'ಮಿತ್ರಪ್ಷಗಳು’ ರಾಷ್ಟ್ರ ಪ್ರಜಾಸತ್ತೆಯ ಹಿತಶತ್ರುಗಳು
ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಎನ್ಡಿಎ ಮೈತ್ರಿಕೂಟದಲ್ಲಿ ಒಡಕುಂಟಾಗಿರುವುದಾಗಿ ವರದಿಯಾಗಿದೆ. ಇದು ಕೇವಲ ರಾಷ್ಟ್ರಪತಿ ಚುನಾವಣೆಗಷ್ಟೇ ಅಲ್ಲ, ಬರಲಿರುವ ಲೋಕಸಭೆಗೂ ಅನ್ವಯಿಸುವ ಮಾತು. ಎನ್ಡಿಎದಲ್ಲಿ ಒಡಕೆಂದಮಾತ್ರಕ್ಕೆ, ಯುಪಿಎ ಏನೂ ಘನತರ ಎರಕವೆಂದೇನೂ ಭಾವಿಸಬೇಕಾಗಿಲ್ಲ. ಒಕ್ಕೂಟವೆಂದರೇ, ಅವಕಾಶವಾದೀ ಮಹತ್ವಾಕಾಂಕ್ಷಿ ಏಕ ನಾಯಕನ ದಂಡಾಳುಗಳ ಸಡಿಲ ಗುಂಪು. ದೊಡ್ಡ ಹೆಸರಿನ ಪಕ್ಷಗಳು, ಅಂಥವುಗಳ ಬ್ಲ್ಯಾಕ್ಮೇಲ್ ತಂತ್ರಕ್ಕೆ ತಮ್ಮನ್ನೇ ಒಪ್ಪಿಸಿಕೊಳ್ಳುವ ಅನಿವಾರ್ಯತೆ ನಿರ್ಮಿಸಿಕೊಂಡಿರುವುದು ನಮ್ಮ ಮಹಾನ್ ಪ್ರಜಾಸತ್ತೆಯ ನಾಚಿಕೆಕೇಡಿನ ಸಂಗತಿ.
ರಾಷ್ಟ್ರಪತಿ ಚುನಾವಣೆಯಲ್ಲಿ ಬಿಡಿ-ಬಿಡಿ ವಿಧಾನ ಸಭೆಗಳ ಪಾತ್ರವೂ ಇರುವುದರಿಂದ ಇಲ್ಲಿ ಮೈತ್ರಿ, ಮಾತುಕತೆಗಳು ಬೇಕೇ ಬೇಕು, ಒಪ್ಪೋಣ. ಆದರೆ ಮಹಾಚುನಾವಣೆಯಲ್ಲಿ ಬಿಜೆಪಿ ಆಗಲೀ, ಕಾಂಗ್ರಸ್ ಆಗಲೀ ಯಾವುದೇ ಚಿಲ್ಲರೆ ಪಾಳೇಗರರ ಗುಂಪಿನ ಹಂಗಿಗೆ ಒಳಗಾಗಬಾರದು; ತಮ್ಮ ದೊಡ್ಡತನವನ್ನು ಉಳಿಸಿಕೊಳ್ಳಬೇಕು; ವೋಟು ಹಾಕುವ ನಾವು ಮರ್ಯಾದೆಯಿಂದ ತಲೆ ಎತ್ತಿ ತಿರುಗಲು ಅವಕಾಶ ಕೊಡಬೇಕು.