ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು

ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು

Text in Baraha IME 1.0 UNICODE :

ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು -
ಪ್ರಭುತ್ವ (STATE) ಎಂಬುದು ಪ್ರಧಾನವಾಗಿ ರಾಜಕಾರಣ ಆಧಾರಿತವಾದುದು :
---------------------------------------------------------------------

ಅಮೆರಿಕಾ (USA) ದಲ್ಲಿ ಚೀನಾ ದೇಶದ ರಾಯಭಾರಿಯಾಗಿದ್ದ ’ಹುಶೀ’ ಅವರು ಹೇಳಿದ ಮಾತು
ಇಲ್ಲಿ ನೆನಪಾಗುತ್ತಿದೆ ; "ಚೀನಾದ ಮೇಲೆ ಇಪ್ಪತ್ತು ಶತಮಾನಗಳ ಕಾಲ, ಸಾಂಸ್ಕೃತಿಕ
ಪ್ರಭುತ್ವವನ್ನು ಭಾರತದೇಶವು ಸ್ಥಾಪಿಸಿತ್ತು. ಚೀನಾ ದೇಶಕ್ಕೆ ಒಬ್ಬನೇ ಒಬ್ಬ
ಸೈನಿಕನನ್ನೂ ಕಳುಹಿಸದೆಯೇ ಅಂತಹ ಪ್ರಭಾವ ಬೀರಲು ಭಾರತಕ್ಕೆ ಸಾಧ್ಯವಾಯಿತು. ನೆರೆಯ
ದೇಶಗಳ ಮೇಲೆ ತನ್ನ ಸಂಸ್ಕೃತಿಯನ್ನು ಭಾರತ ಎಂದೂ ಬಲವಂತದಿಂದ ಹೇರಲಿಲ್ಲ."

’ವಿಜಯಕರ್ನಾಟಕ’ ಪತ್ರಿಕೆಯ ’ವಾರದಾಗೆ ಒಂದು ಸರತಿ...’ ಅಂಕಣದಲ್ಲಿ (25.7.2007),
ಪತ್ರಕರ್ತ ಅನಂತ್ ಚಿನಿವಾರ ಅವರು ಬರೆದಿರುವ ಅಂಶಗಳಿಗೆ ಪೂರಕವಾಗಿ ಒಂದಿಷ್ಟು
ಮಾತುಗಳನ್ನು ಹೇಳಬಹುದು :

ಒಂದು ದೇಶದ ಗಡಿಯನ್ನು ನಿರ್ಧರಿಸುವುದು ಆ ದೇಶದ ರಾಜಕಾರಣ. ಶಾತವಾಹನರು, ಗುಪ್ತರು,
ಮೌರ್ಯರು ಭಾರತದ ಬಹು ಭಾಗ ಆಳಿರಬಹುದಾದರೂ, ರಾಜರಿಗಿಂತ ಪ್ರಧಾನವಾಗಿ ಸಂಸ್ಕೃತಿ -
ಧರ್ಮಗಳೇ ಭಾರತವನ್ನು - ಭಾರತದ ಸ್ವರೂಪವನ್ನು ನಿರ್ಧರಿಸಿವೆ. ಇಲ್ಲಿನ ಜನ ನೂರೆಂಟು
ಭಾಷೆಗಳ - ಪ್ರಾಂತಗಳ ವೈವಿಧ್ಯತೆಯ ನಡುವೆಯೇ ಕಾಶಿ, ಬದರಿ, ರಾಮೇಶ್ವರಗಳಿಗೆ, ದೇಶದ
ಎಲ್ಲ ಭಾಗಗಳಿಂದ, ಅಕ್ಷರಶಃ ಅನೇಕ ಸಾವಿರ ವರ್ಷಗಳಿಂದ ಹೋಗಿ ಬರುತ್ತಿದ್ದಾರೆ. ಈ
ರಾಷ್ಟ್ರದ ಸಾಂಸ್ಕೃತಿಕ ಗಡಿಗಳನ್ನು, ಇಲ್ಲಿನ ಜನ - ಇಲ್ಲಿನ ಪರಂಪರೆ - ಇಲ್ಲಿನ
ಧರ್ಮಗಳೇ ನಿರ್ಧರಿಸಿವೆ.

ಭಾಷಾ "ಸಮಸ್ಯೆ" ಇತ್ತೀಚಿನ "ಸೃಷ್ಟಿ". ಸಾವಿರಾರು ವರ್ಷಗಳಲ್ಲಿ ಭಾರತೀಯರಿಗೆ,
ವಿದೇಶಿ ಪ್ರವಾಸಿಗಳಿಗೆ ಅದೊಂದು ಸಮಸ್ಯೆಯಾಗಿ ಕಾಡಿಲ್ಲ. ಇಲ್ಲಿನ ತಕ್ಷಶಿಲೆ - ನಳಂದ
ವಿಶ್ವವಿದ್ಯಾಲಯಗಳಲ್ಲಿ ಓದಲು ಬರುತ್ತಿದ್ದ ಸಾವಿರಾರು ವಿದೇಶೀ ವಿದ್ಯಾರ್ಥಿಗಳಿಗೂ
ಭಾಷೆ ಸಮಸ್ಯೆಯಾಗಿ ಕಾಡಲಿಲ್ಲ. ಇಂದು ನಮ್ಮದೇ ದೇಶದ ಹಿಂದಿ - ಕನ್ನಡ - ತಮಿಳು
ಭಾಷೆಗಳನ್ನು ನಾವೇ ಸಮಸ್ಯೆಯಾಗಿ ಮಾಡಿಕೊಳ್ಳುತ್ತಿದ್ದೇವೆ. ಇದೀಗ ರಾಷ್ಟ್ರಪತಿಯಾಗಿ
ಇಂಗ್ಲಿಷ್ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಪ್ರತಿಭಾ ಪಾಟೀಲ್, ಮರಾಠಿಯಲ್ಲೋ
- ಹಿಂದಿಯಲ್ಲೋ ಪ್ರಮಾಣವಚನ ಸ್ವೀಕರಿಸಬಹುದಿತ್ತು. 1996 ರಲ್ಲಿ ಪ್ರಧಾನಮಂತ್ರಿಯಾಗಿ
ಪ್ರಮಾಣವಚನ ಸ್ವೀಕರಿಸಿದ, ನಮ್ಮಂತಹ ಕನ್ನಡಿಗರ ಕಣ್ಮಣಿ, ಸನ್ಮಾನ್ಯ ದೇವೇಗೌಡರೂ,
ಇಂಗ್ಲಿಷ್‍ನ ಬದಲು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಬಹುದಿತ್ತು. "ಸ್ವಾತಂತ್ರ್ಯ"
ಬಂದು (?) ಅರವತ್ತು ವರ್ಷಗಳಾದರೂ ನಮಗೆ ನಮ್ಮದೇ ಭಾಷೆಗಳು ಬೇಡವಾಗಿವೆ, ವಿದೇಶೀ ಭಾಷೆ
ಆಪ್ಯಾಯಮಾನವಾಗಿದೆ.

ಚಿನಿವಾರ ಅವರು "ನಮಗೆ ನಮ್ಮದೇ ಅಂತ ಹೇಳಬಹುದಾದ ಒಂದು ಕಾಮನ್ ಲಾಂಗ್ವೇಜ್ ಇಲ್ಲ.",
ಎಂದು ಬರೆದಿದ್ದಾರೆ. ಕೆಲವು ಬುದ್ಧಿಜೀವಿಗಳೂ ಆ ಮಾತನ್ನು ಆಡುವುದುಂಟು. ಕಾಮನ್
ಲಾಂಗ್ವೇಜ್ ಏಕೆ ಬೇಕು, ಎಂಬುದನ್ನು ನಾವೊಮ್ಮೆ ಯೋಚಿಸಬೇಕು. ಭಾರತದಷ್ಟು
ವಿಸ್ತೀರ್ಣ - ಗಾತ್ರಗಳ (ಮತ್ತು ವಸಾಹತು ಅಲ್ಲದ) ಯಾವ ದೇಶಕ್ಕೆ ಈ ಬಗೆಯ ಕಾಮನ್
ಲಾಂಗ್ವೇಜ್ ಇದೆ ಎಂಬುದನ್ನು ನಾವು ಪರಿಶೀಲಿಸಿ, ಈ ಮಾತನ್ನು ಆಡಬೇಕಾಗಿದೆ. ಕಾಮನ್
ಲಾಂಗ್ವೇಜ್ ಬೇಕು ಎನ್ನುವುದರ ಹಿಂದಿನ ಶಕ್ತಿಗಳು, ಎಲ್ಲ ಭಾರತೀಯ ಭಾಷೆಗಳನ್ನು ಸಾರಾ
ಸಗಟಾಗಿ ಹೂತುಹಾಕಿಬಿಡುತ್ತವೆ.

ನಾನಿಲ್ಲಿ ಬ್ರಿಟಿಷರನ್ನು - ಅವರ ಇಂಗ್ಲಿಷ್ ಭಾಷೆಯನ್ನು ಆಕ್ಷೇಪಿಸುತ್ತಿಲ್ಲ.
ತಪ್ಪು ನಮ್ಮದೇ. ನಮ್ಮಲ್ಲಿ ಒಗ್ಗಟ್ಟಿಲ್ಲ, ಸ್ವಾಭಿಮಾನವಿಲ್ಲ. ನಮ್ಮ ಅಂತಃಕಲಹ -
ನಮ್ಮ ಒಳಜಗಳಗಳು ನಮ್ಮನ್ನು ಈ ಸ್ಥಿತಿಗೆ ತಂದಿಟ್ಟಿವೆ. ನಮ್ಮಲ್ಲಿ ಎಷ್ಟು ಪ್ರತಿಭೆ
ಇದ್ದರೇನು, ಎಂತಹ ಶೌರ್ಯ ಇದ್ದರೇನು ? ಹಿಡಿಯಷ್ಟು ಜನ ಬ್ರಿಟಿಷರು ನಮ್ಮನ್ನು ನೂರಾರು
ವರ್ಷ ಆಳಿದರು, ಅವರ ಭಾಷೆ ಈಗಲೂ (ಮುಂದೆ ಸಹ) ಆಳುತ್ತಿದೆ.

ಮುರಾರಜಿ ದೇಸಾಯಿ ಅಂತಹವರೇ "We were never a nation, before British" ಎಂದರು.
ನೆಹರೂ ಅಂತಹವರ ವಿಷಯ ಮಾತನಾಡದಿರುವುದು ಒಳ್ಳೆಯದು. ಎಲ್ಲ "ವಿದ್ವಾಂಸ"ರ ಒಕ್ಕೊರಲ
ಅಭಿಪ್ರಾಯ ಒಂದೇ : "ಬ್ರಿಟಿಷರಿಗಿಂತ ಮುಂಚೆ, ಇಡೀ ಭಾರತವನ್ನು ಯಾರು ಆಳಿದ್ದಾರೆ ?"
ಎಂಬುದೇ. ಒಟ್ಟಿನಲ್ಲಿ ಒಬ್ಬ ರಾಜ - ಒಬ್ಬ ಬಾದಷಹ ಆಳಿದರೆ ಮಾತ್ರ ಅದೊಂದು ದೇಶ,
ಅದೊಂದು ರಾಷ್ಟ್ರ. ಒಂದು ದೇಶದ ಸಾಂಸ್ಕೃತಿಕ ಆಯಾಮ ನಮಗೆ ಗೌಣ. ಹಾಗೆಂದೇ,
ಭಾರತವನ್ನು "ಬುದ್ಧಿಜೀವಿ"ಗಳು, ಹಲವು ರಾಷ್ಟ್ರಗಳ ಒಂದು ಗುಂಪು ಎನ್ನುತ್ತಾರೆ, ಭಾರತ
ಒಂದು ರಾಷ್ಟ್ರವೇ ಅಲ್ಲ ಎನ್ನುವುದೂ ಉಂಟು. ಸಂವಿಧಾನ ಹೇಳುವ UNION - ಒಕ್ಕೂಟ
ಎನ್ನುವುದು ಆ ಅರ್ಥದಲ್ಲೇ ಎಂಬುದು ಕೆಲವರ ವಾದ. ಸಂವಿಧಾನಶಿಲ್ಪಿ ಡಾ|| ಅಂಬೇಡ್ಕರ್
ಅವರ ದೃಷ್ಟಿಯಲ್ಲಿ , ಅದು ರಾಜ್ಯಗಳ - ಸಂಸ್ಥಾನಗಳ ಒಕ್ಕೂಟವೇ ಹೊರತು, ರಾಷ್ಟ್ರಗಳ
ಒಕ್ಕೂಟ ಅಲ್ಲ. ಬ್ರಿಟಿಷರು "Indian Sub-Continent" ಎಂದು
ಉಲ್ಲೇಖಿಸುತ್ತಿದ್ದುದನ್ನು ನಾವೇ ಅತಿಯಾಗಿ ಮಾಡಿ, ಇದೊಂದು ರಾಷ್ಟ್ರಗಳ ಒಕ್ಕೂಟ
ಎಂದು ಅರ್ಥೈಸುವುದು, ನಮಗೆ ನಾವೇ ಮಾಡಿಕೊಳ್ಳುವ ದ್ರೋಹವಾದೀತು.

ಮೆಕಾಲೆ ಬದಲಾಯಿಸಿದ ನಮ್ಮ ಶಿಕ್ಷಣ ಕ್ರಮ, ಭಾರತೀಯರಲ್ಲಿ ಅಂತಹ ಬದಲಾವಣೆ ತಂದಿದೆ. ಈ
ಮಾತುಗಳು ಇಂಗ್ಲಿಷ್ ಭಾಷಾ ವಿರೋಧ ಧ್ವನಿಸಬಾರದು. ನಮ್ಮ ಭಾಷೆಗಳ ಗತಿ ಏನು ಎಂಬುದೇ
ಆತಂಕ ಉಂಟು ಮಾಡುತ್ತಿದೆ.

ನಮ್ಮ ಅಂತಃಕಲಹ - ನಮ್ಮ ಮೂರ್ಖತನಗಳಿಂದ ನಮ್ಮ ಗಡಿಗಳು ಒಳಗೊಳಗೇ ಸರಿಯುತ್ತಿವೆ.
ಬ್ರಿಟಿಷರು ನೇಪಾಳ, ಭೂತಾನ, ಬ್ರಹ್ಮದೇಶ (ಬರ್ಮಾ), ಶ್ರೀಲಂಕಾಗಳನ್ನು ಮುಂಚೆಯೇ ಬೇರೆ
ಮಾಡಿದರು. ಪಾಕಿಸ್ತಾನ - ಬಂಗ್ಲಾದೇಶ - ಕೈಬಿಟ್ಟುಹೋಗುತ್ತಿರುವ ಕಾಶ್ಮೀರ -
ಅರುಣಾಚಲ ಪ್ರದೇಶಗಳು, ನಮ್ಮ "ನಾಯಕ"ರ "ಸೃಷ್ಟಿ"ಗಳು.

ಭಾರತೀಯ ಪರಂಪರೆ - ಸಂಸ್ಕೃತಿಗಳ ವೈಶಿಷ್ಟ್ಯಗಳನ್ನು ರೂಢಿಸಿಕೊಂಡಿರುವ, ಮೆಚ್ಚುವ,
ಇಂಡೋನೇಷ್ಯಾ - ಕಾಂಬೋಡಿಯಾ - ಫಿಲಿಪ್ಪೈನ್ಸ್ ಅಂತಹ ದೇಶಗಳನ್ನು ನೋಡಿಯಾದರೂ ನಮ್ಮ
ಸಂಸ್ಕೃತಿಯನ್ನು ನಾವು ಗೌರವಿಸಬೇಕಾಗಿದೆ, ಉಳಿಸಿಕೊಳ್ಳಬೇಕಾಗಿದೆ. ಇಪ್ಪತ್ತನೇ
ಶತಮಾನದಲ್ಲಿ ಯೂರೋಪಿನಲ್ಲಿ "ಪ್ರಷ್ಯಾ" ಎಂಬ ದೇಶವಿತ್ತು. ಈಗ ಇಲ್ಲ. ಭಾರತ
ಹಾಗಾಗಬಾರದು. ("ಇಸ್ರೇಲ್" ಇರಲಿಲ್ಲ. ಅದನ್ನ್ನ ಸಹ ನಾವು ಮರೆಯಬಾರದು.)

ಈ ಹಿನ್ನೆಲೆಯಲ್ಲಿ, ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು -
ಪ್ರಭುತ್ವ (STATE) ಎಂಬುದು ಪ್ರಧಾನವಾಗಿ ರಾಜಕಾರಣ ಆಧಾರಿತವಾದುದು, ಎಂಬುದನ್ನು
ನಾವು ಮರೆಯದಿರೋಣ.

ಮಂಜುನಾಥ ಅಜ್ಜಂಪುರ, ಬೆಂಗಳೂರು.
anmanjunath@gmail.com

Rating
No votes yet

Comments