ಉರಿದು ಬಿದ್ದ ಉಲ್ಕೆ-ಕಮಲಾ ದಾಸ್

ಉರಿದು ಬಿದ್ದ ಉಲ್ಕೆ-ಕಮಲಾ ದಾಸ್

ಬರಹ

“I was child, and later they
Told me I grew, for I became tall, my limbs
Swelled and one or two places sprouted hair.
When I asked for love, not knowing what else to ask
For, he drew a youth of sixteen into the
Bedroom and closed the door, He did not beat me
But my sad woman-body felt so beaten.
The weight of my breasts and womb crushed me.
I shrank Pitifully.
Then … I wore a shirt and my
Brother’s trousers, cut my hair short and ignored
My womanliness. Dress in sarees, be girl
Be wife, they said. Be embroiderer, be cook,
Be a quarreler with servants. Fit in. Oh,
Belong, cried the categorizers.”
ಹೀಗೆ ಧಡಲ್ ಧಡಲ್ ಎಂದು ಗುಡುಗಿನಂತೆ ಗುಡು ಗುಡುಸುತ್ತಾ ಆರ್ಭಟಿಸುತ್ತಾ ಸಾಗಿ ಬಂದು ಒಮ್ಮೆಲೆ ಸಿಡಿದು ಬೆಚ್ಚಿ ಬೀಳಿಸುವಂಥ ಸಾಲುಗಳನ್ನು ಬರೆಯುವ ತಾಕತ್ತಾದರು ಬೇರೆ ಯಾರಿಗಿತ್ತು-ಕಮಲಾ ದಾಸ್ನ್ನು ಬಿಟ್ಟರೆ? ಅವರ ಓರಿಗೆಯ ಲೇಖಕಿಯರೆಲ್ಲಾ ಇನ್ನೂ ಕಟಿಬದ್ಧ ಸಂಪ್ರದಾಯಸ್ಥ ಸಮಾಜದ ಮರ್ಯಾದೆಯ ಮುಸುಕಿನಡಿಯಲ್ಲಿಯೇ ಕುಳಿತುಕೊಂಡು ಸಾಮಾನ್ಯ ಸ್ತ್ರೀ ಸಂವೇದನೆಯಂಥ ವಿಷಯಗಳ ಬಗ್ಗೆ ಬರೆಯಲೂ ಸಹ ಮೀನ ಮೇಷ ಎಣಿಸುತ್ತಿರುವ ಸಂದರ್ಭದಲ್ಲಿ ಕಮಲಾ ದಾಸ್ ಅವರಿಗಿಂತ ಎಷ್ಟೋ ಹೆಜ್ಜೆ ಮುಂದೆ ಹೋಗಿ ಯಾರ ಮುಲಾಜಿಲ್ಲದೆ ಅತ್ಯಂತ ನಿರ್ಭಿಡೆಯಿಂದ ಸ್ತ್ರೀ ಲೈಂಗಿಕ ಸ್ವಾಂತಂತ್ರ್ಯದ ಬಗ್ಗೆ ಮೈ ಚಳಿ ಬಿಟ್ಟು ಬರೆದರು. ಆ ಮೂಲಕ ಬೆತ್ತಲಾದರು. ಹಾಗೆ ನೋಡಿದರೆ ಕಮಲಾ ದಾಸ್ ಬರಹದಲ್ಲಿ ಯಾವಾಗಲೂ ಬೆತ್ತಲಾದವರೇ! ಅವರಲ್ಲಿ ಮುಚ್ಚುಮರೆ ಎನ್ನುವದೇ ಇರಲಿಲ್ಲ!

ಅವರ ಬದುಕು ಸದಾ ಒಂದು ತೆರೆದಿಟ್ಟ ಪುಸ್ತಕವಾಗಿತ್ತು. ಆರಂಭದಿಂದ ಅಂತ್ಯದವರೆಗೆ ಯಾರಿಗೂ ಕೇರ್ ಮಾಡದೆ ತಮಗನಿಸಿದ್ದನ್ನು ಬರೆದರು ಮತ್ತು ಆ ಮೂಲಕ ತಮ್ಮ ಮುಂದಿನ ಪೀಳಿಗೆಯ ಲೇಖಕಿಯರಿಗೆ ಹೀಗೂ ಬರೆಯಬಹುದೆಂದು ತೋರಿಸಿಕೊಟ್ಟರು. ಇದಲ್ಲದೆ ಅವರು ಯಾವಾಗಲು ತಮ್ಮ ಸುತ್ತಮುತ್ತಲಿನವರಿಗಿಂತ ಒಂದೆರಡು ಹೆಜ್ಜೆ ಮುಂದೆ ಹೋಗಿ ತಮಗ ತೋಚಿದಂತೆ ಬದುಕಲು ಪ್ರಯತ್ನಿಸಿದರು ಮತ್ತು ಹಾಗೆ ಬದುಕಿದರು ಕೂಡ. ಈ ಒಂದು ವಿಷಯದಲ್ಲಿ ಮಾತ್ರವಲ್ಲ ಬಹಳಷ್ಟು ವಿಷಯಗಳಲ್ಲಿ ಅವರು ತಮ್ಮ ಸಮಕಾಲೀನರಿಗಿಂತ ಎಷ್ಟೋ ದಶಕಗಳಷ್ಟು ಮುಂದೆ ಇದ್ದರು. ಈ ಕಾರಣಕ್ಕಾಗಿಯೇ ಅವರು ಒಂದು ಕಡೆ ಸ್ತ್ರೀ ಸಮುದಾಯದ ಧ್ವನಿಯಾದರು, ಇನ್ನೊಂದೆಡೆ ತಮ್ಮ ಸುತ್ತಮುತ್ತಲಿನವರ ವಿರೋಧವನ್ನು ಕಟ್ಟಿಕೊಂಡು ಸಂಪ್ರದಾಯವಾದಿಗಳ ನಿದ್ದೆಯನ್ನು ಕೆಡಿಸಿದರು. ಇನ್ನು ಮುಂದೆ ಆ ಸ್ತ್ರೀ ಸಮುದಾಯದ ಧ್ವನಿಯಾಗುವವರು ಯಾರು? ಸಂಪ್ರದಾಯವಾದಿಗಳ ನಿದ್ದೆಯನ್ನು ಕೆಡಿಸುವವರು ಯಾರು? ಬಹುಶಃ ಯಾರೂ ಇಲ್ಲ! ಏಕೆಂದರೆ ಆ ತಾಕತ್ತು ಇದ್ದದ್ದು ಕಮಲಾವರಿಗೆ ಮಾತ್ರ! ಆರಂಭದಿಂದ ಅಂತ್ಯದವರೆಗೂ ಬರಹದಲ್ಲಿ ಮಾತ್ರವಲ್ಲ ತಮ್ಮ ಬದುಕಿನಲ್ಲೂ ಸಹ ಯಾರಿಗೂ ಜಗ್ಗದೆ ಕುಗ್ಗದೆ ಉರಿವ ಉಲ್ಕೆಯಾಗಿ ಬೇರೆಯವರನ್ನು ಬೆಚ್ಚಿಬೀಳಿಸುತ್ತಲೇ ಬದುಕಿದ ಕಮಲಾ ದಾಸ್ ಇನ್ನಿಲ್ಲ ಎಂದು ಒಪ್ಪಿಕೊಳ್ಲಲು ಮನಸ್ಸು ಹಿಂದೇಟು ಹಾಕುತ್ತಿದೆ. ನಾನಿರುವಾಗಲೇ ನನ್ನ ಬಗ್ಗೆ ಇದ್ದಕ್ಕಿದ್ದಂತೆ ನಾನೇ ಬರೆದುಕೊಂಡಾಗಿದೆ ಇನ್ನುಮುಂದೆ ನೀವು ಏನಾದರು ಬರೆದುಕೊಳ್ಳಿ ಬಿಟ್ಟಾದರು ಬಿಡಿ ಎಂಬಂತೆ ವನ್ಸ್ ಅಗೇನ್ ಯಾರಿಗೂ ಕೇರ್ ಮಾಡದೆ ನಮ್ಮನ್ನೆಲ್ಲ ಬಿಟ್ಟು ನಡೆದು ಹೋಗಿದ್ದಾರೆ.

ಅಸಲಿಗೆ ಕಮಲಾ ದಾಸ್ ನನಗೆ ತಮ್ಮ ಕಾವ್ಯದ ಮೂಲಕ ಪರಿಚಯವಾಗಿದ್ದೇ ನಾನು ಎಂ ಎ ಓದುತ್ತಿರುವಾಗ. ಅಲ್ಲಿಯವರೆಗೆ ನನಗೆ ಬರಿ ಸರೋಜಿನಿ ನಾಯ್ಡು, ತೋರು ದತ್, ಶಶಿ ದೇಶಪಾಂಡೆ, ಅನಿತಾ ದೇಸಾಯಿಯವರ ಬಗ್ಗೆ ಗೊತ್ತಿತ್ತೆ ಹೊರತು ಕಮಲಾ ದಾಸ್ ಬಗ್ಗೆ ಗೊತ್ತಿರಲಿಲ್ಲ. ಆದರೆ ಎಂ.ಎ ದಲ್ಲಿ “Indian Writing in English” ಎಂಬ ಪ್ರತ್ಯೇಕ ಪತ್ರಿಕೆಯೊಂದರ ಪಠ್ಯದಲ್ಲಿ ಇಬ್ಬರು ಕವಿಯತ್ರಿಯರ ಬಗ್ಗೆ ಓದಬೇಕಿತ್ತು-ಒಂದು ಸರೋಜಿನಿ ನಾಯ್ಡು ಇನ್ನೊಂದು ಕಮಲಾ ದಾಸ್. ಮೊದಲಿನಿಂದಲೂ ಸರೋಜಿನಿ ನಾಯ್ಡುವರ ಕಾವ್ಯದ ಪರಿಚಯ ಅಲ್ಪ ಸ್ವಲ್ಪವಾಗಿ ಗೊತ್ತಿದ್ದರಿಂದ ಹಾಗೂ ಅವರು ಹೆಚ್ಚು ಪೌರಾಣಿಕ ವಿಷಯಗಳ ಬಗ್ಗೆ, ಇಲ್ಲಿನ ಬೀದಿಗಳ ಬಗ್ಗೆ, ಬಜಾರುಗಳ ಬಗ್ಗೆ, ಬಳೆ ಮಾರುವವರ ಬಗ್ಗೆ, ಮೊಸರು ಮಾರುವವರ ಬಗ್ಗೆ, ಮೀನುಗಾರರ ಬಗ್ಗೆ ಬರೆಯುತ್ತಿದ್ದುದರಿಂದಲೋ ಏನೋ ಅವರ ಕಾವ್ಯದ ಝಲಕು ನನ್ನನ್ನು ಅಷ್ಟಾಗಿ ಆಕರ್ಷಿಸಿಲೇ ಇಲ್ಲ. ಇದಕ್ಕೆ ತದ್ವಿರುದ್ಧ ಎಂಬಂತೆ ಕಮಲಾ ದಾಸ್ರೋ ಕಾವ್ಯ ವಿಷಯದ ಆಯ್ಕೆಯಲ್ಲಿ ಭಿನ್ನವಾಗಿದ್ದು ಗುಂಡೇಟಿನಿಂದ ಹೊಡೆದಂತೆ ಬೆಚ್ಚಿಬೀಳಿಸುತ್ತಿದ್ದುದರಿಂದ ನಾನು ಅವರನ್ನು ಆಯ್ಕೆ ಮಾಡಿಕೊಳ್ಳಬೇಕಾಯಿತು. ನಮಗೆ ಇದ್ದಿದ್ದೇ ಮೂರು ಕವನಗಳು-An Introduction, The Freaks, ಹಾಗೂ My Grandmother’s House. ಮೊದಲೆರಡು ಕವನಗಳು ಸ್ತ್ರೀವಾದಿ ಕವನಗಳಾಗಿದ್ದರೆ ಕೊನೆಯದರಲ್ಲಿ ಅವಳ ಬಾಲ್ಯದ ನೆನಪುಗಳ ಆಗರವಿತ್ತು. ನಾನು ಮುಂದೆ ಅವರ ಬೇರೆ ಬೇರೆ ಕವನಗಳನ್ನು ಓದಿ ಅವರ ಕವನ ಕೌಶಲ್ಯಕ್ಕೆ ಬೆರಗಾಗಿದ್ದಿದೆ. ಅನಿಸಿದ್ದನ್ನು ಅಂದುಕೊಂಡಂತೆ ನೇರವಾಗಿ ಹೇಳುತ್ತಾ ಉಚ್ಛಾಟಿಸುತ್ತಾ ಸಾಗುವ ಅವರ ಕವನದ ಸಾಲುಗಳು ಬರಿ ಕವನದ ಸಾಲುಗಳಾಗಿರಲಿಲ್ಲ. ದಿಢೀರಂತ ಸ್ತ್ರೀ ಕುಲದ ಹೊಸತನಕ್ಕಾಗಿ ಹಾತೊರೆಯುವ ತುಡಿಯುವ ಆರ್ಭಟದ ಧ್ವನಿಗಳಾಗಿದ್ದವು. ಈ ಸಮಾಜದಲ್ಲಿ ಆರ್ಭಟಿಸದೇ ಹೋದರೆ ಹೆಣ್ಣುಮಕ್ಕಳಿಗೆ ನ್ಯಾಯ ಸಿಗದು ಎನ್ನುವದನ್ನು ಅವರು ಮನಗಂಡಂತಿತ್ತು. ಅದಕೆಂದೇ ಅವರ ಕಾವ್ಯ, ಲೇಖನಗಳು ಕೂಡ ಗುಡುಗು ಸಿಡಿಲುಗಳಂತೆ ಆರ್ಭಟಿಸುತ್ತಿದ್ದವು. ಸದಾ ಅವರ ಲೇಖನಿ ಕತ್ತಿಯಷ್ಟೇ ಹರಿತವಾಗಿರುತ್ತಿತ್ತು.

ಕಮಲಾ ದಾಸ್ ಬರೆಯತೊಡಗಿದ್ದೇ ಮದುವೆಯಾದ ಮೇಲೆ. ಅದಕ್ಕೆ ಅವರ ಗಂಡನ ಪ್ರೋತ್ಸಾಹವಿದ್ದರೂ ಅದರಲ್ಲಿ ಮನೆಗೆ ಒಂದಿಷ್ಟು ಅಡಿಷನಲ್ ಇನ್ಕಂ ಆಗುತ್ತದಲ್ಲ ಎನ್ನುವ ಅವರ ದೂರಾಲೋಚನೆಯಿತ್ತು. ಕಮಲಾ ದಾಸ್ವಸರೇ ಹೇಳುವಂತೆ ಅವರ ಬರವಣಿಗೆ ಶುರುವಾಗುತ್ತಿದ್ದುದೇ ರಾತ್ರಿ ಎಲ್ಲರೂ ಉಂಡು ಮಲಗಿದ ಮೇಲೆ. ಹಗಲು ಹೊತ್ತು ಮನೆಗೆಲಸ, ಮಕ್ಕಳ ಆರೈಕೆ ಅದು ಇದೂಂತ ಸಮಯ ಕಳೆದು ಬರೆಯಲು ಬಿಡುವಾಗುತ್ತಿದ್ದುದೇ ರಾತ್ರಿ ವೇಳೆಯಲ್ಲಿ. ಇರುವ ಚಿಕ್ಕ ಮನೆಯಲ್ಲಿ ಅಡುಗೆಮನೆಯೇ ಪ್ರಶಸ್ತವಾದ ಜಾಗವಾಗಿದ್ದರಿಂದ ಅಲ್ಲಿಯೇ ಕುಳಿತುಕೊಂಡು ತರಕಾರಿ ಕತ್ತರಿಸಲೆಂದಿಟ್ಟಿದ್ದ ಟೇಬಲ್ನ್ನೇ ಉಪಯೋಗಿಸಿಕೊಂಡು ಬರೆದರು. ಆದರೂ ಅವರ ಸಾಹಿತ್ಯದೆಲ್ಲೆಲ್ಲೂ ಅಡುಗೆ ಮನೆಯ ವಾಸನೆಯಾಗಲಿ ಅದರ ಛಾಯೆಯಾಗಲಿ ಕಾಣಿಸಲಿಲ್ಲ. ಅದೇನಿದ್ದರೂ ಅಡುಗೆ ಮನೆಯನ್ನು ಬಿಟ್ಟು ಮಾರು ದೂರ ಸಾಗಿತ್ತು. ಏಕ ಕಾಲಕ್ಕೆ ಮಲಯಾಳಂ ಹಾಗೂ ಇಂಗ್ಲೀಷನಲ್ಲಿ ಬರೆಯುತ್ತಾ ಹೋದರು. ೧೯೬೪ ರಲ್ಲಿ “The Sirens” ಹಾಗೂ ೧೯೬೫ ರಲ್ಲಿ “Summer in Calcutta” ಎನ್ನುವ ಕವನ ಸಂಕಲನಗಳನ್ನು ಹೊರತಂದರು. ಅದರಲ್ಲಿ ಪ್ರೀತಿ, ಪ್ರೇಮ ಅದರಿಂದುಂಟಾಗುವ ನೋವು ಹತಾಶೆ ಹಾಗೂ ಸ್ತ್ರೀ ಲೈಂಗಿಕ ವಿಷಯಗಳ ಬಗ್ಗೆ ಬರೆದರು. ಓದುಗರು ಮೊದ ಮೊದಲು ಅನುಕಂಪದಿಂದ ಸ್ಪಂದಿಸಿದರೆ ಬರು ಬರುತ್ತಾ ಅವರ ಅತಿಯಾದ ಮುಕ್ತತೆಯನ್ನು ಟೀಕಿಸುತ್ತಾ ಬಂದರು. ಆದರೆ ಇದ್ಯಾವುದಕ್ಕೆ ಜಗ್ಗದೆ ಕಮಲಾ ತಮ್ಮ ಪಾಡಿಗೆ ತಾವು ಬರೆಯುತ್ತಾ ಹೋದರು. ತದನಂತರದಲ್ಲಿ ಅವರು ಕಾವ್ಯ ಬರೆಯುವದನ್ನು ಕಡಿಮೆ ಮಾಡಿದರು. ಅದಕ್ಕೆ ಅವರು ಕೊಟ್ಟ ಕಾರಣ “ಈ ದೇಶದಲ್ಲಿ ಕಾವ್ಯ ಅಷ್ಟು ಸಲೀಸಾಗಿ ಮಾರಾಟವಾಗಲಾರದು” ಎಂದು. ಈ ಸಂದರ್ಭದಲ್ಲಿಯೇ ಅವರು ಕಾವ್ಯ ಪ್ರಾಕಾರದಿಂದ ಗದ್ಯ ಪ್ರಾಕಾರಕ್ಕೆ ಹೊರಳಿ ಕತೆ, ಕಾದಂಬರಿಗಳನ್ನು ಬರೆದರು.

ಕಮಲಾ ದಾಸ್ ತಾವು ಬಳಸುವ ಭಾಷೆಯಲ್ಲಿ ಹಾಗೂ ಪದಗಳ ಆಯ್ಕೆಯಲ್ಲಿ ತೀರ ಜುಗ್ಗರಾಗಿದ್ದರು ಎಂಬುದು ವಿಮರ್ಶಕರ ಅಭಿಪ್ರಾಯವಾಗಿತ್ತು. ಅದಲ್ಲದೆ ಅವರು ಕಾವ್ಯದ ಇತಿ-ಮಿತಿಗಳನ್ನು ದಾಟಿ ಬರೆದರು ಎಂಬುದು ಅವರ ಮೇಲಿದ್ದ ಆಪಾದನೆಯಾಗಿತ್ತು. ಆದರೆ ನನಗನಿಸಿದಂತೆ ಕಮಲಾವರು ಏನನ್ನು ಹೇಳಬೇಕೋ ಎಷ್ಟನ್ನು ಹೇಳಬೇಕೋ ಅಷ್ಟನ್ನು ಮಾತ್ರ ಅತ್ಯಂತ ಸರಳವಾಗಿ, ನೇರವಾಗಿ ಯಾವುದೇ ಪ್ರತಿಮೆಗಳನ್ನಾಗಲಿ, ಸಂಕೇತಗಳನ್ನಾಗಲಿ ಬಳಸದೆ ಎಲ್ಲರಿಗೂ ಅರ್ಥವಾಗುವಂತೆ ಸ್ಪಷ್ಟವಾಗಿ ಹೇಳಿದರು. ಬಹುಶಃ ಹೀಗೆ ಹೇಳಿದ್ದರಿಂದಲೋ ಏನೋ ಅವರು ಎಲ್ಲರಿಗೂ ಅರ್ಥವಾಗಿ ಎಲ್ಲರೂ ಅವರ ಬಗ್ಗೆ ತಲೆಗೊಂದು ಮಾತಾಡುವಂತಾಯಿತು.

ತಮ್ಮ ೪೨ನೇ ವಯಸ್ಸಿನಲ್ಲಿ “My Story” ಎನ್ನುವ ಆತ್ಮಕತೆ ಬರೆಯುವದರ ಮೂಲಕ ಅದುವರೆಗೂ ತಮ್ಮ ಎದೆಯೊಳಗೆ ಬಚ್ಚಿಟ್ಟುಕೊಂಡಿದ್ದ ರಹಸ್ಯಗಳನ್ನು ಬಿಚ್ಚಿಟ್ಟು ತಮ್ಮ ಸುತ್ತಮುತ್ತಲಿನವರನ್ನು ದಿಗ್ಬ್ರಮೆಗೊಳಿಸಿದರು. ತಮ್ಮ ಗಂಡನೊಟ್ಟಿಗಿನ ದಣಿದ ಸಂಬಂಧದ ಬಗ್ಗೆ, ಮತ್ತು ಅವರ ಇತರ ಗಂಡಸರೊಂದಿಗಿನ ಸಂಬಂಧಗಳ ಬಗ್ಗೆ ಯಾವುದೇ ಮುಚ್ಚುಮರೆಯಿಲ್ಲದೆ ಹೇಳಿಕೊಂಡು ಬಿರುಗಾಳಿಯನ್ನೇ ಎಬ್ಬಿಸಿದರು. ಪುರುಷರು ವಿವಾಹೇತರ ಸಂಬಂಧಗಳನ್ನು ಇಟ್ಟುಕೊಳ್ಳುವದಾದರೆ ಸ್ತ್ರೀಯರೂ ಏಕೆ ಇಟ್ಟುಕೊಳ್ಳಬಾರದು ಎಂದು ಹೇಳುವದರ ಮೂಲಕ ತಮ್ಮ ಕಾರ್ಯವನ್ನು ಸಮರ್ಥಿಸಿಕೊಂಡರು. ಇದ್ಯಾವ ಸೀಮೆಯ ನ್ಯಾಯ ಹೆಣ್ಣಿಗೊಂದು ನಡವಳಿಕೆ? ಗಂಡಿಗೊಂದು ನಡವಳಿಕೆ? ಎಂದು ಪ್ರಶ್ನಿಸಿ ಸಂಪ್ರದಾಯವಾದಿಗಳ ನಿದ್ದೆ ಕೆಡಿಸಿದರು. ಈಗಾಗಲೇ ಕೆಲವು ಶ್ರೀಮಂತ ಹೆಂಗಸರು ಬಾಹ್ಯ ಸಂಬಧಗಳನ್ನು ಇಟ್ಟುಕೊಂಡಿದ್ದರಿಂದ ಅದನ್ನೆಲ್ಲಿ ಈಕೆ ಬಯಲಿಗೆಳೆದು ಬಿಡುತ್ತಾಳೆಂದು ಹೆದರಿ ಅವರನ್ನು ಮಾಟ ಮಂತ್ರಗಳ ಮೂಲಕ ಕೊಲ್ಲಲು ಹೋಗಿದ್ದುಂಟು.

ಕಮಲಾ ದಾಸ್ ನೇರ ನುಡಿಗೆ ನಡೆಗೆ ಹೆಸರಾಗಿದ್ದರೂ ಒಂದೊಂದು ಸಾರಿ ಅವರು ಬದುಕಿನ ರೀತಿ ರಿವಾಜುಗಳು ವಿಚಿತ್ರವಾಗಿದ್ದವು. ತಮ್ಮ ಕಾವ್ಯದಲ್ಲಿ, ಬರಹಗಳಲ್ಲಿ ಅಷ್ಟೊಂದು assertive, bold, revolutionary ಯಾಗಿದ್ದ ಅವರು ವಯಸ್ಸಿನಲ್ಲಿ ತೀರ ದೊಡ್ಡವರಾದ ತಮ್ಮ ಗಂಡನೊಂದಿಗೆ ಸಾಕಷ್ಟು ಬಿನ್ನಾಭಿಪ್ರಾಯವಿದ್ದರೂ ಹಾಗೂ ಆ ಸಂಬಂಧ ಕಿತ್ತು ಹೋಗುವಷ್ಟರ ಮಟ್ಟಕ್ಕೆ ಬಂದರೂ ಅವರನ್ನು ಒಪ್ಪಿಕೊಂಡು ನಡೆದರೆ ವಿನಃ ಆ ವೈವಾಹಿಕ ಜೀವನದಿಂದ ಹೊರಬರಲೇ ಇಲ್ಲ. ಅಂದರೆ ಬೇರೆಯವರಿಗೆ ಬದನೆಕಾಯಿ ತಿನ್ನುವ ಬೋಧನೆ ನೀಡಿ ತಾವು ಮಾತ್ರ ಅದರಿಂದ ದೂರವುಳಿದರು. ಒಂದೊಂದು ಸಾರಿ ಕಟಿಬದ್ಧ ಸಮಾಜವನ್ನು ಪ್ರಶ್ನಿಸುತ್ತಲೇ ಅದನ್ನು ಟಿಕಿಸುತ್ತಲೇ ಅದರೊಟ್ಟಿಗೆ ರಾಜಿ ಮಾಡಿಕೊಂಡು ಬದುಕಿದರು. ತಮ್ಮ ಬರಹಗಳಲ್ಲಿ ಅಷ್ಟೊಂದು assertive, bold ಹಾಗು independent ಆಗಿದ್ದ ಅವರು ಕೊನೆ ಕೊನೆಯಲ್ಲಿ ತಮ್ಮ ಗಂಡನ ಮೇಲೆ ತೀರ ಅವಲಂಬಿತರಾದರು. ಅವರೇ ಹೇಳುವಂತೆ ಗಂಡ ಸತ್ತ ಮೇಲೆ ತೀರ ಒಂಟಿತನ ಅನುಭವಿಸಿದ್ದಿದೆ ಹಾಗೂ ಗಂಡ ಸತ್ತ ಹೆಣ್ಣನ್ನು ಇಂದಿಗೂ ಈ ಸಮಾಜ ನಡೆಸಿಕೊಳ್ಳುವ ರೀತಿಗೆ ಬೇಸರಪಟ್ಟಿದ್ದಿದೆ. ಅಂದರೆ ಹೆಣ್ಣಿಗೆ ಗಂಡಿನಾಸರೆಯಿಲ್ಲದೆ ಈ ಸಮಾಜದಲ್ಲಿ ಬದುಕುವದು ದುಸ್ಸಾಧ್ಯ ಎಂಬುದು ಆಕೆಗೆ ಕೊನೆಕೊನೆಗೆ ಮನವರಿಕೆಯಾಗಿತ್ತೆ? ಗೊತ್ತಿಲ್ಲ. ಅವರ ವ್ಯಕ್ತಿತ್ವವೇ ಅಂಥದು. ಯಾರ ಕೈಗೂ ಸಿಗದಂಥದು. ಬರಿ ಗೋಜಲು ಗೋಜಲು!

ಕಮಲಾ ದಾಸ್ ವಿವಾದಗಳಿಗೆ ಮತ್ತೊಂದು ಹೆಸರು. ವಿವಾದಗಳೇ ಇವರನ್ನು ಹುಡುಕಿಕೊಂಡು ಬರುತ್ತಿದ್ದವೋ ಅಥವಾ ಅವರೇ ವಿವಾದಗಳನ್ನು ಹುಡುಕಿಕೊಂಡು ಹೋಗುತ್ತಿದ್ದರೋ ಗೊತ್ತಿಲ್ಲ ಸದಾ ಒಂದಲ್ಲ ಒಂದು ವಿವಾದದಲ್ಲಿ ಸಿಲುಕಿರುತ್ತಿದ್ದರು. ಒಂದೊಂದು ಸಾರಿ ಏನೋ ಒಂದು ಹೇಳಿಕೆಯನ್ನು ನೀಡಿ ತದನಂತರದಲ್ಲಿ ಅದಕ್ಕೆ ತದ್ವಿರುದ್ಧವಾದ ಇನ್ನೊಂದು ಹೇಳಿಕೆಯನ್ನು ನೀಡುವದರ ಮೂಲಕ ಜನರನ್ನು ತಬ್ಬಿಬ್ಬು ಮಾಡುತ್ತಿದ್ದರು. “ನೀವೇಕೆ ಹೀಗೇ?” ಅಂತ ಪತ್ರಕರ್ತೆಯೊಬ್ಬಳು ಕೇಳಿದ್ದಾಗ “ನಾನಿರುವದೇ ಹಾಗೆ. ನನ್ನ ಹೇಳಿಕೆಗಳು, ನನ್ನ ನಂಬಿಕೆಗಳು ಸದಾ ಬದಲಾಗುತ್ತಿರುತ್ತವೆ” ಎಂದು ಹೇಳಿ ಪೆಚ್ಚುಗೊಳಿಸಿದ್ದರು. ಕೆಲವೊಮ್ಮೆ ಅವರ ಹೇಳಿಕೆಗಳು ಅತಿರೇಕ ಎನಿಸುವಷ್ಟರ ಮಟ್ಟಿಗೆ ಹೋಗುತ್ತಿದ್ದವು. ನನಗೆ ಆಶ್ಚರ್ಯ ಎನಿಸುವದು ೧೯೯೯ ರಲ್ಲಿ ಅವರು ಹಿಂದುತ್ವದಿಂದ ಇಸ್ಲಾಂಗೆ ಮತಾಂತರಗೊಂಡಾಗ ನಡೆದ ಒಂದು ಘಟನೆ. ಬೇರೆಲ್ಲ ಸ್ತ್ರೀವಾದಿ ಮುಸ್ಲಿಂ ಲೇಖಕಿಯರೆಲ್ಲ (ಕನ್ನಡವೂ ಸೇರಿದಂತೆ) ಬುರ್ಖಾ ಪದ್ದತಿ ಒಂದು ಅನಿಷ್ಟ ಪದ್ದತಿ ಅದು ಹೆಣ್ಣನ್ನು ಬಾಹ್ಯ ಪ್ರಪಂಚದ ಸಂಪರ್ಕಕ್ಕೆ ಬಾರದಂತೆ ತಡೆಹಿಡಿಯುವ ಒಂದು ಸಾಧನ ಎಂದು ತೀವ್ರವಾಗಿ ಖಂಡಿಸಿ ಅದನ್ನು ತೊಡೆದು ಹಾಕಿದರೆ ಕಮಲಾ ದಾಸ್ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿ “ಬುರ್ಖಾ ಹೆಣ್ಣಿಗಿರುವ ಒಂದು ಅದ್ಭುತವಾದ ಉಡುಪು. ಅದು ಹೆಣ್ಣಿಗೆ ಯಾವಾಗಲೂ ಒಂದು ರಕ್ಷಣಾ ಭಾವವನ್ನು ಒದಗಿಸುತ್ತದೆ. ಇಸ್ಲಾಂ ಧರ್ಮ ಮಾತ್ರ ಹೆಣ್ಣಿಗೆ ರಕ್ಷಣೆಯನ್ನು ನೀಡಬಲ್ಲದು” ಎನ್ನುವಂಥ ಅತಿರೇಕದ ಹೇಳಿಕೆಯೊಂದನ್ನು ನೀಡಿ ಹಿಂದು ಉಗ್ರವಾದಿಗಳನ್ನು ರೊಚ್ಚಿಗೆಬ್ಬಿಸಿದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ “ನಾನು ಕೃಷ್ಣನನ್ನು ಅಲ್ಲಾಹುನನ್ನಾಗಿ ಮಾಡುತ್ತೇನೆ” ಎನ್ನುವ ಮತಾಂಧೀಯ ಹೇಳಿಕೆಯೊಂದನ್ನು ನೀಡಿ ಹಿಂದೂ ಧಾರ್ಮಿಕ ಭಾವನೆಗಳನ್ನು ಕೆರಳಿಸುವದರ ಮೂಲಕ ದೊಡ್ದ ವಿವಾದವನ್ನೇ ಹುಟ್ಟು ಹಾಕಿದರು. ಇಂಥ ಹತ್ತಾರು ವಿವಾದಗಳು ಅವರನ್ನು ಸುತ್ತಿಕೊಂಡಿದ್ದವು. ನಾನಿಲ್ಲಿ ಉದಾಹರಣೆಗಾಗಿ ಈ ಒಂದು ಘಟನೆಯನ್ನು ಮಾತ್ರ ಉಲ್ಲೇಖಿಸಿದ್ದೇನೆ.

ಏನೇ ಇರಲಿ. ೧೯೮೪ ರಲ್ಲಿ ನೋಬೆಲ್ ಪಾರಿತೋಷಕದವರಿಗೂ ತಲುಪಿ ಬಂದ ಈ ಲೇಖಕಿ ಬರೆದಂತೆ ಬದುಕಿದರು, ಬದುಕಿದಂತೆ ಬರೆದರು. ಮಧ್ಯ ಮಧ್ಯ ಹರಿವ ನದಿಯಂತೆ ಬದಲಾಗುತ್ತಲೇ ಹೋದರು. ನಾನು ಈಗಾಗಲೇ ಹೇಳಿರುವಂತೆ ಅವರ ಬದುಕು ಸದಾ ಒಂದು ತೆರೆದಿಟ್ಟ ಪುಸ್ತಕವಾಗಿದ್ದರಿಂದ ಅವರ ಬಗ್ಗೆ ತಿಳಿಯುವ ಹೆಚ್ಚಿನ ಕುತೂಹಲವನ್ನೇನೂ ಉಳಿಸಿಹೋಗಿಲ್ಲ.
-ಉದಯ ಇಟಗಿ