ನೆಲ್ಲಿ

ನೆಲ್ಲಿ

ಪುಸ್ತಕದ ಲೇಖಕ/ಕವಿಯ ಹೆಸರು
ಮುನಿಯಾಲ್ ಗಣೇಶ್ ಶೆಣೈ
ಪ್ರಕಾಶಕರು
ನಾಲಂದಾ ಸಾಹಿತ್ಯ, ಖಾರ್ವಿಕೇರಿ ರಸ್ತೆ, ಕುಂದಾಪುರ -೫೭೬೨೦೧
ಪುಸ್ತಕದ ಬೆಲೆ
ರೂ. ೩೦.೦೦, ಮುದ್ರಣ: ೨೦೦೮

ಸಸ್ಯ ಸಂಪದ ಮಾಲಿಕೆಯಲ್ಲಿ ಪ್ರಕಟವಾದ ೧೨ನೇ ಪುಸ್ತಕವೇ ನೆಲ್ಲಿ. ಸಸ್ಯ ಸಂಪದ ಎಂಬ ಪರಿಕಲ್ಪನೆಯಲ್ಲಿ ೧೦೦ ಬಹು ಉಪಯೋಗಿ ಸಸ್ಯಗಳ ಸವಿವರಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಮುನಿಯಾಲ್ ಗಣೇಶ್ ಶೆಣೈ ಅವರ ಸಾಹಸ ಮೆಚ್ಚತಕ್ಕದ್ದು. ಈಗಾಗಲೇ ೭೦ ಸಸ್ಯಗಳ (ಹಣ್ಣು, ತರಕಾರಿ) ಬಗ್ಗೆ ಮಾಹಿತಿ ನೀಡುವ ಪುಸ್ತಕಗಳು ಹೊರಬಂದಿವೆ. ಬೇಗದಲ್ಲೇ ಈ ಸಂಖ್ಯೆ ನೂರು ತಲುಪಲಿದೆ. 

ನೆಲ್ಲಿ ಎನ್ನುವುದು ಬಹು ಆರೋಗ್ಯಕರ ಸಸ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. “ಆಯುರ್ವೇದದಲ್ಲಿ ಮತ್ತು ಪಾರಂಪರಿಕ ವೈದ್ಯಕೀಯದಲ್ಲಿ ಅತ್ಯಂತ ಮಹತ್ವವಿರುವ ನೆಲ್ಲಿಯು ಅದ್ಭುತ ಔಷಧಗಳ ಆಗರವಾಗಿದೆ. ಆಯುರ್ವೇದದ ಆಚಾರ್ಯ ಪರಂಪರೆಯೇ ನೆಲ್ಲಿಯ ಗುಣಗಳನ್ನು ಹಾಡಿಹೊಗಳಿದೆ. ನೆಲ್ಲಿಯ ಔಷಧೀಯ ಗುಣಗಳ ಬಗೆಗೆ ಆಧುನಿಕ ಸಂಶೋಧನೆಯೂ ಭರವಸೆ ಮೂಡಿಸಿದೆ. ನೆಲ್ಲಿಯ ವಿಶೇಷಗಳು, ನೆಲ್ಲಿ ಕೃಷಿ, ನೆಲ್ಲಿ ಉತ್ಪನ್ನಗಳು, ಆಹಾರವಾಗಿ ನೆಲ್ಲಿ, ಆಯುರ್ವೇದದಲ್ಲಿ ನೆಲ್ಲಿ, ನೆಲ್ಲಿಯ ಪ್ರಮುಖ ಉತ್ಪನ್ನವಾದ ಚ್ಯವನಪ್ರಾಶದ ತಯಾರಿಕೆ ಮುಂತಾದ ಮಹತ್ವದ ಸಂಗತಿಗಳು ಈ ಕೃತಿಯಲ್ಲಿವೆ. ನೆಲ್ಲಿಯ ನೂರಾರು ಬಗೆಯ ಔಷಧೀಯ ಬಳಕೆಯ ಮಾಹಿತಿಯೂ ಇಲ್ಲಿದೆ.” ಎನ್ನುವುದು ಬೆನ್ನುಡಿಯಲ್ಲಿ ಕಂಡ ಬರಹ.

ಲೇಖಕರಾದ ಮುನಿಯಾಲ್ ಗಣೇಶ್ ಶೆಣೈ ಅವರು ‘ಸಸ್ಯ ಸಂಪದ' ಪರಿಕಲ್ಪನೆಯ ಬಗ್ಗೆ ಹೇಳುವುದು ಹೀಗೆ..." ಕಳೆದ ಮೂರು ದಶಕಗಳಿಂದ ನಾನು ಗಿಡಮರಗಳ ಕುರಿತು ಆಸಕ್ತಿ ತಾಳಿದ್ದೇನೆ. ನಮ್ಮ ಸುತ್ತಲೂ ಇರುವ ಸಾವಿರಾರು ಬಗೆಯ ಗಿಡಮರ ಬಳ್ಳಿಗಳು ಒಂದೊಂದು ಹೊಸ ಜಗತ್ತನ್ನು ತೆರೆದಿಟ್ಟಿವೆ. ನಮ್ಮ ದೇಶದ ಒಂದೊಂದು ಪ್ರದೇಶದಲ್ಲೂ ನೂರಾರು ವರ್ಷಗಳಿಂದ ಬೆಳೆದು ಬಂದಿರುವ ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಹಲವಾರು ಗಿಡಗಳನ್ನು ಬಳಸುತ್ತ ಬಂದಿದ್ದಾರೆ. ಈಗಲೂ ಆಧುನಿಕ ವೈದ್ಯಕೀಯ ಭರಾಟೆಯ ನಡುವೆಯೂ ಹಳ್ಳಿ ಮದ್ದುಗಳು ಅಪಾರ ಜನಪ್ರಿಯತೆಯನ್ನು ಗಳಿಸಿರಲು ಗಿಡಮರಗಳ ಕೊಡುಗೆ ಅನನ್ಯವಾದುದು.

ಒಂದೊಂದು ಗಿಡವೂ ಅಪಾರ ಸಾಧ್ಯತೆಗಳನ್ನು ನಮ್ಮೆದುರು ತೆರೆದಿಡುತ್ತವೆ. ಈ ಸಸ್ಯಗಳ ಕುರಿತು ಇರುವ ಸಸ್ಯ ವೈಜ್ಞಾನಿಕ ಮಾಹಿತಿ, ಅವುಗಳ ಕೃಷಿ ವಿಧಾನ, ಆರ್ಥಿಕವಾಗಿ ಅವುಗಳ ಮಹತ್ವ, ಔಷಧವಾಗಿ ಅವುಗಳ ಬಳಕೆ, ಆಯುರ್ವೇದದಲ್ಲಿ ಇಂತಹ ಗಿಡಗಳ ಮಹತ್ವ, ಆಧುನಿಕ ಸಂಶೋಧಕರ ದೃಷ್ಟಿಯಲ್ಲಿ ಈ ಸಸ್ಯಗಳ ಪಾತ್ರ - ಇಂತಹ ಸಂಗತಿಗಳ ಬಗೆಗೆ ಅಧ್ಯಯನವನ್ನು ಮಾಡುತ್ತ ಬಂದಿರುವ ನಾನು ಇವನ್ನೆಲ್ಲ ಪುಸ್ತಕಗಳ ರೂಪದಲ್ಲಿ ನಿಮ್ಮ ಕೈಗಿಡುವ ಪ್ರಯತ್ನ ಮಾಡುತ್ತಿದ್ದೇನೆ.”

ನೆಲ್ಲಿ ಪುಸ್ತಕದ ಪ್ರಸ್ತಾವನೆಯಲ್ಲಿ ಲೇಖಕರು “ ಬೆಟ್ಟದ ನೆಲ್ಲಿ ಎಂದ ಕೂಡಲೇ ಎಲ್ಲರಂತೆ ನನಗೂ ನೆನಪಾಗುವುದು ಬಾಲ್ಯದಲ್ಲೆಲ್ಲೋ ನೆಲ್ಲಿಕಾಯಿ ತಿಂದು ನೀರು ಕುಡಿದಾಗ ಬಾಯಿಯೆಲ್ಲಾ ಸಿಹಿಯಾಗುವ ಅನುಭವ. ಈ ಹಿಂದೆಲ್ಲ ನೆಲ್ಲಿಕಾಯಿಯನ್ನು ಕೃಷಿ ಮಾಡುತ್ತಿದ್ದದ್ದು ಕಡಿಮೆ. ಆದರೂ ತುಳಸಿ ಹಬ್ಬದ ಸಂದರ್ಭದಲ್ಲಿ ಮಾರುಕಟ್ಟೆಗೆ ನೆಲ್ಲಿಕಾಯಿಯ ಗೆಲ್ಲುಗಳು ಬರುತ್ತಿದ್ದವು. ನಾನು ಬೆಳೆದಿದ್ದ ಬೆಂಗಳೂರಿನಲ್ಲಿ ನೆಲ್ಲಿಕಾಯಿಗೆ ಕೊರತೆ ಇಲ್ಲ. ನೆಲ್ಲಿಕಾಯಿಯ ಕುರಿತು ಬೆರಗು ಮೂಡಿದ ಒಂದು ಪ್ರಸಂಗವೆಂದರೆ ಅತ್ಯಂತ ವಿಶಿಷ್ಟವಾದ ಚಿಕಿತ್ಸೆಯಲ್ಲಿ ನೆಲ್ಲಿಯ ಬಳಕೆ. ನಮ್ಮ ದೇಶದ ಆಯುರ್ವೇದ ಪರಂಪರೆಯಲ್ಲಿ ನೆಲ್ಲಿ ಒಂದು ಮಹತ್ವದ ಸಸ್ಯವಾಗಿದೆ. ಅದರ ಅನೇಕ ಉತ್ಪನ್ನಗಳ ಮಾಹಿತಿ ಈ ಪುಸ್ತಕದಲ್ಲಿದೆ.” ಎಂದಿದ್ದಾರೆ. 

ಈ ಕೃತಿಯಲ್ಲಿ ಲೇಖಕರು ನೆಲ್ಲಿಕಾಯಿಯ ಧಾರ್ಮಿಕ ಮಹತ್ವ, ಸಸ್ಯ ಪರಿಚಯ, ನೆಲ್ಲಿ ಕೃಷಿ, ಸಾಮಾಜಿಕ ಅರಣ್ಯ ಕಾರ್ಯದಲ್ಲಿ ನೆಲ್ಲಿ, ಆಯುರ್ವೇದದಲ್ಲಿ ನೆಲ್ಲಿ, ಅಡುಗೆ, ಮನೆ ಔಷಧಿ, ನೆಲ್ಲಿಯ ವ್ಯಾಪಾರಿಗಳು ಬಗ್ಗೆ ಸವಿವರವಾದ ಮಾಹಿತಿ ನೀಡಿದ್ದಾರೆ. ಅಧ್ಯಾಯಗಳ ನಡುವೆ ಸೂಕ್ತವಾದ ರೇಖಾ ಚಿತ್ರಗಳೂ ಇವೆ. ಸುಮಾರು ನೂರು ಪುಟಗಳ ಈ ಕೃತಿ ನೆಲ್ಲಿಕಾಯಿಯ ಆರೋಗ್ಯಕರ ಬಳಕೆ ಬಗ್ಗೆ ಸವಿವರವಾದ ಮಾಹಿತಿ ನೀಡುತ್ತದೆ.