ಅಣ್ಣಾ ಭ್ರಷ್ಟಾಚಾರ ಅಂದ್ರೆ ಏನಣ್ಣ?
ಅಣ್ಣಾ ಭ್ರಷ್ಟಾಚಾರ ಅಂದ್ರೆ ಏನಣ್ಣ ?
ಅಣ್ಣ ಹಜಾರೆ ಭ್ರಷ್ಟಾಚಾರದ ವಿರುದ್ದ ಉಪವಾಸಕ್ಕೆ ಕುಳಿತರು. ಟೀವಿ ಹಾಗು ಪತ್ರಿಕ ಮಾಧ್ಯಮಗಳು ಉತ್ಸಾಹದಿಂದ ಅವರಿಗೆ ಹಾಗು ಆಂದೋಲನಕ್ಕೆ ಪ್ರಚಾರಕೊಡಲು ನಿಂತಿವೆ.ಕೆಲವು ಅಮಾಯಕ ಹೆಂಗಸರು ಹೇಳುತ್ತಿದ್ದಾರೆ 'ಎಲ್ಲರೂ ಸೇರಿದ್ದಾರಂತೆ ಅಭಿಷೇಕ್ ಬಚ್ಚನ್ ಎಲ್ಲರೂ ಬರ್ತಾರಂತೆ" ! ಈಗ ಚಿಕ್ಕಮಕ್ಕಳು ಕೇಳುತ್ತಿರುವ ಪ್ರಶ್ನೆ ಅದೆ "ಅಣ್ಣಾ ಭ್ರಷ್ಟಾಚಾರ ಅಂದ್ರೆ ಏನಣ್ಣ ?". ನಿಜವೆ ಭ್ರಷ್ಟಾಚಾರ ಅಂದರೆ ಏನು ?.
ಭ್ರಷ್ಟಾಚಾರವನ್ನು ವರ್ಣಿಸುವುದು ಸ್ವಲ್ಪ ಕಷ್ಟವೆ. ವಿಷ್ಣುವನ್ನು ವರ್ಣಿಸುವಾಗ ಹೇಳುತ್ತಾರೆ ! " ಸಾವಿವ ಹೆಡೆಗಳ ಆಧಿಶೇಷನಿಗು ನಾಲಿಗೆ ಸಾಲದು ಅವನ ಮಹಿಮೆ ಕೊಂಡಾಡಲು" ಎಂದು , ಇಲ್ಲಿಯು ಹಾಗೆ ಆಗಿದೆ.
ಮಾಧ್ಯಮಗಳು ಪತ್ರಿಕೆಗಳು ಸದಾ ಕೊಂಡಾಡುತ್ತಾರೆ ರಾಜಕೀಯದಲ್ಲಿ , ಸರ್ಕಾರಿ ಅಧಿಕಾರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು, ಹಾಗೆ ಹೇಳುವಾಗ ಅವರು ಉಪಾಯವಾಗಿಯೆ ಕಾರ್ಪೊರೇಟ್ ವಲಯವನ್ನು , ಉಧ್ಯಮಿಗಳನ್ನು ಬಿಟ್ಟೆ ಬಿಡುತ್ತಾರೆ. ಅವರನ್ನು ಅಮಾಯಕರೆಂದು ಚಿತ್ರಿಸಿ 'ಲೈಸನ್ಸ್ ರಾಜ್ಯ' ಹೋಗಬೇಕೆನ್ನುತ್ತ್ತಾರೆ.
ಭ್ರಷ್ಟಾಚಾರ ಹಾಗು ಲಂಚಗುಳಿತನ ಸರ್ಪವಿದ್ದ ಹಾಗೆ , ತಲೆ ಅದುಮಿದರೆ ಬಾಲ ಮೇಲೆ ಏಳುತ್ತದೆ ಬಾಲ ಹಿಡಿದರೆ ಬಾಯಿ ಕಚ್ಚುತ್ತದೆ!. ರಾಜಕೀಯದವರು ಹಾಗು ಸರ್ಕಾರಿ ಅಧಿಕಾರಿಗಳು ಲಂಚಕೋರರು ನೂರಕ್ಕೆ ನೂರುಬಾಗ ನಿಜ ಆದರೆ ಅವರನ್ನು ಲಂಚಕೋರರನ್ನಾಗಿ ಮಾಡಿರುವರು ಈ ಕಾರ್ಪೊರೇಟ್ ವಲಯ ಹಾಗು ಉಧ್ಯಮಿಗಳು ಎಂದು ಯಾರಿಗು ಅನ್ನಿಸುವುದೆ ಇಲ್ಲ. ನೀವೆ ಹೇಳಿ ಈಗಿನ 2-G ಹಗರಣದಲ್ಲಿ ಕೇಂದ್ರ ಮಂತ್ರಿ ಮಾತ್ರ ತಪ್ಪಿತಸ್ಥರೆ ? ಅವರಿಗೆ ಲಂಚ ಕೊಟ್ಟು ದೇಶವನ್ನು ವಂಚಿಸಿರುವ ಉಧ್ಯಮಿಗಳು ಹಾಗು ಮಾದ್ಯಮದವರು ಸಹ ಅವರಷ್ಟೆ ಅಪರಾದಿಗಳಲ್ಲವೆ? ರಾಜ ಅವರ ಜೊತೆ ಸೆರೆಮನೆಯ ಸಿಂಹಾಸದಲ್ಲಿ ಈ ಉಧ್ಯಮಿಗಳು ಲಾಭಕೋರರು ಕುಳಿತುಕೊಳ್ಳಬೇಕಲ್ಲವೆ?.
ಹಾಗೆ ಈ ಭ್ರಷ್ಟಾಚಾರಕ್ಕೆ ಹಲವು ಮುಖ. ಜನಸಾಮಾನ್ಯರಿಗೆ ಭ್ರಷ್ಟಾಚಾರವೆಂದರೆ ಕೇವಲ ಲಂಚ ಕೊಡುವುದು ಮಾತ್ರ. ಆದರೆ ನಿಜ ಹಾಗಿಲ್ಲ ಯಾವ ಲಂಚ ಪಡೆಯದೆ ಸರ್ಕಾರಕ್ಕೆ ಸೇರಿದ ಹಲವು ಸಾವಿರಕೋಟಿ ರುಪಾಯಿಗಳನ್ನು ಯಾವ ಸದ್ದು ಇಲ್ಲದೆ ನುಂಗಿ ಮಲಗಿಬಿಡಬಲ್ಲರು ಇವರು. ಏಷ್ಯನ ಒಲಂಪಿಕ್ ನಂತಹ ಕ್ರೀಡೆ ನಡೆಸಲು ವಿದೇಶಗಳಲ್ಲಿ ಅಂದಾಜು ಎರಡು ಸಾವಿರ ಕೋಟಿ ಖರ್ಚಾದರೆ ಭಾರತದಲ್ಲಿ ಅದಕ್ಕೆ ತೊಂಬತ್ತು ಸಾವಿರ ಕೋಟಿ ಖರ್ಚಾಗುತ್ತದೆ ಅನ್ನುವುದೆ ಭಾರತದಲ್ಲಿ ಭ್ರಷ್ಟಾಚಾರದ ವೈಭವವನ್ನು ತೋರಿಸುತ್ತದೆ.ಭಾರತದಲ್ಲಿಯೆ ಸಿಗುವ ವಸ್ತುಗಳನ್ನು, ಅದು ಔಷದವೆ ಆಗಿರಲಿ ನ್ಯಾಪ್ಕಿನ್ ಆಗಿರಲಿ , ವಿದೇಶದಿಂದ ತರಿಸಿ ಅದಕ್ಕೆ ಒಂದಕ್ಕೆ ನೂರರಷ್ಟು ಸಾವಿರದಷ್ಟು ಕೊಟ್ಟು ಕಡೆಗೆ ಅ ಹಣವನ್ನು ವಿದೇಶದಲ್ಲಿಯ ಬ್ಯಾಂಕಿನಲ್ಲಿಯೆ ಇಡುತ್ತಾರೆ.
ಜನಸಾಮಾನ್ಯರು: ಲಂಚ ಅನ್ನುವದನ್ನು ಜನಸಾಮಾನ್ಯರು ತುಂಬ ಸಹಜವಾಗಿಯೆ ತೆಗೆದುಕೊಂಡಿದ್ದಾರೆ. ಯಾರು ಪ್ರತಿಭಟಿಸಲು ಹೋಗುವದಿಲ್ಲ. ಉದಾಹರಣೆ ತೆಗೆದುಕೊಳ್ಳಿ, ನೀವು ಒಂದು ಜಾಗವನ್ನು ಅಥವ ಸೈಟ್ ಅನ್ನು ಖರೀದಿಸುತ್ತೀರಿ. ನಿಮ್ಮ ಎಲ್ಲ ದಾಖಲೆಗಳು ಸರಿಯಾಗಿಯೆ ಇದೆ. ಮತ್ತು ಸರ್ಕಾರಕ್ಕೆ ಸೇರಬೇಕಾದ ಎಲ್ಲ ಹಣವನ್ನು ಸಂದಾಯ ಮಾಡುತ್ತೀರಿ ನೀವು ಯಾವ ಕಾನೂನನ್ನು ಮೀರುತ್ತಿಲ್ಲ, ಹಾಗಿದ್ದಾಗಲು ನೊಂದಣಿ ಅಧಿಕಾರಿಗೆ ದಲಾಲಿಗಳ ಮೂಲಕ ಲಂಚ ಕೊಟ್ಟೆ ಕೊಡುತ್ತೀರಿ!. ಏಕೆ ? ಯಾರು ಪ್ರತಿಭಟಿಸುವದಿಲ್ಲ ಏಕೆ?.
ಉದಾಹರಣೆ ೨. ಡ್ರೈವಿಂಗ್ ಲೈಸನ್ಸ್ ಪಡೆಯಲು ಎಲ್ಲ ದಾಖಲೆ ನೀಡುತ್ತೀರಿ, ಹಣವನ್ನು ಸಂದಾಯ ಮಾಡುತ್ತೀರಿ, ಆತ್ಮವಿಶ್ವಾಸದಿಂದಲೆ ದ್ವಿಚಕ್ರವನ್ನು ಓಡಿಸುತ್ತೀರಿ ಆದರೆ ಅಲ್ಲಿ ಲಂಚ ಎಂದು ಹಣವನ್ನು ಕೊಟ್ಟೆ ಕೊಡುತ್ತೀರಿ ಏಕೆ?
.... ಎಕೆಂದರೆ ಭ್ರಷ್ಟಾಚಾರ ಎಂಬುದು ಭಾರತೀಯರ ರಕ್ತದಲ್ಲಿ ವಿಷದಂತೆ ಸೇರಿಹೋಗಿದೆ. ಕೋಪ ಬಂದಿತಲ್ವ ? ಇಂದು ಅಣ್ಣ ಹಜಾರೆಯವರ ಅಂದೋಳನ ಬೆಂಬಲಿಸುತ್ತಿರುವ ನೂರಕ್ಕೆ ನೂರು ಮಂದಿ ಯಾವುದೋ ಸಂಧರ್ಪದಲ್ಲಿ ನೇರವಾಗಿ ಅಥವ ಪರೋಕ್ಷವಾಗಿ ಭ್ರಷ್ಟಾಚಾರದಲ್ಲಿ ಬಾಗಿಯಾಗಿರುತ್ತಾರೆ ಅನ್ನುವುದು ಸತ್ಯವಲ್ಲವೆ?!!! ಹಾಗಿರುವಾಗ ಈ ಅಂದೋಲನದಲ್ಲಿ ಬಾಗವಹಿಸಲು ನಮ್ಮಲ್ಲಿ ನೈತಿಕವಾದ ಸತ್ವವೆ ಇಲ್ಲ! ಎಂತಾ ಕರುಣಾಜನಕ ಪರಿಸ್ಥಿಥಿ !.
ಲಂಚ ಕೊಡುವುದು ಸಹ ಲಂಚ ತೆಗೆದುಕೊಳ್ಳುವಷ್ಟೆ ಅಪರಾದವಲ್ಲವೆ ?
ಯುವಜನ : ನಿಜ ಯುವಜನ ಈ ಅಂದೋಲನದಲ್ಲಿ ಬಾಗವಹಿಸಬೇಕು ಏಕೆಂದರೆ ಅವರು ಮುಂದಿನ ಭಾರತದ ನೇತಾರರು ಹಾಗು ಅಧಿಕಾರಿಗಳು.
ಒಂದು ಉದಾಹರಣೆ ಗಮನಿಸಿ: ನನ್ನ ಸ್ನೇಹಿತರ ಮಗ ಸುಮಾರು ೧೬ ವರ್ಷದವನು ದ್ವಿಚಕ್ರ ಓಡಿಸುತ್ತಿದ್ದ ಅದು ಹೆಲ್ಮೆಟ್ ಇಲ್ಲದೆ. ನಾನು ಒಮ್ಮೆ ಪ್ರಶ್ನಿಸಿದೆ ಇದು ತಪ್ಪಲ್ಲವೆ ಪೋಲಿಸ್ ಹಿಡಿದರೆ ಏನು ಮಾಡ್ತಿಯ? ಎಂದು. ಅವನದು ಸಲೀಸಾದ ಉತ್ತರ "ಬಿಡಿ ಅಂಕಲ್ ನೂರು ರೂಪಾಯಿ ಕೊಟ್ಟರೆ ಆಯ್ತು ಬಿಟ್ಟಿ ಬಿಡ್ತಾರೆ" . ಹೇಗಿದೆ ನಮ್ಮ ಯುವ ಜನರ ನೈತಿಕ ಪ್ರಜ್ಞೆ
ಯುವಜನರಿಗೆ ಒಂದೆ ಪ್ರಶ್ನೆ? , ನೀವು ನಿಜವಾಗಿಯು ಭ್ರಷ್ಟಾಚಾರಕ್ಕೆ ಲಂಚಗುಳಿತನಕ್ಕೆ ವಿರುದ್ದವಾಗಿದ್ದಲ್ಲಿ ನಿಮಗೆ ಅದು ನಿಜಕ್ಕು ಅಸಹ್ಯವಾಗಿದ್ದಲ್ಲಿ ಲಂಚಕೋರರಾದ ನಿಮ್ಮ ಅಪ್ಪಂದಿರನ್ನ , ಅಮ್ಮಂದಿರನ್ನ, ಅಣ್ಣ ಮುಂತಾದವರನ್ನು ವಿರೋದಿಸುವದಿಲ್ಲವೇಕೆ. ಅದೇ ಹಣದಲ್ಲಿ ವಿಧ್ಯೆ ಕಲಿಯುತ್ತೀರಿ ! ಕಾರಿನಲ್ಲಿ ವಾಹನದಲ್ಲಿ ಓಡಾಡುತ್ತೀರಿ? ಮಜ ಮಾಡುತ್ತೀರಿ ನಿಮಗೆ ಇದು ಅಸಹ್ಯ ಅನಿಸುವುದಿಲ್ಲ ಏಕೆ?. ನೀವೇನು ಹಿರಿಯರಿಗೆ ಹೆದರುವುದಿಲ್ಲ , ನಿಮಗೆ ಬೇಕಾದಾಗ ಅವರನ್ನು ಹೆದರಿಸುತ್ತೀರಿ ಅಲ್ಲವೆ?
ಆದ್ದರಿಂದ ಯುವಜನರೆ ನಿಜಕ್ಕು ನೀವು ಪ್ರಾಮಾಣಿಕರಾಗಿದ್ದಲ್ಲಿ ನಿಮ್ಮ ಮನೆಯಿಂದ ಪ್ರಾರಂಬಿಸಿ ನಿಮ್ಮ ಅಂದೋಲನವನ್ನು.
ದೈವ: ಈ ವಿಚಾರದಲ್ಲಿ ನಾವು ದೈವವನ್ನು ಬೇಡುವಂತಿಲ್ಲ, ಏಕೆಂದರೆ ಈ ಭ್ರಷ್ಟಾಚಾರಿಗಳೆಲ್ಲ ತಮ್ಮ ಪಾಲಿನ ಪಾಪದ ಹಣದ ಒಂದು ಬಾಗವನ್ನು ದೇವರಿಗೆ ಸಮರ್ಪಿಸಿಬಿಡುತ್ತಾರೆ. ಅವರಿಗೆ ರಕ್ಷಣೆ ಸಿಗಲಿ ಎಂದು. ಗಣಿದಣಿಗಳು ಕೊಡುವ ಕಿರೀಟವನ್ನು ಧರಿಸಿ ಕೂಡುತ್ತಾರೆ ತಿರುಪತಿ ವೆಂಕಟೇಶ. ಅವನು ಅಸಹಾಯಕ. ಅದೇನೊ ಸಾಮಾನ್ಯರಿಗಿಂತ ಈ ಭ್ರಷ್ಟಾಚಾರಿಗಳಿಗೆ ಸ್ವಲ್ಪ ದೈವಭಕ್ತಿ ಹೆಚ್ಚು.
ಅಂದರೆ ನಮ್ಮ ದೇಶದಲ್ಲಿಯ ಭ್ರಷ್ತಾಚಾರ ತೊಲಗಲು ಸಾದ್ಯವಿಲ್ಲವೆ ?
ಸಾದ್ಯ ! ಅದಕ್ಕೆ ನಮ್ಮ ಜನತೆಯೆ ಮನಸು ಮಾಡಬೇಕು ಭಾರತದ ಎಲ್ಲ ಜನತೆ ಪ್ರತಿಜ್ಞೆ ಮಾಡಬೇಕು
"ಎಂತಹುದೆ ಸಂಧರ್ಪ ಬರಲಿ ಎಷ್ಟೆ ತೊಂದರೆಯಾಗಲಿ ಕಡೆಗೆ ಪ್ರಾಣ ಹೋಗಲಿ ನಾನು ಯಾರಿಗು ಲಂಚ ಕೊಡಲ್ಲ ಮತ್ತು ಯಾರಾದರು ಕೊಡುತ್ತಿದ್ದರೆ ಅದನ್ನು ಅಲ್ಲಿಯೆ ಪ್ರತಿಭಟಿಸುತ್ತೇನೆ" ಎಂದು.
ಅದು ನಿಜವಾದ ಅಂದೋಲನ ಇಲ್ಲದಿದ್ದಲಿ ಅದು ಬರಿ ಮಾದ್ಯಮಗಳ ಸಂಮೋಹನ
ಕಡೇ ಪಕ್ಷ ಸಂಪದಿಗರೆ ನೀವು ಈ ರೀತಿ ನಿರ್ದಾರ ಮಾಡುತ್ತೀರ ?
ಈಗ ಮತ್ತೆ ಅದೆ ಪ್ರಶ್ನೆ ನಮ್ಮ ಪಕ್ಕದ ಮನೆಯ ಮಗು ಕೇಳುತ್ತಿದೆ
"ಅಣ್ಣಾ ಭ್ರಷ್ಟಾಚಾರ ಅಂದ್ರೆ ಏನಣ್ಣ ?" .....
Comments
ಉ: ಅಣ್ಣಾ ಭ್ರಷ್ಟಾಚಾರ ಅಂದ್ರೆ ಏನಣ್ಣ?