ಶಿಕ್ಷಣಸ್ಥ ದಲಿತರ ಹಾಡಿ ಕಳಸನಕೊಪ್ಪಕ್ಕೆ ಬೇಕಿದೆ ಜಲಸಾಕ್ಷರತೆಯ ಪೂರ್ಣಪಾಠ
ಒಂದು ಮಾತು. ಕಳಸನಕೊಪ್ಪದ ಜನರ ಈ ಸೋಲಿನ ಕಥೆ ಇತರರಿಗೆ ಪಾಠವಾಗಲಿ. ಸುಧಾರಣೆಗೆ ನಾಂದಿ ಹಾಡಲಿ. ಇಂತಹ ಪರಿಸರ ಅಸ್ನೇಹಿ ಪ್ರಯೋಗಗಳು ನಿಲ್ಲಲಿ. ಪರ್ಯಾಯ ಪ್ರಯೋಗಗಳ ಚಿಂತನ-ಮಂಥನ ನಡೆಯಲಿ ಎಂಬ ಉದ್ದೇಶದಿಂದ ಈ ಲೇಖನ.
~.~.~.~.~.~
ಗಾಂಧೀಜಿಯ ಗ್ರಾಮ ಸ್ವರಾಜ್ಯ ನನಸಾಗಿ ಮತ್ತೆ ಕನಸಾಗುವತ್ತ ಸಾಗಿದ ಅಪರೂಪದ ಅಧೋಮುಖ ಬೆಳವಣಿಗೆ ನಿಮ್ಮ ಗಮನಕ್ಕೆ ಬಂದಿದೆಯೇ? ಕಳಸನಕೊಪ್ಪದ ಜನ ಸಕಾಲದಲ್ಲಿ ಜಲಸಾಕ್ಷರರು ಆಗದ್ದರಿಂದ ಈ ಅಧೋಮುಖ ಪ್ರಗತಿ ಕಾಣಿಸಿದೆ. ಇನ್ನಾದರೂ ಅವರು ‘ಜಲಯೋಧ’ ರು ಆಗಬೇಕಿದೆ.
‘ಕಳಸನಕೊಪ್ಪ’ ಗಾಂಧೀಜಿ ಕಂಡ ವಿಧಾಯಕ ಕಾರ್ಯಗಳ ಮಾದರಿ ಕ್ಷೇತ್ರ. ಗ್ರಾಮ ಸ್ವರಾಜ್ಯದ ಕಲ್ಪನೆ ಸಾಕಾರಗೊಳಿಸಿ ಉತ್ತರ ಕರ್ನಾಟಕ ಭಾಗದಲ್ಲೇ ‘ಕಲಶ’ಪ್ರಾಯ ಗ್ರಾಮ ಎನಿಸಿತ್ತು. ಗ್ರಾಮ ಭಾರತದಲ್ಲಿರುವ ಜನ ಆರ್ಥಿಕವಾಗಿ ಸ್ವಾವಲಂಬಿಗಳಾದರೆ ದೇಶದ ಅಭಿವೃದ್ಧಿ ಕಟ್ಟಿಟ್ಟದ್ದು ಎಂಬುದಕ್ಕೆ ತಾಜಾ ನಿದರ್ಶನವಾಗಿತ್ತು. ಇದು ೨೦೦೪-೦೫ನೇ ಸಾಲಿನ ಕಥೆ.
ರೇಷ್ಮೆ ಇಲಾಖೆಯ ತಾಂತ್ರಿಕ ಸಹಾಯ, ಕೃಷಿ ವಿಶ್ವವಿದ್ಯಾಲಯದ ವಿಜ್ನಾನಿಗಳ ಸಲಹೆ, ಸೂಚನೆಗಳು ಹಾಗು ಸ್ವಂತದ್ದೇ ಸಹಕಾರ ಸಂಘದಿಂದ ಲಭ್ಯವಿರುವ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಕ್ರೋಢೀಕರಿಸಿಕೊಂಡು ಇವರು ಸ್ವಾವಲಂಬಿ ಜೀವನ ನಡೆಸಿದಂಥವರು. ರೇಷ್ಮೆ ಇಲಾಖೆಯ ಹಿರಿಯ ಅಧಿಕಾರಿ ಡಿ.ಎಚ್.ಅಳಗುಂಡಗಿ ಅವರ ಮಾರ್ಗದರ್ಶನದಲ್ಲಿ ೩೫ ಕೊಳವೆ ಬಾವಿಗಳನ್ನು ಕೊರೆಯಿಸಿಕೊಂಡು ೬೦೦ ಎಕರೆ ನೀರಾವರಿ ಮಾಡಿಕೊಂಡವರು. ಅಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ರೇಷ್ಮೆ ಬೆಳೆದವರು. ಇವರಿಗೆ ದಶಕಗಳ ಕಾಲ ಇದೊಂದೇ ಉದ್ಯೋಗವಾಗಿತ್ತು. ಮಕ್ಕಳು ಮಹಿಳೆಯರು ಎಲ್ಲರೂ ಇದರಲ್ಲಿ ತೊಡಗಿಸಿಕೊಂಡಿದ್ದರು.