ಅದೃಷ್ಟ (ವಿಶ್ವಕಥಾಕೋಶ -೧೩)

ಅದೃಷ್ಟ (ವಿಶ್ವಕಥಾಕೋಶ -೧೩)

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರಧಾನ ಸಂಪಾದಕರು: ನಿರಂಜನ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೬೫.೦೦, ಮುದ್ರಣ: ೨೦೧೧

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.

ಜಗತ್ತಿನ ಸಾರಸ್ವತ ಭಂಡಾರದ ಒಂದು ಭಾಗವನ್ನು ಕನ್ನಡ ಓದುಗರ ಮುಂದೆ ವಿಶ್ವಕಥಾಕೋಶ ತಂದಿಡುತ್ತದೆ. ನಾನಾ ದೇಶಗಳಿಂದ, ಭಾಷೆಗಳಿಂದ ಆಯ್ದ ಸುಮಾರು ೪೦೦ ಸಣ್ಣ ಕಥೆಗಳ ರಸದೌತಣ ಓದುಗರಿಗಾಗಿ ಇದರಲ್ಲಿ ಕಾದಿದೆ. ಭಾರತೀಯ ಭಾಷೆಗಳಲ್ಲಿ ಇಂತಹ ಒಂದು ಪ್ರಕಟಣೆ ಇದೇ ಮೊತ್ತಮೊದಲನೆಯದು.

ಇದೊಂದು ಬೃಹತ್ ಯೋಜನೆ. ಒಟ್ಟು ೨೫ ಸಂಪುಟಗಳಲ್ಲಿ ಇದರ ಪ್ರಕಟಣೆ. ಜಗತ್ತಿನ ಅತ್ಯುತ್ತಮ ಸಣ್ಣ ಕಥೆಗಳ ಈ ಮಹಾ ಸಂಕಲನವನ್ನು ಸಂಪಾದಿಸುವ ಗುರುತರವಾದ ಹೊಣೆಯನ್ನು ಹೊತ್ತವರು ಖ್ಯಾತ ಸಾಹಿತಿಯೂ, ಸ್ವತಃ ಶ್ರೇಷ್ಟ ಕಥೆಗಾರರೂ ಆದ ನಿರಂಜನರು.”

ಇದು ವಿಶ್ವಕಥಾಕೋಶದ ಮೊದಲ ಮುದ್ರಣದ ಸಮಯದಲ್ಲಿ ಬರೆದ ಪ್ರಕಾಶಕರ ನುಡಿ. ಈ ಕಥಾಕೋಶದ ಎಲ್ಲಾ ಪ್ರತಿಗಳು ಮುಗಿದು ಹೋದ ಕಾರಣ, ಹೊಸ ಓದುಗರಿಗೂ ಪುಸ್ತಕ ದೊರೆಯಬೇಕು ಎಂಬ ಸದಾಶಯದಿಂದ ೨೦೧೧ರಲ್ಲಿ ಎಲ್ಲಾ ಪುಸ್ತಕಗಳ ದ್ವಿತೀಯ ಮುದ್ರಣ ಮಾಡಲಾಯಿತು. ಆ ಸಮಯದಲ್ಲಿ ಪ್ರಕಾಶಕರ ನುಡಿ ಹೀಗಿದೆ. 

“ನವಕರ್ನಾಟಕ ಪ್ರಕಾಶನದ ೫೦ರ ಸಂಭ್ರಮದಲ್ಲಿ ‘ವಿಶ್ವಕಥಾಕೋಶ'ದ ಇಪ್ಪತ್ತೈದು ಸಂಪುಟಗಳನ್ನು ಪುನರ್ಮುದ್ರಿಸಿ ಓದುಗರ ಕೈಗಿಡುತ್ತಿದ್ದೇವೆ. ಮೂವತ್ತು ವರ್ಷಗಳ ಕಾಲ ಅಲಭ್ಯವಾಗಿದ್ದ ಜಗತ್ತಿನ ಸಾಹಿತ್ಯ ಕಥಾ ಕಣಜ ಬೆಳಕು ಕಾಣುವ ಸಮಯದಲ್ಲಿ ಈ ಯೋಜನೆಯ ಹೊಣೆ ಹೊತ್ತ ಶ್ರೇಷ್ಟ ಕಥೆಗಾರ, ಸಾಹಿತಿ ನಿರಂಜನರು ನಮ್ಮೊಂದಿಗೆ ಇದ್ದಿದ್ದರೆ, ನವಕರ್ನಾಟಕದ ಚಿನ್ನದ ಹಬ್ಬ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು. ಈ ಸಂಪುಟಗಳನ್ನು ಅವರಿಗೆ ಅರ್ಪಿಸಿ, ಅವರನ್ನು ನೆನೆಯುತ್ತೇವೆ.”

ಈ ಸಂಪುಟದ ಬೆಲೆ ಕೈಗೆಟಕುವಂತಿದೆ. ಅದಕ್ಕೆ ಕಾರಣ ಇನ್ಫೋಸಿಸ್ ಫೌಂಡೇಶನ್ ಇದರ ಅಧ್ಯಕ್ಷೆಯಾದ ಶ್ರೀಮತಿ ಸುಧಾ ಮೂರ್ತಿಯವರು. ಈಗ ನಮ್ಮ ಕೈಯಲ್ಲಿರುವುದು ವಿಶ್ವಕಥಾಕೋಶದ ಹದಿಮೂರನೆಯ ಸಂಪುಟ ‘ಅದೃಷ್ಟ'. ವಿಶ್ವಕಥಾಕೋಶದ ಈ ಸಂಪುಟದಲ್ಲಿ ಅಮೇರಿಕ, ಕೆನಡ ಹಾಗೂ ಮೆಕ್ಸಿಕೊ ದೇಶದ ಕಥೆಗಳಿವೆ. ಈ ೧೩ನೇ ಸಂಪುಟದಲ್ಲಿರುವ ಕಥೆಗಳ ಸಂಖ್ಯೆಯೂ ೧೩. ಹನ್ನೊಂದು ಅಮೇರಿಕಾ ಸಂಯುಕ್ತ ಸಂಸ್ಥಾನಗಳಿಂದ, ಒಂದು ಕೆನಡಾದಿಂದ ಹಾಗೂ ಮತ್ತೊಂದು ಮೆಕ್ಸಿಕೋದಿಂದ ಕಥೆಗಳನ್ನು ಸಂಗ್ರಹಿಸಲಾಗಿದೆ. ಜನತೆಯ ನೋವು ನಲಿವುಗಳಿಗೆ, ಸೋಲು ಗೆಲುವುಗಳಿಗೆ ಸ್ಪಂದಿಸುವ ಶ್ರೇಷ್ಟ ಸಾಹಿತ್ಯ ಪರಂಪರೆಯ ಈ ಪ್ರಾತಿನಿಧಿಕ ಸಂಕಲನ ಓದುಗರಿಗೆ ಇಷ್ಟವಾಗುತ್ತದೆಂದು ಸಂಪಾದಕರ ನಂಬಿಕೆ.

ಈ ಪುಸ್ತಕದಲ್ಲಿ ಇರುವ ೧೩ ಕಥೆಗಳೆಂದರೆ, ಅದೃಷ್ಟ ( ಮಾರ್ಕ್ ಟ್ವೇನ್), ಕತೆ ಹೇಳಿದ ಹೃದಯ (ಎಡ್ಗರ್ ಆಲನ್ ಪೊ), ಜೀವನ ನಿಯಮ (ಜಾಕ್ ಲಂಡನ್), ಕೊನೆಯ ಎಲೆ (ಒ.ಹೆನ್ರಿ), ಬಿರುಗಾಳಿ ಬೀಸಿದ ಮೇಲೆ ( ಆರ್ನೆಸ್ಟ್ ಹೆಮಿಂಗ್ವೇ), ಆ ಕ್ಷೌರಿಕ ಹಾಗೂ ಸರ್ಕಸಿನ ಹುಲಿಯ ಬಾಯಿಗೆ ತಲೆಕೊಟ್ಟ ಆತನ ಚಿಕ್ಕಪ್ಪ (ವಿಲಿಯಮ್ ಸಾರೊಯನ್), ದಾರಿಯಲ್ಲಿ ಕಂಡವನು (ಆಲ್ಬರ್ಟ್ ಮಾಲ್ಟ್ಸ್), ವಸಂತ ನಿನಗೆ ನಮನ (ಮೆರಿದೆಲ್ ಲ ಸೂಅ), ಕಣ್ಮರೆಯಾದ ಫೀಬೀ (ಥಿಯೊಡೊರ್ ಡ್ರೈಸರ್), ಇನ್ನೇನು ಗಂಡಸಾಗಲಿದ್ದ ಒಬ್ಬ ಗಂಡಸು (ರಿಚರ್ಡ್ ರೈಟ್), ವರದಿ (ಡೊನಾಲ್ಡ್ ಬಾರ್ಥೆಲ್ಮೆ), ಮುರಿದುಹೋದ ಭೂಮಂಡಲ ( ಹೆನ್ರಿ ಕ್ರೇಸೆಲ್), ಹದಿಮೂರನೆಯ ತೋಳ (ಆರ್ತುರೊ ಸೌತೋ ಅಲಬಾರ್ಸೆ).

ಇಲ್ಲಿರುವ ಎಲ್ಲಾ ಕಥೆಗಳ ಲೇಖಕರ ಬಗ್ಗೆ ಪುಟ್ಟದಾದ ಮಾಹಿತಿಯನ್ನು ಕೊನೆಯ ಪುಟಗಳಲ್ಲಿ ನೀಡಲಾಗಿದೆ. ಇದರಿಂದ ಅಪರಿಚಿತರಾಗಿರುವ ಲೇಖಕರನ್ನು ಪರಿಚಯ ಮಾಡಿಕೊಳ್ಳಲು ಸಹಕಾರಿಯಾಗಿದೆ. ಇಲ್ಲಿರುವ ಕಥೆಗಳನ್ನು ವೀಣಾ ಶಾಂತೇಶ್ವರ ಇವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ದ್ವಿತೀಯ ಮುದ್ರಣವನ್ನು ಪ್ರಕಾಶಕರು ಈ ಸಂಪುಟದ ಮುಖ್ಯ ಸಂಪಾದಕರಾದ ನಿರಂಜನ ಅವರಿಗೇ ಅರ್ಪಿಸಿದ್ದಾರೆ. ಪುಸ್ತಕ ಸುಮಾರು ೧೩೫ ಪುಟಗಳನ್ನು ಹೊಂದಿದೆ. ಅಮೇರಿಕ, ಕೆನಡ ಹಾಗೂ ಮೆಕ್ಸಿಕೋ ದೇಶದ ಕಥೆಗಳನ್ನು ಓದಿ ಆನಂದಿಸಲು ಇದು ಸೂಕ್ತ ಪುಸ್ತಕವಾಗಿದೆ.