91. ನಾಯಿಮರಿಯಿಂದ ಪಾಠ ಕಲಿತ ಕತ್ತೆ

91. ನಾಯಿಮರಿಯಿಂದ ಪಾಠ ಕಲಿತ ಕತ್ತೆ

ಅದೊಂದು ದಿನ ಯಜಮಾನನೊಂದಿಗೆ ಅವನ ಕತ್ತೆ ಮತ್ತು ನಾಯಿಮರಿ ಹಳ್ಳಿಯಿಂದ ಪೇಟೆಗೆ ಹೊರಟವು. ಮೂರು ತಾಸು ನಡೆದ ನಂತರ ಯಜಮಾನ ಕತ್ತೆಯ ಬೆನ್ನಿನಲ್ಲಿದ್ದ ಹೊರೆ ಇಳಿಸಿ, ಒಂದು ಮರದಡಿಯಲ್ಲಿ ವಿಶ್ರಾಂತಿಗಾಗಿ ಮಲಗಿದ.

ಕತ್ತೆ ಮತ್ತು ನಾಯಿಮರಿಗೆ ಹಸಿವಾಗಿತ್ತು. ಅಲ್ಲಿ ಬೆಳೆದಿದ್ದ ಹುಲ್ಲನ್ನು ಮೇಯತೊಡಗಿತು ಕತ್ತೆ. ನಾಯಿ ಮರಿಗೆ ಅಲ್ಲಿ ತಿನ್ನಲು ಏನೂ ಸಿಗಲಿಲ್ಲ. ಕತ್ತೆಯ ಬೆನ್ನಿನಿಂದ ಇಳಿಸಿದ ಹೊರೆಯಲ್ಲಿ ತಿನಿಸು ಇದೆಯೆಂದು ನಾಯಿಮರಿಗೆ ತಿಳಿದಿತ್ತು. ಅದರಿಂದ ಸ್ವಲ್ಪ ತಿನಿಸು ತೆಗೆದು ಕೊಡಬೇಕೆಂದು ಕತ್ತೆಯನ್ನು ವಿನಂತಿಸಿತು ನಾಯಿಮರಿ. ಆಗ ಕತ್ತೆಯ ಪ್ರತಿಕ್ರಿಯೆ ಹೀಗಿತ್ತು: “ಸಾಧ್ಯವಿಲ್ಲ ಗೆಳೆಯಾ. ಯಜಮಾನ ನಿದ್ದೆಯಿಂದ ಎದ್ದೇಳಲಿ. ಆಗ ಅವನೇ ನಿನಗೆ ತಿನಿಸು ಕೊಡುತ್ತಾನೆ. “

ಸ್ವಲ್ಪ ಹೊತ್ತಿನಲ್ಲಿ ಅಲ್ಲಿಗೊಂದು ತೋಳ ಬಂತು. ಕತ್ತೆಗೆ ಗಾಬರಿಯಾಯಿತು. ಜೋರಾಗಿ ಬೊಗಳಿ ತೋಳವನ್ನು ಹೆದರಿಸಬೇಕೆಂದು ನಾಯಿಮರಿಯನ್ನು ಕತ್ತೆ ವಿನಂತಿಸಿತು. ಆಗ ನಾಯಿಮರಿಯ ಪ್ರತಿಕ್ರಿಯೆ ಹೀಗಿತ್ತು: “ಸಾಧ್ಯವಿಲ್ಲ ಗೆಳೆಯಾ. ಯಾಕೆಂದರೆ ನಾನು ತೋಳವನ್ನು ಎದುರಿಸುವಷ್ಟು ಬಲಶಾಲಿಯಲ್ಲ. ಯಜಮಾನ ನಿದ್ದೆಯಿಂದ ಎದ್ದೇಳಲಿ. ಅವನೇ ನಿನ್ನನ್ನು ರಕ್ಷಿಸುತ್ತಾನೆ.” ಈಗ ಕತ್ತೆಗೆ ತಾನು ಮಾಡಿದ ತಪ್ಪಿನ ಅರಿವಾಯಿತು. ನಾಯಿಮರಿಯ ಕ್ಷಮೆ ಕೇಳಿತು ಕತ್ತೆ.