ಥಿತಿಯಲ್ಲಿ ಮಾತ್ರ. ಈ ಸಂಗ್ರಹದಲ್ಲಿ ಕಥನ ಕವನಗಳ ಜಾಡು ಕಾಣಿಸುವುದು ವಿರಳವಾಗಿ ಮಾತ್ರ. ಅದು ಅವರ ಕವಿತೆಯ ದಾರಿಯಿಲ್ಲ. ಕಾವ್ಯ ಭಾಷೆ ರೂಪಕದ ಭಾಷೆಯಾದಾಗ ಅದು ನಮ್ಮನ್ನು ಸಶಕ್ತವಾಗಿ ಮುಟ್ಟುತ್ತದೆ. ಸಂಕಲನದ ಹಲವು ಕವನಗಳಲ್ಲಿ ಕವಯಿತಿ ಕವನದ ಆಶಯಕ್ಕೆ ಸಂವಾದಿಯಾದ ರೂಪಕದ ಭಾಷೆಯನ್ನು ಹೆಣೆಯುವಲ್ಲಿ ಶ್ರಮಿಸಿದ್ದಾರೆ. ಕೆಲವೊಮ್ಮೆ ಇಡೀ ಕವನವೇ ಒಂದು ರೂಪಕವಾಗಿ ಆವರಿಸಿ ಬಿಡುತ್ತದೆ. ಉದಾಹರಣೆಗೆ ‘ಹಾದಿ’ ಎಂಬ ಕವನದಲ್ಲಿ

ಹಾದಿ ಮುಗಿಯುವುದಿಲ್ಲ/ ತಿರುವುಗಳು ಕೋರೆಗಳು/ ಹಾದಿ ಮಿಗಿಲೋ/ ವೃತ್ತ ಹೆಚ್ಚೋ ಎಂದು ಆರಂಭವಾಗುವಾಗಲೇ ಕವನವು ಕೇವಲ ಹಾದಿಯನ್ನು ಅಥವಾ ದಾರಿಯನ್ನು ಕುರಿತು ಹೇಳುತ್ತಾ ಇಲ್ಲ ಎನ್ನುವುದು ಹೊಳೆದು ಬಿಡುತ್ತದೆ. ಹಾಗೆಯೇ ಸಾಗಿ ಮುಕ್ತಾಯದಲ್ಲಿ ಕೊನೆಯಿರದ ಹಾದಿಯಲಿ ಸಾವಿರದ ಕನಸುಗಳು/ಹಾದಿ ಮಿಗಿಲೋ ವೃತ್ತ ಮಿಗಿಲೋ/ಹಾದಿಯೇ ವೃತ್ತವೋ ಎ೦ಬ ಜಿಜ್ಞಾಸೆ ಮುಂದಿಟ್ಟಾಗ ಅದು ದೃಢಗೊಳ್ಳುತ್ತದೆ.

ಕವಿತೆ ಏಕಾಂತದ ಅನುರಣನವಾಗಿ ಸಾಗುವಾಗ ಎಲ್ಲೂ ಎಡವದೆ ನಿರರ್ಗಳವಾಗಿ ಓಡುವ ಸಾಲುಗಳಲ್ಲಿ ಕೆಲವೊಮ್ಮೆ ಫಳಕ್ಕನೆ ಮಿಂಚಿನಂತಹ ಸಾಲುಗಳು ಬೆಳಗುತ್ತವೆ. ಉದಾಹರಣೆಗೆ ‘ಪ್ರಾರ್ಥನೆ’ ಎನ್ನುವ ಕವನದಲ್ಲಿ ಕೊನೆಗೆ ಬರುವ ‘ದೀಪದಡಿ ನೆರಳಿರಲು ಬೆಳಕು ಸುಳ್ಳೇ?’ ಎಂಬ ಮಾತನ್ನು ಗಮನಿಸಬಹುದು. ಸಂಕಲನದಲ್ಲಿ ಗುರುತಿಸಬಹುದಾದ ಇನ್ನಷ್ಟು ಕವನಗಳು ಇವೆ. ಆಯ್ದ ಕವನಗಳನ್ನು ಪುಸ್ತಕರೂಪದಲ್ಲಿ ವಿನಮ್ರತೆಯಿಂದ ಕಾವ್ಯಪ್ರಿಯರಿಗೆ ನೀಡುತ್ತಿರುವ ಜಯಶ್ರೀಯವರು ತಮ್ಮ ಕಾವ್ಯದ ದಾರಿಯಲ್ಲಿ ಇನ್ನಷ್ಟು ದೃಢ ಹೆಜ್ಜೆಗಳನ್ನು ಊರಬೇಕಾಗಿದೆ.”