ಮಕ್ಕಳಿಗೆ ಮನೆಯಲ್ಲಿಯೇ ಶಾಲೆ - ಹೇಗೆ? 

ಮಕ್ಕಳಿಗೆ ಮನೆಯಲ್ಲಿಯೇ ಶಾಲೆ - ಹೇಗೆ? 

ಒಂದು ದಿನ ಕಬ್ಬನ್ ಪಾರ್ಕಿನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಒಂದೆಡೆ ಸೇರಿದ್ದರು. ನನ್ನ ಅರ್ಧಾಂಗಿ ಸುಮ ನನ್ನನ್ನೂ ನಮ್ಮ ಮಕ್ಕಳ ಜೊತೆ ಅಲ್ಲಿಗೆ ಎಳೆದುಕೊಂಡು ಹೋಗಿದ್ದಳು. ಅದೊಂದು “ಹೋಮ್ ಸ್ಕೂಲಿಂಗ್” ಮಾಡುತ್ತಿರುವ, ಅಂದರೆ ಮನೆಯಲ್ಲೇ ಮಕ್ಕಳಿಗೆ ಪಾಠ ಹೇಳುತ್ತಿರುವ ಪೋಷಕರ ಸಮ್ಮಿಲನವಾಗಿತ್ತು. ಬಹುಶಃ ಆಗಾಗ ಅವರೆಲ್ಲರೂ ಜೊತೆಗೂಡಿ ಮಾತನಾಡುತ್ತಿದ್ದರೆಂದು ಕಾಣುತ್ತದೆ - ಅಲ್ಲಿ ಕೆಲವು ಮಕ್ಕಳು ದೂರದಿಂದಲೇ ಒಬ್ಬರಿನ್ನೊಬ್ಬರ ಹೆಸರು ಕೂಗಿಕೊಂಡು, ಜೊತೆಗೂಡಿ ಕೈ ಹಿಡಿದು, ಆಡಲಿಕ್ಕೆಂದು ಹೊರಟುಬಿಟ್ಟಿದ್ದರು. ಅಲ್ಲಿ ನೆರೆದಿದ್ದ ಮಕ್ಕಳಲ್ಲೊಂದು ವಿಶೇಷತೆಯಿತ್ತು. ಸಾಧಾರಣ ಮಕ್ಕಳಂತೆ ಇವರ ಮುಖದಲ್ಲಿ ಯಾವುದೇ ಒತ್ತಡ ಕಾಣುತ್ತಿರಲಿಲ್ಲ. ಮಹಾನಗರಗಳ ಮಕ್ಕಳಲ್ಲಿ ಕಾಣುವ ದುಗುಡ, ಅವಸರ ಇವರಲ್ಲಿರಲಿಲ್ಲ. ಅಲ್ಲಿ ಆಡುತ್ತಿದ್ದ ಮಕ್ಕಳಲ್ಲಿ ಒಂದು ರೀತಿಯ ನಿರಾಳ ಭಾವ ಇತ್ತು. ಪೋಷಕರೂ ಕೂಡ ನೆಮ್ಮದಿಯಿಂದ ಮಕ್ಕಳನ್ನು ಜೊತೆಗೆ ಆಡಲು ಬಿಟ್ಟು ಏನೂ ಒತ್ತಡವಿಲ್ಲದೆ ಆರಾಮದಲ್ಲಿ ಪರಸ್ಪರ ಮಾತನಾಡಿಕೊಳ್ಳುತ್ತ ಕುಳಿತರು. ಬೆಂಗಳೂರಿನಲ್ಲಿ ಮನೆಯಲ್ಲಿಯೇ ಪಾಠ ಹೇಳುತ್ತಿರುವ ಪೋಷಕರು ದೊಡ್ಡ ಪ್ರಮಾಣದಲ್ಲಿ ಇದ್ದಾರೆ ಎನ್ನುವ ಸಂಗತಿ ನಮಗೆ ಆ ದಿನ ತಿಳಿದುಬಂದಿತು. ಅಲ್ಲಿ ಬಂದಿದ್ದ ಪೋಷಕರೊಡನೆ ಮಾತನಾಡಿದ ಮೇಲೆ ಮಕ್ಕಳಿಗೆ ಹೋಂ ಸ್ಕೂಲಿಂಗ್ ಮಾಡುವುದರ ಕುರಿತು ಹೆಚ್ಚಿನ ಧೈರ್ಯ ನಮಗೆ ಬಂದಿತು ಎಂದು ಹೇಳಿದರೆ ಸುಳ್ಳಾಗದು. 

ಮಕ್ಕಳಿಗೆ ಮನೆಯಲ್ಲಿಯೇ ಪಾಠ ಹೇಳುವುದರ ಕುರಿತ ನಿರ್ಧಾರ ನಾವು ಸಾಕಷ್ಟು ವಿಚಾರ ಮಾಡಿ ತೆಗೆದುಕೊಂಡದ್ದು.  ನನ್ನ ಗೆಳೆಯರಲ್ಲಿ, ಸಂಬಂಧಿಕರಲ್ಲಿ ನಾನು ಕೇಳುತ್ತಿದ್ದ “ಶಾಲೆಗೆ ಮಕ್ಕಳನ್ನು ಏಕೆ ಕಳುಹಿಸುತ್ತಿದ್ದೀರಿ?” ಎಂಬ ಪ್ರಶ್ನೆಗೆ ನನಗೆ ಸರಿಯಾದ ಉತ್ತರ ಸಿಗುತ್ತಿರಲಿಲ್ಲ. “ಅರೆರೆ, ಶಾಲೆಗೆ ಕಳುಹಿಸದಿದ್ದರೆ ಆಗುತ್ತದೆಯೇ?” ಎಂದೋ, “ಮಕ್ಕಳನ್ನು ಮನೆಯಲ್ಲಿ ಯಾರು ನೋಡಿಕೊಳ್ಳುತ್ತಾರೆ? ಅವರಿಗೆ ನಾವು ಪಾಠ ಹೇಳುವುದು ಸಾಧ್ಯವೇ?” ಎಂಬ ಪ್ರಶ್ನೆಗಳನ್ನು ತಿರುಗಿ ನನಗೆ ಕೇಳುತ್ತಿದ್ದರು.  ಈ ಪ್ರಶ್ನೆಗಳಿಗಿಂತ ಮಿಗಿಲಾಗಿ ಶಾಲೆಗೆ ಕಳುಹಿಸದಿದ್ದರೆ ಮಕ್ಕಳಿಗೆ ಭವಿಷ್ಯವಿಲ್ಲ ಎಂಬ ಭಾವನೆ ನಮ್ಮೆಲ್ಲರಲ್ಲೂ ಇದೆ. ಆದರೆ ಮಕ್ಕಳ ಭವಿಷ್ಯವನ್ನು ರೂಪಿಸಲೆಂದು ನಾವು ಅವರನ್ನು ಕಳುಹಿಸುತ್ತಿರುವ ಶಾಲೆಗಳು ಯಾವ ರೀತಿಯಲ್ಲಿ ಇವೆ? ಅಲ್ಲಿ ಕಲಿಕೆ ಹೇಗೆ? ಅಂತಹ ಶಾಲೆಗಳು ಮಕ್ಕಳಲ್ಲಿ ಬೆಳೆಸುತ್ತಿರುವ ಸಂಸ್ಕೃತಿ ಯಾವುದು? ಶಾಲೆಗಳು ಕಮರ್ಶಿಯಲ್ ಆಗಿವೆಯೇ? ಎಂಬ ಪ್ರಶ್ನೆಗಳನ್ನು ಒಮ್ಮೆ ಸ್ವತಃ ನಮಗೇ ಕೇಳಿಕೊಳ್ಳುವ ಅಗತ್ಯ ಇದೆ.  

ಮೊದಲು ಮಕ್ಕಳ ಪುಸ್ತಕಗಳು ಹಾಗು ಯೂನಿಫಾರ್ಮ್ ಮುಂತಾದವುಗಳನ್ನು ಶಾಲೆಯ ಮೂಲಕವೇ ಕೊಳ್ಳಬೇಕು ಎಂದು ಹೇಳುವ ಪರಿಪಾಠ ಇತ್ತು. ಈಗ ಬಸ್ಸು, ಊಟ, ತಿಂಡಿ, ಕಂಪ್ಯೂಟರು, ಲೈಬ್ರೆರಿ ಮತ್ತೊಂದು - ಹೀಗೆ ಹತ್ತು ಹಲವಾರು ಸವಲತ್ತುಗಳನ್ನು ಪಟ್ಟಿ ಮಾಡಿ ಅದಕ್ಕೆ ಹಣ ತೆಗೆದುಕೊಳ್ಳುವ ಪ್ರಮೇಯ ಬಂದದ್ದು ಹೇಗೆ ಎಂಬುದರ ಕುರಿತು ಅವಲೋಕಿಸಿ ನೋಡುವ ಗೋಜಿಗೆ ನಾವು ಹೋಗುವುದಿಲ್ಲ. ಮಕ್ಕಳಿಗಲ್ಲವೇ, ಕೊಟ್ಟರಾಯಿತು ಎಂದು ದುಡ್ಡು ಕೊಟ್ಟು ಸುಮ್ಮನಾಗಿಬಿಡುತ್ತೇವೆ. ಪರಿಚಿತರೊಬ್ಬರ ಮಗಳು ಮನೆಗೆ ಬಂದ ಮೇಲೆ ಮನೆಯಲ್ಲಿ ಊಟ ತಿಂಡಿ ಮಾಡುತ್ತಿರಲಿಲ್ಲವಂತೆ. ಯಾಕೆ ಹೀಗೆ ಎಂದು ಕೇಳಲಾಗಿ “ಶಾಲೆಯಲ್ಲಿಯೇ ಅವರಿಗೆ ಊಟ ತಿಂಡಿ ಕೊಡಲಾಗುತ್ತದೆ. ಶಾಲೆಯಲ್ಲಿ ನ್ಯೂಟ್ರಿಶನ್ ತಜ್ಞರು ಇದ್ದಾರೆ. ಅದ್ಯಾಕೋ ಅಲ್ಲಿನ ಆಹಾರ ಅಭ್ಯಾಸವಾದ ಮೇಲೆ ಮನೆಯಲ್ಲಿ ತಿನ್ನುವುದು ಕಡಿಮೆ” ಎಂದು ಖುಷಿಯಿಂದಲೇ ಅವರು ನನಗೆ ಹೇಳಿದ್ದು ಕಣ್ಣಿಗೆ ಕಟ್ಟಿದಂತೆ ನೆನಪಿನಲ್ಲಿ ಉಳಿದಿದೆ. ಅಲ್ಲಿಗೆ ಮನೆಯಲ್ಲಿ ತಲೆಮಾರುಗಳಿಂದ ನಡೆದುಕೊಂಡು ಬಂದಿದ್ದ ಅಡುಗೆಗೆ, ಆಹಾರದ ಸಂಸ್ಕೃತಿಗೆ ತೆರೆ ಬಿದ್ದಂತೆ. ಮನೆಯಲ್ಲಿ ಅಡುಗೆ ಮಾಡಬೇಕಾದ ‘ತಲೆನೋವು’ ಕೂಡ ತಪ್ಪಿತು ಎಂದು ನಾವು ಅಂದುಕೊಳ್ಳುವಾಗ ನಮ್ಮ ಸಂಸ್ಕೃತಿಯ ಬಹುಮುಖ್ಯ ಭಾಗವೊಂದನ್ನು ಕಳೆದುಕೊಂಡಿದ್ದೇವೆ ಎಂಬ ಅರಿವಾಗುವುದು ಕಡಿಮೆ. 

ಪ್ರತಿನಿತ್ಯ ಶಾಲೆಯವರು ಮಕ್ಕಳೊಂದಿಗೆ ಕಳುಹಿಸಿಕೊಟ್ಟ ಪುಸ್ತಕದಲ್ಲಿ ತಾಕೀತು ಮಾಡಿರುವಂತೆ ಅವರ ‘ಹೋಂ ವರ್ಕ್’ ಮಾಡಿಸುವ, ಮಕ್ಕಳ ಪ್ರಾಜೆಕ್ಟ್ ವರ್ಕ್ ಮಾಡಲು ತಾವು ತಲೆಕೆಡಿಸಿಕೊಂಡು ಕುಳಿತುಕೊಳ್ಳುವ ಗೆಳೆಯರನ್ನು ನೋಡುವಾಗಲೆಲ್ಲ ನಾವೂ ಈ ಪಾಡು ಯಾಕೆ ತಂದುಕೊಳ್ಳಬೇಕೆಂದು ಅನಿಸುತ್ತಿತ್ತು. ಒತ್ತಡದ ಬದುಕು ನಮಗೇ ಬೇಡವೆನಿಸುವ ಸಮಯದಲ್ಲಿ ಮಕ್ಕಳಿಗೂ ಸಮಯವಿಲ್ಲದೆ ಅವರು ಒತ್ತಡದಲ್ಲಿ ಜೀವನ ನಡೆಸುವಂತೆ ಆಗಬಾರದು ಎಂದು ಹಲವು ಬಾರಿ ನಾವು ಚರ್ಚೆ ಮಾಡಿದ್ದುಂಟು. ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ಹೂಂಕರಿಸುತ್ತಿರುವ ವಾಹನಗಳ ನಡುವೆ ಅವರು ಕಳೆಯುವ ಒಂದೆರಡು ತಾಸು ಚಿತ್ರ ಬಿಡಿಸುತ್ತಲೋ ಅಥವ ಪದ್ಯ ಹಾಡುತ್ತಲೋ ಕಳೆದರೆ ಬಾಲ್ಯ ನಿಜಕ್ಕೂ ಬೇರೆಯೇ ಆದೀತು. ಮಕ್ಕಳ ಬಾಲ್ಯ ಹೋಂ ವರ್ಕು, ಪ್ರಾಜೆಕ್ಟ್ ವರ್ಕು ಮುಂತಾದವುಗಳಲ್ಲಿ ಮುಳುಗಿ ರೇಸ್ ಹಾಕಿದಂತೆ ಉಳಿದ ಮಕ್ಕಳೊಂದಿಗೆ ಪೈಪೋಟಿ ನಡೆಸುವುದರಲ್ಲಿ ಕಳೆದುಹೋದರೆ ಸುತ್ತಮುತ್ತಲಿನ ಪರಿಸರ ಅವರಿಗೆ ರುಚಿಸದು. ಅವರ ಗಮನ ಸುತ್ತ ಮುತ್ತ ನಡೆಯುತ್ತಿರುವ ಕಡೆ ಹೆಚ್ಚು ಹೊರಳದು. ನಮ್ಮ ಜಗತ್ತಿನಲ್ಲಿರುವ ಸೂಕ್ಷ್ಮಗಳನ್ನು ಅರಿವಿಗೆ ಹಾಕಿಕೊಳ್ಳದೆಯೇ ಬೆಳೆಯುವ ಮಕ್ಕಳಿಗೆ ಅವುಗಳನ್ನು ನಂತರ ಕಲಿಸುವ ಕೆಲಸ ಕಷ್ಟಕರವಾದದ್ದು. 

ಹೋಂ ಸ್ಕೂಲಿಂಗ್ ಎನ್ನುವುದು ಹೊಸತೇನಲ್ಲ. ಮುಂಚಿನ ಕಾಲದಲ್ಲಿ ಮನೆಯಲ್ಲೇ ಹೇಳಿಕೊಡುವ ಪರಿಪಾಠ ಇತ್ತು ಎಂಬುದು ನಮಗೆಲ್ಲ ತಿಳಿದಿರುವ ವಿಚಾರ. ಆದರೆ ಇಪ್ಪತ್ತೊಂದನೆಯ ಶತಮಾನದಲ್ಲಿ ಆಗಿರುವ ಬದಲಾವಣೆಗಳ ನಡುವೆ ಹೋಂ ಸ್ಕೂಲಿಂಗ್ ಮಾಡಿದರೆ ಏನೇನು ತೊಂದರೆಗಳಾಗಬಹುದೋ ಎಂಬ ಆತಂಕ ನಮಗಿತ್ತು. ಹೋಂ ಸ್ಕೂಲಿಂಗ್ ಮಾಡುವುವರು ನಾವಿರುವ ಊರಿನಲ್ಲೇ ಬಹಳಷ್ಟು ಜನ ಇದ್ದಾರೆಂದು ನಮಗೆ ಆಗ ತಿಳಿದಿರಲಿಲ್ಲ. ನಾವು ನಮಗೆ ಪರಿಚಿತರಿದ್ದ ಹಲವು ಶಿಕ್ಷಕರ ಬಳಿ ಈ ವಿಚಾರವನ್ನು ಪ್ರಸ್ತಾಪ ಮಾಡಲು ಪ್ರಾರಂಭಿಸಿದೆವು. ಹೀಗೆಯೇ ಒಂದು ಕಾರ್ಯಕ್ರಮದಲ್ಲಿ ವಿದ್ಯಾಭಾರತಿಯ ಜಿ ಆರ್ ಜಗದೀಶರವರ ಪರಿಚಯ ನಮಗಾಯಿತು. ಅವರೊಂದಿಗೆ ಈ ವಿಷಯ ಪ್ರಸ್ತಾಪಿಸಿದಾಗ ಮನೆಯಲ್ಲಿಯೇ ವಿದ್ಯಾಭ್ಯಾಸ ಮಾಡಿಸಲು ಹೊರಟ ನಮಗೆ ಪ್ರೋತ್ಸಾಹ ನೀಡಿದ್ದಲ್ಲದೆ ತಮ್ಮ ಪರಿಚಯದಲ್ಲಿ ಹೀಗೆಯೇ ಮಾಡುತ್ತಿದ್ದ ಹಲವರನ್ನು ನಮಗೆ ಪರಿಚಯ ಮಾಡಿಕೊಟ್ಟರು. ಮನೆಯಲ್ಲಿಯೇ ವಿದ್ಯಾಭ್ಯಾಸ ಮಾಡಿ ಈಗ ಕೆಲಸ ಮಾಡುತ್ತಿರುವ ಕೆಲವರ ಪರಿಚಯ ನಮಗಾಯಿತು. ಅದರಲ್ಲಿ ವೇದ ವಿಜ್ಞಾನವನ್ನು ಕಲಿಸುತ್ತಿದ್ದ ಸುಧಾಕರ ಶರ್ಮರ ಮಗಳು ಒಬ್ಬರು. ಅವರನ್ನೆಲ್ಲ ಮಾತನಾಡಿಸಿ, ಅವರು ನಡೆದು ಬಂದ ದಾರಿ ತಿಳಿದ ಮೇಲೆ ನಮಗೆ ಈ ದಿಕ್ಕಿನಲ್ಲಿ ನಡೆಯುವ ಕುರಿತು ಯಾವುದೇ ಆತಂಕ ಉಳಿಯಲಿಲ್ಲ. 

ಈಗ ಮನೆಯಲ್ಲಿ ಮಕ್ಕಳು ಕನ್ನಡದ ಹಾಡುಗಳನ್ನು ಹಾಡುತ್ತಾರೆ. ಚಿತ್ರಗಳನ್ನು ಬಿಡಿಸುತ್ತ ಕುಳಿತ್ತಿರುತ್ತಾರೆ. ಜಿ ಎಸ್ ಎಸ್, ಕುವೆಂಪು, ಎಚ್ ಎಸ್ ವಿ ಮುಂತಾದವರ ಪದ್ಯಗಳನ್ನು ಹೇಳುತ್ತಿರುತ್ತಾರೆ. ಸಂಜೆಯ ವೇಳೆ ಹೊರಗೆ ನಡೆದು ಹೋಗುವಾಗ ಸಿಗುವ ಬೀಜಗಳನ್ನೆಲ್ಲ ಆಯ್ದು ಮರುದಿನ ಅದರಲ್ಲಿ ಕ್ರಾಫ್ಟ್ ಮಾಡುತ್ತಾರೆ. ಇಬ್ಬರೂ ಹುಡುಗಿಯರು ಜೊತೆಗೆ ಆಡಿಕೊಂಡು, ಹಾಡಿಕೊಂಡು ಇರುತ್ತಾರೆ. ಕಲಿಕೆ ಎಂಬುದು ಮೋಜಿನ ಚಟುವಟಿಕೆಯಾಗಿದೆ. ನಾವು ಕಲಿಸದೆಯೇ ಎ ಬಿ ಸಿ ಡಿ ಕಲಿತುಕೊಂಡಿದ್ದಾರೆ. ಸಂಖ್ಯೆಗಳನ್ನು ಆಟದಲ್ಲಿ ಬಳಸಿ ಪರಿಚಯ ಮಾಡಿಕೊಳ್ಳುತ್ತಿದ್ದಾರೆ. ಕೈದೋಟದಲ್ಲಿರುವ ಗಿಡಗಳನ್ನು ಚೆನ್ನಾಗಿ ಗುರುತಿಸಬಲ್ಲವರಾಗಿದ್ದಾರೆ. ಚಿಟ್ಟೆಗಳು, ಹಕ್ಕಿಗಳು, ಅಳಿಲುಗಳು ಇವರಿಗೆ ಆಪ್ತರು. ಕಂಬಳಿ ಹುಳ ನೋಡಿದರೆ ಹೆದರದೆ ಅದು “ಮುಂದೊಂದು ದಿನ ಚಿಟ್ಟೆಯಾಗಿ ವಾಪಸ್ ಇಲ್ಲಿಗೇ ಬರುತ್ತದೆ ಅಪ್ಪಾ” ಎಂದು ಹೇಳುತ್ತಾರೆ. ಯಾವ ಬೀಜ ಯಾವ ಗಿಡದ್ದು ಎನ್ನುವುದನ್ನು ಹೇಳಬಲ್ಲರು. ಸ್ಪಷ್ಟವಾಗಿ ಕನ್ನಡದಲ್ಲಿ ಮಾತನಾಡುತ್ತ ಗೊತ್ತಿಲ್ಲದ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತ, ಉತ್ತರ ತಿಳಿಯಲು ನಮ್ಮನ್ನು ಕಾಡುತ್ತ, ನಮಗೂ ಹೊಸ ವಿಷಯಗಳನ್ನು ಕಲಿಸುತ್ತಿದ್ದಾರೆ.

ಸೃಜನಶೀಲ ಜೀವನಕ್ಕೊಂದು ಅಡಿಪಾಯ

ಮಕ್ಕಳಿಗೆ ಬಾಲ್ಯ ಅಮೂಲ್ಯವಾದ ಸಮಯ. ಆ ಸಮಯವನ್ನು ಅವರು ಹೇಗೆ ಕಳೆಯುತ್ತಾರೆ ಎಂಬುದು ಅವರ ಜೀವನವನ್ನು ರೂಪುಗೊಳಿಸುವ ಪ್ರಮುಖ ಅಂಶವಾಗಬಹುದು. ಬಾಲ್ಯದಲ್ಲಿ ಸಾಮಾನ್ಯವಾಗಿ ಹೆಚ್ಚು ಲಕ್ಷ್ಯ ಕೊಡುವ ಮಕ್ಕಳು ಬಹುಬೇಗ ತಮ್ಮ ಸುತ್ತಮುತ್ತಲು ಕಾಣುವ ವಿಷಯಗಳನ್ನು ಕಲಿತುಕೊಳ್ಳುತ್ತಾರೆ. ಹೀಗಾಗಿ ತಮ್ಮ ನೆಲೆಯಲ್ಲಿಯೇ ಸೃಜನಶೀಲತೆಗೆ ಒಡ್ಡಿದಲ್ಲಿ ಮಕ್ಕಳೂ ಸೃಜನಶೀಲರಾಗಿ ಬೆಳೆಯುತ್ತಾರೆ. 

ಧೈರ್ಯ ಬೇಕು

ಮನೆಯಲ್ಲಿಯೇ ಪಾಠ ಹೇಳುವ ನಿರ್ಧಾರ ಸುಲಭದ್ದಲ್ಲ. ಗಂಡ - ಹೆಂಡತಿ ಇಬ್ಬರಿಗೂ ಇದರಲ್ಲಿ ಮನಸ್ಸಿದ್ದರೆ ಮಾತ್ರ ಇದು ಸಾಧ್ಯ. ಒಟ್ಟಿಗೆ ನಿರ್ಧಾರ ತೆಗೆದುಕೊಂಡರೂ ವೃತ್ತಿಯ ಅವಶ್ಯಕತೆಗಳಿಂದಾಗಿ ಮನಸ್ತಾಪ ಮೂಡುವುದು ಸಹಜ. ಅವುಗಳನ್ನು ಪರಿಹರಿಸಿಕೊಳ್ಳುವ ದಾರಿ ಹುಡುಕಿಕೊಳ್ಳಬೇಕು. ಅವರವರ ವೃತ್ತಿಗೆ ತಕ್ಕಂತೆ ಮನೆಯಲ್ಲಿ ಯಾರು ಮಕ್ಕಳಿಗೆ ಹೆಚ್ಚು ಸಮಯ ಕೊಡಬಹುದು ಎಂಬುದನ್ನು ಪರಿಗಣಿಸಿ ಮುಂದಕ್ಕೆ ಹೋಗುವುದು ಒಳ್ಳೆಯದು.  ಮಗು ಒಂದೇ ಇದ್ದರೆ ಏಕಾಂತ ಕಾಡೀತು. ಎರಡು ಮಕ್ಕಳಾದರೂ ಇದ್ದರೆ ಮಕ್ಕಳಿಗೆ ಏಕಾಂತ ಎನಿಸುವುದಿಲ್ಲ. ಜೊತೆಗೆ ಆಡಿಕೊಂಡಿರುತ್ತಾರೆ. ಆಗಾಗ ಅಜ್ಜ, ಅಜ್ಜಿ ಅಥವ ಸಂಬಂಧಿಕರ ಜೊತೆ ಬಿಡುವ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಪ್ರತಿಯೊಬ್ಬರೂ “ನೀವು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲವೇ? ಹಾಗೆ ಮಾಡಿದರೆ ಅವರುಗಳಿಗೆ ತೊಂದರೆಯಾಗುವುದಿಲ್ಲವೆ?” ಎಂದು ಕೇಳುವ ಪ್ರಶ್ನೆಗಳಿಗೆ ವಿಚಲಿತಗೊಳ್ಳದವರಾಗಿರಬೇಕು. 

ಮಕ್ಕಳೊಂದಿಗೆ ನಾವೂ ಕಲಿಯುತ್ತೇವೆ

ಮಕ್ಕಳಿಗೆ ಹೊಸತೆನಿಸುವುದು ನಮಗೆ ಹೊಸತಲ್ಲದಿದ್ದರೂ ಅದನ್ನು ಅವರಿಗೆ ಹೇಳಿಕೊಡುವುದು ಸುಲಭವಲ್ಲ. ಕೆಲವೊಮ್ಮೆ ಹೇಳಿಕೊಡಬೇಕಿರುವುದರ ಬಗ್ಗೆ ನಮ್ಮ ತಿಳುವಳಿಕೆಯೇ ಸಂಪೂರ್ಣವಾಗಿರುವುದಿಲ್ಲ. ಆಗ ಅದರ ಬಗ್ಗೆ ನಮಗೆ ಓದಿಕೊಳ್ಳಬೇಕಾಗುತ್ತದೆ. ಹೀಗೆ ಓದುವ ನಾವೂ ಮಕ್ಕಳ ಜೊತೆ ಕಲಿಯುತ್ತೇವೆ. ಮಕ್ಕಳು ನಮಗೆ ತಾಳ್ಮೆ ಕಲಿಸುತ್ತಾರೆ. ಅವರು ಕೇಳುವ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸುವಾಗ ನಮ್ಮ ಮನಸ್ಸಿನಲ್ಲಿ ಆಯಾ ವಿಷಯಗಳ ಬಗ್ಗೆ ಇರುವ ಚಿತ್ರಣಗಳು ಸ್ಪಷ್ಟವಾಗುತ್ತವೆ. ಹಾರುತ್ತಿರುವ ಚಿಟ್ಟೆಯಿರಬಹುದು, ಹಿತ್ತಲಲ್ಲಿ ಅರಳುತ್ತಿರುವ ಹೂವೊಂದರ ಬಣ್ಣ, ಅದರ ಚಿತ್ರಣ ಇರಬಹುದು -  ನಮ್ಮ ಬಾಲ್ಯದಲ್ಲಿ ಯಾವ ವಿಷಯಗಳ ಕುರಿತು ಹೆಚ್ಚು ಗಮನ ಕೊಡಲು ನಮಗೆ ಅವಕಾಶ ಸಿಕ್ಕಿರಲಿಲ್ಲವೋ, ಅವೆಲ್ಲ ವಿಷಯಗಳಿಗೆ ಮತ್ತೊಮ್ಮೆ ಸಮಯ ಕೊಡುವ ಅವಕಾಶ ನಮ್ಮದಾಗಿರುತ್ತದೆ. ಹೀಗೆ ಮಕ್ಕಳೊಂದಿಗೆ ಬಾಲ್ಯ ನಮ್ಮದೂ ಆಗಿರುತ್ತದೆ.  

NIOS ಮತ್ತು ಕೇಂಬ್ರಿಡ್ಜ್

ಪರೀಕ್ಷೆ, ಸರ್ಟಿಫಿಕೇಟ್ ಇವೆಲ್ಲ ಇರದೆ ಓದಿದ ಮಕ್ಕಳು ಮುಂದೆ ಉದ್ಯಮಗಳಲ್ಲಿ ನೌಕರಿ ಪಡೆಯುವುದು ಹೇಗೆ ಎಂಬ ದುಗುಡ ಇರುವವರಿಗೆ ಭಾರತ ಸರಕಾರದ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಟಡೀಸ್ ಮತ್ತು ಕೇಂಬ್ರಿಡ್ಜ್ ಹೋಂ ಸ್ಕೂಲಿಂಗ್ ಪ್ರೋಗ್ರಾಮುಗಳು ಲಭ್ಯ. ಇವುಗಳ ಮೂಲಕ ನಡೆಯುವ ಪರೀಕ್ಷೆಗಳನ್ನು ಮಕ್ಕಳು ಬರೆದು ಉತ್ತೀರ್ಣರಾಗಿ ಸರ್ಟಿಫಿಕೇಟ್ ಪಡೆಯಬಹುದು. ಒಂದನೆಯ ಕ್ಲಾಸಿನಿಂದ ಹಿಡಿದು ಹತ್ತನೆಯ ಕ್ಲಾಸಿನವರೆಗೂ ಪರೀಕ್ಷೆಗಳಿವೆ. ಇದರ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಸರಕಾರದ ಹುದ್ದೆಗಳಿಗೂ ಪ್ರವೇಶವಿದೆ. NIOS ಬಗ್ಗೆ ಹೆಚ್ಚಿನ ಮಾಹಿತಿಗೆ https://www.nios.ac.in ನೋಡಿ. 

ಹೋಂ ಸ್ಕೂಲಿಂಗ್ ಮಾಡುವವರು ಈಗ ಹಲವರಿದ್ದಾರೆ

ಮನೆಯಲ್ಲಿಯೇ ಪಾಠ ಹೇಳುವ ವಿಚಾರ ಆಲೋಚನೆ ಮಾಡಿದ ಹೊಸತರಲ್ಲಿ ನಮಗೆ ಹೇಗೆ ಮಾಡುವುದು ಎಂಬ ಆತಂಕವಿತ್ತು. ಆದರೆ ಇದರ ಕುರಿತು ತಿಳಿಯುತ್ತ ಹೋದಂತೆ ಬಹಳಷ್ಟು ಜನ ಹೋಂ ಸ್ಕೂಲಿಂಗ್ ಮಾಡುತ್ತಿರುವ ವಿಷಯ ನಮಗೆ ತಿಳಿದುಬಂದಿತು. ಸಹಜವಾಗಿ ಆತಂಕ ಕಳೆಯಿತು. ಬೆಂಗಳೂರು ಮಹಾನಗರದಲ್ಲಿಯೇ ನೂರಾರು ಕುಟುಂಬಗಳಲ್ಲಿ ಪೋಷಕರು ಹೋಂ ಸ್ಕೂಲಿಂಗ್ ಮಾಡುತ್ತಿದ್ದಾರೆ. ನಗರದ ಹೊರವಲಯಗಳಲ್ಲಿ ಫಾರ್ಮ್ ಹೌಸು ಇತ್ಯಾದಿ ಮಾಡಿಕೊಂಡ ಪೋಷಕರಷ್ಟೇ ಅಲ್ಲದೆ ನಗರದ ಒಳಗೆ ಸ್ವಂತ ಉದ್ಯೋಗ ಮಾಡಿಕೊಂಡಿರುವ ಹಲವರು ಮನೆಯಲ್ಲಿಯೇ ಮಕ್ಕಳಿಗೆ ಪಾಠ ಹೇಳುತ್ತ ನಡೆಸಿಕೊಂಡು ಬಂದಿದ್ದಾರೆ. ವರ್ಕ್ ಪ್ರಮ್ ಹೋಂ ಅಥವ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಇತ್ತೀಚೆಗೆ (ಬೆಂಗಳೂರಿನ ಟ್ರಾಫಿಕ್ ಮುಂತಾದ ಕಾರಣಗಳಿಂದಾಗಿ) ಹೆಚ್ಚುತ್ತಿರುವಂತೆ ಮನೆಯಲ್ಲಿ ಮಕ್ಕಳಿಗೆ ತಾವೇ ಶಿಕ್ಷಣ ನೀಡಲು ಬಯಸುವ ಸುಶಿಕ್ಷಿತ ಪೋಷಕರ ಸಂಖ್ಯೆಯೂ ಹೆಚ್ಚುತ್ತಿದೆ. ಸ್ವಂತ ಉದ್ಯೋಗದಲ್ಲಿರುವ ಪೋಷಕರ ನಡುವೆ ಹೋಂ ಸ್ಕೂಲಿಂಗ್ ಜನಪ್ರಿಯವಾಗುತ್ತಿದೆ. 

ಸಂಸ್ಕೃತಿ

ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಯಾವ ಶಾಲೆಗೆ ಕಳುಹಿಸುತ್ತಿದ್ದೇವೆಂಬುದರ ಹಿಂದೆ ಇರುವ ನಿರ್ಧಾರ ಸಹಜವಾಗಿ - ಆಯಾ ಶಾಲೆಯ ಜನಪ್ರಿಯತೆ, ಅಲ್ಲಿ ಸಿಗುವ ಸವಲತ್ತುಗಳು - ಇವುಗಳನ್ನು ನೋಡಿ ತೆಗೆದುಕೊಂಡದ್ದಾಗಿರುತ್ತದೆ. ಪೋಷಕರು ತಮಗೆ ಸಾಧ್ಯವಾಗುವುದಕ್ಕಿಂತ ಸ್ವಲ್ಪ ಹೆಚ್ಚು ಖರ್ಚು ಮಾಡಿಯಾದರೂ ‘ಅತ್ಯುತ್ತಮ’ ಎಂದು ಪರಿಚಯದವರೆಲ್ಲರೂ ಒಪ್ಪುವ ಶಾಲೆಗೆ ಮಕ್ಕಳನ್ನು ಸೇರಿಸುವುದು ಸಹಜ. ಆದರೆ ಹಾಗೆ ಸೇರಿಸಿದ ಶಾಲೆಯಲ್ಲಿ ಯಾವ ರೀತಿಯ ಸಂಸ್ಕೃತಿ ನಮ್ಮ ಮಕ್ಕಳಲ್ಲಿ ರೂಪುಗೊಳ್ಳುತ್ತಿದೆ ಎಂಬ ವಿಚಾರವನ್ನು ನಾವು ಗಣನೆಗೆ ತೆಗೆದುಕೊಳ್ಳಬೇಕೇ ಬೇಡವೇ ಎನ್ನುವುದು ಆಯಾ ಪೋಷಕರಿಗೆ ಬಿಟ್ಟ ವಿಚಾರ. ಹಲವರಿಗೆ ಅವರವರ ಸಂಸ್ಕೃತಿ ಉಳಿಯಲಿ ಎಂಬ ಆಸಕ್ತಿ ಇರುತ್ತದೆ. ಹೀಗಿದ್ದಾಗ ತಮಗೆ ಸರಿ ಹೊಂದುವ ಶಾಲೆಯಲ್ಲಿ ಸೀಟು ಸಿಗದೇ ಹೋದಾಗ ಪಜೀತಿ ಪಡಬೇಕಿಲ್ಲ. ಹೋಂ ಸ್ಕೂಲಿಂಗ್ ಕೂಡ ಒಂದು ಆಯ್ಕೆಯಾಗಬಹುದು. ಮನೆಯಲ್ಲಿ ಪಾಠ ಹೇಳಿದಾಗ ರೂಪುಗೊಳ್ಳುವ ಸಂಸ್ಕೃತಿಯಲ್ಲಿ ಸಂಪ್ರದಾಯಗಳು ಉಳಿಯುವ ಸಂಭವ ಹೆಚ್ಚು ಎಂದು ಹೇಳಬೇಕಿಲ್ಲ. 

 

ಹಾಗಾದರೆ ಮಕ್ಕಳು ಬೆರೆಯುವುದು ಹೇಗೆ? ಉಳಿದ ಮಕ್ಕಳೊಂದಿಗೆ ಆಡಲು ಸಿಗದಿದ್ದರೆ ಕಷ್ಟವಲ್ಲವೆ?

ಹೋಂ ಸ್ಕೂಲಿಂಗ್ ಬಗ್ಗೆ ಸಹಾನುಭೂತಿ ತೋರಿಸಿದವರೂ ಕೇಳುವ ಪ್ರಶ್ನೆ ಇದು. ಮಕ್ಕಳು ಉಳಿದ ಮಕ್ಕಳೊಂದಿಗೆ ಆಡಬೇಕಲ್ಲವೇ? ಶಾಲೆಯಲ್ಲಿ ಬೇರೆ ಮಕ್ಕಳ ಜೊತೆಗೆ ಬೆರೆಯಬೇಕಲ್ಲವೇ ಎಂಬ ಆಲೋಚನೆ ಬರುವುದು ಸಹಜ. ಆದರೆ ಶಾಲೆಯಲ್ಲಿ ಹೆಚ್ಚು ಮಕ್ಕಳೊಂದಿಗೆ ನಮ್ಮ ಮಕ್ಕಳು ಬೆರೆಯುತ್ತಾರೆ ಎನ್ನುವುದು ಸತ್ಯವಾಗಬೇಕೆಂದೇನಿಲ್ಲ. ಬಾಲ್ಯದಲ್ಲಿ ನಾವು ಶಾಲೆಯ ಒಂದಿಬ್ಬರು ಹತ್ತಿರದ ಗೆಳೆಯರ ಗುಂಪೊಂದನ್ನು ಬಿಟ್ಟರೆ ಉಳಿದವರೊಂದಿಗೆ ಹೆಚ್ಚು ಬೆರೆಯುತ್ತಿರಲಿಲ್ಲ. ಶಾಲೆಯಲ್ಲಿ ಬಹುಪಾಲು ಪಾಠದಲ್ಲಿ ಮುಳುಗಿರುವ ಮಕ್ಕಳು ಆಟದ ಸಮಯ ಹಾಗು ವಿರಾಮದ ಸಮಯ ಬಿಟ್ಟರೆ ಬೇರೆ ಸಮಯದಲ್ಲಿ ಬೆರೆಯಲು ಅವಕಾಶ ಕಡಿಮೆ.  ಮಹಾನಗರಗಳಲ್ಲಿ ಮಕ್ಕಳು ಬಸ್ಸಿನಲ್ಲಿಯೇ ಬೆರೆಯುವುದು ಹೆಚ್ಚು - ಅಲ್ಲಿಯೂ ಜೊತೆಗೆ ಕೂರುವ, ಒಂದೇ ಕಾಲೋನಿಗೆ ಹೋಗುವ ಹುಡುಗರು ಹೆಚ್ಚು ಬೆರೆಯುವ ಸಂಭವಗಳು ಹೆಚ್ಚು. ಹೋಂ ಸ್ಕೂಲಿಂಗ್ ಮಾಡುವ ಪೋಷಕರ ಬಳಿ ಸಮಯದ ಅನುಕೂಲವಿರುವ ಕಾರಣ ಮಕ್ಕಳಿರುವ ಗೆಳೆಯರ ಮನೆಗೆ ಭೇಟಿಕೊಟ್ಟು ಅಲ್ಲಿಯ ಮಕ್ಕಳೊಂದಿಗೆ ಬೆರೆಯುವ ಅವಕಾಶ ಕಲ್ಪಿಸುವ ಸಾಧ್ಯತೆ ಇರುತ್ತದೆ. ಇತ್ತೀಚೆಗೆ ಬೆಂಗಳೂರಿನಂತ ಊರುಗಳಲ್ಲಿ ಆಲ್ಟರ್ನೇಟಿವ್ ಸ್ಕೂಲ್ (ಪರ್ಯಾಯ) ಪರಿಕಲ್ಪನೆಯ ಶಾಲೆಗಳು ಇರುವುದರಿಂದ ಮಕ್ಕಳನ್ನು ಮೂರ್ನಾಲ್ಕು ತಿಂಗಳು ಮಾತ್ರ ಇಂತಹ ಶಾಲೆಗಳಿಗೆ ಕಳುಹಿಸುವ ಆಯ್ಕೆಯೂ ಲಭ್ಯವಿದೆ. ಹೀಗಾಗಿ ಮಕ್ಕಳೊಂದಿಗೆ ಬೆರೆಯುವುದರಲ್ಲಿ ಇವರಿಗೆ ಸಮಸ್ಯೆ ಆಗುವುದಿಲ್ಲ ಎಂಬುದು ನನ್ನ ಅನಿಸಿಕೆ.