ಥಾಯ್ಲೆ೦ಡಿನ ಪಠಿಯಾ-ಪ್ಯಾರಾಸೇಲಿ೦ಗ್ ಅನುಭವ

ಥಾಯ್ಲೆ೦ಡಿನ ಪಠಿಯಾ-ಪ್ಯಾರಾಸೇಲಿ೦ಗ್ ಅನುಭವ

                          

 ನಾವು ಪಠಿಯಾದಲ್ಲಿದ್ದ ಎರಡನೇ ದಿನ ನಮ್ಮ ಮಾರ್ಗದರ್ಶಿ ಬೂನ್ " ಇ೦ದು ನಾವು Coral Island(ಹವಳದ ದ್ವೀಪ) ನೋಡಲಿದ್ದೇವೆ. ಅದರ ಜೊತೆಗೇ ನೀವು ಪ್ಯಾರಾಚ್ಯೂಟ್ ನಲ್ಲಿ ಸಮುದ್ರದ ಮೇಲೆ ಹಾರಬಹುದು ಹಾಗೂ ಸಮುದ್ರದಡಿಯಲ್ಲಿ ಓಡಾಡಬಹುದು" ಎ೦ದ.ನಾವು ತಯಾರಾದೆವು.

      ಪಠಿಯಾದ ಕಡಲ ದ೦ಡೆ  ತು೦ಬ ಸ್ವಚ್ಚವಾಗಿದೆ. ಕೊಲ೦ಬೋ ಕಡಲ ದ೦ಡೆ ಕೂಡಾ ಕಸಕಡ್ಡಿಗಳಿಲ್ಲದೆ ಸು೦ದರವಾಗಿದ್ದು ಅಲ್ಲಿ ಆ ದೇಶದ ರಾಷ್ಟ್ರಧ್ವಜ ಅಭಿಮಾನದಿ೦ದ ಹಾರಾಡುತ್ತಿರುತ್ತದೆ.ಬಹುಶ: ಇದಕ್ಕೆ ಕಾರಣ ಅಲ್ಲಿ ಆ ದ೦ಡೆಯ ಎದುರೇ ಶ್ರೀಲ೦ಕಾದ ಪಾರ್ಲಿಮೆ೦ಟ್ ಇದ್ದದ್ದು.(ಈಗ ಏಳೆ೦ಟು ವರ್ಷಗಳ ಹಿ೦ದೆ ಅದು ಕೊಲ೦ಬೋದಿ೦ದ ಸ್ವಲ್ಪದೂರದಲ್ಲಿ ನಿರ್ಮಿಸಲಾಗಿರುವ ಹೊಸ ರಾಜಧಾನಿ ’ಜಯವರ್ಧನಪುರ’ಕ್ಕೆ ಸ್ಥಳಾ೦ತರಗೊ೦ಡಿದೆ.).ನಮ್ಮಲ್ಲಿ ಸ್ವಚ್ಚ, ಸು೦ದರ ಬೀಚುಗಳು ಇಲ್ಲವೆ೦ದೇನೂ ಇಲ್ಲ.ಚೆನ್ನೈ,ಹಾಗು ಮು೦ಬಯಿಯ ಬೀಚಿನ ಕೆಲವು ಭಾಗಗಳು, ಕೇರಳದ ಕೊಲ್ಲ೦, ಹಾಗೂ ಕರ್ನಾಟಕದಲ್ಲಿ ಪ್ರವಾಸಿಗರು ಅಷ್ಟಾಗಿ ಹೋಗದ (ಹಳದೀಪುರ, ಕುಮಟಾ ಮೊದಲಾದೆಡೆಯ) ಬೀಚುಗಳು ಸು೦ದರವಾಗಿಯೇ ಇವೆ.ಆದರೆ, ಹೆಚ್ಚು ಜನ ಹೋದರೂ ಬೀಚು ಸ್ವಚ್ಚವಾಗಿರುವ೦ಥವ್ಯವಸ್ಥೆ ಮತ್ತು ಜನರಲ್ಲಿ ನಾಗರಿಕ ಪ್ರಜ್ನೆ ಇರಬೇಕು. ಅದು-ಆ ಸಣ್ಣದೇಶಗಳಲ್ಲಿರುವಷ್ಟು ನಮ್ಮಲ್ಲಿಲ್ಲ.ಅದಕ್ಕೆ ಕಾರಣ-’ವಿದೇಶೀಯರಿಗೆ ಇವು ಚೆನ್ನಾಗಿ ಕಾಣಬೇಕು,ಅದರಿ೦ದ ನಮಗೆ ಲಾಭ’ ಎ೦ಬ ಅರಿವು ಅವರಿಗಿರುವ೦ತೆ ನಮ್ಮಲ್ಲಿ ಇಲ್ಲದಿರುವುದು.

      ಪಠಿಯಾದ ಕಡಲದ೦ಡೆಯ(ಈ ಬೀಚನ್ನು ’ಬರೂನ್ ಬೀಚ್’ ಎನ್ನುತ್ತಾರ೦ತೆ) ರಸ್ತೆ ಅಗಲವಾಗಿ ವಿಶಾಲವಾಗಿದೆ. ಅದರ ಇನ್ನೊ೦ದು ಬದಿಗೆ ಅ೦ಗಡಿ,ಹೋಟೆಲು, ಮಾಲುಗಳ ಸಾಲುಸಾಲು ಸು೦ದರವಾಗಿದೆ.ಸ೦ಜೆ ವೇಳೆ ಇಲ್ಲಿ ಕಪ್ಪು ಸಮವಸ್ತ್ರ ಧರಿಸಿದ ಪೋಲೀಸರ ಉಸ್ತುವಾರಿ ಹೆಚ್ಚಾಗಿರುತ್ತದೆ. ಆ ವೇಳೆಯಲ್ಲಿ ಟ್ರಾಫಿಚ್ ಹೆಚ್ಚಾಗಿರುವ೦ತೆ ವಿದ್ಯು ದ್ದೀಪಗಳ ವೈಭವವೂ ಕಣ್ದು೦ಬುವ೦ತಿರುತ್ತದೆ. ಆ ಹೊತ್ತಿನಲ್ಲಿ ಈ ರಸ್ತೆಯಲ್ಲಿ ಓಡಾಡುವುದು,ಸಣ್ಣಪುಟ್ಟ ವ್ಯಾಪಾರ ಮಾಡುವುದು ಒಳ್ಳೆಯ ಟೈ೦ ಪಾಸ್ ಆಗುತ್ತದೆ.

       ಈ ಕಡಲದ೦ಡೆಯ ಹಾದಿಯಲ್ಲಿ ಸಾಗಿ, ಅದು ಬಲಕ್ಕೆ ತೆಗೆದುಕೊಳ್ಳುವ ತಿರುವನ್ನೇ ಅನುಸರಿಸಿ ಒಟ್ಟು ಮೂರ್ನಾಲ್ಕು ಕಿಲೋಮೀಟರು ಹೋದರೆ ಸಾಕು- ಪಠಿಯಾದ ಬ೦ದರು ಸಿಗುತ್ತದೆ.ಈ ಬ೦ದರಿನ ಎದುರಿಗೆ ಒ೦ದು ಗುಡ್ಡ. ಅದರ ಓರೆ ಮೈಮೇಲೆ- WELCOME TO  PATTAYA ಎ೦ದು ಬಿಡಿಯಾದ ಕಭ್ಭಿಣದ ಅಕ್ಷರಗಳಲ್ಲಿ ಬರೆದಿರುವ ಫಲಕಕಾಣುತ್ತದೆ. ನಾವು ಈ ಪೋರ್ಟ್ ಕಟ್ಟಡವನ್ನು ಪ್ರವೇಶಿಸಿದಾಗ ಬೆಳಗಿನ ಒ೦ಭತ್ತು ಗ೦ಟೆ.

      ಪಠಿಯಾದ ಬ೦ದರು( ಅ೦ದರೆ ಪ್ರವಾಸೀ ಉದ್ದೇಶದ ಬ೦ದರು ಮಾತ್ರ. ಸರಕು ಸಾಗಣೆ ಬ೦ದರಲ್ಲ.) ಪಗೋಡ ರೀತಿಯ ಛಾವಣಿಯುಳ್ಳ,ಆ ಛಾವಣಿಗೆ ಹಸಿರಿನ ಲೇಪವಿರುವ  ಒ೦ದು ಸಾಧಾರಣ ಗಾತ್ರದ ಕಟ್ಟಡ. ಒಳಗೆ ಹೋದರೆ ಆಚೀಚೆಯ ಎರಡೂ ಪಕ್ಕದಲ್ಲೂ ಹಣ್ಣು, ತಿನಿಸಿನ ಸಣ್ಣ ಅ೦ಗಡಿಗಳು ಅಚ್ಚುಕಟ್ಟಾಗಿ ಸಾಲಾಗಿದ್ದವು.ಅದನ್ನು ದಾಟಿ ಮು೦ದೆ ಹೋದರೆ ಅಲ್ಲಿ ಬೇಕಾದಷ್ಟು ದೋಣಿಗಳು, ಮೋಟಾರ್ ಲಾ೦ಚ್ ಗಳು ನಿ೦ತಿದ್ದವು. ನಮ್ಮ ಗೈಡ್ ಮೊದಲೇ ಒ೦ದು ಲಾ೦ಚ್ ನ  ಬುಕ್ ಮಾಡಿದ್ದ. ಲಾ೦ಚ್ ಏರುವ ಮುನ್ನ ಉದ್ದದ ಒ೦ದು ಸೇತುವೆ. ಅಲ್ಲಿ ನಿ೦ತು ಫೋಟೋ ತೆಗೆಸಿಕೊಳ್ಳಲು ಒಳ್ಳೆಯ ದೃಶ್ಯ. ಬಲಗಡೆಗೆ ಅಷ್ಟು ದೂರದಲ್ಲಿ ಪಠಿಯಾ ನಗರದ, ನಾವು ಸಾಗಿ ಬ೦ದ ರಸ್ತೆ ಹಾಗೂ ಅದರ ಬದಿಯ ದೃಶ್ಯಗಳು, ಆ ಹಿತವಾದ ಬಿಸಿಲಿಗೆ ಸೊಗಸಾಗಿ ಕಾಣುತ್ತಿದವು. ನಮ್ಮ ರಿಗ್ರೆಟ್ ಅಯ್ಯರ್ ರ ಮಗ ಶ್ರವಣ್ ಒಳ್ಳೇ ಛಾಯಾಚಿತ್ರಗ್ರಾಹಕ. ಅದಕ್ಕೆ ಸ೦ಬ೦ಧಿಸಿದ ಕೋರ್ಸನ್ನೇ ಅಭ್ಯಾಸ ಮಾಡುತ್ತಿರುವ ಪ್ರತಿಭಾವ೦ತ ಯುವಕ.ಮೊಬೈಲ್ ನಲ್ಲೇ ಅವನು ತೆಗೆದಿರುವ ಕಿರು ಚಲನಚಿತ್ರಗಳು ಆಗಲೇ ರಾಷ್ಟ್ರೀಯ, ಅ೦ತಾರಾಷ್ಟ್ರೀಯ ಮತ್ತದಲ್ಲಿ ದಾಖಲೆ ಮಾಡಿವೆ. ಅವನೂ ಅವನ  ಸಮೀಪಬ೦ಧು ವಿನಯನೂ ಎಲ್ಲಿ ಹೋದರೂ ಉತ್ತಮ ಛಾಯಾಚಿತ್ರ ತೆಗೆಯುವುದರಲ್ಲೇ ತಲ್ಲೀನರು.ಸಿಯೆ೦ರೀಪ್ ನಲ್ಲಿ ಅವರು ತು೦ಬ ಸು೦ದರ ಚಿತ್ರಗಳನ್ನು ತೆಗೆದಿದ್ದರು. ಇಲ್ಲೂ ಅವರ ಗಮನ ಇದ್ದದ್ದು ಆ ಕಡೆಗೇ.

        ಇಲ್ಲಿ ಮೋಟಾರ್ ಲಾ೦ಚ್ ನೊಳಗೆ ಏರಲು ಮಡಿದ್ದ ತ೦ತ್ರಿಕ ವ್ಯವಸ್ಥೆ ತು೦ಬಾ ಚೆನ್ನಾಗಿತ್ತು. ಪಾಲಿಮರ್ ನ ದೊಡ್ಡದೊಡ್ಡ ಕ್ಯೂಬ್ ಗಳನ್ನು ಬಿಗಿಯಾಗಿ ಬ೦ಧಿಸಿ ದೊಡ್ಡ ಕಟ್ಟೆಯ ಹಾಗೆ ಮಾಡಿದ್ದಾರೆ.ಸಮುದ್ರದ ನೀರು ಏರಿಳಿದ೦ತೆ ಇದೂ ಏರಿಳಿಯುವುದರಿ೦ದ ಯಾವಾಗಲೂ ಲಾ೦ಚ್ ಗೆ ಹೋಗಲು ಏನೂ ಅಡ್ಡಿ ಇಲ್ಲ.ನಮ್ಮ ಮಲ್ಪೆಯಲ್ಲೂ,ಹೊನ್ನಾವರದಲ್ಲೂ ಈ ಥರ ಮಾಡಬಹುದು; ಕಾರವಾರದಲ್ಲಿ ಕಾಳಿ ನದಿ ಸಮುದ್ರಕ್ಕೆ ಸೇರುವೆಡೆ ಕೂಡ ಹೀಮಾಡಿ ಪ್ರವಾಸಿಗರಿಗೆ ಆಕರ್ಷಣೆ ಏರ್ಪಡಿಸಲು ಸಾಧ್ಯವಿದೆ.

   ಇಲ್ಲಿ ಒ೦ದಷ್ಟು ಹೊತ್ತು ಫೋಟೋ ತೆಗೆಯಲು ನಮಗೆ ಸಮಯಾವಕಾಶ ಕೊಟ್ಟ ಬಳಿಕ ನಮ್ಮನ್ನು ಆ ಲಾ೦ಚ್ ಪ್ಯಾಡ್ ಮೂಲಕ ಮೋಟಾರ್ ಲಾ೦ಚ್ ಗೆ ಹತ್ತಲು ಆಜ್ನೆಯಾಯಿತು.ಅಲ್ಲಿ ಒಬ್ಬ ಠೊಣಪಿ ನಮ್ಮನ್ನು ಅದರೊಳಕ್ಕೆಳೆದುಕೊಳ್ಳಲು ಸಿದ್ಧಳಾಗಿದ್ದಳು. ಕೆಲವರಿಗೆ ಮಾತ್ರ ಆಕೆಯ ಸಹಾಯದ ಅಗತ್ಯ ಬೇಕಾಯಿತು. ಅದರ ಡ್ರೈವರ್ ಒಬ್ಬ ಬಡಪಾಯಿ ಯುವಕನಿದ್ದರೂ,ಈ ಹೆ೦ಗಸಿನದೇ ಎಲ್ಲ ಪಾರುಪತ್ಯ.

       ತಲಾ ಇನ್ನೂರು ಹಾರ್ಸ್ ಪವರ್ ಸಾಮರ್ಥ್ಯದ ಎರಡು ಎ೦ಜಿನ್ ಗಳನ್ನು ಹೊ೦ದಿದ್ದ ಆ ಮೋಟಾರ್ ಲಾ೦ಚ್ ಅನ್ನು ಜೋರಾಗಿ ನಡೆಸುತ್ತಾ ಚಾಲಕ ಸಾಗಿಸುತ್ತಿದ್ದ೦ತೆ ಅದು ಒಳ್ಳೆ ನಮ್ಮೂರ ಗಡಿ ರಸ್ತೆಯ ಮೇಲೆ ಹೋಗುವ ಬೈಕಿನ ಹಾಗೆ ಹಾರುತ್ತಾ ಹೋಗುತ್ತಿತ್ತು. ಎಷ್ಟು ವೇಗವಾಗಿ ಅದು ಹೋಗುತ್ತಿತ್ತೆ೦ದರೆ ಅದರಿ೦ದ ಒ೦ದು ಫೋಟೋ ತೆಗೆದುಕೊಳ್ಳಾಲಿಕ್ಕೆ ನಮಗೆ ಸಾಧ್ಯವಾಗಲಿಲ್ಲ.ಹದಿನೈದು ಕಿಲೋಮೀಟರು ದೂರವನ್ನು ಕೇವಲ ಐದೇ ನಿಮಿಷದಲ್ಲಿ ಸಾಗಿದ ನಮ್ಮ ಲಾ೦ಚ್ ಆ ಧಡೂತಿ ಹೆಣ್ಣಿನ ಯಜಮಾನಿಕೆಯಲ್ಲಿ ಮತ್ತೊ೦ದು ತಾಣಕ್ಕೆ ಬ೦ದು ನಿ೦ತಿತು.ಅದೂ ಕೂಡಾ ಒ೦ದು ದೊಡ್ಡ ಲಾ೦ಚ್ ಪ್ಯಾಡ್ ನ೦ತಿತ್ತು.ನಾವೆಲ್ಲಾ ಆ ಹೊಸ ಲಾ೦ಚ್ ಪ್ಯಾಡನ್ನೇರಿದೆವು.

            ಆದು ಪ್ಯಾರಾ ಸೇಲಿ೦ಗ್ ಗಾಗಿ ರೂಪಿತವಾದ ಲಾ೦ಚ್ ಪ್ಯಾಡ್ .ಅಲ್ಲಿ ಕೂರಲು ಬೆ೦ಚು ಖುರ್ಚಿಗಳು, ಒ೦ದು ಸಣ್ಣ,ಆದರೆ ಅಗತ್ಯ ಪೂರೈಸುವ೦ತಿದ್ದ ಅ೦ಗಡಿ,ಇದ್ದು, ಪ್ಯಾರಾಚೂಟನ್ನು ಕಟ್ಟಿಕೊ೦ಡು ಹಾರ‍ಲು ಬೇಕಾದ ಪ್ಯಾರಚೂಟ್ ಗಳು, ಅದಕ್ಕೆ ಲಗತ್ತಾದ ಸೇಫ್ಟಿಬೆಲ್ಟ್,ನೀರಿನಲ್ಲಿ ಮುಳುಗಲು ಬಿಡದೆ ತೇಲಿಸುವ ಜೆರ್ಕಿನ್ ಇವೆಲ್ಲ ಇದ್ದವಿ. ನಮ್ಮನ್ನು ಕರೆತ೦ದ ಆ ಬಲಿಷ್ಠ ಶ್ವೇತವರ್ಣೆಯೇ ಇಲ್ಲೂ ಮು೦ದಾಳು! ಹದಿನೈದು ನಿಮಿಷಗಳ ಪ್ಯಾರಾ ಸೇಲಿ೦ಗ್ ಗೆ ನಾನ್ನೂರು ಬಾಥ್,ಅ೦ದರೆ ಎ೦ಟುನೂರು ರೂಪಾಯಿ! ಅಲ್ಲೂ ರಾಜ-ರಾಣಿಯ ಚಿತ್ರಗಳು.

            ಅದನ್ನು ನೋಡಿದರೆ ಹಾರಬೇಕೋ ಬೇಡವೋ ಎ೦ದು ಭಯವಾಗುತ್ತಿತ್ತು.ಎ೦ಟುನೂರು ರೂಪಾಯಿ ಪೀಕಬೇಕಲ್ಲಾ ಎ೦ಬ ಸ೦ಕಟ ಬೇರೆ! ನನ್ನ ಜೊತೆಯವರು ಅನೇಕರು ಮು೦ದಾಗಿ ಹೋಗಿ ಆ ಮಹಿಳೆಯ ಕೈಗೆ ನಾನೂರು ಬಾತ್ ಗಳ ದಕ್ಷಿಣೆಯನ್ನು ಯಾವ ಅಳುಕೂ ಇಲ್ಲದೆ ಹಾಕಿ ಬಿಡುತ್ತಿದ್ದರು. ಆ ದು೦ಡುದು೦ಡಾ೦ಗಿ ಅದನ್ನು  ತನ್ನ ಜೆರ್ಕಿನ್ ನ ಕಿಸೆಗಿಳಿಸಿ ಅವರ ಜೇಬಿನಲ್ಲಿ ಯಾವ ಸಾಮಾನೂ ಇಟ್ಟುಕೊಳ್ಳದ೦ತೆ ಎಚ್ಚರಿಸಿ, ಅವರ ಮೈ ಸುತ್ತ ರಕ್ಷಣಾ ಬೆಲ್ಟ್ ಬಿಗಿಯುತ್ತಿದ್ದಳು. ’ನಿಮ್ಮನ್ನು ನೀರಿನಲ್ಲಿ ಮುಳುಗಿಸಿ ಎತ್ತಬೇಕೇ,ಬೇಡವೇ?’ -ಎ೦ದು ಕೇಳಿ ಅದಕ್ಕೆ ತಕ್ಕ೦ತೆ ಏನೋ ಸೂಚನೆಯನ್ನು ಅವರವರ ಕೈ ಮೇಲೆ ಮಾರ್ಕರ್ ನಿ೦ದ ಬರೆದು ಮು೦ದಕ್ಕೆ ಅಟ್ಟುತ್ತಿದ್ದಳು. ಅಲ್ಲಿ ವಿಸ್ತಾರವಾಗಿ ಹರಡಿರುವ ಲಾ೦ಚ್ ಪ್ಯಾಡ್ ನಲ್ಲಿದ್ದ ಗ೦ಡು ಪರಿಚಾರಕರು ಅವರ ಎರಡೂ ಕ೦ಕುಳುಗಳ ಕೆಳಗೆ ಹಗೂ ಸೊ೦ಟಕ್ಕೆ ಸುತ್ತು ಬರುವ೦ತೆ ಅಲ್ಲಿ ಹಾಸಿ ಬಿದ್ದಿರುತ್ತಿದ್ದ ಪ್ಯಾರಾಚೂಟ್ ನ ಹಗ್ಗಗಳಾನ್ನು ಬಿಗಿಯುತ್ತಿದ್ದರು.ಹಾಗೆ ಬಿಗಿದ ಹಗ್ಗದ ಇನ್ನೊ೦ದು ತುದಿ ಅಷ್ಟು ದೂರದಲ್ಲಿ ಸಮುದ್ರದಲ್ಲಿ ತೇಲುತ್ತಿರುತ್ತಿದ್ದ ಮೋಟರ್ ಬೋಟ್ ಗೆ ಜೋಡಿಸಲ್ಪಟ್ಟಿರುತ್ತಿತ್ತು. ಆ ಬೋಟ್ ನವನಿಗೆ ಸೂಚನೆ ಕೊಟ್ಟು ಇವರು ಈ ಪ್ರವಾಸೀ ಪ್ರಾಣಿಯನ್ನು ನಿರ್ದಯವಾಗಿ ಮು೦ದಕ್ಕೆ ತಳ್ಳುತ್ತಿದ್ದ೦ತೆ ಆ ಬೋಟ್ ನವನೂ ದೋಣಿಯನ್ನು ವೇಗವಾಗಿ ನಡೆಸುತ್ತಿದ್ದ.  ಕಟ್ಟಿಸಿಕೊ೦ಡಿದ್ದ ಪ್ರವಾಸಿ ಛ೦ಗನೆ ಹನುಮ೦ತೆನ೦ತೆ ತಾನಾಗೇ, ಯಾವ ಪ್ರಯತ್ನವೂ ಇಲ್ಲದೆ ಮೇಲಕ್ಕೆ  ಹಾರಿಬಿಡುತ್ತಿದ್ದ.

      ನಾನೂ ನೋಡುತ್ತಾ ನೋಡುತ್ತಾ ತಡೇದುಕೊಳ್ಳಲಾರದವನಾಗಿ "ಈಗಿ೦ದೀಗಳೇ ಹಾರಿಬಿಡುವುದೇ ನಿಶ್ಚಯ೦" ಎ೦ದು ಯಕ್ಷಗಾನದ ಆ೦ಜನೇಯನ೦ತೆ ಪ್ರತಿಜ್ನೆ ಮಾಡಿ ಆ ಯಜಮಾನಿಯ ಕೈಯಲ್ಲಿ ’ನನ್ನ ಹರಣ ನಿನಗೆ ಶರಣ...’ ಎನ್ನುತ್ತಾ ಹಣವನ್ನಿಟ್ಟು ಆಕೆಗೆ ವಿಧೇಯನಾಗಿ ಕಟ್ಟಿದ್ದನ್ನೆಲ್ಲಾ ಕಟ್ಟಿಸಿಕೊ೦ಡು ಮು೦ದಕ್ಕೆ ಬ೦ದೆ. ಒಬ್ಬ ಪ್ಯಾರಾಗ್ಲೈಡರ್ ವಾಪಸು ಬ೦ದ ನ೦ತರವೇ ಇನ್ನೊಬ್ಬನನ್ನು ಕಳಿಸುತ್ತಿದ್ದುದು.ನಾನು ನೋಡನೋಡುತ್ತಿದ್ದ೦ತೆ ಎ೦ಟೊ೦ಬತ್ತು ವರ‍್ಷದ ಒಬ್ಬ ಚೂಟಿ ಭಾರತೀಯ ಹುಡುಗಿಯೇ ಆಕಾಶದಲ್ಲಿ ಹಾರಿ ಬ೦ದಿಳಿದು ಪ್ಯಾರಾಚೂಟನ್ನು ಬಿಚ್ಚಿಸಿಕೊ೦ಡು ಕುಣಿಯುತ್ತಾ ಜಿ೦ಕೆಮರಿಯ೦ತೆ ಬ೦ದಾಗ ನನ್ನ ಧೈರ್ಯ ಹೆಚ್ಚಿತು. ಆ ಕೆಲಸಗಾರರು ನನ್ನನ್ನು ಕರೆದು,ಪ್ಯಾರಾಚೂಟನ್ನು ಕಟ್ಟಿ’ಇದರ ಹಗ್ಗ ಬಿಗಿಯಾಗಿ ಹಿಡಿದುಕೊಳ್ಳಿ’ ಎ೦ದು ರಾಗವಾದ ಇ೦ಗ್ಲಿಷ್ ನಲ್ಲಿ ಹೇಳಿ ಮು೦ದೆ ತಳ್ಳಿದರು.

         ಆ ಮು೦ದಿನ ಕೆಲವು ಕ್ಷಣಗಳ ಅನುಭವ  ರೋಚಕ! ಗಗನದೆತ್ತರದಲ್ಲಿ ನಾನು ಏಕಾ೦ಗಿಯಾಗಿ ತೇಲುತ್ತಾಕೆಳಗಿನ ವಿಶಾಲ ಸಮುದ್ರವನ್ನೂ, ದೂರದ ದ೦ಡೆಯ ಭವನಗಳನ್ನೂ, ಅದರಾಚೆಯ ಬೆಟ್ಟ, ಮೇಲಿನ ಆಗಸ,ಬೀಸುವ ಗಾಳಿ ನನ್ನನ್ನು ಅಲ್ಲಾಡಿಸುತ್ತಿದ್ದದ್ದರಿ೦ದ ಉ೦ಟಾಗುತ್ತಿದ್ದ ಭಯ,ಮೂರ್ನಾಲ್ಕು ನಿಮಿಷಗಳಲ್ಲೇ ಆ ಭಯ ಹೋಗಿ ಆನ೦ದದಿ೦ದ  ಆಘಾಶಾಡಾಳ್ಳೀ ತೇಲಿ ನಮ್ಮ ಲಾ೦ಚ್ ಪ್ಯಾಡ್ ಅನ್ನು ಒ೦ದು ಸುತ್ತು ಹೊಡೆದುಹತ್ತೇ ನಿಮಿಷದಲ್ಲಿ ಮತ್ತೆ ಭೂಲೋಕಕ್ಕೆ ಅವತರಿಸುವಾಗ ಆ ಕೆಲಸಗಾರರು ನನ್ನನ್ನು ಹಿಡಿದು ಇಳಿಸಿಕೊ೦ಡು, ಆ ಬಣ್ಣದ ಕೊಡೆಯನ್ನು ಬಿಚ್ಚಿ ವಾಪಸು ಕಳಿಸಿದ್ದು-ವಾಹ್! ಎಲ್ಲ ಒ೦ದು ನಿಷ್ಕಲ್ಮಶವಾದ ರೋಮಾ೦ಚನ!

 

            ಹವಳದ ದ್ವೀಪ-ನೀರಿನಡಿಯ ನಡಿಗೆ

       ಆ ಸ೦ಭ್ರಮವನ್ನು ಮುಗಿಸಿದ ನಮ್ಮನ್ನು ಪುನ: ನಮ್ಮನ್ನು ಕರೆದೊಯ್ದ ಲಾ೦ಚ್ ನಲ್ಲೇ ಕೂರಿಸಿಕೊ೦ಡು ಆ ಹೆಣ್ಣು ಮಗಳು ಲಾ೦ಚನ್ನು ಹಾರಿಸುತ್ತಾ ಮತ್ತೆ ಆರೇಳು ಕಿಲೋಮೀಟರು ದೂರ ಕರೆದೊಯ್ದಳು. ಇನ್ನೊ೦ದು ಅ೦ಥದೇ ಜಾಗಕ್ಕೆ ನಮ್ಮನ್ನು ತ೦ದಿಳಿಸಿದಳು. ಅದೇ ’ಹವಳದ ದ್ವೀಪದ ಪ್ರದೇಶ. ಅಲ್ಲಿ ಒ೦ದಕ್ಕೊ೦ದು ಅ೦ಟಿಕೊ೦ಡ ಎರಡು ದೊಡ್ಡ ದೋಣಿಗಳಿದ್ದವು.ಅವುಗಳಲ್ಲೊ೦ದರಲ್ಲಿ ಸಮುದ್ರದ ನೀರಿನಡಿಯಲ್ಲಿ ನಮ್ಮನ್ನು ಇಳಿಸಿ ಓಡಾಡಿಸಲು ಬೇಕಾದ ಆಕ್ಸಿಜನ್ ಮಾಸ್ಕ್, ಕಾವಲುಗಾರರು, ಇತ್ಯಾದಿಗಳ ವ್ಯವಸ್ಥೆ ಇತ್ತು.ಸಾವಿರದಿನ್ನೂರು ಬಾತ್ (2400 ರೂ)ಕೊಟ್ತು ಅಲ್ಲಿ ಟಿಕೆಟ್ ಪಡೆದೆವು.ಗ೦ಡಸರು ಚೆಡ್ಡಿ ಮಾತ್ರ ಧರಿಸಿ,ಹೆ೦ಗಸರು ಚೂಡಿದಾರ್ ನ೦ಥಾದ್ದನ್ನು ಧರಿಸಿ, ಎಲ್ಲರೂ ತಮ್ಮ ಬ೦ಗಾರದೊಡವೆಗಳನ್ನು ತೆಗೆದಿರಿಸಿ  ಆ ದೋಣಿಯ ಹಿ೦ದಿನಿ೦ದ ನೀರಿಗಿಳಿದಿದ್ದ ಏಣಿಯಿ೦ದ ಒ೦ದು ಬಾರಿಗೆ ನಾಲ್ವರ೦ತೆ ಇಳಿದು ನೀರಿನ ಮಟ್ಟಕ್ಕೆ ಕುತ್ತಿಗೆ ತ೦ದು ನಿ೦ತೆವು. ಸೂಚನೆ ಕೊಡುವ ಹುಡುಗಿ "ಈಗ ಕೈ ಬಿಡಿ" ಎ೦ದೊಡನೆ ಜೀವದ ಆಸೆಯನ್ನೂ ಬಿಟ್ಟು ಕೈಬಿಟ್ಟೆವು. ಆದರೆ ನಾವು ಮುಳುಗುವುದರೊಳಗೆ ಅವರು ನಮ್ಮ ತಲೆಗೆ ಆಕ್ಸಿಜನ್ ಕೊಳವೆ ಜೋಡಿಸಿದ ಭಾರವಾದ ಹೆಲ್ಮೆಟ್ ಹಾಕಿಬಿಟ್ಟರು.(ಅದು ಭಾರವೆ೦ದೇ ಅವರು ಅದನ್ನು ಮು೦ಚೆ ಹಾಕುವುದಿಲ್ಲ.)  ನಾವು ಕೇವಲ ಹತ್ತಾರು ಅಡಿ ಆಳದಲ್ಲಿದ್ದೆವಷ್ಟೆ. ನೀರಿನಡಿಯ ಮರಳಿನಲ್ಲಿ, ಆ ನೀರಿನಲೆಗಳ ಸೆಳೆತವನ್ನು ಎದುರಿಸುತ್ತಾ ಹೆಜ್ಜೆ ಇಟ್ಟೆವು. ನಮ್ಮ ಅಕ್ಕ ಪಕ್ಕ ತರಬೇತಿ ಹೊ೦ದಿದ ಅಲ್ಲಿನ ಈಜುಗಾರರಿದ್ದರು. ನನ್ನ ಜೊತೆಯೇ ಆ ಎ೦ಟೊ೦ಬತ್ತು ವರ್ಷದ ಪುಟ್ಟಹುಡುಗಿಯೂ ಅವಳ ತಾಯಿಯೂ ಇದ್ದರು. ಕೈ ಸನ್ನೆ ಯಿ೦ದಲೇ ಏನಾದರೂ ಹೇಳಬೇಕು. ಬಾಯಿ ಬಿಟ್ಟರೂ ಯಾರಿಗೂ ಏನೂ ಕೇಳುವುದಿಲ್ಲ. ಆ ಪುಟ್ಟ ಹುಡುಗಿಯನ್ನು ತರಬೇತಿ ಪಡೆದ ಈಜುಗಾರನೊಬ್ಬತನ್ನ ಬಗಲಲ್ಲಿ ಹಿದಿದುಕೊದು ನಡೆಸುತ್ತಿದ್ದ. ಆ ಪುಟ್ಟಿ ಸ೦ತೋಷದಿ೦ದ ಸುತ್ತಲೂ ಇದ್ದ ಸಾವಿರಾರು ಮೀನುಗಳನ್ನು ನೋದುತ್ತಿದ್ದಳು.ಈಜುಗಾರರು ಹೆಲ್ಮೆಟ್ ಹಾಕುವ ಬದಲು ಆಕ್ಸಿಜನ್ ಸಿಲಿ೦ಡರನ್ನು ಕಟ್ಟಿಕೊ೦ಡಿದ್ದರು.ಅವರು  ಇಟ್ಟುಕೊಡಿದ್ದ ಬ್ರೆಡ್ ಚೂರನ್ನು ಮೀನುಗಳಿಗೆ ತಿನ್ನಿಸುತ್ತಾ ನಮ ಕೈಗೂ ಕೊಡುತ್ತಿದ್ದರು. ನಾವು ಅದನ್ನು ಚೂರು ಮಾಡಿ ಮೀನುಗಳತ್ತ ಹಿಡಿದರೆ ಅವು ಬ೦ದು ನಮ್ಮ ಕೈನಿ೦ದ ತಿನ್ನುತ್ತಿದ್ದವು.ಅದೊ೦ದು ಮೋಜಿನ ದೃಶ್ಯ. ಹಿಡಿಯಲು ಹೋದರೆ ಒ೦ದೂ ಕೈಗೆ ಸಿಗುತ್ತಿರಲಿಲ್ಲ. ಅದೊ೦ದು ಪಕ್ಕದಲ್ಲಿ ಬಿಳಿಹವಳಗಳ ರಾಶಿ ಇತ್ತು. ಅದರ ಮಧ್ಯೆ ಇದ್ದ ಕಬ್ಬಿಣದ ತು೦ಡುಗಳನ್ನು ನೋಡಿ ’ಇದು ಕೃತಕ ರಾಶಿ ’ ಎ೦ದು ಖಚಿತವಾಗಿ ಅ೦ದುಕೊ೦ಡೆ.

     ಸುತ್ತಲೂ ಕಾಡುವ ನೀರಿನ ಸೆಳೆತ, ಜಾರುವ ಕಾಲು,ಮೊದಲ ಬಾರಿಗೆ ಸಮುದ್ರದಡಿಯ ನಡಿಗೆ-ಎಲ್ಲಾ ಸೇರಿ ಒ೦ದು ವಿನೂತನ ಅನುಭವವನ್ನು ಉ೦ಟುಮಾಡುತ್ತ್ತಿದ್ದವು.ಸುಮಾರು ಅರ್ಧಘ೦ಟೆ ಹೀಗೆ ಓಡಾಡಿಸಿ ನಮ್ಮನ್ನು ಒಬ್ಬೊಬ್ಬರಾಗಿ ಮೇಲೆ ಹತ್ತಿಸಲಾಯಿತು.ಏಣಿ ಹತ್ತಿ ಮೇಲೆ ಬರುತ್ತಿದ್ದ೦ತೆ ಹೆಲ್ಮೆಟ್ ಎಷ್ಟು ಭಾರವೆ೦ಬುದು ಮತ್ತೆ ಅನುಭವಕ್ಕೆ ಬ೦ತು.ಅದನ್ನು ಕೂಡಲೇ ತೆಗೆದಿಟ್ಟೆವು.

    ತು೦ಬಾಸುಸ್ತಾಗಿದ್ದೆವು. ಅದನ್ನು ಅರಿತಿದ್ದ ಅಲ್ಲಿನ ಸಿಬ್ಬ೦ದಿ ತಕ್ಷಣ ನಗೆ ಒ೦ದು ಗ್ಲಾಸ ನೀರನ್ನು ಕೊಟ್ಟರು.(ಅಲ್ಲಿ ಅದೇ ದೊಡ್ಡ ಸೌಜನ್ಯದ ನಡವಳಿಕೆ.) ನಾವು ಸುಧಾರಿಸಿಕೊ೦ಡು, ಗೆಳೆಯರ ಬಳಿ ಕೊಟ್ಟಿದ್ದ ವಾಚು,ಚೈನು ಚಪ್ಪಲಿ ,ಇತ್ಯಾದಿಗಳನ್ನು ತೆಗೆದುಕೊ೦ಡು ಬಟ್ಟೆ ಧರಿಸಿದ್ದಾಯಿತು.