ಹಾಲಿಗೆ ವಿಷ ಬೆರೆಸುವ ಸ್ಪರ್ಧಾತ್ಮಕ ಜಗತ್ತಿನ ಮುಕ್ತ ಮಾರುಕಟ್ಟೆ…!

ಹಾಲಿಗೆ ವಿಷ ಬೆರೆಸುವ ಸ್ಪರ್ಧಾತ್ಮಕ ಜಗತ್ತಿನ ಮುಕ್ತ ಮಾರುಕಟ್ಟೆ…!

" ಸಹಕಾರಿ ತತ್ವದ ಮೂಲ‌ ಆಶಯವೇ ಅನಾರೋಗ್ಯಕಾರಿ ಸ್ಪರ್ಧೆ ತಪ್ಪಿಸಿ ಸೌಹಾರ್ದ ವ್ಯಾಪಾರಿ ನೀತಿಯ ಪಾಲನೆ  ಮತ್ತು ಸರ್ವೋದಯ " ಹಾಗಾದರೆ ನಂದಿನಿ ಮತ್ತು ಅಮುಲ್ ವಿವಾದ ಅನಾವಶ್ಯಕ ಮತ್ತು ಪ್ರಚೋದನಾಕಾರಿ ಹಾಗು ನಿರ್ದಿಷ್ಟ ಒಳಮರ್ಮದ ಒತ್ತಾಯ ಪೂರ್ವಕ ಹೇರಿಕೆಯ ಜೊತೆಗೆ ಕುತಂತ್ರದ ಭಾಗ.

ಈ ವಿವಾದದ ಸುತ್ತ ಅನೇಕ ಚರ್ಚೆಗಳು ವಾದಗಳು ನಡೆಯುತ್ತಿವೆ. ಎರಡೂ ವಾದಗಳಿಗೆ ಪೂರಕವಾಗಿ ಅನೇಕ ಸರಿ ಎನಿಸುವ ಕಾರಣಗಳು ಸಿಗಬಹುದು. ಆದರೆ ವಿವಾದ ಹುಟ್ಟುಹಾಕಿದ ಮಹಾಶಯರ ಹಿಡನ್ ಅಜೆಂಡಾ ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ವಾಸ್ತವ ಅರ್ಥವಾಗುತ್ತದೆ. ಚರ್ಚೆಗಾಗಿ‌ ದ್ವೇಷ ಅಸೂಯೆಯಿಂದ ಯಾರ ಪರ ಅಥವಾ ವಿರೋಧ ಮಾತನಾಡಬಹುದಾದರು ಒಟ್ಟಾರೆ ಬಹುಸಂಖ್ಯೆಯ ರೈತ ಜನರ ಹಿತವನ್ನು ಗಮನಿಸಿದಾಗ...

ಹಾಲು ಬೇಕೆ ಹಾಲು… ಗುಜರಾತಿನ ಅಮುಲ್ ಹಾಲು...ಮುಕ್ತ ಮಾರುಕಟ್ಟೆಯಲ್ಲಿ ಲಭ್ಯ. ಆಕರ್ಷಕ ಪಾಕೆಟ್, ಹೆಚ್ಚು ಕಮೀಷನ್, ಡೋರ್ ಡೆಲಿವರಿ ಬೇಗ ಬೇಗ ಕೊಳ್ಳಿ. ರೈತರು ಆತ್ಮಹತ್ಯೆ ಮಾಡಿಕೊಂಡು ಸಾಯಲಿ, ನಮಗೆ ಚಿಂತೆ ಇಲ್ಲ, ಹಾಲು ಮಾರಿ ಬದುಕು ಕಟ್ಟಿಕೊಂಡ ಜನರು ಹಾಳಾಗಲಿ, ನಮಗೆ ಯೋಚನೆ ಇಲ್ಲ, ನಮ್ಮ ಮಣ್ಣಿನ ಸಂಸ್ಕೃತಿ ನಾಶವಾಗಲಿ, ನಮಗೆ ಬೇಸರವಿಲ್ಲ, ನಮ್ಮ ವ್ಯಾಪಾರ ಕುಸಿದು ಬೀಳಲಿ, ನಾವು ತಲೆಕೆಡಿಸಿಕೊಳ್ಳುವುದಿಲ್ಲ, ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಲಿ, ನಮಗೇನು ಆಗಬೇಕಾದ್ದಿಲ್ಲ,

ಏಕೆಂದರೆ ನಾವು ಅಮುಲ್ ಸಂಸ್ಥೆಯವರು, ಲಾಭ ಅಷ್ಟೇ ನಮಗೆ ಮುಖ್ಯ. ಬೆಳೆಯಬೇಕು, ಹೆಚ್ಚು ಲಾಭ ಮಾಡಬೇಕು, ಬೇರೆಯವರನ್ನು ತುಳಿಯಬೇಕು, ಇದು ಮುಕ್ತ ಸ್ಪರ್ಧಾತ್ಮಕ ಮಾರುಕಟ್ಟೆ. ತಾಖತ್ತು ಇರುವವರು ಮಾತ್ರ ಇಲ್ಲಿ ಉಳಿಯಬೇಕು. ಇಲ್ಲಿ ಯಾವುದೇ ಭಾವುಕತೆಗೆ ಅವಕಾಶ ಇಲ್ಲ. ದುಡ್ಡೇ ನಿಜವಾದ ಯಶಸ್ಸು. ಸಂಸ್ಕೃತಿ, ಸಹಕಾರ, ಸೌಜನ್ಯ, ಸಭ್ಯತೆ, ಮಮಕಾರ, ಕರುಣೆ, ಹೊಂದಾಣಿಕೆಗೆ ಅವಕಾಶವೇ ಇಲ್ಲ. ನಾವೇನು ದೇಶದ ಕಾನೂನಿಗೆ ವಿರುದ್ಧವಾಗಿ ಹೋಗುತ್ತಿಲ್ಲ. ಕಾನೂನಿನ ವ್ಯಾಪ್ತಿಯಲ್ಲಿಯೇ ನಮ್ಮ ವ್ಯಾಪಾರ ಅಭಿವೃದ್ಧಿ ಪಡಿಸುತ್ತಿದ್ದೇವೆ. ನೀವು ಸಹ ಹಾಗೆಯೇ ಮಾಡುವ ಪ್ರಯತ್ನ ಮಾಡುತ್ತಿದ್ದೀರಲ್ಲವೇ?

ಸ್ಪರ್ಧೆ, ವೇಗ, ಅಭಿವೃದ್ಧಿ, ದುರಾಸೆಯ ಫಲವೇ ಮಾನವೀಯ ಮೌಲ್ಯಗಳ ನಾಶ, ಮನುಷ್ಯ ಸಂಬಂಧಗಳ ಶಿಥಿಲತೆ, ಸರ್ಕಾರಗಳ ನಡುವೆ ಸಂಘರ್ಷ, ಒಕ್ಕೂಟ ವ್ಯವಸ್ಥೆಯ ಸರ್ವಾಧಿಕಾರಿ ಧೋರಣೆ. ಭಾರತದಲ್ಲಿ ಕ್ಷೀರ ಕ್ರಾಂತಿಯ ಎರಡು ಪ್ರಮುಖ ಕೇಂದ್ರಗಳು ಗುಜರಾತ್ ಮತ್ತು ಕರ್ನಾಟಕ. ಹಾಲು ಮತ್ತು ಹಾಲಿನ ಉತ್ಪಾದನೆಯ ಅನೇಕ ಉಪ ಪದಾರ್ಥಗಳ ತಯಾರಿಕೆಯಲ್ಲಿ, ಪಶುಸಂಗೋಪನೆ ಬದುಕಿನ ಅನಿವಾರ್ಯವಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದವು. ಇತರೆ ಅನೇಕ ರಾಜ್ಯಗಳಲ್ಲಿ ಹಾಲು ಒಕ್ಕೂಟಗಳು ಇದ್ದರೂ ಇವೆರಡು ರಾಜ್ಯಗಳು ದೇಶದ ಮತ್ತು ವಿದೇಶದ ಮಾರುಕಟ್ಟೆಯಲ್ಲಿ ಸಾಕಷ್ಟು ಹಿಡಿತ ಸಾಧಿಸಿವೆ.

ಹೇಗೋ ಸಹಕಾರಿ ತತ್ವದ ಅಡಿಯಲ್ಲಿ ಯಶಸ್ವಿಯಾಗಿ ಸಾಗುತ್ತಿರುವಾಗ ಇನ್ನೂ ಇನ್ನೂ ಬೇಕು ಎನ್ನುವ ದುರಾಸೆಯ ರಾಜಕಾರಣಿಗಳ ಮೂರ್ಖ ಕುತಂತ್ರದ ಫಲವಾಗಿ ವಿವಾದ ಭುಗಿಲೆದ್ದಿದೆ. ಅಮುಲ್ ಗೆ ಮಾರುಕಟ್ಟೆ ವಿಸ್ತರಿಸಲು ಈಗಾಗಲೇ  ಕರ್ನಾಟಕದ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿರುವ ಮತ್ತು ಜನರ ಜೀವನಾಡಿಯಾಗಿರುವ ನಂದಿನಿ ಹೊರತುಪಡಿಸಿ ಅನೇಕ ರಾಜ್ಯ - ದೇಶಗಳಿವೆ. ಅಲ್ಲಿ ತಮ್ಮ ಕಾರ್ಯತಂತ್ರ ರೂಪಿಸಬಹುದು. ಅದು ಬಿಟ್ಟು ಇಲ್ಲಿಗೆ ಅನೇಕ ಜನರ ವಿರೋಧದ ನಡುವೆ ಪ್ರವೇಶಿಸುವ ಸಣ್ಣತನ ಏಕೆ. 

ಈಗಾಗಲೇ ಅಮುಲ್ ಮತ್ತು ನಂದಿನಿ ನಡುವೆ ಒಂದು ಒಪ್ಪಂದ ಇದೆ. ಅಷ್ಟು ಸಾಕಲ್ಲವೇ. ಅಮುಲ್ ಗೆ ಇನ್ನೂ ದುರಾಸೆ ಏಕೆ. ವ್ಯಾಪಾರದ ಅಭಿವೃದ್ಧಿ ಎಂದರೆ ಎಲ್ಲಾ ಮೌಲ್ಯಗಳನ್ನು ಮರೆತು ಹಣವನ್ನೇ ಪ್ರಧಾನವಾಗಿ ಎಲ್ಲೆಂದರಲ್ಲಿ ನುಗ್ಗುವುದೇ. ಸಾಮಾನ್ಯ ಜ್ಞಾನ ಬೇಡವೇ? ಒಂದು ನೆನಪಿಡಿ. ಅಮುಲ್ ಸಂಸ್ಥೆಗೆ ಕರ್ನಾಟಕದ ಮಾರುಕಟ್ಟೆಗೆ ಸುಸಜ್ಜಿತ ರೀತಿಯಲ್ಲಿ ಸಂಪೂರ್ಣವಾಗಿ ಪ್ರವೇಶಿಸುವ ಎಲ್ಲಾ ಹಕ್ಕು ಮತ್ತು ಸ್ವಾತಂತ್ರ್ಯ ಸಂವಿಧಾನಾತ್ಮಕವಾಗಿ ಇದೆ.  ಅದನ್ನು ತಡೆಯಲು ಸಾಧ್ಯವಿಲ್ಲ. ಆದರೆ  ಕರ್ನಾಟಕದ ರೈತ ಮಕ್ಕಳ ಹಿತಾಸಕ್ತಿಗೆ ವಿರುದ್ಧವಾಗಿ ಇತರ ಅನೇಕ ವಿದೇಶಿ ವ್ಯಾಪಾರಿ ಸಂಸ್ಥೆಗಳ ರೀತಿಯಲ್ಲಿ ಇಲ್ಲಿ ಪ್ರವೇಶಿಸಿ ಭವಿಷ್ಯದಲ್ಲಿ ಕರ್ನಾಟಕದ ನಂದಿನಿಯನ್ನು ನಿಯಂತ್ರಣಕ್ಕೆ ಪಡೆಯುವ ಅಥವಾ ಧಕ್ಕೆ ಮಾಡುವ ವ್ಯಾಪಾರದ ನೀತಿ ಅವಶ್ಯವೇ ಮತ್ತು ಅನಿವಾರ್ಯವೇ ಎಂಬುದನ್ನು ಗುಜರಾತಿನ ಮಹಾಶಯರು ನೈತಿಕ ನೆಲೆಯಲ್ಲಿ ಯೋಚಿಸಬೇಕಿದೆ.

ಈ ತಕ್ಷಣದಲ್ಲಿ ಕರ್ನಾಟಕದ ಹಾಲು ಒಕ್ಕೂಟ ಅತ್ಯಂತ ಪ್ರಬಲವಾಗಿದೆ. ನಿಜ, ಆದರೆ ಮುಂದೆ ಗುಜರಾತಿನ ವ್ಯಾಪಾರಿ ಮನೋಭಾವದ ಜನರು ನಿಧಾನವಾಗಿ ಅದನ್ನು ದುರ್ಬಲಗೊಳಿಸುವುದು ಖಚಿತ.‌ ಅಂಬಾನಿ ಅದಾನಿಗಳ ಮುಂದೆ ಬಡ ಬೋರೆಗೌಡ ಬೆತ್ತಲಾಗುವುದನ್ನು ತಡೆಯುವ ಮುನ್ನೆಚ್ಚರಿಕೆಯಾಗಿ ಮಾತ್ರ ನಾವು ಅಮುಲ್ ಅನ್ನು ವಿರೋಧಿಸಬೇಕು. ಮುಕ್ತ ಮಾರುಕಟ್ಟೆಯ ಇತಿಹಾಸದಿಂದ ಕಲಿಯಬಹುದಾದ ಪಾಠವೇ ಇದು. ಧರ್ಮದ ಅಮಲಿನಲ್ಲಿ‌ ಎಲ್ಲವನ್ನೂ ಸಮರ್ಥಿಸುತ್ತಾ ಮುಕ್ತವಾಗುತ್ತಾ ಕೊನೆಗೆ ಎಲ್ಲರೂ ಬೆತ್ತಲಾಗುವ ಪರಿಸ್ಥಿತಿ ನಿರ್ಮಿಸಿಕೊಳ್ಳದಿರೋಣ.

ಅಮುಲ್ ಸಮರ್ಥಿಸುವ ವಾದಗಳಿಗೆ ಇದಕ್ಕಿಂತ ಉತ್ತಮ ಅಂಶಗಳು ಸಿಗಬಹುದು. ಆದರೆ ಅಂತಿಮ ಪರಿಣಾಮ ಮತ್ತು ಫಲಿತಾಂಶ ಮಾತ್ರ ನಾವು ಬೆತ್ತಲಾಗುವುದನ್ನು ತಡೆಯಲು ಸಾಧ್ಯವಿಲ್ಲ. ಮುಕ್ತ ಮಾರುಕಟ್ಟೆಯ ಹಣ ಕೇಂದ್ರಿತ ನೀತಿ ಇದೇ ಆಗಿರುತ್ತದೆ. ಮತ್ತೊಮ್ಮೆ ಕೂಲಂಕಷವಾಗಿ ದಯವಿಟ್ಟು ಯೋಚಿಸಿ. ನಿರ್ಧಾರ ನಿಮ್ಮ ವಿವೇಚನೆಗೆ ಬಿಟ್ಟದ್ದು...

-ವಿವೇಕಾನಂದ ಎಚ್ ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ