ಕಾಗೆಯ ಜನ್ಮ ಮತ್ತು ಅದ್ವೈತ ಸಂದೇಶ

ಕಾಗೆಯ ಜನ್ಮ ಮತ್ತು ಅದ್ವೈತ ಸಂದೇಶ

ಹಿರಿಯ ಕಂಚಿ ಶ್ರೀಗಳಲ್ಲಿ ಭಕ್ತನೊಬ್ಬನು ಪ್ರಶ್ನಿಸಿದನಂತೆ "ಸ್ವಾಮೀಜಿ,ನಾವೇಕೆ,ಮಹಾಲಯದ ಸಂದರ್ಭ ಕಾಗೆಗಳಿಗೆ ಉಣಬಡಿಸಿ ಉಪಚರಿಸುತ್ತೇವೆ? ನಮ್ಮ ಪಿತೃಗಳು ಕಾಗೆಗಳ ರೂಪದಲ್ಲಿರುತ್ತಾರಾ? ಅವರೇಕೆ ಕಾಗೆಗಳಂಥ ಹೀನ ಜನ್ಮ ತಾಳಬೇಕು? ಇನ್ಯಾವುದೇ ಶ್ರೇಷ್ಠ ಹಕ್ಕಿಯಾಗಕೂಡದೆ?

ಸ್ವಾಮೀಜಿ ನಸುನಕ್ಕು ಹೇಳಿದರು...ಕಾಗೆಯನ್ನು ನಾವು ಕಾಕಾ ಅಂತ ಕರೆಯುತ್ತೇವೆ. ಬೇರಾವುದೇ ಹಕ್ಕಿಯನ್ನು ಅದು ಕೂಗುವ ದನಿಯಿಂದ ಕರೆಯುವ ರೂಢಿ ಇಲ್ಲ. ನಮ್ಮೆಲ್ಲರ ಮುದ್ದಿನ ಗಿಳಿಯನ್ನಂತೂ ಕೀಕೀ ಅಂತ ಅನ್ನೆವು ತಾನೇ?.ಕಾ ಅಂದರೆ ಕಾಪಾಡು ಎಂದರ್ಥ. ನಮ್ಮ ಹಿರಿಯರನ್ನು ಕರೆದು, "ರಕ್ಷಿಸಿ,ರಕ್ಷಿಸಿ" ಎಂದು ನಾವು ಬೇಡಿಕೊಳ್ಳುವೆವು. ಕಾಗೆ ಸುಲಭವಾಗಿ ಕಾಣ ಸಿಗುತ್ತದೆ. ಅಷ್ಟೇ ಅಲ್ಲ,ಅದಕ್ಕೆ ಏನನ್ನು ಕೊಟ್ಟರೂ ತಿನ್ನುತ್ತದೆ.

ನಮ್ಮ ಸುತ್ತಮುತ್ತಲ ಪರಿಸರವನ್ನು ಕಾಗೆಯಷ್ಟು ಶುದ್ಧಗೊಳಿಸುವ ಪಕ್ಷಿ ಇನ್ನೊಂದಿಲ್ಲ. ಅದಕ್ಕೇ,ಅದನ್ನು,ಕೀಳು ದರ್ಜೆಯ ಹಕ್ಕಿ ಅನ್ನುತ್ತೇವೇನೋ? ಅದೊಂದು ಸುಂದರ ಹಕ್ಕಿ ಕೂಡ. ಯಾಕೆ ಗೊತ್ತೆ? ಸರಿಯಾಗಿ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದೇಳುವ ಹಕ್ಕಿ ಅದೊಂದೇ. ಸದಾ ಮಂಕಾಗಿರುವ ಕೋಳಿಯೂ ತಡವಾಗಿ ಕೂಗುವುದು. ಬ್ರಾಹ್ಮೀ ಮುಹೂರ್ತದಲ್ಲಿ ನೀವು ಧ್ಯಾನ ಮಾಡಲು ಅದು ಪ್ರೇರಣೆ. ಆಹಾರ ಸಿಕ್ಕಿದರೆ ಅದು ತನ್ನ ಬಳಗವನ್ನೇ ಕರೆಯುತ್ತದೆ. ಸಂಜೆಯಾದಾಗ ತನಗೆ ಆಹಾರ ಕರುಣಿಸಿದ ದೇವರಿಗೆ ಕಾಕಾ ಎಂದು ಧನ್ಯವಾದ ಹೇಳುತ್ತದೆ. ಶಾಸ್ತ್ರವನ್ನು ಅನುಸರಿಸುವ ಕಾಗೆ ಸಂಜೆ ಆದ ನಂತರ ಆಹಾರ ಮುಟ್ಟದು. ಈ ಉತ್ತಮ ಸಂಪ್ರದಾಯವನ್ನು ಪಾಲಿಸುವ ಜನರು ವಿರಳವಾಗುತ್ತಿದ್ದಾರೆ. ಆದ್ದರಿಂದಲೇ ಇವುಗಳನ್ನು ಪಿತೃ ರೂಪಿಗಳೆಂದು ಕಾಣುತ್ತಾರೆ. ದಿನಾ ಕಾಗೆಗೆ ಆಹಾರ ಕೊಟ್ಟು ನೋಡಿ. ತುಂಬ ಖುಶಿ ಪಡುತ್ತದೆ. ನೀವೂ ಸಂತೃಪ್ತಿ ಹೊಂದುತ್ತೀರ.

ಅದ್ವೈತ ಅಂದರೆ ಇದೇ ತಾನೆ?."

(ಅಧಾರ)