ಗಣೇಶರ ರಾಗಿ ಮುದ್ದೆ ಚಾಲೇಂಜ್ ಮತ್ತು ತ್ಯಾಂಪನ ಬ್ಯಾಡ್ ಲಕ್ 2

ಗಣೇಶರ ರಾಗಿ ಮುದ್ದೆ ಚಾಲೇಂಜ್ ಮತ್ತು ತ್ಯಾಂಪನ ಬ್ಯಾಡ್ ಲಕ್ 2

  ಗಣೇಶರ ರಾಗಿ ಮುದ್ದೆ ಚಾಲೇಂಜ್ ಮತ್ತು ತ್ಯಾಂಪನ ಬ್ಯಾಡ್ ಲಕ್  ಭಾಗ ೨

ಬೇರೆ ದಾರೀನೇ ಇಲ್ವಾ ಹಾಗಾದ್ರೆ ಗಣೇಶಣ್ಣಾ..?"
ಒಂದ್ ದಾರಿ ಇತ್ತಾ.... ಆದ್ರೆ ಆಪೂದಲ್ಲ ಹೋಪುದಲ್ಲಾ...?!??"
"ಯಾಕೆ..... ನೀ ಹೇಳ್  ಕಾಂಬೋ! ಅದ್ ಎಂತ ಆರೂ ಅಡ್ಡಿ ಇಲ್ಲೆ,.....  ನಾ ಮಾಡ್ತೆ !!"
"ಹ್ಯಾಂಗಾರೂ ಮಾಡಿ ,ಆ ಕಂಪ್ಲೇಂಟ್ ವಾಪಾಸ ತಕಳ್ಳು ಹಾಗೆ ಮಾಡ್ರೆ...!!!.....??"
"ಅದ್ ಹೇಂಗಾತ್..? ಈ ತ್ಯಾಂಪನ ಮುಖಾನೇ ಕಾಂತಿಲ್ಲೆ (ಮುಖವನ್ನೇ ನೋಡೋಲ್ಲ) ಅಂತ ಕೂತಿದ್ದಾಳೆ ಅವ್ಳ್!!  ಆ ಶನಿ ಅಣ್ಣಂದಿರೂ ಅಷ್ಟೇ, ಇವ್ನ್ ಮುಖ ಕಂಡ್ರ್ ಆತಿಲ್ಲೆ ಅವಕ್ಕೆ."
".............................................................................................."
ಶೀನನ ಮುಖದಲ್ಲೊಂದು ತೆಳುನಗೆ ಹಾದು ಹೋಗಿದ್ದು ನೋಡಿದ್ದು ನಾನು ಮಾತ್ರ!!! ...
ಅಂದರೆ ಶೀನನಿಗೆ ಉಪಾಯ ಹೊಳೆದಿತ್ತಾ,,,,?

************                 ***************
ಅದೆಂತ ಗಣೇಶರ ರಾಗಿ ಮುದ್ದೆ ಕಥೆ ಮಾರಾಯಾ.....?
ಅದೇ ಶೀನ........... ಈ ಮಂಜಣ್ಣ....!
ಯಾರು ದುಬಾಯ್ ಮಂಜಣ್ಣನಾ..?
"ಹೌದು ಅವರು ಊಟಕ್ಕೆ ಕರೆದಿದ್ದಾರೆ, ಅದೂ ಅವರ ಫೇವರಿಟ್ ರಾಗಿ ಮುದ್ದೆ ಊಟಾನೇ.... ಗಣೇಶರ ಅರ್ಥ ನಂಗೆ ರಾಗಿ ಮುದ್ದೆ ಹಿಡಿಸಲ್ಲ ಅಂತ.
ಆ ಊಟ , ರಾಗಿ ಮುದ್ದೆ ಎಲ್ಲ ಪಕ್ಕಕ್ಕಿರಲಿ, ಹೆಂಗಾರೂ ಮಾಡಿ ಈ ಗಣೇಶರು ಯಾರು ಅಂತ ಕಂಡು ಹಿಡಿಯೋದೇ ನಿಂಗೆ ಮುಖ್ಯ ಅನ್ನಿಸುತ್ತೆ ನಂಗೆ.
ಅದಕ್ಕೇನಾ , ಆ ನಾಡಿಗರನ್ನ ಕೇಳ್ರ್ ಆಯ್ತಪ್ಪ..,
ಅದೆಲ್ಲಾ ತೀರಾ ಪರ್ಸನಲ್ ವಿಷಯ, ಹಾಂಗೆಲ್ಲ ಅವ್ರಿವ್ರ್ ಯಾರ್ ಅವ್ರ ಯಾರ್ ಅಂದೆಳಿ ಬೇರೆ ಯಾರಿಗೂ ಹೇಳುದಿಲ್ಲೆ.
ಹಾಂಗಾರೆ ಈ ನಮ್ ಪೋಲೀಸ್ ಗಣೇಶನ್ನ ಅವ್ರ ಹಿಂದೆ ಛೂ ಬಿಟ್ಟರೆ..?
ಬ್ಯಾಡ್ದಾ!!! ಎಂತ ಹೇಳೂದ್ ನೀನ್...!!!
ಅಂದ್ರೆ ನಿನ್ಕಥಿ ಈರ್ಬದ್ರಣ್ಣ ನ್ ಕಥಿ ಕಣಂಗೇ ಆಯ್ತ್ ಅಲ್ದಾ..?
ಅದೆಂತ ವೀರಬದ್ರಣ್ಣ್ ನ್ ಕಥಿ..?
ನಮ್ ಐತೂ ಇದ್ನಲ್ಲೆ.....
ಯಾರ್... ಅದೇ  ಒಡೆಯ ಒಡತಿ ಚಪಾತಿ ಮಾಡ್ತ್ರ ಅಂಬ ಬದ್ಲಿಗೆ ಇದ್ದೆಲಾ ದೆತ್ತಿಲಾ ತಪಸ್ಸ್ ಮಲ್ತೋಂತಿತ್ತೆರ್** ಅಂತ ಊರೆಲ್ಲಾ ಪ್ರಚಾರ ಮಾಡಿದ್ದನಲ್ಲಾ....ಅವ್ನೇಯಾ..?
ಹೌದ ಅವ್ನೇಯಾ.  ಗಣಪನ ಮನಿಗೆ ಪ್ಯಾಟೆಯಿಂದ ಈರ್ಬದ್ರ ಬಂದಿದ್ದ ರಜೆಯಲ್ಲಿ. ಇಲ್ಲಿನ್ ಕಣ್ಕಟ್ಟೂ ಹಸ್ರ, ಗಾಳಿ, ಗೆದ್ದಿ ಬಯ್ಲ್, ತೋಟ, ಎಲ್ಲ ಕಣ್ಕಂಡ್ ಲಾಯ್ಕ್ ಆಯ್ತ್ ಅವ್ನಿಗೆ, (ಇಲ್ಲಿನ ವಾತಾವರಣ , ಕಣ್ಣಿಗೆ ಕಂಡಷ್ಟೂ ಹಸಿರು ಗದ್ದೆ ತೋಟ, ಮನುಷ್ಯನಿಗೂ ಪ್ರಕೃತಿಗೂ ನಡುವಿನ ಹೊಂದಾಣಿಕೆ ಹಳ್ಳಿಯ ಸರಳ ಜೀವನ, ಮನುಷ್ಯ ಸಂಬಂಧಗಳ ಆತ್ಮೀಯತೆ ಎಲ್ಲ ಮಾರುಹೋಗಿದ್ದ.)
 ಪಕ್ಕದ ಐತು ಹತ್ತಿರ ದಿನಾ ಕೇಳೋನು ತಿಂಡಿ ಎಂತ..?  ( ಹಾಗೆ ಕೇಳಲು ಮಾತ್ರ ಕಲ್ತಿದ್ದನಾತ)
ಐತು ಹೇಳ್ತಿದ್ದ ದಿನಾ "ಕೊಚ್ಚಕ್ಕಿ ಗಂಜಿ",
ಇದು ಕೇಳಿ ಕೇಳಿ, ಪ್ಯಾಟಿಯ ಈರ್ಬದ್ರನಿಗೆ ಆಸೆ ಆಯ್ತು, ಅದೇನೋ ದೊಡ್ಡ ಕಜ್ಜಾಯದ ಹಾಗೆ ,ದೊಡ್ಡ ವಿಶೇಷ ಬಕ್ಷದ ಹಾಗೆ ಅನ್ನಿಸಿ, ನಂಗೂ ತಿನ್ನ ಬೇಕಾ ಗಂಜಿಯನ್ನ, ಅಂದ ನನ್ನ ಹತ್ರ.
ಅದಕ್ಕೇನ್ ನಾಳೆಯೇ ಬಾ ಅಂದೆ ನಮ್ಮಲೆಲ್ಲ ಅದೇ ಅಲ್ದಾ ದಿನ್ದ್ ಬಕ್ಷ.
ಮಾರನೆಯ ದಿನ ಹೊಸ ಮದ್ಮಗ ಬಂದ್ ಹಾಗೇ ಬಂದ ಈರ್ಬದ್ರ ನಮ್ ಮನಿಗೆ ಬೆಳಿಗ್ಗೆಯೇ.
ಸರಿ ಎಲ್ರಿಗೂ ಬಟ್ಲ್ ಹಾಕಿ , ನಾನೂ ಪಿಣಿಯಣ್ಣ ಮುತ್ತ ಎಲ್ರೂ ಕೂತ್ಕಂಡ್  ಗಂಜಿ ಬಟ್ಲಗೆ ಹಾಯ್ಕಂಡ್ ಸೊರ ಸೊರ ಸುರುಕೇ ಶುರು ಮಾಡ್ಕಂಡೋ.
 ಅವ್ನಾ ಕೂತ್ಕಂಡ್ ದ್ದೇನೋಸರಿ,ಆದ್ರೆ  ಆ ಗಂಜಿ ಇವ್ನ ಗಂಟ್ಲಗೆ ಇಳೀಯೂದೇ ಇಲ್ಲ್ಯಲ್ಲೆ... ಗಟಗಟ ಒಂದ್ ಎರ್ಡ್ ಚಂಬ್ ನೀರ ಬಾಯಿಗ್ ಸುರ್ಕಂಡ್ರೂ .........ಉಹ್ಞು... ಜಪ್ಪಯ್ಯ ಅಂದ್ರೂ...ಒಳ್ಗ್ ಹೋತೇ ಇಲ್ಲೆ, ಕಥಿ ಹೈಲ್ ಎಂತ್ ಮಾಡೂದಾ....!!!
ಹ್ಯಾಂಗೋ ಬಟ್ಲ್ ಖಾಲಿ ಮಾಡ್ದ್ರೂ  ಗಣಪನ ಮನಿ ಹಿತ್ಲಂಗೇ ಪೂರ್ತಿ ಹೊಟ್ಟಿ ಖಾಲಿ ಮಾಡ್ಕಂಡ ಅಂಬ್ರ. ( ವಾಂತಿ), ಯಾಕೋ ಹದ್ನೈದ್ ದಿನ ಇರ್ಕ ಅಂದೇಳಿ ಬಂದವ ಮಾರನೇ ದಿನವೇ ಕುಂಡೀಗ್ ಕಾಲ್ ಕೊಟ್ಟ್ ಹಾರದ್ಯಾಕೆ ಅಂತ ಇವತ್ತಿಗೂ ಐತಂಗೆ ಅರ್ಥ ಆಯ್ಲೇ ಇಲ್ಲೆ ಅಂಬ್ರಾ.
ಅದಕ್ಕೇ ಇರ್ಕ್ ,  ಈ ಗಣೇಶಣ್ಣ... ನಿಂಗೆ ..ಹೀಂಗಾಪುದ್ ಬ್ಯಾಡ.... ಮೊದಲೇ ಕಲ್ತ್ಕೋ ಅಂದೇಳಿ ಹೀಂಗ್ಘೇಳಿರ್ಕ್.


***********************                       *************************

ಏಯ್ ಈ ದಕ್ಷಿಣ ಮುಖ ನಂದೀಶ್ವರ ದೇವಸ್ತಾನಕ್ಕೆ ಹೋಪುಕಿತ್ತಲೆ ನಾಳಿಗೆ.
ಅದೆಂತದಾ ತ್ಯಾಂಪನ್ನ ಜೈಲಗ್ ಹಾಕಿದ್ರೆ ನಿಂಗೆ ದೇವರ್ ಮೇಲೆ ನಂಬ್ಗೆ ಜಾಸ್ತಿ ಆಯ್ತಾ  ಹೆಂಗೆ..?
ಅಲ್ಲಿಗ್ ಹ್ಯಾಂಗ್ ಹೋಯ್ಕ್ ಹೇಳ್..
ಅದಕ್ಕೇನ್ ಸಂಪಿಗೆ ರಸ್ತೆಯಲ್ಲಿನ ೧೧ ನೇ ಕ್ರಾಸಿನಲ್ಲಿ ಕೆಳಗಿಳಿದರೆ ಎರಡನೆಯ ಅಡ್ದ ರಸ್ತೆಯೇ( ಅದರಲ್ಲೇ ಕೆನರಾ ಬ್ಯಾಂಕ್ ಸಹಾ ಇದೆ) ಮೊದಲನೆಯ ದೇವಸ್ತಾನದ ರಸ್ತೆ ಅದರಲ್ಲಿ ೧೮ ನೇ ಕ್ರಾಸ್ ದಿಕ್ಕಿಗೆ ಹೋದರೆ ಅಲ್ಲಿ ದೇವಸ್ತಾನಗಳ ಸಮುಚ್ಚಯವೇ ಇದೆ, ಸುಂದರ ವಾತಾವರಣ, ಕಣ್ಣಿಗೆ ಕಟ್ಟುವ ಹಸಿರು, ಪುಷ್ಕರಿಣಿಯಿಂದ ಆವರಿಸಿದ ಈ ದಕ್ಷಿಣ ಮುಖ ನಂದೀಶ್ವರ ದೇವಸ್ತಾನ ಕ್ಕೆ ಸುಮಾರು ೯೦೦ ವರ್ಷಗಳ ಇತಿಹಾಸವಿದೆ. ನಂದಿಯ ಮುಖದಿಂದ ಬಿದ್ದ ನೀರು ಶಿವಲಿಂಗವನ್ನು ಸದಾ ಅಭಿಷೇಕ ಮಾಡುತ್ತಿರುತ್ತದೆ, ಇಲ್ಲಿನ  ನಂದಿಯ ಕಿವಿಯಲ್ಲಿ ಏನಾದರೂ ಬೇಡಿಕೊಂಡರೆ ಅದು ನಿಜವಾಗುತ್ತದೆಂತ ನಂಬಿದವರು ಹೇಳುತ್ತಾರೆ.ಬೇಕಾದರೆ ಅತ್ತಿಗೇನ ಕರ್ಕೊಂಡ್ ಹೋಗು, ಅವಳಿಗೆ ಆ ದೇವರು ಅಂದರೆ ತುಂಬಾ ನಂಬಿಕೆ, ಅಲ್ಲಿನ ಪೂಜೆಯವರೂ ನಮ್ಮ ಶೄಂಗೇರಿ ಕಡೆಯವರು. ನಂಗೆ ಬರಲು ಪುರ್ಸೊತ್ತಿಲ್ಲ ಮರಾಯಾ.
ಅಕ್ಕ...


********************                            ********************

"ಆ ವಿಷಯ ನಿಮ್ಗೆ ಹ್ಯಾಗೆ ಗೊತ್ತಾಯ್ತು ಹೇಳ್ತೀರಾ? ಅದೇ ಆ ಕಂಪ್ಲೆಂಟ್ ನಲ್ಲಿ ಬರೆದ ವಿಷಯ..? ಅಂದರೆ ಇದರ ಅರ್ಥ...
ಒಂದೋ ನಿಮಗೆ ತುಂಬಾ ಜನ ಪುರುಷರು ಗೊತ್ತಿರಬೇಕು, ಅಥವಾ ಅವನಿಗೆ ತುಂಬಾ ಜನ ಹೆಂಗಸರ ( ನಿಮಗೆ ಗೊತ್ತಿರುವಂತಹ) ಸಂಭಂಧ ವಿರಬೇಕು.
ಎರಡನೆಯದಂತೂ ಸಾಧ್ಯವೇ ಇಲ್ಲ, ನೀವು ತ್ಯಾಂಪನನ್ನು ಮದುವೆಯಾಗಿದ್ದೇ ಅದಕ್ಕಾಗಿ..
ಇನ್ನುಳಿದದ್ದು ಮೊದಲನೆಯದ್ದು. ಒಂದು ವೇಳೆ ನೀವು ಕೋರ್ಟಿಗೆ ಹೋದರೆ ಈ ತ್ಯಾಂಪನ ಹತ್ತಿರದವ... ಅದೇ   ಆ ಗಣೇಶ ಇದೇ ವಿಷಯವನ್ನು ಜಗಜ್ಜಾಹೀರು ಮಾಡಿ ನಿಮ್ಮ ನಿಮ್ಮಣ್ಣನ ಇರೋ ಮಾನಾನೆಲ್ಲಾ ನಡು ಬೀದಿಯಲ್ಲಿ ಹರಾಜು ಹಾಕ್ತಾನೆ , ನೋಡಿಕೊಳ್ಳಿ ಒಂದು ಸಾರಿ ಆ ಗಣೇಶನಿಗೆ, ( ಆ ದಬಾಂಗ್, ಕೆಂಪೇಗೌಡ ಸ್ಟಯಿಲ್ ನವ- ಕಾಪಿ ರೈಟ್ ಗಣೇಶರು) ನಿಮ್ಮ ಮೇಲೆ ಒಳ್ಳೇ ಅಭಿಪ್ರಾಯ ಬರಲಿಲ್ಲ ಅಂದುಕೊಳ್ಳಿ... ಮತ್ತೆ ನನ್ನ ಅಂದ್ಕೋ ಬೇಡೀ ನಾನು ನಿಮ್ಮನ್ನ ಮೊದಲೇ ಎಚ್ಚರಿಸಲಿಲ್ಲ ಅಂತ...ಮೊನ್ನೆ ಮೊನ್ನೆ ನೆನಪಿದೆಯಲ್ಲಾ.... ಆ "ಅಗಡೀ ಸ್ಪಾ" ದ ಮೇಲೆ  ಧಾಳಿ ಮಾಡಿ ಅದರಲ್ಲಿ ಅವ್ಯವಹಾರ ನಡೀತದೇ ಅಂತ ಪೇಪರ್ನಲ್ಲೆಲ್ಲಾ ಕೊಟ್ಟೂ..... ಆ ಅಗಡಿಯವನ್ನ ( ಸ್ಪಾ ದ ಯಜಮಾನ) ಬೆಂಗಳೂರು,... ಯಾಕೆ ಕರ್ನಾಟಕವನ್ನೇ ಬಿಟ್ಟು ಓಡಿ ಹೋಗುವ ಹಾಗೆ ಮಾಡಿದ್ದು ಯಾರಂದ್ಕೊಂಡ್ರೀ..?
ಯಾ..ಯಾರು...?
"ಇದೇ ಈ ಗಣೇಶನೇ,,( ಆ ದಬಾಂಗ್, ಕೆಂಪೇಗೌಡ ಸ್ಟಯಿಲ್ ನವ- ಕಾಪಿ ರೈಟ್ ಗಣೇಶರು)"
ಮತ್ತೆ ಆ ಜಪದ ಸ್ವಾಮೀನ ನಮ್ ಹೆಂಡ್ತೀ ಮನೆಯಿಂದ್ ಓಡ್ಸೂಕೆ ಯಾರ್ ಸಹಾಯ ಮಾಡ್ದ್ ಅಂಡ್ಕಂಡ್ರೀ..?
"ಇದೇ ಈ ಗಣೇಶನೇ,,( ಆ ದಬಾಂಗ್, ಕೆಂಪೇಗೌಡ ಸ್ಟಯಿಲ್ ನವ- ಕಾಪಿ ರೈಟ್ ಗಣೇಶರು)"
ಇನ್ನು,,,,,,,,, ಪಕ್ಕದ ಓಣೀಲಿ..... ಬೇಡ ಬಿಡಿ ಇನ್ನು ನಿಮ್ಮಿಷ್ಟ,"  
"ಶೀನಣ್ಣಾ ಹಾಗಾದರೆ ನಾನೀಗ ಏನು ಮಾಡಬೇಕು ಹೇಳು" ( ಗಾಡಿ ರಸ್ತೆಗಿಳಿಯಿತು)
ನೋಡಮ್ಮಾ, ಇದು ತುಂಬಾ ಸರಳ, ನೀನು ಮಾಡಬೇಕಾದುದಿಷ್ಟೇ..., ನಿನ್ನ ಅಣ್ಣಂದಿರ್ಯಾರಿಗೂ ಹೇಳದೇ ಹೋಗಿ ಆ ಕಂಪ್ಲೆಂಟ್ ವಾಪಾಸ್ ತಗೋ.... ಅಷ್ಟೇ"
ಚೆಕ್ ಮೇಟ್!!!!

********************                            ********************

ತ್ಯಾಂಪಿ ನಿನ್ಮೇಲೆ ನಂಗೆ ಮನಸ್ಸೈತಿ...ಕಣ್ತುಂಬ ನಿನ್ಗೊಂಬೆ ತುಂಬೈತೆ  
ಮೆಲುದನಿಯಲ್ಲಿ ಹಾಡು ಮನೆಯಲ್ಲಿ ತ್ಯಾಂಪನ ಸ್ವರ
ಜತೆಯಲ್ಲೇ ಪಟ ಪಟ ಶಬ್ದ..
ಹೊಡೆದಾಟ...?
ನಾನು ಎದ್ದೆ
ಬೇಡ ವೆಂದು ಶೀನ ಕಣ್ಣಲ್ಲೇ ಸನ್ನೆ ಮಾಡಿದ...
ಇದು ತ್ಯಾಂಪ ತ್ಯಾಂಪಿಯರ ಸರಸದ ಮೊದಲಿನ ವಿರಸ.
ಮೊದಲ ವಿರಸದ ಅಂತ್ಯದ ಆರಂಭ.
ಅಲ್ಲಾ ಶೀನ.....  ತ್ಯಾಂಪಿ ದಕ್ಷಿಣ ಮುಖ ನಂದಿ ದೇವಸ್ತಾನಕ್ಕೇ ಹೋಗುತ್ತಾಳೆ ಅಂತ ನಿನಗೆ ಹೇಗೆ ಗೊತ್ತು..?
ಅದೂ ಅಲ್ದೇ ನೀನ್ ಹೇಳಿದ್ದೆಲ್ಲಾ ನಂಬಿ ಆ ಕಾಗ್ದಾ ವಾಪಾಸ್ ತಕಳ್ತ್ಲ ಅಂತ ಎಂತ  ಗ್ಯಾರಂಟೀ..ಇತ್ತಾ?
"ಅವ್ಳ್ ಸ್ವಂತ ಬುದ್ದಿಯಿಂದ ಆಕಾಗ್ದ ಬರ್ರೀಲಿಲ್ಯಾ,  ಅಲ್ದೇ  ನನ್ನ ಹೆಂಡ್ತಿ ಮತ್ತು ತ್ಯಾಂಪಿ ಸಣ್ಣಿಪ್ಪತಿ ಗಿಂದ ಸ್ನೇಹಿತೆಯರ್ ಮರಾಯಾ".
ದೊಡ್ಡ ಭಾರ ಇಳಿದ ಖುಷಿಯಿಂದ ಶೀನ ಊರಿಗೆ ಹೊರಟ,
ನಾನು...... ರಾಗಿ ಮುದ್ದೆ ಜೀರ್ಣ ಮಾಡಿಕೊಳ್ಳುವುದು ಹೇಗೆ ಎಂಬ ಪುಸ್ತಕ ಕೈಗೆ ತೆಗೆದುಕೊಂಡೆ.
ಛಾಲೇಂಜ್ ಪುನಹ ಶುರು.....!!!!!!!!!!!!?????????????

 

Rating
No votes yet

Comments