ಒಂದು ’ಚರಕ’ದ ಕಥೆ!
ಒಂದು ’ಚರಕ’ದ ಕಥೆ!
ಈ ಬರಹವನ್ನು ಈಗ್ಗೆ ಎರಡು ವಾರಗಳ ಹಿಂದೆಯೇ ಬರೆಯಬೇಕಿತ್ತು. ಆದರೆ ಅದೇ ಸಮಯದಲ್ಲಿ ಅಕಸ್ಮಾತ್ತಾಗಿ ’ಸಮಾಜ ವಿಜ್ಞಾನಿ’ ಬಾಲಗಂಗಾಧರರೊಂದಿಗೆ ಮುಖಾಮುಖಿಯಾಗಬೇಕಾಗಿ ಬಂದು, ಅದನ್ನು ದಾಖಲಿಸುವ ತುರ್ತಿನಲ್ಲಿ ಆಗಲಿಲ್ಲ. ಈಗ ನಾನು ಬರೆಯ ಹೊರಟಿರುವುದು ಹೆಗ್ಗೋಡಿನ ’ಚರಕ’ದ ಬಗ್ಗೆ. ಎರಡು ವಾರಗಳ ಹಿಂದೆ, ಅಂದರೆ ಇದೇ ಜನವರಿ ೧೬, ೧೭ ಹಾಗೂ ೧೮ರಂದು ಅಲ್ಲಿ ನಡೆದ ’ಚರಕ ಉತ್ಸವ-೨೦೦೯’ರಲ್ಲಿ ಸಕ್ರಿಯವಾಗಿ ಪಾಲ್ಗೊಂಡ ನಾನು ಅದರ ಅರ್ಥಪೂರ್ಣತೆಯನ್ನೂ, ಸಂಭ್ರಮೋಲ್ಲಾಸಗಳನ್ನೂ ಆ ಸಂದರ್ಭದಲ್ಲೇ ದಾಖಲಿಸಬೇಕಿತ್ತು. ಅದನ್ನೀಗ ಮಾಡುತ್ತಿದ್ದೇನೆ.
ಹೆಗ್ಗೋಡು ಎಂದಾಕ್ಷಣ ನಮಗೆ ನೆನಪಾಗುವುದು ನೀನಾಸಂ. ಅದು ಸಹಜ ಕೂಡ. ಅದಕ್ಕೆ ಮೂರ್ನಾಲ್ಕು ದಶಕಗಳಲ್ಲಿ ಕಟ್ಟಿಕೊಂಡ ಖ್ಯಾತಿಯ ಹಿನ್ನೆಲೆಯಿದೆ. ಅದರ ಹಿಂದೆ ಕೆ.ವಿ.ಸುಬ್ಬಣ್ಣ ಎಂಬ ಧೀಮಂತರ ದಟ್ಟ ನೆನಪಿದೆ. ಮಲೆನಾಡಿನ ಮೂಲೆಯ ಕುಗ್ರಾಮವೊಂದನ್ನು ಕೇಂದ್ರವಾಗಿಸಿಕೊಂಡು ರಂಗಭೂಮಿ ಮತ್ತು ಚಲನಚಿತ್ರ ಸಂಸ್ಕೃತಿಗಳಿಗೆ ಸಂಬಂಧಿಸಿದಂತೆ ಅವರು ಮಾಡಿದ ಅಪೂರ್ವ ಕೆಲಸಗಳ ದಾಖಲೆಯಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಪ್ರತಿ ವರ್ಷ ಅದು ನಡೆಸುವ ’ಸಂಸ್ಕೃತಿ ಶಿಬಿರ’ದ ಅಡಿಯಲ್ಲಿ ದೇಶಾದ್ಯಂತ ವಿದ್ವಾಂಸರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಆಹ್ವಾನಿಸಿ, ಕರ್ನಾಟಕದಾದ್ಯಂತ ವಿವಿಧ ಹಿನ್ನೆಲೆ ಹಾಗೂ ವಯೋಮಾನಗಳ ಶಿಬಿರಾರ್ಥಿಗಳನ್ನು ಆಕರ್ಷಿಸಿ ನಡೆಸುವ ಚರ್ಚೆಗಳು, ನಾಟಕ-ಸಿನೆಮಾ ಪ್ರದರ್ಶನಗಳು ಒಂದು ಅಪೂರ್ವ ಸಾಂಸ್ಕೃತಿಕ ಘಟನೆಯೇ ಸರಿ. ಆದರೆ ಇಲ್ಲಿ ನಡೆಯುವ ಚರ್ಚೆಗಳ ವಿಷಯ, ಅವನ್ನು ಸಂಘಟಿಸುವ ರೀತಿ, ಅವುಗಳ ಹಿಂದಿನ ಅತಿ ಬೌದ್ಧಿಕತೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅದರ ಚಟುವಟಿಕೆಗಳ ಹಿಂದಿನ ಖಾಸಗಿತನ ಕೆಲವರ ಟೀಕೆಗೆ ಗುರಿಯಾಗಿರುವುದೂ ಉಂಟು.
- Read more about ಒಂದು ’ಚರಕ’ದ ಕಥೆ!
- 3 comments
- Log in or register to post comments