ಲಲಿತ ರಗಳೆ- ವೃದ್ಧೆಯ ಶೃಣಿ

ಲಲಿತ ರಗಳೆ- ವೃದ್ಧೆಯ ಶೃಣಿ

ಕವನ

ಶೃಣಿಯೂರಿ ವೃದ್ಧೆಯೂ ಹಾದಿಯಲಿ ಬರುತಿಹಳು

ಮಣಭಾರ ಕಾಷ್ಟವನು ಬೆನ್ನಲ್ಲೆ ಹೊತ್ತಿರಲು|

ಕಷ್ಟದಲಿ ನೊಂದಿಹಳು ನೋಡುವವರಿಲ್ಲದೆಯೆ

ನಷ್ಟದಲಿ ಜೀವನವು ತುಷ್ಠಿಗುಣವಿಲ್ಲದಯೆ||

 

ಬದುಕೊಂದು ಚದುರಂಗ ಕಷ್ಟಸುಖದಂಗಳವು

ಮುದುಕಿಯದು ಗೋಳಿನ ಕಥೆವ್ಯಥೆ ದಾರುಣವು|

ನೆರವಿಲ್ಲ ಸೂರಿಲ್ಲ ಸೊರಗುತಿಹ ಜೀವವಿದು

ಮರುಗುತಿದೆ ಕೂಳಿಲ್ಲ ನಿತ್ರಾಣ ಭಾವವಿದು||

 

ಉರಿಬಿಸಿಲ ಮಧ್ಯಾಹ್ನ ದಾಹದಲಿ ಕೊರುಗುತಿದೆ

ಸರಿದಾರಿ ಕಾಣದೆಯೆ ಕಂಗೆಟ್ಟು ನಲುಗುತಿದೆ|

ಹೆತ್ತುಹೊತ್ತು ಬೆಳೆಸಿದ ಮಕ್ಕಳೇ ಮರೆತಿರಲು

ಗೊತ್ತಿಲ್ಲದ ದಾರಿಯಲಿ ದಿಕ್ಕಿಲ್ಲದೆ ಹೊರಟಿರಲು||

 

ಮುಗ್ಧತೆಯ ರೂಪವದು ವಯಸಾದ ದೇಹದಲಿ

ದುಗ್ಧೆಯದು ಮನೆಮಾಡಿ ನೊಂದಿದೆ ಕಾಯದಲಿ|

ಹೊತ್ತೊತಿಗೆ ತುತ್ತಿಲ್ಲ ನೆಮ್ಮದಿಗೆ ಮನೆಯಿಲ್ಲ

ಬಿತ್ತಿರಲು ಕನಸುಗಳು ಛಲದಲ್ಲಿ ಸೋಲಿಲ್ಲ||

 

ಶೋಷಣೆ ಲೋಕದಲಿ ನಿತ್ಯವೂ ನಡೆಯುತಿದೆ

ಭಾಷಣದಿ ಮಂಡಿಸುತ ಧಾರ್ಷ್ಟ್ಯತೆಯು ಮೆರೆಯುತಿದೆ|

ಗೋಳಿನಲಿ ಬಾಳುತಿಹ ಮಂದಿಯನು ಗಮನಿಸದೆ

ಕೀಳಾಗಿ ನೋಡುತಿಹ ಜನಮನ ಸ್ಪಂದಿಸದೆ||

 

ದೈನ್ಯತೆಯ ಭಾವವಿದು ಕಿಂಕಿಲದಿ ಮರುಗಿಹುದು

ಮಾನ್ಯತೆಯು ಸಿಕ್ಕಿಲ್ಲ ಹಿರಿಜೀವ ಬತ್ತಿಹುದು|

ಕಾಯಕವೆ ಕೈಲಾಸ ದಣಿಯುತಲಿ ಬದುಕುತಿದೆ

ಬೇಯುತಿಹೆ ನೋವಲ್ಲು ತಥ್ಯದೊಳು ಸಾಗುತಿದೆ||

 

-ಅಭಿಜ್ಞಾ ಪಿ ಎಮ್ ಗೌಡ 

 

ಚಿತ್ರ್