ಜಿ ಆರ್ ವಿಶ್ವನಾಥ್ ಅಧ್ಯಕ್ಷರಾದರೆ...
ಜಿ.ಆರ್.ವಿಶ್ವನಾಥ್ ಕರ್ನಾಟಕ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿಲ್ಲುತ್ತಾರಂತೆ ಎಂಬ ಸುದ್ದಿ ತಿಳಿದು ಸ್ವಲ್ಪ ಗಲಿಬಿಲಿಯುಂಟಾಯಿತು.
ಅಲ್ಲಿರುವ ಕೊಳಕು ರಾಜಕೀಯ, ಕೆಟ್ಟಿರುವ ವ್ಯವಸ್ಥೆ ಇತ್ಯಾದಿ ವಿಶ್ವನಾಥ್ ಗೆ ಸಲ್ಲದ್ದು. ಹಾಗಿರುವಾಗ ’ನಾನು ಈಗಾಗಲೇ ಉಪಾಧ್ಯಕ್ಷನಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದರಲ್ಲಿ ಏನು ತಪ್ಪು?’ ಎಂಬುದು ವಿಶಿ ಪ್ರಶ್ನೆ. ಈಗಾಗಲೇ ಒಡೆಯರ್ ಈ ಸ್ಥಾನಕ್ಕೆ ತನ್ನ ಆಸಕ್ತಿಯನ್ನು ಬಹಿರಂಗಪಡಿಸಿದ್ದಾರೆ. ಹಾಲಿ ಅಧ್ಯಕ್ಷ ಬೃಜೇಶ್ ಪಟೇಲ್ ಮತ್ತು ಒಡೆಯರ್ ಒಬ್ಬರ ಮೇಲೊಬ್ಬರು ಕೆಸರು ಎರಚಾಟ ಮಾಡಿಕೊಳ್ಳುತ್ತಾ ಇರುವಾಗ ವಿಶಿಯ ಹೇಳಿಕೆ ಅಚ್ಚರಿ ಹುಟ್ಟಿಸಿದೆ.
ಎಲ್ಲಾ ರೀತಿಯಿಂದಲೂ ಇದೊಂದು ’ಪಟೇಲ್ ಪ್ಲ್ಯಾನ್’ ಎಂದೆನಿಸದೆ ಇರದು. ಜಗಮೋಹನ್ ದಾಲ್ಮಿಯಾ ಗುಂಪಿನೊಂದಿಗೆ ತನ್ನನ್ನು ಗುರುತಿಸಿಕೊಂಡಿ(ರುವ)ದ್ದ ಪಟೇಲ್, ಈಗ ಅಧಿಕಾರದಲ್ಲಿರುವ ಶರದ್ ಪವಾರ್ ಗುಂಪಿಗೆ ಆತ್ಮೀಯರಲ್ಲ. ಪವಾರ್ ಗುಂಪು ಕೂಡಾ ತನ್ನ ವಿರೋಧಿ ದಾಲ್ಮಿಯಾಗೆ ಆತ್ಮೀಯರಾಗಿದ್ದ ಪಟೇಲ್ ರನ್ನು ದೂರವಿರಿಸಿದ್ದು, ಅವರ ನೇತೃತ್ವದ ಕರ್ನಾಟಕ ಕ್ರಿಕೆಟ್ ಮಂಡಳಿಗೆ ಯಾವುದೇ ಅಂತರಾಷ್ಟ್ರೀಯ ಪಂದ್ಯವನ್ನು ಆಯೋಜಿಸಲು ತಾನು ಅಧಿಕಾರಕ್ಕೆ ಬಂದ ನಂತರ ನೀಡಿಲ್ಲ. ಹಾಗಾಗಿ ಪವಾರ್ ಅಧ್ಯಕ್ಷರಾದ ನಂತರ ಬೆಂಗಳೂರಿಗೆ ಯಾವುದೇ (ಹೆಚ್ಚಿನ) ಅಥವಾ ಪ್ರಮುಖ ಪಂದ್ಯಗಳನ್ನು ನೀಡಿಲ್ಲ.
ಈಗ ಎಲ್ಲಾ ರಾಜ್ಯದ ಕ್ರಿಕೆಟ್ ಮಂಡಳಿಗಳು ಪವಾರ್ ಗುಂಪನ್ನು ಓಲೈಸುವುದರ ಸಲುವಾಗಿ ತಮಗಿಷ್ಟವಿದ್ದು ಅಥವಾ ಇಷ್ಟವಿಲ್ಲದೆಯೂ ಸ್ವಾಭಾವಿಕವಾಗಿಯೇ ದಾಲ್ಮಿಯಾ ವಿರೋಧಿ ನಿಲುವನ್ನು ತಾಳಿಕೊಂಡಿವೆ. (ಕಟಕ್ ನಂತಹ ಸ್ಥಳಕ್ಕೆ ೨ ಪಂದ್ಯಗಳನ್ನು ಕೊಡಲಾಗಿದೆ ಎಂದರೆ, ಹೀಗೆ ಒಂದು ಗುಂಪನ್ನು ಓಲೈಸುವುದರಲ್ಲಿ ಅದೆಂತಹ ಲಾಭವಿದೆ ಎಂಬುದರ ಅರಿವಾಗುವುದು). ಮೊನ್ನೆ ಬೆಂಗಳೂರಿನಲ್ಲಿ ಕರ್ನಾಟಕ ಕ್ರಿಕೆಟ್ ಮಂಡಳಿ ಆಯೋಜಿಸಿದ ಭರ್ಜರಿ ಸಮಾರಂಭವೊಂದರಲ್ಲಿ ’ಕರ್ನಾಟಕಾಸ್ ಲೆಜೆಂಡ್ಸ್’ ಎಂದು ವಿಶಿ, ಬಿನ್ನಿ, ಪ್ರಸನ್ನ, ಚಂದ್ರಶೇಖರ್ ಮತ್ತು ಕಿರ್ಮಾನಿಯವರನ್ನು ಮೈಸೂರು ಪೇಟ ತೊಡಿಸಿ, ಅವರೊಂದಿಗೆ ಭಾರತಕ್ಕಾಗಿ ಆಡಿದ ಪ್ರಮುಖ ಆಟಗಾರರನ್ನು ಭಾರತದೆಲ್ಲೆಡೆಯಿಂದ ಆಮಂತ್ರಿಸಿ, ಸ್ವತಹ ಪವಾರ್ ರನ್ನೇ ಆಮಂತ್ರಿಸಿ ಅವರಿಂದಲೇ ಸನ್ಮಾನ ನಡೆಸಿದ್ದು ಪವಾರ್ ಗುಂಪಿಗೆ ಮತ್ತಷ್ಟು ಸನಿಹವಾಗಲು ವಿನಹಾ ಬೇರೆ ಯಾವುದೇ ಕಾರಣಕ್ಕಲ್ಲ. ಈ ಐವರು ಈಗಷ್ಟೇ ’ಲೆಜೆಂಡ್ಸ್’ ಆದವರಲ್ಲ. ಪಟೇಲ್ ಕರ್ನಾಟಕ ಕ್ರಿಕೆಟ್ ಮಂಡಳಿಯ ಚುಕ್ಕಾಣಿ ಹಿಡಿಯುವ ಎಷ್ಟೋ ವರ್ಷಗಳ ಮೊದಲೇ ’ಲೆಜೆಂಡ್ಸ್’ ಅನಿಸಿಕೊಂಡವರು. ಈ ಸನ್ಮಾನ ಬಹಳ ಮೊದಲೇ ನಡೆಯಬೇಕಿತ್ತು. ಎಲ್ಲಾ ಪಟೇಲ್ ನಾಟಕ.
- Read more about ಜಿ ಆರ್ ವಿಶ್ವನಾಥ್ ಅಧ್ಯಕ್ಷರಾದರೆ...
- 6 comments
- Log in or register to post comments