ಒಬ್ಬ ಧಡಿಯ ಮತ್ತು ನಮ್ಮ ಪಯಣ
ಮೊನ್ನೆ ಮೊನ್ನೆ ದೀಪಾವಳಿಯಂದು ನಾವೆಲ್ಲ ಮನೆಯವರು ಮೈಸೂರಿಗೆ ಹೋದೆವು ನಮ್ಮದೇ ಮಾರುತೀ ವ್ಯಾನಿನಲ್ಲಿ ಪುತ್ತೂರಿಂದ. ಮಡಿಕೇರಿ ತನಕ ಸಾಕೋ ಸಾಕು. ಚಂದ್ರನ ಕಡೆಗೆ ಸಾಗಿದ್ದೇವೆ. ಆ ಇಂದು ಮುಖದ ಮೇಲಿನ ಗುಂಡಿಗಳನ್ನೇ ನೆನಪಿಗೆ ತರುವ ಗುಂಡಿಗಳೋ ಗುಂಡಿಗಳು. ಒಂದು ಗುಂಡಿ ತಪ್ಪಿಸಿದರೆ ಇನ್ನೊಂದು ಅಲ್ಲಿ,, ಮತ್ತೊಂದು .. ಮಗದೊಂದು. ಯಾಕೆ ನಮ್ಮ ಜನಪ್ರತಿನಿಧಿಗಳಿಗೆ ಕಾಣುವುದಿಲ್ಲ? ವರ್ಷಗಳ ಕೆಳಗೆ ಸಂಪಾಝೆಯ ದಾರಿ ಬದಿಯ ನೂರಾರು ವರ್ಷಗಳಿಂದ ತಣ್ಣಗೆ ನೆರಳು ಕೊಡುತ್ತ ಸೊಂಪಾಗಿ ಬೆಳೆದ ಮರಗಳನ್ನೆಲ್ಲ ಕಡಿದ, ಕಡಿಯುತ್ತಿದ್ದ ರಭಸ ನೋಡಿದಾಗ ದಾರಿ ಸರಿಯಾಗಿ ಚತುಶ್ಪಥವೋ ಏನೋ ಎಲ್ಲ ಆಗುತ್ತದೆಂದು ತಿಳಿದಿದ್ದರೆ .. ಏನೂ ಆಗಿಲ್ಲ. ಆ ಮರ ಎಷ್ಟು ಜನರ ಮನೆಯ ಮಂಚವೋ, ಬಾಗಿಲು ದಾರಂದವೋ ಆಗಿ ಹೋಗಿರಬಹುದಲ್ಲ.. ಎನ್ನುವ ಆಲೋಚನೆ ಬಂದಾಗ ಮನಸ್ಸು ಭಾರವಾಯಿತು. ಮಡಿಕೇರಿ ದಾಟಿ ಕುಶಾಲನಗರದ ಬಳಿಕ ರಾಜ ಮಾರ್ಗ- ಇದ್ದರೆ ಹೀಗಿರಬೇಕು ಅನ್ನುವಂತ್ಯಿತ್ತು. ಪಟ್ಟ ಕಷ್ಟ ಮರೆಯಾಗಿ, ಎಲ್ಲ ಸರಿ ಇದೆ, ಎಂಥ ಸುಭಿಕ್ಷ ಎನ್ನುವ ಭಾವ.
ದೀಪಾವಳಿಯ ಸಂಬ್ರಮಗಳೆಲ್ಲ ಮುಗಿದು ಬೆಳ್ಲಂಬೆಳಗ್ಗೆ ಮೈಸೂರು ಬಿಟ್ಟು ಮನೆಯ ಕಡೆ ಹೊರಟೆವು. ಕಥೆ ಪ್ರಾರಂಭವಾಗುವುದೇ ಈಗ. ಅದೇನು?
ನೇರ ದಾರಿ. ಅಗಲ ರಸ್ತೆ. ವಾಹನ ದಟ್ಟಣೆ ಇಲ್ಲ. ಖುಷಿಯೋ ಖುಷಿ. ಅರುವತ್ತರ ಗಡಿ ದಾಟದ .. ಅಲ್ಲಲ್ಲ .. ದಾಟುವುದಕ್ಕೇ ಮರೆತು ಹೋದ ನನ್ನ ಕಾರು ನೂರರ ಗಡಿ ದಾಟಿ ಓಡುತ್ತಿತ್ತು. ಮನೆಯ ಕಡೆಗೆ. ಹಣಸೂರು ದಾಟಿ ಹತ್ತು ಕಿಮೀ ಬಂದಿದ್ದೆವು. ಒಂದು ದೊಡ್ದ ಉಬ್ಬು. ವ್ಯಾನ್ ಹಾರಿತು. ಬೀಳಲಿಲ್ಲ. ಎಂಜಿನ್ ನಿಂತಿತು, ಮತ್ತೆ ಎಂಜಿನ್ ಜೀವ ತಳೆಯಲೇ ಇಲ್ಲ .. ಏನು ಮಾಡಿದರೂ. ನನ್ನಾಕೆ. ಮಕ್ಕಳಿಗೆ ಆತಂಕ. ನನಗೋ ಇದನ್ನು, ಇವರನ್ನು ಏನು ಮಾಡಲಿ ಎಂಬ ಚಿಂತೆ !
ಆಗ ಬಂತು ಆ ಕಡೆಯಿಂದ ಕೆಂಪು ಮಾರುತಿ ವ್ಯಾನ್. ಧಡಿಯ ತಲೆ ಹೊರಗೆ ಚಾಚಿದ. ನಾನು ತೊಂದರೆ ಹೇಳಿದಾಗ ರಪ್ ಅಂತ ಬಂದ .. ಕೀ ಚಲಾಯಿಸಿದ "ಸರ್, ಟೈಮಿಂಗ್ ಬೆಲ್ಟ್ ಕಟ್ ಆಗಿದೆ. ನೀವೇನು ತಿಪ್ಪರ್ಲಾಗ ಹಾಕಿದರೂ ಹೊರಡದು. ನಾನು ಇವರನ್ನೆಲ್ಲ ಹುಣ್ಸೂರಿಗೆ ಬಿಟ್ಟು ಬರುತ್ತೇನೆ" ಅಂದ ಹೊರಟೇ ಬಿಟ್ಟ. ಹತ್ತು ನಿಮಿಷಗಳು ಯುಗವಾಗಿ ಕಳೆಯಿತು.
ಧಡಿಯ ಬಂದ. ತನ್ನೊಡನೆ ಐದಾರು ಸೈಕಲ್ ಟಯರುಗಳನ್ನೂ ತಂದಿದ್ದ. ನೋಡುವುದರೊಳಗೆ ಟಯರುಗಳನ್ನು ಒಂದರೊಳಗೊಂದರಂತೆ ಸಿಕ್ಕಿಸುತ್ತ ಜೋಡಿಸುತ್ತ ಸರಪಳಿ ಮಾಡಿ ನನ್ನ ವ್ಯಾನನ್ನು ಅವನದರ ಹಿಂಬಾಗಕ್ಕೆ ಸಿಕ್ಕಿಸಿದಾಗ ನನಗೆ ಆಶ್ಚರ್ಯ- ಥೇಟ್ ಎಡಿಸನ್, ಫ್ಯಾರಡೆಯಂತೆ ಆ ಕ್ಷಣ ನನಗೆ ಕಂಡ ಆ ಧಡಿಯ.
ಮತ್ತೆ ಹೊರಟಿತು - ಅಲ್ಲಿಂದ ನಿಧಾನಕ್ಕೆ ನಮ್ಮ ಮೆರವಣಿಗೆ ೧೫ಕಿಮೀ ದೂರದ ಪೆರಿಯಾ ಪಟ್ಣದೆಡೆಗೆ.
ಅಲ್ಲಿ ಪೇಟೆಯ ಹೊರವಲಯದಲ್ಲಿ ನಮ್ಮ ವಾಹನಗಳು ನಿಂತುವು. ನನ್ನಾಕೆಗೆ ಆತಂಕ. ನನಗೆ ಕತ್ತಲಾಗದೇ ಇದ್ದುದರಿಂದ ಜಗ ಗೆಲ್ಲಬಲ್ಲ ಧೈರ್ಯ!
- Read more about ಒಬ್ಬ ಧಡಿಯ ಮತ್ತು ನಮ್ಮ ಪಯಣ
- 10 comments
- Log in or register to post comments