ಮೂರು ವರ್ಷದ ತಾಯಿ

ಮೂರು ವರ್ಷದ ತಾಯಿ

             ಬಿಸಿ ಬಿಸಿ, ಹೈದರಾಬಾದಿನ ಗಾಳಿಯ ಮದ್ಯ, ಸಿಹಿ ನೀರ ಕಡಲೊಂದನ್ನು ತನ್ನೆದೆಯೊಳಗೆ ಬಚ್ಚಿಟ್ಟುಕೊಂಡ ಅವಳ ಮನದ ಆಳದ ಒಳಗೆ, ಅದೇನೋ ಸುತ್ತಲಿನವರ ಹಾಗೆ ಬದುಕನ್ನು ಬರಿಯ ಬಿಸಿಗಾಳಿಗೆ ಮುಗಿಸಬಾರದು ಎಂಬ ಗಟ್ಟಿತನವಿತ್ತು,,,,,, ಆಗ ತಾನೇ ಹುಟ್ಟಿದಂತೆ ಕಾಣುತ್ತಿದ್ದ ಅವಳ ಕೂಸಿಗೆ ಈಗ ಒಂದು ವರ್ಷ ಭರ್ತಿ, ಅವಳ ಕೈಯಲ್ಲಿ ರೇಖೆಗಳು ಕಪ್ಪಾಗಿ, ಒಣಗಿ ಹೋದ ಕೃಷ್ಣಾ ನದಿಯನ್ನೇ ನೆನಪಿಸುವಂತೆ ಇದ್ದವು, ಆದರೂ ಅವಳ ಕೈಯ ಸ್ಪರ್ಶ ಅವಳ ಪುಟ್ಟ ಮಗಳಿಗೆ ಅಪ್ಯಾಯಮಾನ, ಅವಳ ಕಪ್ಪು ಮುಖ ಒಂದಿನಿತೂ ಸೂರ್ಯನ ಶಾಖವನ್ನು ಬಿಟ್ಟು ಕೊಡದಂತೆ ಇದ್ದರೂ, ಮುಗ್ಧತೆ ಮಾತ್ರ ಅವಳ ಒಂದು ವರ್ಷದ ಮಗಳಷ್ಟೇ ಇತ್ತು, ಆಕೆಗೆ ಪ್ರಪಂಚದ ಯಾವ ವಿಚಾರಗಳೂ ಗೊತ್ತಿಲ್ಲ, ಆದರೆ ಅವಳ ಮಗಳಿಗೆ ಪ್ರಪಂಚದ ಎಲ್ಲಾ ಮಕ್ಕಳಿಗಿಂತಾ ಜಾಸ್ತಿ ಪ್ರೀತಿ ಸಿಕ್ಕಿತ್ತು, ಅವಳು ಆಡಂಬರಕ್ಕಾಗಿ  ಬದುಕುತ್ತಿರಲಿಲ್ಲ, ಬದುಕಲಿಕ್ಕಾಗಿಯೇ ಬದುಕುತ್ತಿದ್ದಳು, ಈ ಬಿಸಿ ಗಾಳಿಗೆ ಅವಳು ಕಾರಣಳಾಗಿರಲಿಲ್ಲ, ಆದರೆ ಕಾರಣ ಯಾರೆಂದು ಆಕೆಗೆ ಗೊತ್ತಿತ್ತು, 

    ಆಕೆ ಚಿಕ್ಕವಳಾಗಿದ್ದಾಗ, ಮನದಣಿಯೆ ಆಡುತ್ತಿದ್ದ ಕೆರೆಯ ಜಾಗದಲ್ಲೀಗ ಸಾವಿರ ಜನ ವಾಸಿಸುವ ಅಪಾರ್ಟ್ಮೆಂಟು ತಲೆ ಎತ್ತಿದೆ, ಅವಳು ಆಗಾಗ ಹತ್ತಿ ಕೀಳುತ್ತಿದ್ದ, ಬೇಲದ ಹಣ್ಣಿನ ಮರ, ಮಾವಿನ ಮರ, ಕಾಡು ನೇರಳೆಯ ಮರ, ಇನ್ಯಾವುದೋ ಮರಗಳೆಲ್ಲ, ಅಲ್ಲಿ ಹುಟ್ಟು ಹಾಕಬೇಕಿದ್ದ, ರಸ್ತೆಗಳಿಗೆ, ಖಾರ್ಖನೆಗಳಿಗೆ, ತಮ್ಮ ಪ್ರಾಣವನ್ನು ಅರ್ಪಿಸಿದ್ದವು, ನೋಡ ನೋಡುತ್ತಿದ್ದಂತೆ ಅವಳ ಅಪ್ಪ, ಕುಡಿದು ಕುಡಿದು ಪ್ರಾಣ ಬಿಟ್ಟಿದ್ದ, ಅವ್ವ ಮಾತ್ರ ಇವಳನ್ನು ಸಾಕಲು ಪಣತೊಟ್ಟು, ಕೊನೆಗೆ ಕೈ ಚೆಲ್ಲಿ ಪ್ರಾಣ ಬಿಟ್ಟಿದ್ದಳು, ಎಲ್ಲ ಮುಗಿಯಿತು ಎಂದುಕೊಂಡಾಗಲೇ, ಯವ್ವನ ಇವಳನ್ನು ಅಪ್ಪಿ ಬಿಟ್ಟಿತ್ತು, ದಾರಿಹೋಕನ ಕಣ್ಣು ಬಿದ್ದು ಅವಳ ಯವ್ವನ ಸೂರೆಗೊಂಡು, ಕೈಗೆ ಮಗುವೂ ಬಂದಾಗಿತ್ತು, ತುತ್ತಿನ ಚೀಲಕ್ಕೆ ರೈಲ್ವೇ ನಿಲ್ದಾಣದಲ್ಲಿ ಕಸ ಆರಿಸಿದರೆ ಸಿಗುವ ಸ್ಟೇಷನ್ನು ಮಾಸ್ತರರ ನಾಲ್ಕು ಕಾಸು, ಅಲ್ಲೇ ಹೋಟೆಲಿನಲ್ಲಿ ಪಾತ್ರೆ ತಿಕ್ಕಿ ಹೊಳಹುಗೊಳಿಸಿದರೆ ಸಿಗುವ ಸ್ವಲ್ಪ ಕಾಸು ಮತ್ತು, ಉಳಿದ ಮೃಷ್ಟಾನ್ನ, ಆಕೆಗೆ ಬದುಕು ಬೇರೆನನ್ನೂ ನೀಡಲೂ ಇಲ್ಲ, ಅವಳಿಂದಾ ಪಡೆಯಲೂ ಇಲ್ಲ, ಆದರೆ ಈಗ ಎದ್ದ ಬಿಸಿ ಗಾಳಿ ಅವಳನ್ನು ತಲ್ಲಣವಾಗಿಸಿದೆ, ರಾತ್ರಿಯ ವೇಳೆಯೂ ಅವಳ ಮಗಳನ್ನು ಅಪ್ಪಿ ಮಲಗಿದರೆ ಈ ಬಿಸಿ ಗಾಳಿ ಅವರ ಪ್ರೇಮಕ್ಕೂ ಅಡ್ದ ಬರುತ್ತಿತ್ತು, ಇವೆಲ್ಲವುದರಿಂದಾ ಆಕೆ ಬೇಸತ್ತು ಹೋದಳು, ಮಾಡುವುದೇನು, ಆಕೆಗೆ ತಿಳಿದಿಲ್ಲ,   ನಾಳೆಯ ಚಿಂತೆ ಇಲ್ಲದೆ, ನಿನ್ನೆಯ ನೆನಪೇ ಇಲ್ಲದೇ ಅಂದಿನ ಹೊಟ್ಟೆ ತುಂಬಿಸಿಕೊಂಡು ಬಡತನದ ಹೆಸರಿನಲ್ಲಿ ಆರಾಮಾವಾಗಿ ಬದುಕುತ್ತಿದ್ದ ಆಕೆಗೆ, ಬಂಗಲೆಯಲ್ಲಿ ಬಂದಿಯಾದವರು ಬಡವರಂತೆ ಕಾಣುತ್ತಿದ್ದರು, ಕಾರಿನ ಚಿಕ್ಕ ಜಾಗದಲ್ಲಿ ಕುಳಿತು ಸದಾ ಯಾವುದೋ ಚಿಂತೆಯ ಬೆಂಕಿಯನ್ನು ತಲೆಗೆ ಹಚ್ಚಿಕೊಂಡವರು ಬಡವರಂತೆ ಕಾಣುತ್ತಿದ್ದರು, ಆದರೂ ಜನ ಆಕೆಯನ್ನು ಬಡವಳು ಎನ್ನುತ್ತಿದ್ದುದು ಯಾಕೆಂದು ಆಕೆಗೆ ಅರ್ಥವಾಗಿರಲಿಲ್ಲ, ಅವಳು ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ, ಮಗು ಬಂದ ಮೇಲಂತೂ, ಮಗಳೇ ಅವಳ ಪ್ರಪಂಚ, ಆದರೆ ಅವಳ ಸುಖವನ್ನು ಕೀಳಲು ಬಂದ ಈ ಬಿಸಿಗಾಳಿ ಅವಳಿಗೆ ನುಂಗಲಾರದ ತುತ್ತಾಗಿತ್ತು, 

 ಅಂದು ಅವಳ ಗುಡಿಸಿಲಲ್ಲಿ ಕುಳಿತು ದೂರದ ಅಪಾರ್ಟ್ಮೆಂಟನ್ನು ದಿಟ್ಟಿಸಿದಳು, ಜನ ಬಿಸಿ ತಾಳಲಾರದೆ ಅಲ್ಲಿಂದ ಖಾಲಿ ಮಾಡಿಕೊಂಡು, ತಂಪಾದ ಹಳ್ಳಿಗಳಿಗೆ ಹೋಗಲು ಅನುವಾಗುತ್ತಿದ್ದರು, ನಾಲ್ಕೈದು ದಿನದಲ್ಲಿ, ನಗರದ ಕೆಲವು ಬಾಗಗಳಲ್ಲಿ ಜನರೇ ಇಲ್ಲ,,,, ಬರಿಯ ಸುಡು ಬಿಸಿಲು ಅಷ್ಟೇ, ಇವಳಿಗೂ ಆ ಜಾಗ ತೊರೆಯುವುದು ಅನಿವಾರ್ಯವಾಗಿತ್ತು,,,,, ಆದರೆ ಅವ್ವ ಇದ್ದ ಜಾಗವನ್ನು ಬಿಟ್ಟು ಹೋಗಲು ಮನಸಾಗಲಿಲ್ಲ,,,,,,, ಅದೊಂದು ರಾತ್ರಿ ಅಲ್ಲೇ ಮಲಗಿರುವಾಗ, ಅವ್ವ ಹೇಳಿದ ಮಾತು ನೆನಪಾಯಿತು,"ಮಗ, ಗಿಡಗಳು ದೇವರು, ಮರಗಳು ಉಸಿರು, ನೋಡಲ್ಲಿ ಆ ದೊಡ್ದ ಮರದ ಕೆಳಗೇ ನಿನ್ನ ಹೆರಿಗೆ ಆಗಿದ್ದು, ಆ ಮರದ ಬೇರುಗಳೇ ನಿನಗೆ ತಲೆದಿಂಬಾಗಿದ್ದು",,,, ಅವ್ವನ ನೆನಪಾಯಿತು,,,,,

ಮರುದಿನ ಎದ್ದವಳೇ, ಸೀದ ಹೋಗಿ ಅಲ್ಲಲ್ಲಿ ಇದ್ದ ಹತ್ತಾರು ಗಿಡಗಳನ್ನು ಕೊಂಡು ತಂದಳು, ಗುಡಿಸಿಲ ಸುತ್ತ ನೆಟ್ಟಳು, ದೂರದ ಕೆರೆಯಿಂದಾ ಅಲ್ಪ ಸ್ವಲ್ಪ ನೀರನ್ನು ಉಣಿಸಿದಳು, ಆದರೂ ಗಿಡಗಳು ಬಿಸಿ ಗಾಳಿಗೆ ಸೊರಗಿದಂತೆ ಕಾಣುತ್ತಿದ್ದವು, ಸ್ವಲ್ಪ ದಿನದಲ್ಲೇ ಇದ್ದಕ್ಕಿದ್ದಂತೆ ಮಳೆ,,,,, ಮಳೆಗೆ ಗಿಡಗಳು ಬೆಳೆದು ನಿಂತವು,,,, ಗಿಡಗಳ ನೆರಳಲ್ಲಿ ಹುಲ್ಲು ಹುಟ್ಟಿತು, ಗಿಡಕ್ಕೆ ಆನಿಸಿಕೊಂಡು ಬಳ್ಳಿ ಹುಟ್ಟಿತು, ತಿಂದು ಬಿಸಾಕಿದ ಸೋರೆ ಸೌತೆ ಬೀಜಗಳು ಬಳ್ಳಿ ಆದವೂ, ನೋಡ ನೋಡತ್ತಿದ್ದಂತೆ ಅವಳ ಗುಡಿಸಿಲು ತಂಪಿನ ವನವಾಯಿತು,,,,,,,, ಮುಂದಿನ ವರ್ಷ ಅದ್ಯಾವ ಬಿಸಿಗಾಳಿ ಬಂದರೂ ತಡೆಯುವ ತಂಪು ಮಡಿಲು ಆಕೆಯ ಗುಡಿಸಿಲಿಗೆ ದಕ್ಕಿತ್ತು.

ಇತ್ತ ಜನ, ಆಧುನಿಕತೆಯ ಮಂಪಲ್ಲಿ ಮೈಮರೆಯುತ್ತಿದ್ದರು, ಪ್ರಕೃತಿಯ ವಿಕೋಪ ವಿರೋದ ಪಕ್ಷದ ಕೈವಾಡ ಎಂದರು ಕೆಲವರು, ಸರ್ಕಾರ ಬಿಸಿ ತಣಿಸಲಿ ಎಂದು ಕೆಲವರು ಬೀದಿಗಿಳಿದರು, ಇನ್ನು ಕೆಲವರು ದೊಡ್ದ ದೊಡ್ದ ಚಳುವಳಿ ಮಾಡಿದರೂ,,,,, ಯಾರೂ ಒಂದು ಗಿಡ ನೆಡಲಿಲ್ಲ,,,,,,

ಇತ್ತ ಈಕೆಯ ಮಗಳು, ಮೂರು ವರ್ಷದಾಕೆ , ಅವಳದೇ ಎತ್ತರದ ಗಿಡವೊಂದನ್ನು ನೆಟ್ಟು, ನೀರುಣಿಸುತ್ತಾ ಅದಕ್ಕೆ ತಾಯಾಗಿದ್ದಳು,,,,,,

-ಜೀ ಕೇ ನ 

Comments