ಬಸವಣ್ಣನಾಗಬೇಕೆಂದು ಬಯಸಿದ ಯಡಿಯೂರಪ್ಪ ಅಮೆರಿಕದಲ್ಲಿ ಮೂಗಬಸವನಾದದ್ದು!
(ಎರಡು ವರ್ಷದ ಹಿಂದೆ ಆಗಿನ ಉಪಮುಖ್ಯಮಂತ್ರಿ ಯಡಿಯೂರಪ್ಪನವರು "ಅಕ್ಕ" ಸಮ್ಮೇಳನಕ್ಕೆ ಬಂದಿದ್ದಾಗ ಅವರು ಸಿಲಿಕಾನ್ ಕಣಿವೆಯಲ್ಲಿ ಭಾಗವಹಿಸಿದ್ದ ಕಾರ್ಯಕ್ರಮವೊಂದರ ವರದಿ ಇದು. ಈ ಮುಂಚೆ ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 22, 2006ರ ಸಂಚಿಕೆಯಲ್ಲಿ ಪ್ರಕಟವಾಗಿದೆ. ಈಗ ಇನ್ನೂ ದೊಡ್ಡ ದಂಡು ದಂಡೆತ್ತಿಕೊಂಡು "ಅಕ್ಕ 2008" ಕ್ಕೆ ಬರುತ್ತಿರುವ ಹೊತ್ತಿನಲ್ಲಿ, ಒಂದು ನೆನಪು.)
ಸದ್ಯದ ಸಂಕೀರ್ಣ ಜಾಗತೀಕರಣದ ಸವಾಲುಗಳನ್ನು ಎದುರಿಸಲು ನಾಡಿನ ಚುಕ್ಕಾಣಿ ಹಿಡಿದಿರುವ ನಮ್ಮ ಉಪ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ವಾರಿಗೆಯ ರಾಜಕಾರಿಣಿಗಳು ಹೇಗೆ ಅಸಮರ್ಥರು ಎಂದು ಯಡಿಯೂರಪ್ಪನವರು ಅಮೆರಿಕದ ಸಿಲಿಕಾನ್ ಕಣಿವೆಯಲ್ಲಿ ಭಾಗವಹಿಸಿದ ಸಮಾರಂಭದಲ್ಲಿ ದೃಷ್ಟಿಮಾಂದ್ಯರೂ ಕಾಣಬಲ್ಲಷ್ಟು ಸ್ಪಷ್ಟವಾಗಿ ಕಾಣುತ್ತಿತ್ತು.
TiE (The Indus Entrepreneurs) ಎನ್ನುವುದು ಅಮೆರಿಕದಲ್ಲಿರುವ ಭಾರತೀಯ ಉದ್ಯಮಿಗಳು 1992 ರಲ್ಲಿ ಹುಟ್ಟುಹಾಕಿದ ಒಂದು ಲಾಭರಹಿತ ಸಂಸ್ಥೆ. ಕರ್ನಾಟಕದ ಕುಮಾರ್ ಮಳವಳ್ಳಿ, ದೇಶ್ ದೇಶಪಾಂಡೆ, ಬಿ.ವಿ. ಜಗದೀಶ್ ಮುಂತಾದ ಯಶಸ್ವಿ ಉದ್ಯಮಿಗಳು ಇದರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಈ ಸಂಸ್ಥೆಯ ಮೂಲ ಉದ್ದೇಶ ಅಮೇರಿಕದಲ್ಲಿ ನೆಲಸಿರುವ ಭಾರತೀಯರಿಗೆ ಅವರೇನಾದರೂ ಹೊಸ ಉದ್ಯಮಗಳನ್ನು, ಕಂಪನಿಗಳನ್ನು ಸ್ಥಾಪಿಸಬೇಕು, ಅದಕ್ಕೆ ಬಂಡವಾಳವನ್ನು ಆಕರ್ಷಿಸಬೇಕು ಎನ್ನುವ ಉದ್ದೇಶವಿದ್ದಲ್ಲಿ, ಅವರಿಗೆ ಬೇಕಾದ ಎಲ್ಲಾ ರೀತಿಯ ಮಾರ್ಗದರ್ಶನ ನೀಡಲು, ತನ್ಮೂಲಕ ಹೆಚ್ಚು ಹೆಚ್ಚು ಭಾರತೀಯರು ಅಮೆರಿಕದ ಕಾರ್ಪೊರೇಟ್ ಜಗತ್ತಿನಲ್ಲಿ ಯಶಸ್ವಿ ಉದ್ಯಮಿಗಳಾಗಲು, ಸಹಾಯ ಮಾಡುತ್ತದೆ. ಅದರ ಜೊತೆಗೆ ಇಲ್ಲಿಯವರಿಗೆ ಭಾರತದಲ್ಲಿ ಬಂಡವಾಳ ತೊಡಗಿಸಲು ಇರುವ ಅವಕಾಶಗಳೇನು, ಯಾವ ಯಾವ ರಾಜ್ಯಗಳಲ್ಲಿ ಏನೇನು ಸೌಲಭ್ಯಗಳಿವೆ, ಹೆಚ್ಚಿನ ಬೆಳವಣಿಗೆಗೆ ಎಲ್ಲೆಲ್ಲಿ ಅವಕಾಶಗಳಿವೆ ಎಂದು ತಿಳಿಸಲು ಸೆಮಿನಾರುಗಳನ್ನು ಏರ್ಪಡಿಸುತ್ತದೆ. ತಮ್ಮ ತಮ್ಮ ರಾಜ್ಯಗಳಿಗೆ ಇಲ್ಲಿಂದ ಬಂಡವಾಳ ಆಕರ್ಷಿಸಲು ಬರುವ ಮಂತ್ರಿ, ಮುಖ್ಯಮಂತ್ರಿಗಳಂತಹ ನಿಯೋಗಗಳಿಗೆ ಅಮೆರಿಕದಲ್ಲಿ TiE ಒಂದು ಉತ್ತಮ ವೇದಿಕೆ.
ಕರ್ನಾಟಕದಿಂದ ಅಕ್ಕ ಸಮ್ಮೇಳನಕ್ಕೆ ಬಂದಿದ್ದ ನಿಯೋಗದೊಂದಿಗೆ ಸಿಲಿಕಾನ್ ಕಣಿವೆಯ TiE ಸದಸ್ಯರ ಮತ್ತು ಸ್ಥಳೀಯ ಕನ್ನಡಿಗರ ಭೇಟಿಯೊಂದನ್ನು ಅಕ್ಕ ಉಪಾಧ್ಯಕ್ಷರಾದ ಪ್ರಭುದೇವ್ರವರು ಏರ್ಪಡಿಸಿದ್ದರು. ಹಣಕಾಸು ಮಂತ್ರಿ ಯಡಿಯೂರಪ್ಪ, ಭಾರಿ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ಸಚಿವ ಕಟ್ಟ್ಟಾ ಸುಬ್ರಹ್ಮಣ್ಯ ನಾಯ್ಡು, ಸಣ್ಣ ಕೈಗಾರಿಕಾ ಸಚಿವ ಶಿವಾನಂದ ನಾಯಕ್, ವಾಣಿಜ್ಯ ಮತ್ತು ಕೈಗಾರಿಕೆಯ ಪ್ರಿನ್ಸಿಪಲ್ ಕಾರ್ಯದರ್ಶಿ ಕೆ.ಎಮ್.ಶಿವಕುಮಾರ್, ಮತ್ತು ಇತರ ಹಿರಿಕಿರಿಯ ಅಧಿಕಾರಿಗಳ ನಿಯೋಗ ಈ ಸಭೆಯಲ್ಲಿ ಪಾಲ್ಗೊಂಡಿತ್ತು. ನಮ್ಮ ಮಾನ್ಯ ಉಪಮುಖ್ಯಮಂತ್ರಿಗಳು ಸಭೆ ಹೇಗೆ ನಡೆಯುತ್ತದೆ ಎನ್ನುವುದರ ಬಗ್ಗೆ ಎಷ್ಟು ಚೆನ್ನಾಗಿ ಅರಿತುಕೊಂಡು ಬಂದಿದ್ದರೆಂದರೆ, ಸಭೆಗೆ ನಿಯೋಗದಲ್ಲಿನ ಎಲ್ಲರನ್ನೂ ಒಂದು ಸಲ ಪರಿಚಯಿಸಿದ ಪ್ರಭುದೇವ್, "ಈ ಕಾರ್ಯಕ್ರಮ ಹೇಗೆ ನಡೆಯುತ್ತದೆ ಎಂದರೆ, ಮೊದಲಿಗೆ ಗೌರವಾನ್ವಿತ ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಾತನಾಡುತ್ತಾರೆ, ನಂತರ ಕಟ್ಟಾ ಸುಬ್ರ..." ಎಂದು ಇನ್ನೂ ಮುಂದಕ್ಕೆ ಹೇಳುತ್ತಿದ್ದಂತೆ ತಮ್ಮ ಸಿದ್ಧಪಡಿಸಿದ ಭಾಷಣದೊಂದಿಗೆ ಯಡಿಯೂರಪ್ಪನವರು ಎದ್ದು ಪೋಡಿಯಮ್ಗೆ ನುಗ್ಗೇ ಬಿಟ್ಟರು! ಅದು ಎಷ್ಟು ಚೆನ್ನಾಗಿ ತಲೆಬಗ್ಗಿಸಿಕೊಂಡು ನುಗ್ಗಿದರೆಂದರೆ,