‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೨೪) - ಚನ್ನವೀರ ಕಣವಿ

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೨೪) - ಚನ್ನವೀರ ಕಣವಿ

‘ನವ್ಯಕಾವ್ಯ' ಕವಿಗಳ ಸಾಲಿನಲ್ಲಿ ಹಿರಿಯದೊಂದು ಸ್ಥಾನದಲ್ಲಿರುವ ಚನ್ನವೀರ ಕಣವಿಯವರು ೧೯೪೫ರಿಂದೀಚೆಗೆ ಬೇಗ ಬೇಗನೇ ವಿಶಾಲ ಕೀರ್ತಿಗೆ ಬಂದ ಶ್ರೇಷ್ಟ ಕವಿಗಲ್ಲೊಬ್ಬರು. ‘ಆಕಾಶ ಬುಟ್ಟಿ' ‘ಮಧುಚಂದ್ರ' ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅನೇಕ ಗೀತ ರೂಪಕಗಳನ್ನೂ ರಚಿಸಿದ್ದಾರೆ. ಇವರ ಪ್ರತಿಭೆ ನಿರ್ಮಲ ಗಂಗಾ ಸ್ತೋತ್ರದಂತೆ ಅಜಸ್ರವಾಗಿ ಹರಿಯುತ್ತಿದ್ದು, ಈಗಾಗಲೇ ಜನಮನದಲ್ಲಿ ಅಳಿಸಲಾಗದ ಉನ್ನತ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಚನ್ನವೀರ ಕಣವಿಯವರ ಒಂದು ಕವನ ‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಲ್ಲಿ ಪ್ರಕಟವಾಗಿದೆ. ಅದನ್ನು ಆರಿಸಿ ಇಲ್ಲಿ ಪ್ರಕಟಿಸಲಾಗಿದೆ.

ಪಥಿಕ

೧.

ಯಾವ ಋತುವಿನೊಳಿಂತು ಕನಸುಕಂಡಳೊ ಪ್ರಥಿವಿ

ಆಶೆ ಬೀಜಗಳೆನಿತೊ ಮಡಿಲೊಳಿರಸಿ

ಮಳೆಯ ರೂಪದಿ ಮುಗಿಲು ಮುತ್ತಿಡಲು ಮತ್ತೇರಿ

ಹೊತ್ತು ನಿಂತಿಹಳಮಿತ ವೃಕ್ಷರಾಶಿ.

೨.

ಮಾವು, ಬೇವು ತೆಂಗು ಕೌಂಗು ನೇರಿಳೆ ಹಲಸು

ಹುಣಿರಿ ಹುಲುಗಲ ತಾಳೆ ಬಾಳೆಯಂತೆ.

ಮಾಧವಿ ತಮಾಲ ಮಾಲತಿ ಹೊಂಗೆ ಶ್ರೀಗಂಧ

ಸೀತಾಳಿ ಬಕುಳ ಸಂಪಿಗೆಗಳಂತೆ !

೩.

ದೇವಕನ್ನೆಯರಿಳೆಗೆ ಇಳಿತಂದು ಗುಟ್ಟಿನಲಿ

ತೊಟ್ಟಿಲವ ತೂಗಿ ಹೆಸರಿಟ್ಟರೇನೊ!

ಹೆಸರಿಲ್ಲದೆಯು ಹಸಿರ ಚಿಮ್ಮಿಸುವ ಪಸದನಕೆ

ಜುಮ್ಮೆಂದು ಮನಸೋತುಬಿಟ್ಟರೇನೊ !

೪.

ಇಲ್ಲಿ ಬಣ್ಣದ ತಳಿರ ತುಟಿಯಲ್ಲಿ ಹೂನಗೆಯ

ಅಲ್ಲಿ ಹಣ್ಣಿನ ಗೊನೆ ಗಿಳಿಗಳೆರಡು

ನೀಳುದಾರಿಯ ನದಿಗೆ ಸಾಲುಮರದ ನೆಳಲು

ಗಾಳಿಯೂದುವ ಕೊಳಲು ಹಕ್ಕಿ ಹಾಡು

೫. 

ಜಗದ ನೂರೆಂಟು ತೆರೆ ಕಲಹ ಕಂಟಕಗಳಿಗೆ

ತಾವು ಕಾರಣವಲ್ಲವೆಂಬ ಹಾಗೆ,

ಹುಲ್ಲುಮೇಯುವ ಹಸುಗಳಲ್ಲಿ ಮೆಲುಕಾಡಿಸಿವೆ

ಹುಲ್ಲುಗದ್ದೆಯೆ ತಮ್ಮದೆಂಬ ಹಾಗೆ.

೬.

ನೆಳಲ ಸೆರಗನು ಹಿಡಿದು ಬಿಸಿಲು ಮುಂದೋಡುತಿದೆ

ದೂರ ದೂರದ ತನ್ನ ಮನೆಯ ನೆನೆದು

ಬಿಳಿಯ ಮೋಡವದೊಂದು ಬೆಟ್ಟದುದಿಯಲಿ ನಿಂದು

ಎಲ್ಲ ಬಲ್ಲವರಂತೆ ಸುಮ್ಮನಿಹುದು.

೭.

ಬಾಳ ಬಿಸಿಲಲಿ ಬಳಲಿ ದಣಿದು ಬಂದಿಹ ಪಥಿಕ

ಮರದ ತಣ್ಣೆಳಲೊಂದೆ ನಿನಗಾಸರು

ಇಲ್ಲಿ ದಣಿವಾರಿ ಮನಶಾಂತಿ ಸಂತಸ ಪಡೆಯೆ

ಮುಂದೆ ನಡೆಯುವ ದಾರಿ ಎನಿತು ಹಗುರು !

೮.

ಪ್ರಕೃತಿ ತನ್ನೆದೆಯ ಮಧುವಾಟಿಗೆಯ ತೆರೆದಿರಲು

ಅದನು ತಣಿದೀರದೆಯ ಸಾಗಬಹುದೇ?

ಯಾರಿಗೂ ಸುಂದರತೆ? ಗಾರಿಗೇ ಪರವಶತೆ

ಯಾರ ಸುಖಕೀ ಸೃಷ್ಟಿ ನಿನಗಲ್ಲವೆ?

(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)