ಸಾಯಿಬಾಬಾ ಕಣ್ಣು ತೆರೆದಿದ್ದು..ನಮ್ಮ ಮಾಧ್ಯಮಗಳು ಕಣ್ಣುಮುಚ್ಚಿದ್ದು!
ಗಣಪತಿ ಹಾಲು ಕುಡಿದಿದ್ದು ನಮ್ಮ ಮಾಧ್ಯಮಗಳಿಗೆ ಸುರಾಪಾನ ಮಾಡಿಸಿದಂತಾಗಿದ್ದು ಈಗ ಐತಿಹಾಸಿಕ ವಿಪರ್ಯಾಸ. ಆ ಘಟನೆಯ ಮುಂದುವರೆದ ಭಾಗವಾಗಿ ಶುಕ್ರವಾರ ಬೆಂಗಳೂರಿನ ಕೆಂಪೇಗೌಡ ನಗರ ಸಮೀಪದ ಗವಿಪುರದ ಐತಿಹಾಸಿಕ ಗಂಗಾಧರೇಶ್ವರ ದೇವಸ್ಥಾನದ ಹಿಂಭಾಗದ ಮನೆಯಲ್ಲಿ ಶಿರಡಿ ಸಾಯಿಬಾಬಾ ವಿಗ್ರಹ ತನ್ನ ಎಡಗಣ್ಣು ತೆರೆದಿದ್ದು!
ಬಹುಶ: ‘ಬಾಬು’ ಅವರು ಎಲ್ಲರನ್ನು ‘ಮಾಮು’ ಮಾಡಿದ್ದಾರೆ. ಮಾಧ್ಯಮದವರು ‘ಸತ್ಯ’ಕೆದಕಿದರೆ ಕಾನೂನು ಸುವ್ಯವಸ್ಥೆಗೆ ಭಂಗ ಬರಬಹುದು. ಏಕೆಂದರೆ ಇದು ತೀರ ಸೂಕ್ಷ್ಮವಾದ ಧಾರ್ಮಿಕ ವಿಚಾರ! ಎಂದು ‘ಸ್ಟೆನೋಗ್ರಫಿ’ ಪ್ರಾಕ್ಟೀಸ್ ಮಾಡಿ ವರದಿ ಮಾಡಿದ್ದಾರೆ. ತಜ್ನರನ್ನು ಸಂಪರ್ಕಿಸಿದ್ದರೂ ನಿಖರವಾಗಿ ಹೇಳದೇ, ಬರೆಯದೇ ಅಡ್ಡ ಗೋಡೆಯ ಮೇಲೆ ದೀಪವಿಟ್ಟಿದ್ದಾರೆ.
ಸದ್ಯದ ಬೇಡಿಕೆ- ಬಾಬು ವಿರುದ್ಧ ಪ್ರಕರಣ ದಾಖಲಿಸಿ, ವೈಜ್ನಾನಿಕ ಸತ್ಯ ಶೋಧನಾ ಸಮಿತಿ ನೇಮಕಮಾಡಿ ಸತ್ಯಾಂಶ ಬಯಲಿಗೆಳೆಯಬೇಕು. ಪೊಲೀಸ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡಲು ಖರ್ಚಿಸಿದ ಹಣ ಬಾಬುನಿಂದ ವಸೂಲಿ ಮಾಡುವಂತಾಗಬೇಕು. ಇನ್ನೊಮ್ಮೆ ಇಂತಹ ಬೆಳವಣಿಗೆಗಳು ಕಾಣದಂತೆ ಸೂಕ್ತ, ಸಮರ್ಪಕ ಕಾನೂನು ರಚನೆಯಾಗಬೇಕು. ಧರ್ಮದ ಹೆಸರಿನಲ್ಲಿ ಮೂಢನಂಬಿಕೆ ಹರಡುವುದು ಶಿಕ್ಷಾರ್ಹ ಅಪರಾಧವಾಗಿ ಪರಿಗಣಿತವಾಗಬೇಕು. ‘ವಯುಕ್ತಿಕ ಹಿತಾಸಕ್ತಿಗಳಿಗೆ’ (ಹಣ ಗಳಿಸುವುದು ಸೇರಿದಂತೆ!) ಸಾರ್ವಜನಿಕ ಹಿತದ ಲೇಪ ಖಂಡನೀಯವಲ್ಲವೇ?
ಡಾ.ಎಚ್.ನರಸಿಂಹಯ್ಯ ಅವರು ಬದುಕಿರಬೇಕಿತ್ತು.