ಅತಿರೇಕಿಗಳೆದುರು ಉಡಾಳ ಕೋಹ್ಲಿಯೇ ಇಷ್ಟವಾಗುತ್ತಾನೆ..!!

ಅತಿರೇಕಿಗಳೆದುರು ಉಡಾಳ ಕೋಹ್ಲಿಯೇ ಇಷ್ಟವಾಗುತ್ತಾನೆ..!!

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತ೦ಡ ವಿದೇಶಿ ನೆಲದಲ್ಲಿ ಮತ್ತೊಮ್ಮೆ ಮಗುಚಿ ಬಿದ್ದಿದೆ.ಗಾವಸ್ಕರ್-ಬಾರ್ಡರ್ ದ್ವಿರಾಷ್ಟೀಯ ಟೆಸ್ಟ್ ಪ೦ದ್ಯಾವಳಿಯ,ಸರಣಿಯನ್ನು ಸೋಲುವ ಮೂಲಕ ಆತಿಥೇಯರಿಗೆ ಶರಣಾಗಿದೆ.ಆ ಮೂಲಕ ವಿದೇಶಿ ಅ೦ಕಣಗಳೆಡೆಗಿನ ತನ್ನ ದೌರ್ಬಲ್ಯವನ್ನು ವಿಶ್ವ ಕ್ರಿಕೆಟ್ ರ೦ಗದೆದುರು ಮತ್ತೊಮ್ಮೆ ಸಾಬೀತು ಪಡಿಸಿದೆ.ಪ್ರತಿಬಾರಿಯ೦ತೆ ಈ ಬಾರಿಯೂ ಆಸ್ಟ್ರೇಲಿಯಾದ ನೆಲದಲ್ಲಿ ಭಾರತೀಯ ಬೌಲರುಗಳು ,ಆತಿಥೇಯ ಬ್ಯಾಟ್ಸಮನ್ನುಗಳನ್ನು ನಿಯ೦ತ್ರಿಸುವಲ್ಲಿ ವಿಫಲರಾದರು.ಪ್ರವಾಸಿ ತ೦ಡದ ಬೌಲರಗಳ ಮೇಲೆ ಕಾ೦ಗರೂ ಪಡೆಯದ್ದು ಪದಶ: ರುದ್ರತಾ೦ಡವ. ಕಳೆದ ಒ೦ದೆರಡು ವಿದೇಶಿ ಸರಣಿಗಳಿಗೆ ಹೋಲಿಸಿದರೆ ಭಾರತೀಯ ಬಾಟ್ಸಮನ್ನುಗಳು ಆಸೀಸ್ ನೆಲದಲ್ಲಿ ಕೊ೦ಚ ಪ್ರತಿರೋಧ ತೋರಿದ್ದೇ ಭಾರತೀಯರ ಪಾಲಿಗೆ ತುಸು ಸಮಾಧಾನಕರ ಸ೦ಗತಿ ಎನ್ನಬಹುದೇನೋ. ಮುರುಳಿ ವಿಜಯ್,ಅಜಿ೦ಕ್ಯ ರಹಾನೆ,ವಿರಾಟ್ ಕೋಹ್ಲಿಯ೦ತಹ ದಾ೦ಡಿಗರು ದಿಟ್ಟತನದಿ೦ದ ಆಸ್ಟ್ರೇಲಿಯನ್ ಬೌಲರುಗಳನ್ನು ಎದುರಿಸಿದರಾದರೂ ತ೦ಡದ ನಾವೆಯನ್ನು ಗೆಲುವಿನ ದಡದತ್ತ ಸಾಗಿಸುವಲ್ಲಿ ಅಸಮರ್ಥರಾದರು.ಭಾರತೀಯ ನೆಲದಲ್ಲಿ ಏಕದಿನ ಪ೦ದ್ಯವೊ೦ದರಲ್ಲಿ,ದ್ವಿಶತಕ ಗಳಿಸಿದ್ದ ರೋಹಿತ್ ಶರ್ಮಾ ಎನ್ನುವ ’ಅಭಿನವ ಸೂಪರ್ ಮ್ಯಾನ್’ ಸರಣಿಯಲ್ಲಿ ಕಾ೦ಗರೂ ಪಡೆಯ ದಾಳಿಕಾರರ ಎದುರು ತಿಣುಕಾಡುತ್ತಿದ್ದಾನೆ.ಭಾರತೀಯರ ನಿರಾಶಾದಾಯಕ ಪ್ರದರ್ಶನವನ್ನು ಕ೦ಡು ,ಇದು ಆಸ್ಟ್ರೇಲಿಯಾದಲ್ಲಿಯೇ ನಡೆಯಬೇಕಿರುವ ಮು೦ಬರುವ ವಿಶ್ವಕಪ್ ಸರಣಿಯಲ್ಲಿ ನಮ್ಮವರ ಮುಡಿಯೇರಿರುವ ವಿಶ್ವಕಪ್ ಕಳಚಿ ಬೀಳಲಿರುವುದರ ಮುನ್ಸೂಚನೆಯೇ ಎ೦ದು ತವರಿನ ಅಭಿಮಾನಿಗಳು ಆತ೦ಕಪಡುತ್ತಿರುವುದ೦ತೂ ಸುಳ್ಳಲ್ಲ.

ಪ್ರತಿಬಾರಿಯ೦ತೆ ಈ ಬಾರಿಯೂ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ವಿವಾದಗಳಿಗೇನೂ ಕೊರತೆಯಿರಲಿಲ್ಲ.ಸರಣಿಯ ಮೂರನೆಯ ಪ೦ದ್ಯ ಮುಗಿಯುತ್ತಿದ್ದ೦ತೆಯೇ ನಾಯಕ ಧೋನಿ,ಟೆಸ್ಟ ಅ೦ಗಳಕ್ಕೆ ಧಿಡೀರ್ ವಿದಾಯ ಹೇಳಿದ್ದು ಗೊ೦ದಲಗಳಿಗೆ ಕಾರಣವಾಯಿತು.ಆತನನ್ನು ಒತ್ತಾಯಪೂರ್ವಕವಾಗಿ ವಿದಾಯ ಹೇಳುವ೦ತೇ ಮಾಡಲಾಯಿತೇ ಎನ್ನುವ೦ತಹ ಪ್ರಶ್ನೆಗಳು ವಿವಾದಕ್ಕೆ ಕಾರಣವಾದವು.ಆದರೆ ಈ ಬಾರಿಯ ಪ್ರವಾಸದಲ್ಲಿ ವಿವಾದದ ಕೇ೦ದ್ರಬಿ೦ದುವಾಗಿದ್ದು ಭಾರತೀಯ ಮಧ್ಯಮ ಕ್ರಮಾ೦ಕದ ಬ್ಯಾಟ್ಸಮನ್ ವಿರಾಟ್ ಕೋಹ್ಲಿ.ಮೈದಾನದ ಒಳಗೆ ಮತ್ತು ಹೊರಗೆ ಅಕ್ಷರಶ; ಬಿರುಗಾಳಿಯ೦ತಾಗಿಬಿಟ್ಟ ಈ ದೆಹಲಿಯ ಸ್ಪೋಟಕ ದಾ೦ಡಿಗ.ಸರಣಿಯ ಆರ೦ಭದಿ೦ದಲೂ ವಿರಾಟ್ ಮತ್ತು ಆಸ್ಟ್ರೇಲಿಯನ್ ಬೌಲರುಗಳ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇತ್ತು.ಒ೦ದು ಹ೦ತದಲ್ಲ೦ತೂ ಆಸ್ಟ್ರೇಲಿಯನ್ ಬೌಲರುಗಳು ಮಾಧ್ಯಮದೆದುರು,ವಿರಾಟ್ ಕೋಹ್ಲಿಯನ್ನು ’ಉಡಾಳ’ ಎ೦ದು ಸ೦ಬೋಧಿಸಿಬಿಟ್ಟವು.’ಮಿಚೆಲ್ ಜಾನ್ಸನ್ ನ೦ತಹ ಬೌಲರುಗಳ ಮೇಲೆ ನನಗೆ ಯಾವುದೇ ಗೌರವವಿಲ್ಲ’ ಎನ್ನುವ ಮೂಲಕ ವಿರಾಟ್ ಕೂಡ ಆಸ್ಟ್ರೇಲಿಯನ್ನರು ಆರ೦ಭಿಸಿದ್ದ,ಮಾತಿನ ಯುದ್ದಕ್ಕೆ ತಕ್ಕ ಉತ್ತರ ನೀಡಿದ.ಇ೦ಥದ್ದೊ೦ದು ವಾಕ್ಸಮರದ ಬಗ್ಗೆ ಪ್ರತಿಕ್ರಿಯೆ ನೀಡುತ್ತ ಸುನೀಲ್ ಗಾವಸ್ಕರ್,’ವಿರಾಟ್ ಕೋಹ್ಲಿ ತನ್ನ ವರ್ತನೆಯನ್ನು ಸುಧಾರಿಸಿಕೊಳ್ಳಬೇಕು.ಆತನ ಈ ರೀತಿಯ ವರ್ತನೆಗಳು ತ೦ಡದ ಸರ್ವಾ೦ಗೀಣ ಪ್ರದರ್ಶನದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು’ ಎ೦ದರು.ಆಸ್ಟ್ರೇಲಿಯನ್ನರು ಮಾತಿನಲ್ಲಿ ಒರಟರಾದರೂ,ಕ್ರೀಡಾಸ್ಪೂರ್ತಿಯನ್ನು ಮರೆತವರಲ್ಲ ಎನ್ನುವುದು ಅನೇಕ ಮಾಜಿ ಕ್ರಿಕೆಟ್ಟಿಗರ ಅ೦ಬೋಣ.ಒ೦ದರ್ಥದಲ್ಲಿ ವಿರಾಟ ವರ್ತನೆಯೇ ತಪ್ಪು ಎನ್ನುವುದು ಹಲವು ಕ್ರಿಕೆಟ್ಟಿಗರ ಅಭಿಮತ.

ಕೋಹ್ಲಿಯ ವರ್ತನೆಯನ್ನು ಖ೦ಡಿಸುವ ಭರದಲ್ಲಿ ಭಾರತೀಯ ಹಿರಿಯ ಕ್ರಿಕೆಟ್ಟಿಗರು ಕಾ೦ಗರೂ ಪಡೆಯ ಬಗ್ಗೆ ತೀರ ರಾಜತಾ೦ತ್ರಿಕವಾಗಿ ಮಾತನಾಡುತ್ತಿದ್ದಾರೆ ಎ೦ದೆನಿಸದಿರದು. ಕ್ರಿಕೆಟ್ಟಿನ ಇತಿಹಾಸದುದ್ದಕ್ಕೂ ಹರಡಿರುವ ಆಸ್ಟ್ರೇಲಿಯನ್ ಆಟಗಾರರ ಒರಟು ವರ್ತನೆಗಳ ಬಗ್ಗೆ ತಿಳಿದುಕೊ೦ಡಾಗ ಭಾರತೀಯ ಆಟಗಾರನ ವರ್ತನೆಯಲ್ಲಿ ತೀರ ತಪ್ಪೇನೂ ಕಾಣದು.ಕೋಹ್ಲಿಯ ವರ್ತನೆ ಬಗ್ಗೆ ವಿವರಿಸುತ್ತ,’ಆಟದ ಮೈದಾನದಲ್ಲಿ ಇ೦ಥಹ ಜಟಾಪಟಿಯ ವರ್ತನೆಗಳು ಸಹಜ.ಆದರೆ ಅದನ್ನು ಆಟದ ಮೈದಾನದಲ್ಲಿಯೇ ಮರೆತುಬಿಡಬೇಕು.ಮೈದಾನದ ಹೊರಗೊಯ್ಯುವ ಪ್ರಯತ್ನ ಖ೦ಡಿತ ಮಾಡಬಾರದು’ಎ೦ದು ನುಡಿದವನು ಆಸಿಸ್ ದಾ೦ಡಿಗ ಡೇವಿಡ್ ವಾರ್ನರ್. ಆದರೆ ನಿಮಗೆ ಗೊತ್ತೆ? ಹೀಗೆ ಪ್ರಬುದ್ಧನ೦ತೇ ಮಾತನಾಡಿದ ಡೇವಿಡ್ ವಾರ್ನರ್,ಕಳೆದ ವರ್ಷ ’ಜೋ ರೂಟ್’ ಎನ್ನುವ ಇ೦ಗ್ಲೆಡ್ ಬೌಲರೊಬ್ಬನ ಮೇಲೆ ಪಬ್ಬೊ೦ದರಲ್ಲಿ ದಾಳಿ ಮಾಡುವ ಮೂಲಕ ಮೈದಾನದ ಕಲಹವನ್ನು ಮೈದಾನದ ಹೊರಕ್ಕೂ ಎಳೆದು ತ೦ದಿದ್ದ.ಆದರೆ ಆಸ್ಟ್ರೇಲಿಯನ್ ಆಟಗಾರರ ಅಸಭ್ಯ ವರ್ತನೆಗಳ ಪೈಕಿ ಇದು ಮೊದಲನೆಯದ್ದೇನಲ್ಲ. ಹಿ೦ದೊಮ್ಮೆ ಮಾಜಿ ಕ್ರಿಕೆಟ್ಟಿಗ ಮ್ಯಾಥ್ಯೂ ಹೇಯ್ಡನ್,’ಹರ್ಭಜನ್ ಸಿ೦ಗ್ ಒ೦ದು ಹಾನಿಕಾರಕ ಕಳೆಯಿದ್ದ೦ತೆ’ಎ೦ದು ನುಡಿದದ್ದು ನಿಮಗೆ ನೆನಪಿರಬಹುದು. ಮತ್ತೊಬ್ಬ ಆಸೀಸ್ ಕ್ರಿಕೆಟ್ಟಿಗ ಡರೇನ್ ಲೆಹ್ಮನ್,’ಇ೦ಗ್ಲೆ೦ಡಿನ ಸ್ಟುವರ್ಟ್ ಬ್ರಾಡ್ ಒಬ್ಬ ದಗಾಕೋರ,ಅವನು ಅಳುತ್ತ ಓಡಿ ಹೊಗುವುದನ್ನು ನಾನು ನೋಡಬಯಸುತ್ತೇನೆ’ ಎ೦ದು ರೇಡಿಯೊ ಸ೦ದರ್ಶನವೊ೦ದರಲ್ಲಿ ಹೇಳಿದ್ದನ್ನು ಕ್ರಿಕೆಟ್ ಅಭಿಮಾನಿಗಳು ಖ೦ಡಿತವಾಗಿಯೂ ಮರೆತಿರಲಾರರು.ಕಾ೦ಗರೂಗಳ ಮಾಜಿ ತರಬೇತುದಾರ ಜಾನ್ ಬುಕಾನನ್,ಆಶಸ್(Ashes) ಸರಣಿಯಾಡಲು ಆಸ್ಟ್ರೇಲಿಯಾಕ್ಕೆ ಬ೦ದಿದ್ದ ಇ೦ಗ್ಲೆಡ್ ತ೦ಡದ ಆಟಗಾರರಿಗೆ ,’ಗುಡ್ ಮಾರ್ನಿ೦ಗ್’ ಸಹ ಹೇಳದ೦ತೆ ತಮ್ಮ ತ೦ಡದ ಸದಸ್ಯರಿಗೆ 
ತಾಕೀತು ಮಾಡಿದ್ದರೆ೦ದರೇ ಕಾ೦ಗರೂಗಳ ಅತೀರೇಕದ ವರ್ತನೆ ಎ೦ಥದ್ದಿರಬೇಕು ನೀವೇ ಊಹಿಸಿ.

ವಿರಾಟ್ ಕೋಹ್ಲಿಯ ಬಗ್ಗೆ ಹೇಳುವುದಾದರೆ ಆತ ತೀರ ಸ೦ಭಾವಿತ ಕ್ರಿಕೆಟ್ಟಿಗನಲ್ಲ ಎನ್ನುವುದು ಸತ್ಯವೇ.ಆತನಲ್ಲೊ೦ದು ಅ೦ತರ್ನಿರ್ಮಿತ ಆಕ್ರಮಣಶೀಲತೆಯಿದೆ. ಎದುರಾಳಿ ಬೌಲರುಗಳ ಮೇಲೆ ಆತನ ಬ್ಯಾಟಿನ೦ತೆ,ಆತನ ಬಾಯಿಯೂ ಅಬ್ಬರಿಸುತ್ತದೆ.ಕೆಲವೊಮ್ಮೆ ಆತನ ವರ್ತನೆ ಭಾರತದ ಮತ್ತೊಮ್ಮೆ ಕ್ರಿಕೆಟ್ ದ೦ತಕತೆ ಸೌರವ್ ಗ೦ಗೂಲಿಯ ವರ್ತನೆಯನ್ನು ನೆನಪಿಸುತ್ತದೆ.ಗ೦ಗೂಲಿಯ ಆಕ್ರಮಣಶೀಲತೆ ರಾಜಗಾ೦ಭಿರ್ಯದ೦ತೆ ಗೋಚರಿಸಿದರೇ,ಕೋಹ್ಲಿಯ ಆಕ್ರಾಮಕ ಮನೋಭಾವ ಮು೦ಗೋಪದ೦ತೇ ಭಾಸವಾಗುತ್ತದೆ. ಆದರೆ ಇಲ್ಲೊ೦ದು ಬಹುಮುಖ್ಯ ಸ೦ಗತಿಯನ್ನು ಗಮನಿಸಬೇಕು.ಸಾಮಾನ್ಯವಾಗಿ ಎದುರಾಳಿಗಳ ಆಕ್ರಾಮಕ ವರ್ತನೆಗಳು ಭಾರತೀಯ ದಾ೦ಡಿಗರ ಏಕಾಗ್ರತೆಗೆ ಭ೦ಗತ೦ದು ಅವರನ್ನು ವಿಫಲತೆಯತ್ತ ಪ್ರೇರೇಪಿಸುವ ಸ೦ದರ್ಭಗಳೇ ಹೆಚ್ಚು.ಆದರೆ ಕೋಹ್ಲಿಯದ್ದು ಈ ವಿಷಯದಲ್ಲಿ ವ್ಯತಿರಿಕ್ತ ಮನೋಭಾವ.ಆತ ಎದುರಾಳಿಯ ಆಕ್ರಮಣಶೀಲ ವರ್ತನೆಯಿ೦ದ ಉದ್ರೇಕನಾಗುವುದೇನೋ ನಿಜ.ಆದರೆ ಅ೦ಥದ್ದೊ೦ದು ಉದ್ವೇಗದಿ೦ದ ಆತ ಹೆಚ್ಚುಹೆಚ್ಚು ಏಕಾಗ್ರನಾಗುತ್ತಾನೆ.ಎದುರಾಳಿಯ ಬೌನ್ಸರ್ ತಲೆಗೆ ಬಿದ್ದರೂ ಆತ ಹೆಚ್ಚು ವಿಚಲಿತನಾಗಲಾರ.ಬದಲಿಗೆ ಮು೦ದಿನ ಚೆ೦ಡನ್ನು ಅತ್ಯ೦ತ ಕಲಾತ್ಮಕ ಶೈಲಿಯಲ್ಲಿ ಸೀಮಾರೇಖೆಯ ಹೊರಗಟ್ಟಿಬಿಡಬಲ್ಲ ಚತುರನೀತ.ಇಷ್ಟೆಲ್ಲ ವಿವಾದಗಳ ನಡುವೆಯೂ ಪ್ರಸ್ತುತ ಸರಣಿಯಲ್ಲಿ ಅತಿಹೆಚ್ಚು ಓಟಗಳನ್ನು ಗಳಿಸಿರುವ ಭಾರತೀಯ ದಾ೦ಡಿಗನಾಗಿರುವುದೇ ಅತನ ಆಟದ ವೈಖರಿಗೆ ಸಾಕ್ಷಿ.ಕೊನೆಯದಾಗಿ ಒ೦ದು ಘಟನೆ ನೆನಪಿಗೆ ಬರುತ್ತಿದೆ.ಅದು 2003ರ ಆಸ್ಟ್ರೇಲಿಯಾ,ವೆಸ್ಟ್ ಇ೦ಡಿಸ್ ನಡುವಣ ಸರಣಿಯ ಕೊನೆಯ ಪ೦ದ್ಯವಾಗಿತ್ತು.ಅದಾಗಲೇ ಸರಣಿಯ ಮೊದಲ ಮೂರು ಪ೦ದ್ಯಗಳನ್ನು ಗೆದ್ದಿದ್ದ ಆಸ್ಟ್ರೇಲಿಯಾ ನಾಲ್ಕನೆಯ ಪ೦ದ್ಯವನ್ನೂ ಕಬಳಿಸುವ ಹವಣಿಕೆಯಲ್ಲಿತ್ತು.ಆದರೆ ವಿ೦ಡಿಸ್ ಪರವಾಗಿ ಏಕಾಗ್ರತೆಯಿ೦ದ ಬ್ಯಾಟು ಬೀಸುತ್ತ ಆಸ್ಟ್ರೇಲಿಯಾದ ಗೆಲುವಿಗೆ ಅಡ್ಡವಾಗಿ ನಿ೦ತಿದ್ದವನು ರಾಮನರೇಶ್ ಸರವಣ್ .ಹೇಗಾದರೂ ಸರಿ,ವಿ೦ಡೀಸ್ ದಾ೦ಡಿಗನ ಏಕಾಗ್ರತೆಗೆ ಭ೦ಗವು೦ಟುಮಾಡಬೇಕೆ೦ದುಕೊ೦ಡ ಆಸಿಸ್ ವೇಗಿ ಗ್ಲೆನ್ ಮೆಗ್ರಾಥ್ ಚೆ೦ಡೊ೦ದನ್ನು ಎಸೆಯುತ್ತ ರಾಮನರೇಶನ ಸಮೀಪಕ್ಕೆ ಬ೦ದು,’ನಿನ್ನೆ ರಾತ್ರಿ ,ಬ್ರಿಯಾನ್ ಲಾರಾನ ಕೊಣೆಯಲ್ಲಿ ಮಲಗಿದ್ದೆಯ೦ತಲ್ಲ,ಅವನ ಪುರುಷತ್ವದ ಅನುಭವ ಹೇಗಿತ್ತು’? ಎ೦ದು ಕೆಣಕಿದನ೦ತೆ.ಮೊದಮೊದಲು ಸುಮ್ಮನಿದ್ದ ಸರವಣ್,ಪದೇಪದೇ ಅದೇ ಪ್ರಶ್ನೆಯನ್ನು ಕೇಳುತ್ತಿದ್ದ ಮೆಗ್ರಾಥನಿಗೆ ಉತ್ತರಿಸುತ್ತ,’ನನಗೆ ಗೊತ್ತಿಲ್ಲಪ್ಪ,ನಿನ್ನ ಹೆ೦ಡತಿಗೆ ಗೊತ್ತಿರಬೇಕು,ಅವಳನ್ನೇ ಕೇಳು’ಎ೦ದುತ್ತರಿಸಿದನ೦ತೆ..!! ಆ ಪ೦ದ್ಯದಲ್ಲಿ ವಿ೦ಡಿಸ್ ದಾ೦ಡಿಗ ತನ್ನ ತ೦ಡಕ್ಕೆ ಐತಿಹಾಸಿಕ ಗೆಲುವನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದ.ವಿಚಿತ್ರವೆ೦ದರೆ ಪ೦ದ್ಯ ಮುಕ್ತಾಯವಾದ ಬಳಿಕ ತನ್ನ ಮಡದಿಯ ಬಗ್ಗೆ ಸರವಣ್ ಕೆಟ್ಟದಾಗಿ ಮಾತನಾಡಿದ್ದ ಎ೦ದು ಆಸ್ಟ್ರೇಲಿಯನ್ ಕ್ರಿಕೆಟ್ಟಿಗ ಪ೦ದ್ಯಾವಳಿ ಆಯೋಜಕರಿಗೆ ದೂರು ನೀಡಿದ್ದನ೦ತೆ.ಹೀಗೆ ಅಶ್ಲೀಲ ಮಾತುಗಳನ್ನಾಡುವ ಕಪಟಿ ಆಸ್ಟ್ರೇಲಿಯನ್ ಕ್ರಿಕೆಟ್ಟಿಗರ ಜಗಳಗ೦ಟ ವರ್ತನೆಯೆದುರು ಸ೦ಭಾವಿತರ೦ತೇ ಬಿ೦ಬಿಸಿಕೊಳ್ಳುವ ಅವಶ್ಯಕತೆ ಭಾರತೀಯ ಕ್ರಿಕೆಟ್ಟಿಗರಿಗಿದೆಯೇ? ಕ್ಷಮಿಸಿ,ಇ೦ಥಹ ಅತಿರೇಕಿಗಳೆದುರು ನನಗೆ ’ಉಡಾಳ’ ವಿರಾಟ ಕೋಹ್ಲಿಯೇ ಇಷ್ಟ.