ಸುಟ್ಟ ನವಿಲುಗಳ ದುರ್ವಾಸನೆಯಿಂದ ಕಂಪಿಸಿದ ಏಲಕ್ಕಿ ಕಂಪಿನ ನಾಡು.
ಏಲಕ್ಕಿ ಕಂಪಿನ ಹಾಗು ಏಲಕ್ಕಿ ಹಾರಗಳ ಸೊಂಪಿನ ನಾಡು ಹಾವೇರಿ. ಈಗ ಆ ಕಂಪಿನ ಬದಲು ಸುಟ್ಟುಕೊಂಡು ಸತ್ತ ನವಿಲುಗಳ ದುರ್ವಾಸನೆ ಅಲ್ಲಿ ಮನೆಮಾಡಿದೆ. ಈ ದುರ್ಘಟನೆಯಿಂದ ನೇಗಿಲಯೋಗಿ ತೀವ್ರ ಮನನೊಂದಿದ್ದಾನೆ. ಅಪರೋಕ್ಷವಾಗಿ ಈ ಘಟನೆಗೆ ತಾನೇ ಕಾರಣ ಎಂದು ಆತ ಮನಗಂಡಿರಲೂ ಸಾಕು. ೨೩ ಎಕರೆಯಲ್ಲಿ ಬೆಳೆದು, ೩ ಬಣಿವೆಗಳಲ್ಲಿ ಒಟ್ಟಲಾಗಿದ್ದ ಸೋಯಾಬಿನ್ ಬೆಳೆಗೆ ರಾತ್ರಿಯ ವೇಳೆ ೮ ಕ್ಕೂ ಹೆಚ್ಚು ನವಿಲುಗಳು ಲಗ್ಗೆ ಇಟ್ಟಿವೆ. ಆಕಸ್ಮಿಕವಾಗಿ ಈ ಬಣಿವೆಗಳಿಗೆ ಆಗ ಬೆಂಕಿ ತಗುಲಿದೆ. ಕಾಳು ಹೆಕ್ಕುವ ಭರದಲ್ಲಿ ಅಪಾಯ ಲೆಕ್ಕಿಸದೇ ಝಳಕ್ಕೆ ಒಡ್ಡಿಕೊಂಡು ೩ ನವಿಲುಗಳು ಸಾವನ್ನಪ್ಪಿದರೆ, ಉಪಾಯಗಾಣದೇ ಬಣಿವೆಯ ಮಧ್ಯೆ ಸಿಕ್ಕಿಕೊಂಡ ೨ ನವಿಲುಗಳು ಹೃದಯ ವಿದ್ರಾವಕ ರೀತಿಯಲ್ಲಿ ಸುಟ್ಟು ಕರಕಲಾಗಿ ಅಸುನೀಗಿವೆ.
ಈ ಮನಕಲಕುವ ಘಟನೆ ಜರುಗಿದ್ದು ಹಾವೇರಿ ಜಿಲ್ಲೆಯ, ಶಿಗ್ಗಾಂವಿ ತಾಲೂಕಿನ ಬನ್ನೂರು ಗ್ರಾಮದಲ್ಲಿ. ಕಳೆದ ಗುರುವಾರ ರಾತ್ರಿ ಈ ಘಟನೆ ಸಂಭವಿಸಿದೆ. ಶನಿವಾರ ಮಾಧ್ಯಮಗಳ ಗಮನಕ್ಕೆ ಬಂದಿದೆ. ಕೆಲ ಪತ್ರಿಕೆಗಳು ಈ ಘಟನೆಯ ಕುರಿತು ವರದಿ ಮಾಡಿವೆ. ಆದರೆ ಆ ವರದಿ ಹಾವೇರಿ ಆವೃತ್ತಿಗೆ ಮಾತ್ರ ಸೀಮಿತಗೊಳಿಸಿ ‘ಹೈಲಿ ಲೋಕಲೈಸ್ಡ್’ ಪ್ರಾಮುಖ್ಯತೆ ನೀಡಿ ಪ್ರಕಟಿಸಿವೆ. ರಾಷ್ಟ್ರಪಕ್ಷಿಗಳು ಬೆಂಕಿ ಆಕಸ್ಮಿಕದಲ್ಲಿ ಅಸುನೀಗಿದ ಸುದ್ದಿ ರಾಜ್ಯದ ಉಳಿದ ಭಾಗದ ಜನರಿಗೆ ‘ಅಪತ್ರಿಕಾ ವಾರ್ತೆ’ ಎಂದು ‘ಇವರೇ’ ಓದುಗರ ಪರವಾಗಿ ನಿರ್ಧರಿಸಿಬಿಟ್ಟಿದ್ದಾರೆ! ಹಾಗಾಗಿ ಈ ಸುದ್ದಿಯ ‘ಫಾಲೋ ಅಪ್’ ನಾವಂತೂ ನಿರೀಕ್ಷಿಸುವಂತಿಲ್ಲ!