ತಕ್ಕಡಿ ಹಿಡಿದಿಹ ಭಗವಂತ
ಕವನ
ರೆಕ್ಕೆಯು ಕಳಚಿದೆ ಪಕ್ಕದೆ ಬಿದ್ದಿದೆ
ಚೊಕ್ಕದ ಬಾಳಲಿ ಬರಸಿಡಿಲು
ಕೊಕ್ಕಿಗೆ ಕಾಳನು ಇಕ್ಕುವರಿಲ್ಲದೆ
ಹಕ್ಕಿಯು ನರಳಿದೆ ನೋವಿನೊಳು
ಕಿರಿಕಿರಿ ಮಾಡದೆ ಕರುಣೆಯ ನೋಟದೆ
ಕರೆದಿದೆ ಸನಿಹಕೆ ಈ ಹಕ್ಕಿ
ನೆರವನು ಬಯಸಿದೆ ದೊರೆಯುವ ಭರವಸೆ
ಮೊರೆಯನು ಇಡುತಿದೆ ನೋವುಕ್ಕಿ
ಬಿಕ್ಕುವ ಪರಿಯಲಿ ಹಕ್ಕಿಯ ನೋಯಿಸಿ
ದಕ್ಕಿಸಿಕೊಳ್ಳುವ ಧಾವಂತ
ಸೊಕ್ಕಿನ ಕ್ರೌರ್ಯಕೆ ಸಿಕ್ಕದು ಮನ್ನಣೆ
ತಕ್ಕಡಿ ಹಿಡಿದಿಹ ಭಗವಂತ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
(ಚಿತ್ರ ಕೃಪೆ : ವಾಟ್ಸಾಪ್)
ಚಿತ್ರ್