ವಿಜೇತ "ಅಣ್ಣಾ" ಮೊಂಡತನ ಬಿಡಲಿ
"ಅಧಿಕಾರ ಬಿಟ್ಟು ತೊಲಗಿ" ಚಳುವಳಿಯ ಈ ಹಂತದಲ್ಲಿ ಅಣ್ಣಾ, ಈ ಕರೆ ಕೊಡಬೆಕಾದ್ದಿರಲಿಲ್ಲ. ಆವೇಶವೋ? ಉದ್ದೇಶಪೂರ್ವಕವೊ? ಗೊತ್ತಿಲ್ಲ. ಆದರಿದು ಆಂದೋಳನಕ್ಕೆ ’ರಾಜಕೀಯದ ಫ್ಲೇವರ್’ ಆಗದಿರಲೆಂದು ಹಾರೈಕೆ!
ಈಗಾಗಲೇ ಚಳುವಳಿಯಲ್ಲಿ ಅಣ್ಣಾ ಗೆದ್ದಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಜನತೆಯಲ್ಲಿ ಪ್ರಾಂಜಲ ಪ್ರತಿರೋಧ ಭುಗಿಲೆದ್ದಿರುವುದೇ ಚಳುವಳಿಯ ನಿಜವಾದ ವಿಜಯ. ಪಾರ್ಲಿಮೆಂಟ್, ಅಣ್ಣಾ ಪ್ರಣೀತ ಜನಲೊಕಪಾಲ ಮಸೂದೆ ಒಪ್ಪುವುದು ದೇವರಾಣೆಗೂ ಸಾಧ್ಯವಿಲ್ಲ. ಇದು ಪ್ರತಿಯೊಬ್ಬರೂ ಬಲ್ಲ ಸಂಗತಿ. ಅಸಾಧ್ಯಕ್ಕಾಗಿ ಹಠ ಹಿಡಿದು ಕೂಡಬೇಕದ್ದಿಲ್ಲ.ಅದರ ಬದಲು, ಜನತೆಯ ಈ ಅಭೂತಪೂರ್ವ ಎಚ್ಚರವನ್ನು ಮುಂದಿನ ಸುಧಾರಣೆಯತ್ತ ತಿರುಗಿಸುವುದು ಈಗ ಮುಂದಿರುವ ಕಾರ್ಯ. ಬಿಟ್ಟರೆ ಈ ಉತ್ಸಾಹದ ಬುರುಗು ಅಡಗಿಹೋಗುತ್ತದೆ. ಪ್ರಸ್ತುತ ಸರಕಾರವನ್ನು ಉರುಳಿಸಿ, ಇಷ್ಟೇ ಭ್ರಷ್ಟವಾದ ಇನ್ನೋಂದು ಫ್ರಂಟ್ ಸರಕಾರವನ್ನು ಪ್ರತಿಷ್ಠಾಪಿಸುವ ರಾಜಕೀಯ ಉದ್ದೇಶವಿಲ್ಲದಿದ್ದರೆ ಅಣ್ಣಾಜಿ, ವಿಜಯೋತ್ಸಾಹದಿಂದಲೇ ಉಪವಾಸ ಕೈಬಿಡಲು ಇದು ಸಕಾಲವಾಗಿದೆ.
ಗಮನ ಈಗ ಚುನಾವಣಾ ಸುಧಾರಣೆಯತ್ತ ಹರಿಯಲಿ. ಇನ್ನಿತರ ವಿಚಾರಗಳೊಂದಿಗೆ ಪಾರ್ಲಿಮೆಂಟ್ ಮತ್ತು ರಾಜ್ಯ ಶಾಸನಸಭೆಗಳನ್ನು ನಿಜವಾದ ಬಹುಮತ ಪ್ರತಿನಿಧಿಸುವಂತೆ ಮಾಡುವುದು ಅತ್ಯಂತ ಅಗತ್ಯ ಸಂಗತಿ. ಆಗ ಅವು ’ಮರ್ಯಾದಸ್ಥರ ಮನೆ’ಗಳಾಗುತ್ತವೆ. ನೈತಿಕ ಜವಾಬ್ದಾರಿ ಎನ್ನುವುದು, ಬೇರೊಬ್ಬರು ಹೊಯ್ಲಿಕ್ಕುವ ಅಗತ್ಯವಿಲ್ಲದೆ ತಾನೇ ಅಲ್ಲಿ ನೆಲೆಗೊಂಡಿರುತ್ತದೆ. ಪಾರ್ಲಿಮೆಂಟ್ ಮತ್ತು ಶಾಸಕಾಂಗ ದೇಶದ, ರಾಜ್ಯದ ಕನಿಷ್ಠ ಶೇ. ೫೦+ ಮತದಾರರನ್ನು ಪ್ರತಿನಿಧಿಸುವಂತಾದರೆ, ಕೆಲವರಿಂದ, ಕೆಲವರು, ಕೆವರಿಗಾಗಿ ಮಾತ್ರಾ ಆಡಳಿತ ನಡೆಸುವ ’ಕೃತಕ ಪ್ರಜಾತಂತ್ರ’ ಅಂತ್ಯವಾಗುತ್ತದೆ.