ರಾಷ್ಟ್ರಕವಿ ಕುವೆಂಪು ಅವರ ಮಾತುಗಳನ್ನು ನೆನೆಯುತ್ತಾ...

ರಾಷ್ಟ್ರಕವಿ ಕುವೆಂಪು ಅವರ ಮಾತುಗಳನ್ನು ನೆನೆಯುತ್ತಾ...

" ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ? ಎದೆಯ ದನಿಗೂ ಮಿಗಿಲು‌ ಶಾಸ್ತ್ರವಿಹುದೇನು " ಎಂಬ ರಾಷ್ಟ್ರಕವಿ ಕುವೆಂಪು ಅವರ ಮಾತುಗಳನ್ನು ನೆನೆಯುತ್ತಾ… ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸೌಜನ್ಯ ಕೊಲೆ ಪ್ರಕರಣದ ವಿಶೇಷ ಮರು ತನಿಖೆಗೆ ಒತ್ತಾಯಿಸಿ ಅನೇಕ ಪ್ರಗತಿಪರ ಸಂಘಟನೆಗಳು ಇಂದು ಪ್ರತಿಭಟನೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸುವ ಹೋರಾಟ ಹಮ್ಮಿಕೊಂಡಿದ್ದಾರೆ.

ಏಕೆ ಈ ಹೋರಾಟ ? ಇದರ ಅವಶ್ಯಕತೆ ಇದೆಯೇ ? ಇದು ದುರುದ್ದೇಶ ಪೂರಿತವೇ ? ರಾಜ್ಯ ಸರ್ಕಾರದ ಎಸ್ ಐ ಟಿ ಮತ್ತು ‌ಕೇಂದ್ರ ಸರ್ಕಾರದ ಸಿಬಿಐ ಎರಡೂ ತನಿಖೆಗಳು ಮುಗಿದು ನ್ಯಾಯಾಲಯದ ತೀರ್ಪು ಬಂದ ನಂತರವೂ ಅದರ ವಿರುದ್ಧ ಮತ್ತೊಂದು ತನಿಖೆಯ ಒತ್ತಾಯದ ಹಿಂದಿನ ಅಸಲಿಯತ್ತು ಏನು ? ಇತ್ತೀಚೆಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಹೇಳಿದಂತೆ ಅವರನ್ನು ಟಾರ್ಗೆಟ್ ಮಾಡಲಾಗಿದೆಯೇ ಎಂಬ ಪ್ರಶ್ನೆಗಳ ಸುತ್ತ ಒಂದು ಸುತ್ತು.

ಸೌಜನ್ಯ ಎಂಬ ಬಾಲಕಿಯ ಕೊಲೆ ಮತ್ತು ಅತ್ಯಾಚಾರ ಇತ್ತೀಚಿನ ವರ್ಷಗಳ ಅತ್ಯಂತ ವಿಶೇಷ ಪ್ರಕರಣ. ಬಹುಶಃ ನಿಜವಾದ ಅಪರಾಧಿ ಪತ್ತೆಯಾದರೆ ಅತ್ಯಂತ ಘೋರ ಅಪರಾಧಿ ಎಂದು ಪರಿಗಣಿಸಿ ಗಲ್ಲು ಶಿಕ್ಷೆ ಆಗುವಷ್ಟು ತೀವ್ರವಾದ ಹೇಯ ಕೃತ್ಯ. ದುರಾದೃಷ್ಟವಶಾತ್ ಪೋಲೀಸರು ಸಲ್ಲಿಸಿದ್ದ ಆರೋಪ ಪಟ್ಟಿಯ ಆರೋಪಿ ಸಹ ಹತ್ತು ವರ್ಷಗಳ ದೀರ್ಘ ವಿಚಾರಣೆಯ ನಂತರ ನಿರಪರಾಧಿ ಎಂದು ಬಿಡುಗಡೆ ಗೊಳಿಸಲಾಗಿದೆ.

ಆ ಸಂತೋಷ್ ರಾವ್ ನಿಜವಾದ ಅಪರಾಧಿಯಾಗಿದ್ದು ಸಾಕ್ಷಿ ಆಧಾರಗಳ ಕೊರತೆಯ ಕಾರಣದಿಂದಾಗಿ ಬಿಡುಗಡೆಯಾದನೇ ಅಥವಾ ಇವನಲ್ಲದೆ ಮತ್ತೊಬ್ಬ ಅಥವಾ ಮತ್ತಷ್ಟು ಜನ ಇದ್ದಾರೆಯೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.

ಈಗ ಮತ್ತೊಮ್ಮೆ ವಿಶೇಷ ತನಿಖೆಗೆ ಒತ್ತಾಯಿಸುತ್ತಿರುವ ಪ್ರಮುಖರ ಅನುಮಾನವೇನೆಂದರೆ ಅವರಿಗೆ ಮಾಹಿತಿ ಹಕ್ಕು ಕಾಯಿದೆಯಡಿ ದೊರೆತಿರುವ ದಾಖಲೆಗಳ ಪ್ರಕಾರ ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಸುಮಾರು 500 ರಷ್ಟು ಅಪರಿಚಿತ ದೇಹಗಳು ಮತ್ತು ಕಾಣೆಯಾದ ಮಹಿಳೆಯರ ಬಗ್ಗೆ ಪ್ರಕರಣಗಳು ದಾಖಲಾಗಿವೆ. ಅದರ ಹಿಂದೆ ಒಂದು ವ್ಯವಸ್ಥಿತ ಜಾಲ ಇರಬಹುದಾ ಎಂದು ಅಂದಾಜು ಮಾಡಲಾಗುತ್ತಿದೆ.

ರಾಜ್ಯದ ಅತ್ಯಂತ ಬುದ್ದಿವಂತರ ಜಿಲ್ಲೆ ದಕ್ಷಿಣ ಕನ್ನಡದ ಎಲ್ಲಾ ವರ್ಗದ ಕೆಲವು ಪರಿಚಿತರು ಪತ್ರಕರ್ತರು ಮುಂತಾದ ಕೆಲವರನ್ನು ಗೆಳೆತನದ ಸಲುಗೆಯಲ್ಲಿ ವಿಧವಿಧವಾಗಿ ಪ್ರಶ್ನಿಸಿದಾಗಲು ಸೌಜನ್ಯ ಅತ್ಯಾಚಾರ ಮತ್ತು ಕೊಲೆಯ ಹಿಂದೆ ಪ್ರಭಾವಿಗಳು ಇರುವ ‌ಸಾಧ್ಯತೆ ಇದೆ ಎಂದೇ ಹೇಳಿದರು. ಭೂ ವ್ಯವಹಾರ ಮತ್ತು ಆರ್ಥಿಕ ಚಟುವಟಿಕೆಗಳನ್ನು ಮೀರಿ ಒಂದಷ್ಟು ದುರ್ನಡತೆಗಳ ಬಗ್ಗೆ ಸಹ ಜನ ಖಾಸಗಿಯಾಗಿ ಮಾತನಾಡಿಕೊಳ್ಳುತ್ತಾರೆ.

ಆದ್ದರಿಂದ ಈ ಸನ್ನಿವೇಶದಲ್ಲಿ ಅವರೇ ಖುದ್ದು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಸಾಧ್ಯವಾದರೆ ಯಾವುದೇ ಸಂಸ್ಥೆಯಿಂದ ಮತ್ತೊಮ್ಮೆ ತನಿಖೆ ನಡೆಸಿ ಅಪರಾಧಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುವುದಾದರೆ ತಮ್ಮಿಂದ ಯಾವುದೇ ಪ್ರತಿರೋಧ ಇರುವುದಿಲ್ಲ. ಆ ನಡೆಯನ್ನು ಸ್ವಾಗತಿಸುವುದಾಗಿ ಒಂದು ಪತ್ರವನ್ನು ರಾಜ್ಯ ಸರ್ಕಾರಕ್ಕೆ ಬರೆಯುವುದು ಉತ್ತಮ. ಇದರಿಂದ ಧರ್ಮಸ್ಥಳ ಮತ್ತು ತಮ್ಮ ವಿರುದ್ಧದ ಆರೋಪಗಳಿಂದ ಮುಕ್ತರಾಗುವ ಸಾಧ್ಯತೆ ಇದೆ. ಈ ಬೆಳವಣಿಗೆ ಸಾಮಾನ್ಯವಾಗಿ ಅಸಹಜವೇ ಆದರೂ ಸೌಜನ್ಯ ಪ್ರಕರಣ ಮತ್ತು ನಂತರದ ಘಟನೆಗಳನ್ನು ವಿಶೇಷಗಳಲ್ಲಿ ವಿಶೇಷ ಎಂದು ಪರಿಗಣಿಸಿ ಈ ತೀರ್ಮಾನ ಕೈಗೊಳ್ಳುವುದು ಉತ್ತಮ ನಡೆಯಾಗಬಹುದು.

ಈ ನಿಟ್ಟಿನಲ್ಲಿ ಮುಖ್ಯವಾಗಿ ಮಹಿಳಾ ಸಂಘಟನೆಗಳು ಆಯೋಜಿಸಿರುವ ಮರು ತನಿಖೆಯ ಒತ್ತಾಯವನ್ನು ಪ್ರಜ್ಞಾವಂತರು ನೈತಿಕವಾಗಿ ಬೆಂಬಲಿಸಬಹುದು. ಉಳಿದದ್ದು ಅವರವರ ವಿವೇಚನೆಗೆ ಬಿಟ್ಟದ್ದು. ಸಂಕೀರ್ಣ ಮತ್ತು ಸಂಘರ್ಷಮಯ ಸಾಮಾಜಿಕ ವಾತಾವರಣದಲ್ಲಿ ಸತ್ಯ ಸುಳ್ಳು ಮೋಸ ವಂಚನೆ ನಂಬಿಕೆ ನ್ಯಾಯ ಅನ್ಯಾಯಗಳ ನಡುವಿನ ಗೆರೆ ತೆಳುವಾಗುತ್ತಿರುವಾಗ ಮಬ್ಬುಗತ್ತಲಿನಲ್ಲಿ ಸತ್ಯವನ್ನು ಹುಡುಕುವ ಸಂಕಷ್ಟದಲ್ಲಿ ನಾವು ನೀವು.‌ 

" ಯಾವ ಶಾಸ್ತ್ರ ಏನು ಹೇಳಿದರೇನು, ಎದೆಯ ದನಿಗೂ ಮಿಗಿಲಾದ ಶಾಸ್ತ್ರವಿಹುದೇ " ಎಂಬ ರಾಷ್ಟ್ರಕವಿ ಕುವೆಂಪು ಅವರ ಮಾತುಗಳನ್ನು ನೆನಪಿಸುತ್ತಾ...ಕರ್ನಾಟಕ ಸರ್ಕಾರದ ಮುಂದಿನ ನಡೆಗಳನ್ನು ಕುತೂಹಲದಿಂದ ಕಾಯುತ್ತಾ.........

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ