ಅಪರ ಭಟ್ಟ - ಲಲಿತ ಪ್ರಬಂಧ
ಅಪ್ಪಣ್ಣ ಭಟ್ಟರನ್ನು ಜನರು ಅಪರ ಭಟ್ಟರು ಎಂದೂ ಕರೆಯುತ್ತಿದ್ದರು. ಪ್ರೀತಿಯಿಂದ ಆ ರೀತಿ ಕರೆಯುತ್ತಿದ್ದರೋ ಏನೋ, ಆದರೂ ನನ್ನ ಪ್ರಕಾರ ಅಪ್ಪಣ್ಣ ಭಟ್ಟರು ಅಪರ ಕರ್ಮದಲ್ಲೇ ಜಾಸ್ತಿ ಸಂಪಾದಿಸುತ್ತಿದ್ದರಿಂದ ಮತ್ತು ಪೂರ್ವ ಪ್ರಯೋಗದ ಬಗ್ಗೆ ಜಾಸ್ತಿ ಒಲವು ಇಟ್ಟಿರದಿದ್ದರಿಂದ ಹಾಗೆನ್ನುತ್ತಿದರು ಎಂದು ತಿಳಿದಿದ್ದೇನೆ. ಇಲ್ಲಿ ಒಂದು ಸಣ್ಣ ಸ್ಪಷ್ಟೀಕರಣ ನೀಡಬಯಸುವೆ. ಅಪರ ಕರ್ಮ ಎಂದರೆ ವ್ಯಕ್ತಿ ಸತ್ತ ಮೇಲೆ ಹನ್ನೆರಡು ದಿನಗಳು ಮಾಡುವ ಅಂತ್ಯಕ್ರಿಯೆ. ವ್ಯಕ್ತಿ ಸತ್ತ ನಂತರ ಅವನ ಶವ ಸಂಸ್ಕಾರವಾದ ಬಳಿಕ ಸಿಗುವ ಅಸ್ತಿಯನ್ನು (ಬೂದಿ, ಮೂಳೆ) ನದಿಯಲ್ಲೋ ಅಥವಾ ಸಮುದ್ರದಲ್ಲೋ ಬಿಡುವರು. ನಂತರ ಆ ವ್ಯಕ್ತಿಯ ಆತ್ಮಕ್ಕೆ ಶಾಂತಿ ಸಿಗದೇ ಅಲ್ಲೇ ಓಡಾಡುತ್ತಿದೆ ಎನ್ನುವ ನಂಬಿಕೆಯಿಂದ ಆ ಆತ್ಮವನ್ನು ಒಂದು ಕಲ್ಲಿಗೆ ಆವಾಹನೆ (ಆಹ್ವಾನೆ - ಕರೆಯುವುದು) ಮಾಡುವರು. ಆ ಕಲ್ಲನ್ನು ಒಂದು ಕಡೆ ಇಟ್ಟು ಅದೇ ಸ್ಥಳದಲ್ಲಿಯೇ ಐದನೆಯ ಅಥವಾ ಆರನೆಯ ದಿನದಿಂದ ಆ ಪ್ರೇತಾತ್ಮಕ್ಕೆ ಶಾಂತಿ ದೊರಕಿಸಲು, ಮತ್ತು ದೇವ ಸ್ಥಾನಕ್ಕೆ ಕಳುಹಿಸಲು ಪ್ರಾರ್ಥಿಸುವರು. ಅದನ್ನೇ ಅಪರ ಕರ್ಮ ಎನ್ನುವರು. ಹತ್ತನೆಯ ದಿನ ನೆಂಟರುಗಳೆಲ್ಲರೂ ಆ ಕಲ್ಲಿಗೆ ನೀರು ಹಾಕುವರು. ಇದನ್ನು ಧರ್ಮೋದಕೆ ಎನ್ನುವರು. ಈ ಕ್ರಿಯೆಯಿಂದ ತಮಗೂ ಆ ಪ್ರೇತಾತ್ಮಕ್ಕೂ ಸಂಬಂಧ ಕಳೆದುಕೊಳ್ಳುವರು. ಸಮಾಜದಲ್ಲಿ ಈ ಕಾರ್ಯ ನಡೆಯಲೇ ಬೇಕೆಂಬ ಮೂಢ ನಂಬಿಕೆ ಬಂದಿರುವ ಕಾರಣಕ್ಕೋ ಏನೋ ಈ ಕ್ರಿಯೆ ಮಾಡಿಸುವ ಪುರೋಹಿತರು (ಪುರದ ಹಿತ ಬಯಸುವವರು?) ಹೆಚ್ಚಾಗಿ ಹಣ ಸುಲಿಯುವವರು. ಇನ್ನು ಪೂರ್ವ ಪ್ರಯೋಗ ಎಂದರೆ ದೇವತಾ ಕಾರ್ಯ ಮತ್ತು ನಾಮಕರಣ, ಮುಂಜಿ, ಮದುವೆ ಇತ್ಯಾದಿಗಳು. ಇದನ್ನು ಮಾಡಿಸಲು ಬಹಳಷ್ಟು ಪುರೋಹಿತರು ಸಿಗುವರು.
- Read more about ಅಪರ ಭಟ್ಟ - ಲಲಿತ ಪ್ರಬಂಧ
- Log in or register to post comments