ಜೇನು ತೆಗೆಯಲು ಅಪ್ಪ ಹೇಳಿಕೊಟ್ಟ ಟ್ರಿಕ್ (ಭಾಗ 2)

ಜೇನು ತೆಗೆಯಲು ಅಪ್ಪ ಹೇಳಿಕೊಟ್ಟ ಟ್ರಿಕ್ (ಭಾಗ 2)

ಒಂದು ಬೇಸಿಗೆಯಲ್ಲಿ ನನ್ನ ವ್ಯಾಪ್ತಿಯ ಜೇನು ಹುಡುಕಾಟ ಮುಗಿಸಿ ಎಲ್ಲೂ ತುಪ್ಪ ರೆಡಿ ಇರುವ ಜೇನು ಇಲ್ಲವೆಂದಾಗ  ಈ ಬಂಡೆ ಸಮೀಪ  ಜೇನು ಹುಡುಕಲು ಹೋಗಿದ್ದೆ. ಹಲವು ವರ್ಷಗಳ ಹಿಂದೆ ಕಾಲ ಕಳೆದ ಸವಿನೆನಪುಗಳ ಸ್ಮರಿಸುತ್ತಾ  ಆ ಸಾಲಿನಲ್ಲಿ ಹಾಗೆ ಹೋಗುತ್ತಿದ್ದಾಗ ಆ ಕತ್ತಾಳೆ ಗುಮ್ಮಿಯಲ್ಲಿ ನೆಲಕ್ಕೆ ಬಿಲ್ಲಿನಂತೆ ಬಾಗಿರುವ ಒಣಗಿದ ಕತ್ತಾಳಿಗರಿಯಲ್ಲಿ ಒಂದು ಅಡಿ ಉದ್ಧದ ಎರಡು ಅಡಿ ಅಗಲದ ಜೇನು ನೋಡಿದೆ. ನನಗೆ ಅದು ತೆಗೆಯುವುದು ಕ್ಲಿಷ್ಟಕರವಾದ್ದರಿಂದ ಮನೆಗೆ ಬಂದು ಅಣ್ಣ ತಿಪ್ಪನನ್ನು ಕರೆದುಕೊಂಡು ಹೋದೆ. ಇಬ್ಬರೂ ಬಂದು ಕತ್ತಾಳಿಗರಿಯನ್ನು ಕುಡುಗೋಲಿನಿಂದ ಗರಿ ಕೊಯ್ಯಲು ಮುಂದಾಗುವಾಗ ಅವನು ಅಲ್ಲೇ ಅದೇ ಕತ್ತಾಳಿ ಗುಮ್ಮಿಯಲ್ಲಿ ಆಚೆ ಬದಿಯಲ್ಲಿ ಇನ್ನೊಂದು ಜೇನು ನೋಡಿದ. ಅದು ದೊಡ್ಡದ ಸಣ್ಣದಾ ಎಂದು ನಾನು  ಬಗ್ಗಿ ಬಗ್ಗಿ ನೋಡಲು ನೋಡುವಾಗ ಅಲ್ಲೇ ಸಾಧಾರಣ ಮುಳ್ಳು ಬೇಲಿಗಳಲ್ಲಿ ಇನ್ನೂ ಒಂದು ಜೇನು ಗೂಡು ಕಂಡಿತು. ಹಾಗೇ ಮೇಲೆ ನೋಡಲು ಹೊಂಗೆಯ ಮರದ ಕೊಂಬೆಯಲ್ಲಿ ಒಂದು ಪಿಟ್ ಜೇನು ಇಟ್ಟಿದೆ. ಒಟ್ಟು ನಾಲ್ಕು ಜೇನುಗಳು.! ಅವು ಎಂಟತ್ತು ಅಡಿಗಳ ಅಂತರದಲ್ಲಿ ಇವೆ. ಈಗ ನಮಗೆ ಯಾವುದನ್ನು ಮೊದಲು ತೆಗೆಯಬೇಕು? ಯಾವುದನ್ನೂ ನಂತರ ತೆಗೆಯಲಿ ?? ಒಂದನ್ನು ಮುಟ್ಟಿದರೆ ಎಲ್ಲಾ ಗೂಡಿನಲ್ಲಿರುವ ನೊಣಗಳು ಒಮ್ಮೆಗೇ ಧಾಳಿಮಾಡಿದರೆ ಏನು ಮಾಡುವುದು?? ಎಂದು ಗೊಂದಲವಾಯಿತು. ನಾವಿಬ್ಬರೂ ಅಲ್ಲಿ ಓಡಾಡುತ್ತಿದ್ದ ಕಾರಣವಾಗಿ ಆ ಜೇನು ಹುಳುಗಳು ಝೀ.... ಝೀ... ಎಂದು ಝೇಂಕರಿಸುತ್ತಿವೆ. ಅದರ ಶಬ್ದ ನಮಗೆ ಒಂದರ ನಂತರ ಒಂದರಂತೆ ಪಿಸುಮಾತಿನಂತೆ ಕೇಳಿಸುತ್ತದೆ. ಅಪಾಯದ ಸನ್ನಿವೇಶ ಅವುಗಳಿಗೆ ಗೊತ್ತಾಗಿಟ್ಟಿದೆ. ಈಗ ಯಾವ ಜೇನನ್ನು ನಾವು ಕೀಳಲು ಮುಂದಾದರೆ ಎಲ್ಲಾ ಹುಳುಗಳು ಒಮ್ಮೆಲೆ ರೇಗಿ ಹಿಂದೆ ಮುಂದೆ ಮೇಲಿನಿಂದಲೂ ಧಾಳಿ ಮಾಡಿದರೆ??? ಅವು ಹಾಗೆ ಮಾಡಬಹುದೆಂಬ ಖಾತರಿಯೂ ನಮಗಿರಲಿಲ್ಲ. ಇದ್ದದ್ದು ಅನುಮಾನ. ಅನುಮಾನದಲ್ಲೆ ಜೇನಿಗೆ ಅಡ್ಡಲಾಗಿದ್ದ ಒಂದು ಕತ್ತಾಳಿ ಗರಿಯನ್ನು ಕತ್ತರಿಸಲು  ರಮ್ಮನೆ ಮುಖಕ್ಕೆ ಹಾರಿದ ಹತ್ತಾರು ಹುಳುಗಳು ತಿಪ್ಪನ ಹಣೆಗೊಂದು ಕೈಗೊಂದು ಚಟಾರನೇ ಹೊಡೆದವು. ನನ್ನ ಮೇಲೂ ಧಾಳಿಮಾಡಿದವಾದರೂ ನಾನು ಕೈ ಬೀಸುತ್ತಾ  ಓಡಿ ಹೋಗಿದ್ದಕ್ಕೆ  ಹೊಡೆತದಿಂದ ಪಾರಾದೆ. ಆ ಹೊಡೆತದ ರಭಸಕ್ಕೆ ಕೀಳಲು ಪ್ರಯತ್ನಿಸಿದ ಗೂಡಿನ ಹುಳುಗಳೇ ಪ್ರಯತ್ನಿಸಿದವೋ ಇತರೆ ಗೂಡಿನ ಹುಳುಗಳೇ ಪ್ರಯತ್ನಿಸಿದವೋ ಗೊಂದಲ ಮತ್ತು  ಭಯವಾಗಿ ಅಪ್ಪನನ್ನು ಕರೆದುಕೊಂಡು ಬರಲು  ಅಲ್ಲೇ ಸಮೀಪದ ಮನೆಗೆ ಬಂದೆವು.

ಮನೆಗೆ ಬಂದ ನಾನು ".. ಅಪ್ಪಾ... ಬಂಡೆ ಹತ್ರ ನಾಲ್ಕು ಜೇನು ಇದ್ದಾವೆ  ಕಿತ್ಕೊಂಡು ಬರಾಣ ಬಾ.." ಎಂದು ಕರೆದೆ.. "ಯಾಕ್ರೋ ಇಬ್ಬರು ಮನುಷ್ಯರು ಹೋಗಿ ಹಿಂದಕ್ಕೆ ಬಂದ್ರ??? ನಿಮ್ ಕೈಯಲ್ಲಿ ಆಗಲಿಲ್ಲವಾ??" ....  "ಅಲ್ಲಿ ನಾಲ್ಕು ಜೇನು ಒಂದೇ ಹತ್ರ ಇದಾವೆ... ಮೇಲೆ ಕಾಣಿಗೆ (ಹೊಂಗೆ) ಮರದಲ್ಲಿ ಒಂದು ಇದೆ.  ಒಂದನ್ನು ಕೀಳಲು ಹೋದರೆ ಬೇರೆವೆಲ್ಲವೂ ಎದ್ದು ಸರ್ವದಿಕ್ಕಿನಲ್ಲೂ ಬಂದು ಹೆಂಗಬೇಕೋ ಹಂಗೆ ಕಚ್ಚಿದ್ರೆ ಅಂತ ಭಯ... ಆಯಿತು."

"ಏನು ಆಗಲ್ಲ ಗಾಳಿ ಯಾವ ದಿಕ್ಕಿನಿಂದ ಬೀಸುವುದೋ ಅದರ ವಿರುದ್ಧದ ದಿಕ್ಕಿಗೆ ನೀವು ಇರಬೇಕು. ಗಾಳಿ ಮೇಲ್ಗಡೆ (ಪಶ್ಚಿಮ) ಯಿಂದ ಬೀಸಿದರೆ ನೀವು ಕೆಳಗಡೆ (ಪೂರ್ವ) ದಿಕ್ಕಿನಲ್ಲಿ ಇರಬೇಕು. ಕೆಳಗಡೆಯಿಂದ (ಪೂರ್ವ) ಗಾಳಿ ಬೀಸುತ್ತಿದ್ದರೆ ನೀವು ಮೇಲ್ಗಡೆ (ಪಶ್ಚಿಮ) ಗೆ ನಿಂತಿರಬೇಕು" ಎಂದು ಹೇಳಿದರು. ಗಾಳಿಯ ದಿಕ್ಕು ಮತ್ತು ಜೇನು ತೆಗೆಯುವವರು ಇರುವ ದಿಕ್ಕು ಒಂದೇ ಆದರೆ ಅವುಗಳಿಗೆ ವಾಸನೆ ಗೊತ್ತಾಗಿ ಅವು ನಿಮ್ಮ ಮೇಲೆ ಕಚ್ಚಲು ಎರಗುವವು ಎಂದೂ ಮನೆಯಲ್ಲಿಯೇ ಡೆಮೊ ಕೊಟ್ಟು ಹೋಗಿ ಕಿತ್ಕೊಂಡ್ ಬನ್ನಿ ಎಂದು ಮತ್ತೆ ಕಳುಹಿಸಿದರು. ಪುನಃ ಶಸ್ತ್ರಾಸ್ತ್ರ ಹಿಡಿದು, ಒಂದು ತಟ್ಟೆಯನ್ನೂ ಹಿಡಿದು ಮತ್ತೆ ಆ ಜೇನುಗಳು ಇದ್ದ ಸ್ಥಳಕ್ಕೆ ಬಂದು ತಲುಪಿದೆವು. ಬೇಸಿಗೆ ಆಗಿದ್ದರಿಂದ ಗಾಳಿ ಯಾವ ದಿಕ್ಕಿನಿಂದ ಬೀಸುತ್ತಿದೆ ಎಂದು ತಿಳಿಯಲು ನಾವು ವಿಫಲರಾದೆವು. ಆಗ ನಮಗೆ ಬಳಕೆ ಇದ್ದದ್ದು ಪೂರ್ವ ದಿಕ್ಕನ್ನು ಕೆಳಗಡೆ ಪಶ್ಚಿಮಕ್ಕೆ ಮೇಲುಗಡೆ ಎಂದು ಇನ್ನೂ ದಕ್ಷಿಣಕ್ಕೆ ಗುಡ್ಡದ ಕಡೆ ಉತ್ತರಕ್ಕೆ ಈ ರಾಮನ ಬಂಡೆಯೇ ನಮಗೆ ಲ್ಯಾಂಡ್ ಮಾರ್ಕ್. ಅವುಗಳಿಗಷ್ಟೇ ನನ್ನ ದಿಕ್ಕುಗಳ ಜ್ಞಾನ. ಅಲ್ಲಿಗೆ ಬಂದು ನೋಡಿದರೆ ಗಾಳಿಯೇ ಬೀಸುತ್ತಿಲ್ಲ. ಒಂದು ಎಲೆಯೂ ಅಲಗಾಡುತ್ತಿಲ್ಲ! ಮರಳಿನ ಮೇಲೆಯೇ ನಿಂತಿದ್ದ ನಾವು ಒಂದು ಹಿಡಿ ಮರಳನ್ನು  ಎತ್ತಿ ತೂರಿದೆವು ತೂರಿದಾಗ ಗಾಳಿ ಸ್ವಲ್ಪ ಬೀಸುವ ಪ್ರಮಾಣ ಸ್ವಲ್ಪಮಟ್ಟಿಗೆ ಇದ್ದಿದ್ದರೂ ಗೊತ್ತಾಗುತ್ತಿತ್ತು. ಆದರೆ ಆ ಮಣ್ಣಿನ  ಒಂದು ದೂಳು ಕೂಡ ಆ ಕಡೆ ಈ ಕಡೆಗೆ ಹೋಗದೇ, ಚದುರದೇ ಈ ಬಾಂಬ್ ಹಾಕಿದಾಗ ಸುತ್ತಲೂ ಸ್ಪೋಟವಾಗುವ ಹಾಗೆ ದೂಳು ಸುತ್ತಲೂ ಸುತ್ತಿಕೊಳ್ಳುತ್ತಿತ್ತು. ನಾವು ಆ ದಿನಗಲ್ಲಿ ರಾತ್ರಿ ಹೊರಗಡೆ ಮಲಗುತ್ತಿದ್ದೆವು. ತಡರಾತ್ರಿವರೆಗೂ ಸಹಿಸಲಾಗದ ಸೆಕೆ. ಮಧ್ಯರಾತ್ರಿ ಹನ್ನೆರಡು ಒಂದು ಗಂಟೆಯಿಂದ ಸಾಧಾರಣವಾಗಿ ಪಶ್ಚಿಮ ದಿಕ್ಕಿನಿಂದ ಗಾಳಿಯು ಬೀಸುತ್ತಿತ್ತು. ಮುಂಜಾನೆ ಬಿಸಿಲಿನ ಪ್ರಮಾಣ ಹೆಚ್ಚಾದಂತೆ ಗಾಳಿ ಮಾಯ ಆಗುತ್ತಿತ್ತು.

"ತಿಪ್ಪ ಇಲ್ಲಿ ಬಾರ ಈ ಕಡೆ ನಿಂತುಕೊಂಡು ತೆಗಿ ನೀನು. ಗಾಳಿ ಹಿಂಗೇ ಮೇಲ್ಗಡೆಯಿಂದನೇ ಬೀಸೋದು" ಎಂದೆ ನಾನು.. "ಹ್ಞೂ ಸರಿ ನೋಡೋಣ" ಎಂದು ತಿಪ್ಪ ಪೂರ್ವಕ್ಕೆ  ಅಂದರೆ ಪಶ್ಚಿಮಾಭಿಮುಖವಾಗಿ ನಿಂತು ಆ ಕತ್ತಾಳಿ ಗುಮ್ಮಿಯಲ್ಲಿರುವ ಜೇನನ್ನು ತೆಗೆಯಲು ಶುರುಮಾಡಿದ. ನಾನು ಈ ಮೂರು ಗೂಡಿನ ಹುಳುಗಳು ಆಕ್ರಮಣ ಮಾಡಿಯಾವು ಎಂದು ಗಮನಕೊಟ್ಟು ನೋಡುತಲಿದ್ದೆ. ಇವನು  ಈ ಹುಳುಗಳು ಎಬ್ಬಿಸಿದಾಗ ಅಕ್ಕ ಪಕ್ಕ ಇದ್ದ ಹುಳುಗಳು ಎದ್ದೇಳಲೇ ಇಲ್ಲ. ಆದರೆ ಶತ್ರುಗಳ ಧಾಳಿ ಆಗಿದೆ ಎಂಬುದು ಅವುಗಳಿಗೆ ಸ್ಪಸ್ಟವಾಗಿ ಗೊತ್ತಾಗಿಹೋಗಿತ್ತು. ಯಾಕಂದ್ರೆ ನಂತರ ತೆಗೆದ ಜೇನುಗಳಲ್ಲಿ ತುಪ್ಪ ಕಡಿಮೆಯಾಗಿತ್ತು. ಶತ್ರುಗಳ ಧಾಳಿಯಾದರೆ ಅವು ಕುಳಿತ ಸ್ಥಳದಲ್ಲೇ  ನೂರಾರು ಹುಳುಗಳು ಒಟ್ಟಿಗೆ ಝೀ...ಝೀ... ಎಂದು ಶಬ್ಧ ಬರುವ ಹಾಗೆ ಗುಯ್ ಗುಡುತ್ತಾವೆ. ಇದು  ಹೊರಗಡೆಯೆಲ್ಲಾ ಕೇಳುವುದಿಲ್ಲ ಆ ಜೇನಿನ ಕೇಂದ್ರಭಾಗದಿಂದ  ಎಂಟತ್ತು  ಅಡಿಗಳ ಅಂತರದವರೆಗೆ ಪಿಸುಮಾತಿನಂತೆ ಕೇಳಿಸುವುದು. ಇದು ಅವುಗಳಿಗೆ ಅವೇ  ಕೊಟ್ಟುಕೊಳ್ಳುವ ಎಚ್ಚರಿಕೆಯ  ಸಂದೇಶ. ಇದಾದ ಕೆಲವೇ ಸೆಕೆಂಡ್ಗಳಲ್ಲಿ ಹುಳುಗಳು ಜೇನಿನ ತಲೆಯ ಭಾಗಕ್ಕೆ ಹತ್ತಿ  ಕಷ್ಟ ಪಟ್ಟು ತಮ್ಮ ಸಂತಾನಕ್ಕಾಗಿ ಸ್ಟಾಕ್ ಮಾಡಿರುವ ಆಹಾರ ಜೇನು ತುಪ್ಪವನ್ನು  ವೇಗವಾಗಿ ಹೀರಲು ಶುರುಮಾಡುತ್ತಾವೆ. ಇತರೆ ಹುಳುಗಳು ಶತ್ರುಗಳ ವಿರುದ್ಧ ಧಾಳಿ ಮಾಡಲು ಸಿದ್ಧವಾಗಿ ಹೆಲಿಕಾಪ್ಟರ್ ಇನ್ನೇನು ಹಾರುವುದು ಎಂಬಂತೆ ರೆಕ್ಕೆ ಬಡಿಯುತ್ತಾ ಕುಳಿತುಕೊಂಡಿರುತ್ತಾವೆ. ಒಂದು ಸಣ್ಣ ಕಡ್ಡಿ ಹುಳುಗಳ ಬಳಿ ಚಾಚಿದರೂ ಹಿಡಿದು ಕಚ್ಚುವಂತೆ ರೋಷಾವೇಷದಿ ಬಗ್ಗುವವು ಇಲ್ಲ ಹಾರುವವು. ಕೆಲವೊಮ್ಮೆ ನಾನು ದಟ್ಟವಾದ ಪೊದೆಗಳಲ್ಲಿ  ಜೇನಿದೆ ಎಂದು ಹುಳುಗಳ ಓಡಾಟದಿಂದ  ಗೊತ್ತಾಗಿರತ್ತೆ. ಆದರೆ ಅದು ಎಲ್ಲಿದೆ ಎಂದು ನಿಖರ ಸ್ಥಳ ಎಷ್ಟು ಹುಡುಕಿದರೂ ಕಾಣುವುದಿಲ್ಲ. ಆಗ ಅವು ಮಾಡುವ ಈ ಪಿಸುಮಾತಿನಂತಹ ಝೀ ಗುಡುವ ಝೇಂಕಾರದಿಂದಲೇ  ನಾನು ಖಚಿತ ಸ್ಥಳ ಪತ್ತೆ ಹಚ್ಚುತ್ತಿದ್ದೆ. 

ಅಂದು ಅಪ್ಪ ಹೇಳಿದ  ಆ ಗಾಳಿ  ಬೀಸುವ ವಿರುದ್ಧ ದಿಕ್ಕಿನಲ್ಲಿ ಜೇನು ತೆಗೆಯಲು ಆರಂಭಿಸಬೇಕು ಎನ್ನುವ ಟ್ರಿಕ್ ಬಹಳ ಚೆನ್ನಾಗಿ ವರ್ಕೌಟ್ ಆಗಿತ್ತು. ಅದರಂತೆ ಒಂದು ಹುಳುವೂ ಕಚ್ಚದಂತೆ ನಾಲ್ಕೂ ಜೇನನ್ನು ಒಂದಾದ ನಂತರ ಒಂದರಂತೆ ಕ್ರಮವಾಗಿ ಏಕ ಕಾಲದಲ್ಲಿ ತೆಗೆದುಕೊಂಡು ಶಿಕಾರಿಗೆ ಹೋದವರು ಭರ್ಜರಿ ಬೇಟೆ ಆದಾಗ ತಮಟೆ ನಗಾರಿ ಕೇಕೆ ಹಾಕುತ್ತಾ ಬರುವಂತೆ ಖುಷಿಯಿಂದಲೇ ಮನೆಗೆ ಬಂದು ಜೇನು ತುಪ್ಪ ತಿಂದು 180 ಮಿಲಿ ಲೀ ರಾಜಾ ಬಾಟಲಿಗೆ ಹಾಕಿ ಎತ್ತಿಟ್ಟೆವು. (ಮುಂದುವರೆಯುವುದು)

ಚಿತ್ರ - ಬರಹ : ನಾಗೇಂದ್ರ ಬಂಜಗೆರೆ, ಬಳ್ಳಾರಿ