ಸಂಪದಕ್ಕೆ ಲಾಗ್ ಇನ್ ಆದಾಗಲೆಲ್ಲಾ, ರಂ . ಶ್ರೀ. ಮುಗಳಿಯವರ ಈ ಮಾತು 'ಅನುಭವಾಮೃತಗಳ'ಲ್ಲಿ ಕಣ್ಣಿಗೆ ಬೀಳುತ್ತಿತ್ತು. ಇದು ನನಗೆ ಬಹಳ ಪ್ರಿಯ ವಿಷಯಗಳಾದ ಕನ್ನಡ ಹಾಗೂ ಕರ್ನಾಟಕದ ಇತಿಹಾಸಗಳನ್ನು ನೆನಪಿಗೆ ತರುತ್ತಿದ್ದವು. ಕೆಲ ವರ್ಷಗಳ ಹಿಂದೆ ವಿದ್ಯಾರ್ಥಿಯಾಗಿದ್ದಾಗ ಆಗಾಗ, ವಾಚನಾಲಯಗಳಲ್ಲಿ ಓದಿದ್ದ, ಕನ್ನಡ ನುಡಿ, ಸಾಹಿತ್ಯದ ಬಗೆಗಿನ ಪುಸ್ತಕಗಳಿಂದ ನಾನು ತಿಳಿಕೊಂಡದ್ದನ್ನು ಬರೆಯೋಣವೆನಿಸಿದೆ. ಕರ್ನಾಟಕದ ಏಕೀಕರಣಕ್ಕಾಗಿ ನಡೆಯುತ್ತಿದ್ದ ಹೋರಾಟದ ಸಮಯದಲ್ಲಿ, ಶ್ರೀಯುತರುಗಳಾದ, ರಂ. ಶ್ರೀ. ಮುಗಳಿ, ಶಂಬಾ ಜೋಶಿ, ಆಲೂರು ವೆಂಕಟರಾಯರುಗಳ ಕೆಲವು ಕೃತಿಗಳನ್ನು ಓದಿದ್ದೆ. ಅವುಗಳಲ್ಲಿ, 'ಕಂನುಡಿಯ ಹುಟ್ಟು', 'ಕರ್ನಾಟಕ ಪರಂಪರೆ' ಎಂಬೆರೆಡು ಪುಸ್ತಕಗಳ ಹೆಸರು ನೆನಪಿದೆ. ಈ ಕೃತಿಗಳಲ್ಲಿ ಕೃತಿಕಾರರುಗಳು ಕನ್ನಡದ ಪ್ರಾಚೀನತೆಯ ಬಗ್ಗೆ ಹಾಗೂ ಅದರ ಹರಹಿನ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ.