ಮಾಸ್ಟರ್ ಹಿರಣ್ಣಯ್ಯ ಪತ್ರ, ಈವಾರದ ಪರಾಗಸ್ಪರ್ಶಕ್ಕೆ ಪ್ರತಿಕ್ರಿಯೆ!

ಮಾಸ್ಟರ್ ಹಿರಣ್ಣಯ್ಯ ಪತ್ರ, ಈವಾರದ ಪರಾಗಸ್ಪರ್ಶಕ್ಕೆ ಪ್ರತಿಕ್ರಿಯೆ!

ಸಂಪದ ಸ್ನೇಹಿತರಿಗೆಲ್ಲ ನಮಸ್ಕಾರ.

ಈ ವಾರದ ಪರಾಗಸ್ಪರ್ಶ ಲೇಖನ ("ಅಮೆರಿಕದ ಹವೆಯಲ್ಲಿ ಕನ್ನಡದ ಕಂಪು ಬೆರೆತಾಗ" - ವಿಜಯ ಕರ್ನಾಟಕ, 31 ಮೇ 2009, ಭಾನುವಾರ) ತಂದುಕೊಟ್ಟ ಪ್ರತಿಕ್ರಿಯೆ-ಪತ್ರಗಳ ಪೈಕಿ ಡಾ. ಮಾಸ್ಟರ್ ಹಿರಣ್ಣಯ್ಯ ಅವರ ಪತ್ರವನ್ನು ನಿಮ್ಮೊಡನೆ ಹಂಚಿಕೊಳ್ಳಲು ಖುಶಿಪಡುತ್ತಿದ್ದೇನೆ.

- ಶ್ರೀವತ್ಸ ಜೋಶಿ

=========================

||ಶ್ರೀಮಾತಾ||

01 ಜೂನ್ 2009 ಬೆಂಗಳೂರು.

ಆತ್ಮೀಯ ಬಂಧು, ಶ್ರೀಯುತ ಶ್ರೀವತ್ಸಜೋಶಿಯವರಿಗೆ, ನಿಮ್ಮ ಮಾಸ್ಟರ್ ಹಿರಣ್ಣಯ್ಯನ ಅನಂತಾನಂತ ಅಭಿವಂದನೆಗಳು.

ಎಲ್ಲಿಂದ ಹೇಗೆ ಆರಂಭಿಸಲಿ? ಸರಿ-ಸಾಂಪ್ರದಾಯಕವಾಗಿಯೇ ಪ್ರಾರಂಭಿಸೋಣ.

ಸ್ವಾಮಿ, ನಾನೊಬ್ಬ ಅಚ್ಚ ಕನ್ನಡಿಗ. ರಂಗ ಕಲಾವಿದ. ನನ್ನ ನಾಮಧೇಯ, ವಂದನೆಗಳಿಗೆ ಹಿಂದೆಯೇ ತಿಳಿಸಿದ್ದೇನೆ. ಇನ್ನು ನಿಮ್ಮ ಪರಿಚಯ ನನಗಾದದ್ದು, ನೆನ್ನೆಯ "ವಿಜಯ ಕರ್ನಾಟಕ"ದಲ್ಲಿ, ತಮ್ಮ ಅನಿಸಿಕೆ ಹಾಗೂ ನಮ್ಮ ನಾಡ ನುಡಿಯ ಬಗೆಗಿನ ತಮ್ಮ ಅಗಾಧ ಅಭಿಮಾನ, ಕಳಕಳಿ ಮತ್ತು ಆಶಾಭಾವನೆಯ ಅನಿಸಿಕೆಯ ಲೇಖನ ಓದಿ, ಹೆಮ್ಮೆಯೆನಿಸಿ ಕೃತಜ್ಞತಾ ಭಾವದಿಂದ- "ಶಿರಸಾ ನಮಾಮಿ, ಮನಸಾ ಸ್ಮರಾಮಿ" ಅಂದೆ.

ಇಲ್ಲಿಯ ಕನ್ನಡ ನಾಡಲ್ಲೇ ಜನಿಸಿ, ಕನ್ನಡದ ಭಾಷೆಯಲ್ಲೇ ಉಂಡುಡುತ್ತಾ ಇದ್ದರೂ, ಅವುಗಳ ಬಗ್ಗೆ ಕಿಂಚಿತ್ತೂ ಅಭಿಮಾನವನ್ನಾಗಲೀ, ಆಶಾಭಾವನೆಯನ್ನಾಗಲೀ, ಕೃತಜ್ಞತಾ ಭಾವವನ್ನಾಗಲೀ, ಯಾವುದನ್ನೂ ಕಾಯಾವಾಚಾಮನಸಾ ಇಟ್ಟುಕೊಳ್ಳದೇ, ಅದರ ಬುಡಕ್ಕೇ ಕೊಡಲಿಯನ್ನು ಹಾಕುತ್ತಿರುವ ಜನ ನಾಯಕರನ್ನೂ, ಬುದ್ಧಿಜೀವಿಗಳನ್ನೂ, ನಾಗರಿಕರೆಂದು ತೋರಿಸಿಕೊಳ್ಳಲು, ಮಹಾ ಅನಾಗರೀಕರಂತೆ ವರ್ತಿಸುತ್ತಾ, ಇಲ್ಲಿ ಬಿಟ್ಟರೆ ಬೇರೆ ಕಡೆ, ಕವಡೆಯ ಕಿಮ್ಮತ್ತಿಗೂ ಬಾಳಲಾರದ, ಅಚ್ಚ ಕನ್ನಡಿಗರನ್ನು, ಅರವತ್ತು ವರ್ಷಗಳಿಂದ ನೋಡುತ್ತಾ, ಅವರ ಜೊತೆಜೊತೆಯಲ್ಲೇ ಬೆರೆಯುತ್ತಾ, ಅವರಿತ್ತ-ಈಯುತ್ತಿರವ ಕೃಪಾನ್ನದಲ್ಲೇ ಉಳಿದಿರುವ ನಾನು, ಅವರನ್ನು ಅತ್ತ ಹಳಿಯಲೂ ಆಗದೇ, ಇತ್ತ ಅವರನ್ನು ಸತ್ಯನ್ಯಾಯಗಳ ಹಳಿಯ ಮೇಲೆ ಎಳೆಯಲೂ ಆಗದೇ, ಉಳಿದಿರುವ ನಾನು, ನಿಮ್ಮ ಅಮೂಲ್ಯ ಅನುಭವಾಮೃತದ ಅಮೃತಬಿಂದುಪೂರಿತ ಮಾತುಗಳಿಂದ ಅಭಿಷಿಕ್ತನಾದೆ-ಅದಕ್ಕಾಗಿಯೇ ಈ ಅಭಿವಂದನಾ ಪತ್ರ.

ಸರ್ಕಾರದ ಭಾಷಾಂಧತೆಗೆ ಇಲ್ಲಿ ಒಂದೆರಡು ಉದಾಹರಣೆ-ಪಕ್ಕದ ತಮಿಳ್ ನಾಡಿನವರು ನಮ್ಮ ಭಾಷೆಗಿಂತ ಕಿರಿಯ ಚಾರಿತ್ರೆಯ ಒಡೆಯರವರಾದರೂ, ತಮ್ಮ ಅನನ್ಯ ಭಾಷಾಭಿಮಾನದ ಕುರುಹಾಗಿ ಕೇಂದ್ರ ಸರ್ಕಾರದಿಂದ ತಮಿಳನ್ನು "ಶಾಸ್ತ್ರೀಯ ಭಾಷೆ"ಯನ್ನಾಗಿ ಗುರುತಿಸಿಸಿ ಕೊಂಡು ಬೀಗುತ್ತಿದ್ದರೂ, ನಮ್ಮ ಪವಿತ್ರ ೨೮ ಸಂಸದ ಜನನಾಯಕರಿಗೆ ಅದರ ಪರಿವೆಯೇ ಇಲ್ಲದೇ, ಕನ್ನಡಿಗರ ತೆರಿಗೆಯ ಹಣವನ್ನು ಬ್ಯಾಟಾ-ಕೋಟಾ ರೂಪದಲ್ಲಿ ತಿಂದು ತೇಗಿದರು ಕಳೆದೈದು ವರ್ಷಗಳು. ಇಲ್ಲಿನ ಅನೇಕ ಸಂಘ ಸಂಸ್ಥೆಗಳು, ನಾಡನುಡಿಯ ಅಭಿಮಾನಿಗಳೂ ಗದ್ದಲ ಎಬ್ಬಿಸಿದ ಮೇಲೆ, ಕಾಟಾಚಾರಕ್ಕೆ ಮತ್ತು ಮುಂದಿನ ಚುನಾವಣೆಯಲ್ಲಿನ ಮತದಾಸೆಗೆ, ನೆಪಕ್ಕೆ ಕನ್ನಡವನ್ನು ಶಾಸ್ತ್ರಿಯ ಭಾಷೆಯೆಂದು ಕೇಂದ್ರದಿಂದ ಹೇಳಿಸಿದರೂ, ಇನ್ನೂ ಅದು ಅಧಿಕೃತವಾಗಿಲ್ಲ. ಕಾರಣ ತಮಿಳು ನಾಡಿನ ನ್ಯಾಯವಾದಿಯೊಬ್ಬರು(ಶ್ರೀಗಾಂಧಿ ಎಂಬುವವರು) ಚನ್ನೈನ ಉಚ್ಚನ್ಯಾಯಾಲಯದಲ್ಲಿ, ಕನ್ನಡದ ಶಾಸ್ತ್ರೀಯ ಭಾಷಾ ಸ್ಥಾನಕ್ಕೆ ಕೊಟ್ಟಿರುವ ಮನ್ನಣೆಯನ್ನು ರದ್ದು ಪಡಿಸುವಂತೆ ಕೋರಿದ್ದಾರೆ. ಅದಕ್ಕೆ ಆಕ್ಷೇಪಣಾ ಅರ್ಜಿಯನ್ನು ಹಾಕುವಲ್ಲಿಯೂ ಸಹ ನಮ್ಮ ಘನ ಸರ್ಕಾರದವರು ಅನಗತ್ಯ ಆಲಸ್ಯವನ್ನೂ, ವಿಳಂಬ ನೀತಿಯನ್ನೂ ಅನುಸರಿಸುತ್ತಾ ಇರುವುದು, ಸರ್ಕಾರದ ಅಜ್ಞಾನಕ್ಕೆ ಹಾಗೂ ನಮ್ಮ ದೌರ್ಭಾಗ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಇನ್ನು ಅದು ಇತ್ಯರ್ಥವಾಗುವವರೆಗೂ ನಮ್ಮ ಸ್ಥಿತಿ ಅಧೋಗತಿ. ಇನ್ನೊಂದು ಉದಾಹರಣೆ-ಸರ್ಕಾರದ ನಾಮ ಫಲಕಗಳು. "ಹೆಂಗಸರ ಹೆರಿಗೆ ಆಸ್ಪತ್ರೆ". "ಸರ್ಕಾರದ ಬೀಜ ನಿಗಮ", ವಿದ್ಯುತ್ ಚಿತಾಗಾರದ ದುರಸ್ತೆಗೆ ಮುನ್ನ ಫಲಕ "ವಿದ್ಯುತ್ ಚಿತಾಗಾರ ದುರಸ್ಥಿ ಮಾಡಲ್ಪಡುತ್ತಿದೆ, ಸರ್ವರೂ ಸಹಕರಿಸಿ" ಆನಂತರ "ವಿದ್ಯುತ್ ಚಿತಾಗಾರ ಸಿದ್ಧವಾಗಿದೆ, ಸರ್ವರೂ ಸಹಕರಿಸಿ". ಇದಲ್ಲದೆ ನಮ್ಮ ಶಿಕ್ಷಣದಲ್ಲಿ ಆಗಲೀ, ನ್ಯಾಯಾಂಗದಲ್ಲಾಗಲೀ ಅಥವಾ ಸರ್ಕಾರದಲ್ಲಾಗಲೀ ಕನ್ನಡವನ್ನು ಇನ್ನೂ ಅಧಿಕೃತ ಭಾಷೆಯನ್ನಾಗಿ ಘೋಷಿಸಿಯೂ ಇಲ್ಲಾ, ಆಚರಣೆಗಂತೂ ತಂದೇ ಇಲ್ಲಾ. ತಮ್ಮ ಗಮನಕ್ಕೆ ತರಲು ಅಪೇಕ್ಷಿಸುತ್ತೇನೆ-ನಮ್ಮ ಸರ್ಕಾರದ ಚುನಾಯಿತ ಪ್ರತಿ ನಿಧಿಗಳಿಗೆ, ಮಂತ್ರಿಮಹೋದಯರನೇಕರಿಗೆ ಸರಿಯಾದ ಕನ್ನಡವೇ ಬರೋಲ್ಲಾ. ಒಬ್ಬ ಕಾಡುಮಂತ್ರಿಗಳು(ಅರಣ್ಯ ಖಾತಾ ಮಂತ್ರಿ) ರಾಜ್ಯೋತ್ಸವ ಅನ್ನುವ ಬದಲು "ರಾಜ್ಯೋಶವ" ಎಂದೇ ಹೇಳುವುದು. ಇನ್ನು ಸರ್ಕಾರದ ಅಧಿಕಾರಿಗಳಿಗಂತೂ, ಮೇಲಿಂದ ಹಿಡಿದು ಮಧ್ಯದವರವರೆಗೂ ಕನ್ನಡ ಗಂಧವೇ ಇಲ್ಲ ಹಾಗೂ ಅದರ ಮೇಲೆ ಅಭಿಮಾನಕ್ಕಿಂತಾ ದ್ವೇಷವೇ ಹೆಚ್ಚು. ಹೀಗೆ ಪಟ್ಟಿ ಮಾಡುತ್ತಾ ಹೋದರೆ ನಾವಿರುವುದು ಎಲ್ಲಿ ಎಂಬ ಪ್ರಶ್ನೆ ಕಾಡುತ್ತೆ. ನಮ್ಮ ಗ್ರಾಮಾಂತರದತ್ತ ಹೋದಾಗ ಮಾತ್ರಾವೇ ನಾವು ಶುದ್ಧ ಗ್ರಾಮೀಣ ಕನ್ನಡವನ್ನು ಕೇಳಲು ಸಾಧ್ಯ.

ನನ್ನ ಮಗ ಅಮೆರಿಕಾದ ವರ್ಜೀನಿಯಾದ ವಿಡಾಟ್-(ವರ್ಜೀನಿಯಾ ಡಿಪಾರ್ಟ್ಮೆಂಟ್ ಆಫ್ ಟ್ರಾನ್ಸ್‌ಪ್ರೊಟೇಷನ್)ನಲ್ಲಿ ಉನ್ನತ ಹುದ್ದೆಯಲ್ಲಿದ್ದಾನೆ. ನಾನು ನಮ್ಮ ಪವಿತ್ರ ಮಣ್ಣಿನ ಸಾಂಸ್ಕೃತಿಕ ಹರಿಕಾರನಾಗಿ, ಅಲ್ಲಿಗೆ ೧೯೮೩ ರಿಂದ ಈವರೆಗೆ ೯ ಬಾರಿ ಬಂದಿದ್ದೇನೆ. ಅಲ್ಲಿಯ ಎಲ್ಲಾ ಸ್ಥಳಗಳಲ್ಲೂ, ಎಲ್ಲೆಲ್ಲಿ ನಮ್ಮ ಕನ್ನಡಿಗರಿದ್ದಾರೆ ಅಲ್ಲೆಲ್ಲಾ ನಮ್ಮ ನಾಟಕಗಳನ್ನೂ ಮತ್ತು ನನ್ನ ಉಪನ್ಯಾಸಗಳನ್ನೂ ನೀಡಿ, ಅಲ್ಲಿಯ ಎಲ್ಲ ಅನ್ನದಾತರ ಆಶೀರ್ವಾದಕ್ಕೂ ಭಾಗಿಯಾಗಿದ್ದೇನೆ. ಅಲ್ಲಿ ನನಗೆ ಅತ್ಯಮೂಲ್ಯವಾದ ಅನೇಕಾನೇಕ ಪ್ರಾಣಮಿತ್ರರಿದ್ದಾರೆ. ಅಲ್ಲಿಯವರ ಭಾಷಾಭಿಮಾನಕ್ಕೆ ಮಾರುಹೋಗಿದ್ದೇನೆ. ಎಲ್ಲೋ ಒಂದೆರಡು ಕಡೆಯ ಈ ಕಾಕ್‌ಟೈಲ್ ಪಾರ್ಟಿಗಳಲ್ಲಿ, ಕೆಲವು ಭಾರತೀಯರು ಮಾತ್ರಾ ನಮ್ಮ ಪವಿತ್ರ ಭಾರತವನ್ನು ಹೀಗಳೆಯುವದನ್ನೂ ಸಹ ಕೇಳಿ, ಅವರ ಅಜ್ಞಾನ-ಕೃತಘ್ನತೆ ಕಂಡು ಸಿಟ್ಟು ಬಂದು ನುಂಗಿಯೂ ಇದ್ದೇನೆ. ನಾವು ಯಾವ ದೇಶದವರೇ ಆಗಿರಲಿ, ಎಲ್ಲಿ ನಮ್ಮ ಜೀವನ ನಿರ್ಭಾಧಿತವಾಗಿ ನಡೆಯುತ್ತಾ, ನಮಗೆ ಅನ್ನ, ಜ್ಞಾನಗಳನ್ನು ನೀಡುತ್ತಾ ಇರುತ್ತೋ,ಅದನ್ನು ನಮ್ಮ ತಾಯಿನಾಡಿನಷ್ಟೇ ಪ್ರೀತಿ ಗೌರವಗಳಿಂದ ಪೂಜಿಸಬೇಕಲ್ಲವೇ? ನಮ್ಮಮ್ಮನಂತೆಯೇ ಅನ್ಯರಮ್ಮನವರನ್ನೂ ಸಹ ಗೌರವಿಸುವುದಲ್ಲವೇ ಮಾನವ ಸಂಸ್ಕೃತಿಯ ಸಂಕೇತ. ಅದನ್ನೇ ಪಂಪ ಮಹಾಕವಿಯಿಂದ ಹಿಡಿದು ಕುವೆಂಪು ವರೆಗೂ ಸಾರಿಸಾರಿ ಹೇಳಿರುವುದು. "ಮಾನವಕುಲಂ ಒಂದೆ ಒಲಂ" ಮತ್ತು "ಮನುಜಮತ ವಿಶ್ವಪಥ" ಎಂದು.

ಎನೇ ಆದರೂ ಒಟ್ಟಿನಲ್ಲಿ ಕನ್ನಡಿಗರಾದ ನಮ್ಮ ಸಹನೆ, ಔದಾರ್ಯ, ಹೊಂದಾಣಿಕೆ ಮತ್ತು ವಿಶ್ವಾಸ ನಂಬಿಕೆಗಳು ಸ್ವಲ್ಪ ಹೆಚ್ಚೆನ್ನುವಷ್ಟನ್ನೇ ಬೆಳೆಸಿಕೊಂಡಿದ್ದವೇ ಅಲ್ಲವೆ ಜೋಶಿಯವರೆ? "ಆಲಸ್ಯಂ ಅಮೃತಂ ವಿಷಂ" ಎಂದವರೇ "ಅತಿಯಾದರೆ ಅನ್ನವೂ ಸಹ ವಿಷವಾದೀತು" ಎಂದಿದ್ದಾರೆ. ನಾನಂತೂ ಆಶಾವಾದಿ. ಆದರ್ಶವಾದಿಯೂ ಆಗಬೇಕೆಂದೇ ಆಸೆ. ನಮ್ಮ ಬಳ್ಳಾರಿ ಬೀಚಿ ಉವಾಚದಂತೆ-"ಜಗದಲ್ಲಿ ಎರಡೇ ಜಾತಿ. ಒಂದು ಸತ್ತಂತೆ ಬದುಕಿರುವವರು, ಇನ್ನೊಂದು ಸತ್ತ ಮೇಲೂ ಬದುಕಿರುವವರು". ನನಗೆ ಎರಡನೆಯ ಜಾತಿಯವನಾಗುವ ಆಸೆ.

ಶುಭಮಸ್ತು. ವಂದನೆಗಳು.,

ಎಂದೂ ನಿಮ್ಮವ,.

ಡಾ| ಮಾಸ್ಟರ್ ಹಿರಣ್ಣಯ್ಯ.

=====================================

Rating
No votes yet

Comments