ಉರಿಯ ನಾಲಗೆಯ ಕುರ್ತುಕೋಟಿ
ತೊಗಲ ನಾಲಗೆ ನಿಜವ ನುಡಿಯಲೆಳೆಸಿದರೆ ತಾ
ನಂಗೈಲಿ ಪ್ರಾಣಗಳ ಹಿಡಿಯಬೇಕು
ಇಲ್ಲದಿರೆ ನೀರಿನೊಲು ತಣ್ಣಗಿದ್ದವನದನು
ಉರಿಯ ನಾಲಗೆಯಿಂದ ನುಡಿಯಬೇಕು.
ಬೇಂದ್ರೆ ಪದ್ಯವೊಂದರ ಮೊದಲ ಸಾಲುಗಳು ಇವು. ಇವನ್ನು ನಾನು ಓದಿದ್ದು ಕೀರ್ತಿನಾಥ ಕುರ್ತುಕೋಟಿಯರ ಪ್ರಬಂಧವೊ೦ದರಲ್ಲಿ. ತೊಗಲ ನಾಲಗೆ ಹಾಗು ಉರಿಯ ನಾಲಗೆ ಕುರಿತ ಅವರ ವ್ಯಾಖ್ಯಾನ ನನ್ನ ಮನಸ್ಸನ್ನು ಸೂರೆಗೊ೦ಡಿತ್ತು. ಈಗ ಹೋದ ವಾರವಷ್ಟೇ ಕುರ್ತುಕೋಟಿಯವರು ನಿಧನರಾಗಿದ್ದಾರೆ. ಆ ಸುದ್ದಿ ತಂದ ಎದೆಯ ಭಾರದಲ್ಲಿ ಅವರ ಉರಿಯನಾಲಗೆ ಟಿಪ್ಪಣಿಗಳ ಪುಸ್ತಕ ತೆಗೆದು ಮತ್ತೆ ಓದತೊಡಗಿದೆ. ಅವರ ಬೇರೆ ಬೇರೆ ಪ್ರಬಂಧ ಟಿಪ್ಪಣಿಗಳು ಮತ್ತೆ ನನ್ನ ಮನಸ್ಸನ್ನು ಆವರಿಸಿತು-ಓದುತ್ತಾ ಹೋದಂತೆ ಬೇಂದ್ರೆಯವರ ಪದ್ಯದ ಸಾಲುಗಳು ಹೇಗೆ ಕುರ್ತುಕೋಟಿಯವರಿಗೇ ಸಲ್ಲುತ್ತದೆ ಅನ್ನಿಸಿತು. ಧರ್ಮದ ಹೆಸರಿನಲ್ಲಿ ನಡೆದಿರುವ ಹಿಂಸೆಯನ್ನು ಅವರು ತಣ್ಣಗೆ ಖಂಡಿಸುವ ರೀತಿ ನೋಡಿದರೆ ಈ ಮಾತು ಅರ್ಥವಾಗುತ್ತದೆ.
ತಮ್ಮ ಪ್ರಬಂಧವೊಂದರಲ್ಲಿ "ಪುರಾಣಕತೆಗಳನ್ನು ಭಾವನಾವಿಫುಲತೆಯಿಂದ ರಕ್ಷಿಸಿಕೊಳ್ಳಲು ಪ್ರಯತ್ನಮಾಡಿದರೆ ಅವು ಮರೆತು ಹೋಗುತ್ತವೆ ಅಥವಾ ಮರೆತುಹೋದಷ್ಟೂ ಒಳ್ಳೆಯದೇ. ನಮ್ಮ ನಂಬಿಕೆಗೆ ಕುತ್ತು ಬಂದರೆ ಅದರಿಂದುಂಟಾಗುವ ದಿಗ್ಭ್ರಮೆಯಲ್ಲಿ ನಾವು ಇನ್ನೊಬ್ಬರ ಪ್ರಾಣವನ್ನು ತೆಗೆಯಲು ಹಿಂದುಮುಂದು ನೋಡುವುದಿಲ್ಲ. ನಮ್ಮ ಪುರಾಣಗಳಿಗೆ ವೀರಾವೇಶದ ರಕ್ಷಣೆ ಬೇಕಾಗಿಲ್ಲ... ಅವುಗಳನ್ನು ಇತಿಹಾಸಗಳೆಂದು ಭ್ರಮಿಸಿದರೆ ಮತ್ತೊಂದು ರಕ್ತಪಾತಕ್ಕೆ ಎಡೆಮಾಡಿಕೊಡುತ್ತಿದ್ದೇವೆ" ಎಂದು ಹೇಳಿದ್ದಾರೆ. ಹೀಗೆನ್ನುವ ಕುರ್ತುಕೋಟಿಯವರು ನಿಜವಾಗಿಯೂ -ನೀರಿನೊಲು ತಣ್ಣಗಿದ್ದವರು-ನಿಜವನ್ನು ಉರಿಯ ನಾಲಗೆಯಿ೦ದ ನುಡಿದವರು. ನೀರು-ಉರಿಯನ್ನು ಒಟ್ಟಿಗೆ ದಕ್ಕಿಸಿಕೊಂಡವರು. ತಾನು ದಕ್ಕಿಸಿಕೊಂಡದ್ದನ್ನು ನಿರಾಳದಿಂದ ಹಂಚಿಕೊಂಡವರು.
- Read more about ಉರಿಯ ನಾಲಗೆಯ ಕುರ್ತುಕೋಟಿ
- 1 comment
- Log in or register to post comments