ಬ್ರೋಚೇವಾರೆವರುರಾ ನಿನುವಿನಾ?
ಇದೇನಿದು, ಕನ್ನಡ ಬರಹಕ್ಕೆ ತೆಲುಗು ತಲೆಬರಹವೇ ಎಂದಿರಾ? ಕಾರಣವಿದೆ. ಇಂದು ಮೇ ೨೮ -ಮೈಸೂರು ವಾಸುದೇವಾಚಾರ್ಯರು ೧೮೬೫ರಲ್ಲಿ ಇದೇ ದಿನ ಹುಟ್ಟಿದ್ದು. ಮೈಸೂರು ವಾಸುದೇವಾಚಾರ್ಯ ಎಂದ ಕೂಡಲೆ, ನನಗೆ ನೆನಪಿಗೆ ಬರುವ ಕೃತಿ ಖಮಾಚ್ ರಾಗದ ಬ್ರೋಚೇವಾರೆವರುರಾ ಎನ್ನುವ ರಚನೆ. ಕೆ.ವಿಶ್ವನಾಥರ, ಮತ್ತು ಕೆ.ವಿ.ಮಹಾದೇವನ್ ಅಂತಹವರ ದಯದಿಂದ ಸಂಗೀತದ ಪರಿಚಯ ಇಲ್ಲದವರಿಗೂ, ಶಂಕರಾಭರಣಂ ಮೊದಲಾದ ತೆಲುಗು ಸಿನೆಮಾಗಳ ಮೂಲಕ ಶಾಸ್ತ್ರೀಯ ಸಂಗೀತದ ಅಲ್ಪ ಸ್ವಲ್ಪ ಪರಿಚಯವಾದದ್ದು, ಬ್ರೋಚೇವಾರೆವರುರಾ, ಸಾಮಜವರಗಮನ ಮೊದಲಾದ ಕೃತಿಗಳು ಎಲ್ಲರ ಬಾಯಲ್ಲೂ ನಲಿದಾಡಿದ್ದು ೮೦ರ ದಶಕದ ಸಂಗತಿ.
ಮೈಸೂರು ವಾಸುದೇವಾಚಾರ್ಯರು ಕರ್ನಾಟಕ ಸಂಗೀತದ ವಾಗ್ಗೇಯಕಾರರಲ್ಲಿ ಮೊದಲಸಾಲಿನಲ್ಲಿ ನಿಲ್ಲಬಲ್ಲಂತಹವರು. ತ್ಯಾಗರಾಜಾದಿ ಸಂಗೀತ ತ್ರಿಮೂರ್ತಿಗಳ ನಂತರ ಬರಬಲ್ಲ ಹೆಸರುಗಳಲ್ಲಿ ಮೊದಲದ್ದೇ ವಾಸುದೇವಾಚಾರ್ಯರದ್ದು ಎಂದರೂ ತಪ್ಪಿಲ್ಲ. ತ್ಯಾಗರಾಜರ ಶಿಷ್ಯ ಪರಂಪರೆಯಲ್ಲಿ ಬಂದ ವಾಸುದೇವಾಚಾರ್ಯರು, ಪಟ್ಟಣಂ ಸುಬ್ರಮಣ್ಯ ಅಯ್ಯರ್ ಅವರ ಪಟ್ಟ ಶಿಷ್ಯ.
ತ್ಯಾಗರಾಜರ ರೀತಿಯಲ್ಲಿ ರಚನೆ ಮಾಡಿದ ವಾಸುದೇವಾಚಾರ್ಯರು, ತಮ್ಮ ರಚನೆಗಳಿಗೆ ತ್ಯಾಗರಾಜರಂತೆಯೇ ಆಯ್ದದ್ದು ಸಂಸ್ಕೃತ ಹಾಗೂ ತೆಲುಗು ಭಾಷೆಗಳನ್ನು. ಅಲ್ಲದೆ, ಅವರಂತೆಯೇ ವಾಸುದೇವಾಚಾರ್ಯರೂ ಸ್ವನಾಮಮುದ್ರೆಯನ್ನೇ ಉಪಯೋಗಿಸಿದರು. ತ್ಯಾಗರಾಜರ ರಚನೆಗಳಲ್ಲಿ, ತ್ಯಾಗರಾಜ ಎಂಬ ಮುದ್ರೆ ಕಂಡುಬಂದರೆ, ವಾಸುದೇವಾಚಾರ್ಯರು ವಾಸುದೇವ ಅನ್ನುವ ಅಂಕಿತವನ್ನು ಉಪಯೋಗಿಸಿದ್ದಾರೆ.
- Read more about ಬ್ರೋಚೇವಾರೆವರುರಾ ನಿನುವಿನಾ?
- 5 comments
- Log in or register to post comments