ಬಿಡುಗಡೆಯೇ?!
ಯಡಿಯೂರಪ್ಪನವರು ಜೈಲಿನಿಂದ ಹೊರಬಂದಿದ್ದಾರೆ. 'ಆಸ್ಪತ್ರೆಗೆ ಹೋದರೂ ಜೈಲೇಶ್ವರ ಬಿಟ್ಟಿರಲಿಲ್ಲ'! ನ್ಯಾಯಮೂರ್ತಿಗಳು ಅದನ್ನು ಕೊಟ್ಟರು. ಇದಕ್ಕಾಗಿ ಯಾರಿಗೋ ಸಂತೋಷ; ಯಾರಿಗೋ ಸಂಕಟ. ಆದರೆ ಬಹು ಕೋಟಿ ಸಂಖ್ಯೆಯ ಸಾಮಾನ್ಯ ಜನತೆಗಾದರೋ ಸಂತೋಷಪಡುವುದಕ್ಕಾಗಲೀ, ಸಂಕಟಪಡುವುದಕ್ಕಾಗಲೀ ಏನೂ ಇಲ್ಲ! ಕ್ಷುದ್ರ ರಾಜಕೀಯದ ಧನಲೋಭಿ ಸಾಧು-ಸಂತರಿಗಿದು ಸಲ್ಲುವ ನಾಣ್ಯ ಇರಬಹುದು. ನನ್ನಂತಹ ಕೋಟ್ಯಂತರ ಬೀದಿ ಸಾಮಾನ್ಯರಿಗೆ, 'ಸಲ್ಲದ ನಾಣ್ಯ ಎಲ್ಲಿದ್ದರೇನು?'
ಮುಖ್ಯಮಂತ್ರಿ ಮತ್ತು ಮಂತ್ರಿ ಪರಿವಾರದವರು ನಮ್ಮ ಹೊಟ್ಟೆಯಮೇಲೆ ಹೊಡೆದು ಕೋಟಿಗಟ್ಟಲೆ ಗುಳಕಾಯಿಸಿದ್ದರೆ ಅವರಿಗೆ ತಕ್ಕ ಶಾಸ್ತಿಯಾಗಲೇಬೇಕು, ನಿಜ. ಹಾಗಲ್ಲದೆ ಪ್ರತಿಸ್ಪರ್ಧಿಗಳು ಅವರಮೇಲೆ ಅಂಥಂಥಾ ಆರೋಪ ಹೊರೆಸಿ ಬೀದಿರಂಪದ ರೊಚ್ಚೆಬ್ಬಿಸಿದ್ದರೆ ಅವರಿಗೂ ಇದೇ ಶಾಸ್ತಿಯಾಬೇಕಾಗುತ್ತದೆ. ಲಾಡು ತಿನ್ನುವ, ಭಜ್ಜಿ ತಿನ್ನುವ ಸ್ಪರ್ಧೆ ಆಟಕ್ಕೆ ಸರಿ; ಆದರೆ ರಾಜಕೀಯವೆನ್ನುವದೇ ರಾಜ್ಯದ ಬೊಕ್ಕಸ, ನಿವೇಶನ, ಜಮೀನು, ಭೂಗರ್ಭವನ್ನೇ ತಿಂದುಹಾಕುವ ಪೈಪೋಟಿಯಾದರೆ ನಾವು ಬದುಕುವುದೆಲ್ಲಿ?
ಪಕ್ಷ, ಪ್ರತಿಪಕ್ಷ, ಭಿನ್ನಮತಗಳೆಲ್ಲದರ ಗುರಿಯೊಂದೆ. ತಿನ್ನುವುದು; ತಲೆತಲಾಂತರಕ್ಕಗುವಷ್ಟು ಗೋರಿಡುವುದು; ಅಷ್ಟಕ್ಕಾಗಿ ಗೆಲುವಿನ ಮಾರ್ಜಿನ್ ತಂದುಕೊಡುವ ಸಮುದಾಯಗಳನ್ನು ಒಲೈಸುವುದು; ಉದ್ಯಮಕ್ಕಾಗಿ ಗೂಂಡಾ ಜನರನ್ನು ಸಾಕಿಕೊಳ್ಳುವುದು....
....ಸತ್ಯವಂತರೆನ್ನುವವರಿದ್ದರೆ, ಅವರಿಗೆ ಒಂದು ಸಂಖ್ಯೆಯಿದ್ದರೆ, ಇದನ್ನು ಪ್ರತಿಭಟಿಸುವುದು ಸಾಧ್ಯವಾಗಬಹುದು.