0೯. ರಾಜನೂ-ಪಾಳೇಗಾರನೂ,
ಮತ್ತೆ ಜೀವನ ಸೊಗಸಾಯಿತು. ಎಂದಿನಂತೆ ಹಗಲೆಲ್ಲಾ ಅಡಗಿ ಕುಳಿತು, ರಾತ್ರಿ ಪಯಣಿಸುವ ನಮ್ಮ ಜೀವನಚಕ್ರದ ಪ್ರತಿ ಘಳಿಗೆಯೂ ಅಮೃತಮಯವಾಗಿತ್ತು. ಒಮ್ಮೆ ಬೆಳ್ಗಾಗುವ ಹೊತ್ತಿನಲ್ಲಿ ವಾರಸುದಾರರಿಲ್ಲದ ಚಿಟ್ಟುದೋಣಿಯೊಂದು ತೇಲುತ್ತಿರುವುದು ಕಣ್ಣಿಗೆ ಬಿತ್ತು. ಕೂಡಲೇ ನಾನು ಈಜುತ್ತಾ ಹೋಗಿ, ನಮ್ಮ ತೆಪ್ಪದ ಬಳಿಗೆ ತಂದೆ. ಆ ದಿನ ಬೆಳಗಾದ ಮೇಲೆ ಎಂದಿನಂತೆ ನನಗೆ ನಿದ್ರೆ ಬರಲಿಲ್ಲ. ಚಿಟ್ಟುದೋಣಿಯನ್ನು ಹತ್ತಿ ಸುತ್ತೆಲ್ಲಾ ನೋಡಿ ಬರಲು ಹೊರಟೆ. ಆ ಜಾಗದಲ್ಲಿ ನಾವು ಪಯಣಿಸುತ್ತಿದ್ದ ನದಿಗೆ ದೊಡ್ಡ ತೊರೆಯೊಂದು ಬಂದು ಸೇರಿತ್ತಿತ್ತು. ಆ ದೃಶ್ಯ ನಯನ ಮನೋಹರವಾಗಿತ್ತು. ಅದನ್ನೇ ನೋಡುತ್ತಾ, ಆ ತೊರೆಯಲ್ಲೇ ಸ್ವಲ್ಪ ಮೇಲೆ ಹೋದರೆ ಕಾಡು ಹಣ್ಣುಗಳೇನಾದರೂ ಸಿಗಬಹುದೆಂಬ ಆಶೆಯಿಂದ ಅಲ್ಲಿ ನೋಡಲು ಹೋದರೆ, ಆ ತೊರೆಗೆ ಯಾವುದೋ ರಸ್ತೆ ಬಂದು ಸೇರುತ್ತಿರುವುದು ಕಣ್ಣಿಗೆ ಬಿತ್ತು. ಆ ರಸ್ತೆಯಲ್ಲಿ ಇಬ್ಬರು ಓಡಿ ಬರುತ್ತಿರುವುದೂ ಕಾಣಿಸಿತು. ಅವರ ರೀತಿ ನೋಡಿದರೆ ಅವರು ನನ್ನನ್ನು ಅಟ್ಟಿಸಿಕೊಂಡು ಬರುತ್ತಿದ್ದಾರೇನೋ ಎನಿಸಿತ್ತಿತ್ತು. ಅಲ್ಲಿಂದ ಕೂಡಲೇ ಓಡಿಬಿಡಬೇಕೆಂದುಕೊಂಡು ಯೋಚಿಸುತ್ತಿರುವಾಗಲೇ ಅವರಲ್ಲೊಬ್ಬ, ನನ್ನನ್ನು ಕಂಡು "ಸಹಾಯ... ಸಹಾಯ..." ಎಂದು ಕೂಗಿದ. ಅದನ್ನು ನೋಡಿ ನನ್ನ ಅನುಮಾನ ದೂರವಾದರೂ, ಇವರಿಗೆ ಸಹಾಯ ಮಾಡುವುದೋ ಬಿಡುವುದೋ ದ್ವಂದ ಶುರುವಾಯಿತು. ಆ ಸ್ಥಿತಿಯಲ್ಲಿರುವಷ್ಟರಲ್ಲೇ ಅವರಿಬ್ಬರೂ ನನ್ನ ದೋಣಿಯ ಬಳಿ ಸಾರಿ, ಒಳ ಹಾರಿ "ದೂರ ಎಲ್ಲಾದರೂ ನಡಿಯಪ್ಪ.. ಬೇಗ...ಬೇಗ.." ಎಂದರು. ಮೂವರ ತೂಕಕ್ಕೆ ಆ ದೋಣಿ ಸಾಲದಾದರೂ ಅವರ ಪರಿಸ್ಥಿತಿಯೇನಿರಬಹುದೋ ಎಂದು ಯೋಚಿಸಿ ಏನೂ ಮಾತಾಡದೇ ಬೇಗ ಬೇಗ ಹುಟ್ಟು ಹಾಕಲಾರಂಭಿಸಿದೆ.
- Read more about 0೯. ರಾಜನೂ-ಪಾಳೇಗಾರನೂ,
- Log in or register to post comments