ಮನಸುಖರಾಯನ ಮನೋಲೋಕ

ಮನಸುಖರಾಯನ ಮನೋಲೋಕ

ಬರಹ

ಶ್ರೀನಿವಾಸ ವೈದ್ಯರು ಇವನ್ನೆಲ್ಲ ಕಥಾರೂಪಿ ಹರಟೆ, ಹರಟೆ ರೂಪಿ ವ್ಯಕ್ತಿ ಚಿತ್ರಣ ಅಥವಾ ಶುದ್ಧ ತಲೆಹರಟೆ ರೂಪಿ ಹರಟೆ ಎಂದು ಕರೆದಿದ್ದಾರೆ. ಅಂದರೆ ಎಲ್ಲದರಲ್ಲೂ ಹರಟೆಯ ಅಂಶ ಸ್ವಲ್ಪ ಹೆಚ್ಚೇ ಇದ್ದರೆ ಅದು ದೋಷವಲ್ಲ, ಗುಣ ಎಂದೇ ಪರಿಗಣಿಸುವುದು ಅನಿವಾರ್ಯ. ಆದರೆ ಇಲ್ಲಿ ಬರುವ ಎಲ್ಲ ವ್ಯಕ್ತಿಗಳೂ ಘಟನೆಗಳೂ ಕಾಲ್ಪನಿಕ. ಈ ಸ್ಥೂಲ ಪರಿಚಯದೊಂದಿಗೇ ಇಲ್ಲಿನ ಕತೆಗಳನ್ನು ಪ್ರವೇಶಿಸಿದರೆ ಗುಂಗು ಹತ್ತಿಸುವ ವಿವರಗಳು, ಹೃದಯದ ಭಾವಕ್ಕೆ ಮೆದುಳಿನ ತರ್ಕದ ಸ್ಪರ್ಶ, ಹಾಗೆ ಲಾಜಿಕ್‌ಗೆ ಭಾವದ ಸಂವೇದನೆ, ಹೊಸದೇ ಆದ ಬಿಂಬ ಪ್ರತಿಬಿಂಬಗಳ ಕೊಲಾಜ್ ಹುಟ್ಟಿಸುವ ಒಂದು ವಿಶಿಷ್ಟ ಲಯವಿನ್ಯಾಸ ಎದುರಾಗುತ್ತದೆ. ಮನಸ್ಸು ಉಲ್ಲಾಸಗೊಳ್ಳುತ್ತ, ಚುರುಕುಗೊಳ್ಳುತ್ತ, ಮುದುಡುತ್ತ, ಅರಳುತ್ತ ಹೊಸ ಲೋಕವೊಂದನ್ನು ತಡಕುತ್ತದೆ. ಅಷ್ಟೇ ಗಾಢವಾಗಿ ಭಾವನಾತ್ಮಕವಾಗಿ ಕೂಡ ನಮ್ಮನ್ನು ಕಲಕುವ ಬರಹಗಳಿವೆ ಇಲ್ಲಿ. ಬರಹಗಾರ ಬರೆಯುತ್ತ ಬರೆಯುತ್ತ ಕಣ್ಣು ಹನಿಗೂಡಿದಲ್ಲೆಲ್ಲ ನಮ್ಮ ಮೂಗಿನಲ್ಲೂ ಅದರ ಲಕ್ಷಣಗಳೆಲ್ಲ ಜಿನುಗುತ್ತವೆ! ಮನಸುಖರಾಯನ ಮನಸು, ಮನೋಹರ ಗ್ರಂಥ ಮಾಲಾ, ಧಾರವಾಡ. ಬೆಲೆ: ಎಪ್ಪತ್ತೈದು ರೂಪಾಯಿಗಳು.