ವಿಚಾರಣಾಬದ್ಧರಿಗೇಕೆ ರಾಜಮರ್ಯಾದೆ ಸಂಪ್ರದಾಯ?
ಕುಮಾರಿ ಜಯಲಲಿತ ಎಂಬೊಬ್ಬರು ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದರು. ವೈಯಕ್ತಿಕ ಲಂಚ ಪ್ರಕರಣವೊಂದರಲ್ಲಿ ನ್ಯಾಯಾಂಗ ತನಿಖೆ ಎದುರಿಸಲು ಅವರನ್ನು ನ್ಯಾಯಾಲಯ ಇಲ್ಲಿಗೆ ಕರೆದಿತ್ತು. ಈ ವೇಳೆಗೆ ಅವರು ನೆರೆ ರಾಜ್ಯದ ಮುಖ್ಯಮಂತ್ರಿಯೂ ಆಗಿಹೋಗಿದ್ದರೆನ್ನುವುದು ಇಲ್ಲಿ ಸಂಬಂಧಪಡದ ವಿಚಾರ. ವಿಚಾರಣೆಗೆಂದೇ ಏರ್ಪಡಿಸಿದ್ದ ಜೈಲು ಅಗ್ರಹಾರದ ಕೋರ್ಟಿನಲ್ಲಿ ಅವರಿಗೆ ಪ್ರಶ್ನೆ-ಪ್ರಶ್ನೆಗಳ ಸುರಿಮಳೆ; ವಿಚಾರಣಾಗ್ರಸ್ತರಿಗೆ ತಕ್ಕ ವಿನಯಭಾವದಿಂದ ಇವರ ಉತ್ತರ. ವಿಚಾರಣೆ ಪೂರ್ಣವಾಗಲಿಲ್ಲ. ಮುಂದಿನ ವಿಚಾರಣೆಗೊಂದು ದಿನಾಂಕ ಕೊಟ್ಟು ಕಳಿಸಿದ್ದಾರೆ. ಅದರೆ ಈ ಪ್ರಶ್ನೋತ್ತರಕ್ಕೂ ಇವರ ಮುಖ್ಯಮಂತ್ರಿತ್ವದ ಕಾರ್ಯಭಾರದ ಘನತೆಗೂ ಯಾವ ರೀತಿಯಲ್ಲೂ ಸಂಬಂಧವಿಲ್ಲ ಎನ್ನುವುದನ್ನು ಮರೆಯಬಾರದು. ಮತ್ತು ಮುಖ್ಯಮಂತ್ರಿ ಸ್ಥಾನಕ್ಕೆ ತಕ್ಕ ಬೇರಾವುದಾದರೂ ಗೌರವಾನ್ವಿತ ಕಾರ್ಯಕ್ರಮಕ್ಕೂ ರಾಜ್ಯ ಸರಕಾರ ಇವರನ್ನು ಕರೆದಿದ್ದಿಲ್ಲ.
ಗುರುತರ ರಕ್ಷಣೆ ಒದಗಿಸಬೇಕಾದ ಜವಾಬ್ದರಿಯನ್ನೇನೋ ರಾಜ್ಯ ಸರಕಾರ ಅಬ್ಬರದಿಂದಲೇ ನಿರ್ವಹಿಸಿದ್ದು ಸರಿ. ಆದರೆ ಕ್ಯಾಬಿನೆಟ್ ದರ್ಜೆಯ ಸಚಿರೊಬ್ಬರು ವಿಮಾನನಿಲ್ದಾಣಕ್ಕೆ ಹೋಗಿ ಸ್ವಾಗತಿಸಿ "ಶುಭ" ಕೊರಬೇಕಾಗಿತ್ತೇ; ಮುಖ್ಯಮಂತ್ರಿ ಖುದ್ದು ಹಾಜರಾಗಲಾರದ ಕಾರ್ಯಾಂತರಕ್ಕಾಗಿ ವಿಷಾದ ಸೂಚಿಸಬೇಕಾಗಿತ್ತೇ?
ನ್ಯಾಯಮೂರ್ತಿಗಳಮುಂದೆ ವಿನೀತರಾಗಿ ಕುಳಿತು ವೈಯಕ್ತಿಕ ಪ್ರಶ್ನೆಗಳಿಗೆ ಉತ್ತರಿಸುತಿದ್ದಷ್ಟು ಕಾಲದಲ್ಲಿ, ಸಹ ತಾತ್ತ್ವಿಕವಾಗಿ, ಒಂದು ರಾಜ್ಯದ ಮುಖ್ಯಮಂತ್ರಿತ್ವದ ಗತ್ತೂ ಇರತಕ್ಕುದಾಗಿರಲಿಲ್ಲ, ಅಲ್ಲವೇ?
Comments
ಉ: ವಿಚಾರಣಾಬದ್ಧರಿಗೇಕೆ ರಾಜಮರ್ಯಾದೆ ಸಂಪ್ರದಾಯ?
ಉ: ವಿಚಾರಣಾಬದ್ಧರಿಗೇಕೆ ರಾಜಮರ್ಯಾದೆ ಸಂಪ್ರದಾಯ?