ವಿರೋಧಾಭಾಸ ವಿಪರ್ಯಾಸಗಳ ನಡುವೆ ಬದುಕು ನಿರಂತರ!!!
ಅಂದಿನ ನಾಯಕರು ಅಂದಿದ್ದರು "ಬನ್ನಿ ಎಲ್ಲರೂ ಜೈಲಿಗೆ ಹೋಗೋಣ"
ಇಂದಿನ ಈ ನಾಯಕಿಯ ಕೂಗು "ಸಹೋದರಿಯರೇ ಪಬ್ಬಿಗೆ ಹೋಗೋಣ"
ಮಹಾತ್ಮಾ ಗಾಂಧಿಯನು ಕೊಂದವರನು ಇಂದೂ ದೂಷಿಸುತ್ತಿರುತ್ತಾರೆ
ರಾಜೀವ ಗಾಂಧಿಯ ಕೊಲೆಗಾರ್ತಿಯ ಕುಶಲವನು ವಿಚಾರಿಸುತ್ತಿರುತ್ತಾರೆ
ಜೈಲಿನಲ್ಲಿರುವ ಕೊಲೆಗಾರ್ತಿಯ ಜೊತೆ ಚಕ್ಕಂದ ಆಡಿ ಬರುವವರು
ಕೊಲೆಯ ರೂವಾರಿಯನು ತಮಗೆ ಹಿಡಿದುಕೊಡಿ ಎಂದು ಬೇಡುವರು
ಇಂದಿರಾ ಕೊಲೆಯಾದಾಗ ಕಾನೂನನ್ನು ಕೈಗೆತ್ತಿಕೊಂಡವರು ಅಂದು
ಕಾನೂನನ್ನು ಕೈಗೆತ್ತಿಕೊಳ್ಳಬೇಡಿ ಎಂದು ಕೂಗಾಡುತ್ತಿದ್ದಾರೆ ಇಂದು
ನಮ್ಮ ನಾಡಿನ ಕಾನೂನನ್ನು ಯಾರು ಕೈಗೆತ್ತಿಕೊಂಡರೂ ಅಪರಾಧವೇ
ನೇಣು ಶಿಕ್ಷೆ ಪಡೆದವನ ವರ್ಷಾನುಗಟ್ಟಲೆ ಉಳಿಸುವುದು ಅಪರಾಧವೇ
ನ್ಯಾಯಾಲಯ ಗಲ್ಲು ಶಿಕ್ಷೆ ನೀಡಿದರೂ ಅದಕ್ಕನುಮತಿ ನೀಡದವರು
ಗಡಿಯಾಚೆಗಿನ ಪಾತಕಿಗಳ ಹಸ್ತಾಂತರಕೆ ಬೇಡಿಕೆ ಸಲ್ಲಿಸುತಿಹರು
ನಡೆಗೂ ನುಡಿಗೂ ನಡುವೆ ನಮ್ಮಲ್ಲಿ ಸದಾ ಇದೆ ಅಜಗಜಾಂತರ
ವಿರೋಧಾಭಾಸ ವಿಪರ್ಯಾಸಗಳ ನಡುವೆ ಈ ಬದುಕು ನಿರಂತರ
***********************************
Rating