ಭಾನುವಾರದ ನಮ್ಮ ಕುಟುಂಬದ ದಿನಚರಿ (ಭಾಗ 2)

ಅಲ್ಲಿ ಸ್ವಲ್ಪ ಹೊತ್ತು ಕುಳಿತು ಕುರುಕಲು ತಿಂಡಿ ತಿಂದೆವು. ಅಷ್ಟೊತ್ತಿಗೆ ಆಗಲೇ ತುಂತುರು ಹನಿಗಳಿಂದ ಮೈಯೆಲ್ಲಾ ಸಣ್ಣದಾಗಿ ಒದ್ದೆಯಾಗಿತ್ತು. ಚಳಿಯೂ ಹೆಚ್ಚಾಗಿತ್ತು. ಮಗುವನ್ನು ಬಾಚಿ ತಬ್ಬಿಕೊಂಡು ರೈನ್ ಕೋಟ್ ಒಳಗೆ ಸೇರಿಸಿ ಮತ್ತೆ ಅಲ್ಲಿಂದ ಹೊರಟೆವು. ಮೋಡಗಳೇ ಗಾಳಿಯಲ್ಲಿ ತೇಲುತ್ತಾ ತುಂತುರು ಹನಿಗಳನ್ನು ಎಲ್ಲ ಕಡೆ ಚದುರಿಸುತ್ತಾ ಹಾದು ಹೋಗುತ್ತಿದ್ದವು. ಅದನ್ನು ಅನುಭವಿಸುತ್ತಾ ಸುಮಾರು ಎರಡು ಗಂಟೆಯಷ್ಟು ನಡೆದು ಕಾರಿನ ಬಳಿ ಬಂದೆವು. ಅಲ್ಲಿಂದ ನೇರವಾಗಿ ಹದಿನೈದು ಕಿಲೋಮೀಟರ್ ಸಂಚರಿಸಿದ ನಂತರ ಒಂದು ರೆಸಾರ್ಟ್ ತಲುಪಿದೆವು. ಮಧ್ಯಾಹ್ನ ಭರ್ಜರಿಯಾದ ಬಫೆಟ್ ಊಟ. ಮಲೆನಾಡು ಶೈಲಿಯ ಎಲ್ಲಾ ಸಸ್ಯಾಹಾರ, ಮಾಂಸಾಹಾರದ ಖಾದ್ಯಗಳು ಬಿಸಿಬಿಸಿಯಾಗಿ ರೆಡಿ ಇದ್ದವು. ನಮಗಿಂತ ಮೊದಲೇ ಒಂದಷ್ಟು ಕುಟುಂಬಗಳು ತಮಗೆ ಬೇಕಾದನ್ನು ಹಾಕಿಕೊಂಡು ಊಟ ಮಾಡುತ್ತಿದ್ದರು. ಅಲ್ಲಿಯೇ ಬಿಸಿಬಿಸಿಯಾಗಿ ನೀರು ದೋಸೆ, ಆಮ್ಲೆಟ್ ಬೇಕೆಂದವರಿಗೆ ಮಾಡಿಕೊಡುತ್ತಿದ್ದರು.
ರೆಸಾರ್ಟಿನಲ್ಲಿ ನಾಯಿ, ಬೆಕ್ಕು, ಬಾತುಕೋಳಿ, ಗಿಳಿ, ಮೊಲ ಮುಂತಾದ ಕೆಲವು ಪ್ರಾಣಿ ಪಕ್ಷಿಗಳನ್ನು ಆಕರ್ಷಣೆಗಾಗಿ ಸಾಕಿದ್ದರು. ಮಗು ಅದರೊಂದಿಗೆ ತುಂಬಾ ಖುಷಿ ಖುಷಿಯಾಗಿ ಆಡುತ್ತಿತ್ತು. ನಾನು ತಟ್ಟೆಗೆ ಆಮ್ಲೆಟ್ ಹಾಕಿಕೊಂಡು ಅದು ಓಡುತ್ತಿದ್ದಂತೆ ನಾನು ಅದರ ಜೊತೆಗೆ ಓಡುತ್ತಾ ಒಂದೊಂದೇ ತುತ್ತು ತಿನ್ನಿಸುತ್ತಿದೆ. ಹೆಂಡತಿಗೆ ಮೊದಲು ಊಟ ಮಾಡಲು ಹೇಳಿ ಮಗುವಿನ ಜವಾಬ್ದಾರಿ ನಾನು ತೆಗೆದುಕೊಂಡಿದ್ದೆ. ಆಕೆ ಊಟ ಮುಗಿಸಿ ಬರುವಷ್ಟರಲ್ಲಿ ಒಂದು ಪೂರ್ತಿ ಆಮ್ಲೆಟ್ ಮಗುವಿಗೆ ತಿನ್ನಿಸಿದ್ದೆ. ನಂತರ ಮಗುವಿನ ಜವಾಬ್ದಾರಿ ಆಕೆಗೆ ಕೊಟ್ಟು ನಾನು ಊಟ ಮಾಡಲು ಹೊರಟೆ.
ನನಗೆ ಇಷ್ಟದ ಕೆಲವು ಪದಾರ್ಥಗಳನ್ನು ಊಟದ ತಟ್ಟೆಗೆ ಹಾಕಿ ಅಲ್ಲಿ ಚೇರ್ ಮೇಲೆ ಕುಳಿತೆ. ಮನಸ್ಸು ತಡೆಯಲಿಲ್ಲ. ಹೆಂಡತಿ ಮಗುವಿದ್ದ ಜಾಗಕ್ಕೆ ತಟ್ಟೆ ಹಿಡಿದು ಬಂದೆ. ಅವರನ್ನು ನೋಡುತ್ತಾ ಅವರೊಂದಿಗೆ ತಿನ್ನುವುದೇ ಒಂದು ಖುಷಿ. ಹೆಂಡತಿ ಬೇಡ ಕುಳಿತು ತಿನ್ನಿ ಎಂದರು ಕೇಳದೆ ಅಲ್ಲಿಯೇ ನಿಂತು ಕೈಯಲ್ಲಿ ತಟ್ಟೆ ಹಿಡಿದು ಮಗುವಿನ ಆಟವನ್ನು, ಅದನ್ನು ಹಿಡಿಯಲು ಹೆಂಡತಿ ಪಡುತ್ತಿದ್ದ ಸಾಹಸವನ್ನು ಕಣ್ತುಂಬ ನೋಡಿಕೊಂಡು ಒಂದೊಂದೇ ತುತ್ತು ನಿಧಾನವಾಗಿ
ಇಳಿಸತೊಡಗಿದೆ. ಆ ವಾತಾವರಣಕ್ಕೂ, ಆ ರುಚಿ ರುಚಿಯಾದ ಊಟಕ್ಕೂ, ಹೆಂಡತಿ ಮಗುವಿನ ಆಟಕ್ಕೂ ಸ್ವರ್ಗ ಮೂರೇ ಗೇಣು ಎನ್ನುವಂತಿತ್ತು ಮನಸ್ಸು.
ಊಟ ಮಾಡಿ ಮೂವರು ಒಟ್ಟಿಗೇ ಕುಳಿತು ಬಿಸಿ ಬಿಸಿಯಾದ ಚಹ ಕುಡಿದು ಸುಮಾರು 40 ಕಿಲೋ ಮೀಟರ್ ದೂರದಲ್ಲಿರುವ ಗೆಳೆಯನ ಮನೆ ಕಡೆ ಹೊರಟೆವು. ಮಲೆನಾಡು ಭಾಗದಲ್ಲಿ 40 ಕಿಲೋಮೀಟರ್ ಸಂಚರಿಸಲು ಈ ಮಳೆಯಲ್ಲಿ ಸುಮಾರು 2 ಗಂಟೆ ಸಮಯ ಬೇಕಾಗುತ್ತದೆ. ಸಂಜೆ ಐದು ಗಂಟೆ ಹೊತ್ತಿಗೆ ಗೆಳೆಯನ ಮನೆ ತಲುಪಿದೆವು. ಕಾಫಿ ಬೆಳೆಗಾರರಾದ ನನ್ನ ಗೆಳೆಯ ನಮಗಾಗಿ ಕಾಯುತ್ತಾ ಇದ್ದ. ನಮ್ಮಂತೆ ಅವರಿಗೂ ಒಂದು ಮಗುವಿದೆ. ತಂದೆ ತಾಯಿ ಅಜ್ಜ ಅಜ್ಜಿ ಎಲ್ಲರೂ ಇರುವ ಕೂಡು ಕುಟುಂಬ ಅವರದು. ಮಲೆನಾಡಿನ ಹಳೆಯ ಕಾಲದ ತೊಟ್ಟಿ ಮನೆ. ಮಗುವಿಗೆ ಆಟವಾಡಲು ಜೊತೆ ಸಿಕ್ಕಂತಾಯಿತು.
ಎಲ್ಲರೂ ಒಟ್ಟಿಗೆ ವರಾಂಡಾದಲ್ಲಿಯೇ ಕುಳಿತು ಮಾತನಾಡತೊಡಗಿದೆವು. ಗೆಳೆಯನ ಪತ್ನಿಯೋ ಬಿಸಿಬಿಸಿಯಾದ ಚಕ್ಕುಲಿ, ಕೊಡುಬಳೆ, ನಿಪ್ಪಟ್ಟು, ರವೆ ಉಂಡೆ, ಮಾವಿನ ಹಣ್ಣಿನ ಹೋಳು, ಹಲಸಿನ ಹಣ್ಣು ಎಲ್ಲವನ್ನು ದೊಡ್ಡ ತಟ್ಟೆಯಲ್ಲಿ ಹಾಕಿಕೊಂಡು ಬಂದು ಮುಂದೆ ಇಟ್ಟರು. ಮಧ್ಯಾಹ್ನ ಭರ್ಜರಿ ಊಟ ಆಗಿದ್ದ ನಮಗೆ ಈ ಸಂಜೆಯ ಸ್ನಾಕ್ಸ್ ತುಂಬಾ ದೊಡ್ಡದಾಗಿ ಕಂಡಿತು. ಏಕೆಂದರೆ ರಾತ್ರಿಯ ಭಕ್ಷ್ಯ ಭೋಜನ ಬೇರೆ ರೆಡಿ ಆಗುತ್ತಿದೆ. ಆದರೂ ಈ ತಣ್ಣನೆಯ ವಾತಾವರಣಕ್ಕೆ ಊಟ ತುಸು ಹೆಚ್ಚಾದರೂ ಹೊಟ್ಟೆ ಭಾರವಾಗುವುದಿಲ್ಲ.
ಹಳೆಯ ನೆನಪುಗಳನ್ನು ಮಾತನಾಡುತ್ತಾ ಸುಮಾರು ಹೊತ್ತು ಕಳೆದವು. ನಿಧಾನವಾಗಿ ಕತ್ತಲು ಆವರಿಸುತ್ತಿತ್ತು. ಕೀಟಗಳ ಗುಜುಗುಜು ಶಬ್ದ ಈಗ ಹೆಚ್ಚಾಗ ತೊಡಗಿತು. ಮನೆಯಲ್ಲಿ ದೀಪಗಳು ಉರಿಯಲಾರಂಭಿಸಿದವು. ಚಳಿ ಹೆಚ್ಚಾದ್ದರಿಂದ ಎಲ್ಲರೂ ಮನೆ ಒಳಗೆ ಹೊರಟೆವು. ಹಾಗೇ ಲೋಕಾಭಿರಾಮವಾಗಿ ಮಾತನಾಡುತ್ತಾ ಮತ್ತೆರಡು ಗಂಟೆ ಕಳೆದದ್ದು ಗೊತ್ತಾಗಲೇ ಇಲ್ಲ. ಅಷ್ಟು ಹೊತ್ತಿಗೆ ಊಟ ರೆಡಿಯಾಗಿತ್ತು. ನಮಗಾಗಿ ಕಾಡಿನ ವಿಶೇಷ ಸಸ್ಯಹಾರ ಮತ್ತು ಮಾಂಸಹಾರ ಎರಡನ್ನೂ ಮಾಡಿದ್ದರು. ಅಷ್ಟು ಹೊತ್ತಿಗಾಗಲೇ ಬೆಳಗಿನಿಂದ ಸುಸ್ತಾಗಿದ್ದ ಮಗು ನಿದ್ದೆ ಮಾಡಿತ್ತು. ಇನ್ನು ಅದನ್ನು ಎಚ್ಚರಿಸಿ ಊಟ ಮಾಡಿಸುವುದು ಕಷ್ಟ ಎಂದು ಭಾವಿಸಿ ಹಾಗೆಯೇ ಮಲಗಿಸಿದೆವು.
ನಾವು ಊಟ ಮಾಡಿ, ಎಲೆ ಅಡಿಕೆ ಜಗಿದು ಅವರಿಗೆ ಧನ್ಯವಾದಗಳನ್ನು ಅರ್ಪಿಸಿ ಹೊರಡುವ ವೇಳೆಗೆ ಸುಮಾರು ರಾತ್ರಿ 10:00. ಅವರು ಅಲ್ಲೇ ಮಲಗಲು ಒತ್ತಾಯಿಸಿದರು. ನಾಳೆ ಆಫೀಸ್ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆ ಇದ್ದಿದ್ದರಿಂದ ಬಲವಂತದಿಂದಲೇ ಅವರ ಒಪ್ಪಿಗೆ ಪಡೆದು ನಿಧಾನವಾಗಿ ಕಾರು ಚಲಾಯಿಸುತ್ತಾ ಮನೆ ಕಡೆ ಹೊರಟೆವು.
ಮಗು ಅದಾಗಲೇ ನಿದ್ದೆ ಮಾಡಿತ್ತು. ಕತ್ತಲೆಯಲ್ಲಿ, ಕಾಡಿನ ಮಧ್ಯೆ, ಪಕ್ಷಿ ಕೀಟಗಳ ಚಿತ್ರ ವಿಚಿತ್ರ ಶಬ್ದಗಳ ನಡುವೆ ಪತ್ನಿಯೊಂದಿಗೆ ಇಂದಿನ ದಿನದ ಒಟ್ಟು ದಿನಚರಿಯನ್ನು, ಅವರು ಬಡಿಸಿದ ಊಟದ ಸವಿಯನ್ನು ಮೆಲುಕು ಹಾಕುತ್ತಾ ಸುಮಾರು ರಾತ್ರಿ ಒಂದು ಗಂಟೆಯ ಹೊತ್ತಿಗೆ ಮನೆ ತಲುಪಿದೆವು. ಹೀಗೆ ಒಂದು ಪುಟ್ಟ ಕುಟುಂಬದ ಭಾನುವಾರ ಎಂಬ ರಜಾ ದಿನದ ಒಂದು ದಿನಚರಿ ಓದಿಗಾಗಿ, ಬದುಕಿಗಾಗಿ, ನೆಮ್ಮದಿಗಾಗಿ, ಸಂಬಂಧಗಳ ವೃದ್ಧಿಗಾಗಿ, ಮಾನವಿಯ ಮೌಲ್ಯಗಳ ಉಳಿವಿಗಾಗಿ, ಮನಸ್ಸುಗಳ ಅಂತರಂಗದ ಚಳವಳಿಗಾಗಿ....
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ