ಅನುಭಾವದ ಅಭಾವ: ಅಸ್ತಿತ್ವವಾದ (ಓಷೋ ರಜನೀಶ್ ಚಿಂತನೆಗಳು)

ಅನುಭಾವದ ಅಭಾವ: ಅಸ್ತಿತ್ವವಾದ (ಓಷೋ ರಜನೀಶ್ ಚಿಂತನೆಗಳು)

           ಅಸ್ತಿತ್ವವಾದೀ ಚಿಂತನೆಗಳು ಕೆಲವು ಅಪರೂಪದ ಪರಿಕಲ್ಪನೆಗಳನ್ನು ನೀಡಿವೆ. ’ಏಕಾಕಿತನ’ ಅಂಥದೊಂದು ಪರಿಕಲ್ಪನೆ. ಒಮ್ಮೆ ಜಾರ್ಜ್ ಬರ್ನಾರ್ಡ್ ಷಾ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಟಿಕೆಟ್ ಕಲೆಕ್ಟರ್ ಇವರ ಬಳಿ ಬಂದಾಗ ಬರ್ನಾರ್ಡ್ ಷಾ ಎದ್ದು ನಿಂತು ತಮ್ಮ ಜೇಬುಗಳನ್ನು, ಬ್ಯಾಗುಗಳನ್ನು ತಡಕಾಡುತ್ತ ವಿಚಲಿತರಾದರಂತೆ. ಟಿಕೆಟ್ ಕಲೆಕ್ಟರ್ “ಪರವಾಗಿಲ್ಲ, ನೀವು ನಾಡಿನ ಪ್ರಸಿದ್ಧ ಬರಹಗಾರರೆಂದು ನಾನು ಬಲ್ಲೆ. ನಿಧಾನವಾಗಿ ಹುಡುಕಿ, ಮತ್ತೆ ಬರುತ್ತೇನೆ” ಎಂದು ಹೇಳಿದಾಗ “ನಾನು ಹುಡುಕುತ್ತಿರುವುದು ಟಿಕೆಟ್ಟನ್ನಲ್ಲ, ಎಲ್ಲಿ ಹೋಗುತ್ತಿದ್ದೇನೆ ಎಂಬುದು ಮರೆತು ಹೋಗಿದೆ” ಎಂದರಂತೆ. ’ಟಿಕೆಟ್ ಎಲ್ಲಿದೆ’, ’ಎಲ್ಲಿ ಹೋಗುತ್ತಿದ್ದೇನೆ’, ’ಎಲ್ಲಿಂದ ಬರುತ್ತಿದ್ದೇನೆ’ ಇವೆಲ್ಲ ಇಂದಲ್ಲ ನಾಳೆ ಬಗೆಹರಿಯುವ ಪ್ರಶ್ನೆಗಳು. ಆದರೆ ’ನಾನು ಯಾರು’ ಎಂಬ ಪ್ರಶ್ನೆ ತುಂಬ ಗಹನವಾದುದು. ನಮಗೆ ನಾವೇ ಅಪರಿಚಿತರಾಗಿದ್ದೇವೆ, ನಾವೇ ನಮ್ಮ ಪಾಲಿಗೆ ಆಗಂತುಕರಾಗಿದ್ದೇವೆ ಎಂಬ ತಿಳಿವು ಅಸ್ತಿತ್ವವಾದೀ ವಿಷಾದವನ್ನು ಉಂಟು ಮಾಡುವಂತಹುದು. ಈ ವಿಷಾದ ತಲ್ಲಣಗಳು ಆಧುನಿಕ ಮನುಷ್ಯನನ್ನು ನಿಜಕ್ಕೂ ಬೆಚ್ಚಿಬೀಳಿಸಿವೆ. ಅಸ್ತಿತ್ವವಾದೀ ಚಿಂತನೆಗಳು ವಿಷಾದ, ಏಕಾಕಿತನಗಳನ್ನು ಇನ್ನೂ ತೀವ್ರಗೊಳಿಸಬಹುದಲ್ಲದೆ ಇಲ್ಲವಾಗಿಸಲಾರದು.


ಸಾವನ್ನೇ ಕೊನೆ ಎನ್ನುವುದಾದರೆ ಬದುಕನ್ನು ರೋಗವೆನ್ನದೆ ಬೇರೇನೆಂದು ಕರೆಯಬೇಕು. ಈ ಏಕಾಕಿತನ, ವಿಷಾದಗಳಿಗೆ ಅತೀತರಾದ ಮಂದಿ ಲೋಕದಲ್ಲಿ ಜನಿಸಿದ್ದಾರೆ. ಬುದ್ಧ, ಮಹಾವೀರ, ಯೇಸುಕ್ರಿಸ್ತನಂತಹ ಕೆಲವರಾದರೂ ಬದುಕಿನ ದುಃಖಸಮುದಯದಿಂದ, ಏಕಾಕಿತನದಿಂದ ಪಾರಾದವರು ಎಂಬ ಮಾತನ್ನು ಯಾರೂ ಅಲ್ಲಗಳೆಯಲಾರರು. ಅವರ ಸಾನ್ನಿಧ್ಯ ಮಾತ್ರವೇ ಸಾವಿರಾರು ಮನಸ್ಸುಗಳಲ್ಲಿ ಬದುಕೆಂದರೆ ಬರೀ ದುಃಖ ವಿಷಾದಗಳಲ್ಲ ಎಂಬ ಅರಿವನ್ನು ಹೊತ್ತಿಸಿದೆ. ಆದರೆ ಅಸ್ತಿತ್ವವಾದವನ್ನು ಸಿದ್ಧಾಂತವನ್ನಾಗಿಸಿಕೊಂಡ ಪಶ್ಚಿಮದ ಬುದ್ಧಿಜೀವಿಗಳು ಬುದ್ಧಿವೈಕಲ್ಯಕ್ಕೆ ಗುರಿಯಾದರು. ಆತ್ಮಹತ್ಯೆಯೇ ಅವರ ಸಿದ್ಧಾಂತಗಳ ತಾತ್ವಿಕ ನಿರ್ಣಯವಾಗಿಬಿಟ್ಟಿತು. ಅಸ್ತಿತ್ವವಾದವು ಭೌತಿಕವಾದಕ್ಕಿಂತ ಒಂದು ಹೆಜ್ಜೆ ಮುಂದುವರೆಯಿತು. ಭೌತಿಕವಾದಿಗಳು ದೇವರನ್ನು ನಂಬದಿದ್ದರೂ ಬದುಕನ್ನು ವಾಸ್ತವ ಎಂದಾದರೂ ಪ್ರತಿಪಾದಿಸಿದರು. ಆದರೆ ಅಸ್ತಿತ್ವವಾದಿಗಳು ವಾಸ್ತವ ಬದುಕನ್ನೂ ಅರ್ಥಹೀನ, ರೋಗಗ್ರಸ್ಥ, ದುಃಖಕರ ಎಂದು ತೀರ್ಮಾನಿಸಿದರು. ಈ ಹಿಂದೆ ನೀಷೆ ಹಿಟ್ಲರನಿಗೆ ತಾತ್ವಿಕ ಬೆಂಬಲ ನೀಡಿದಂತೆ, ಇಂದು ಅಸ್ತಿತ್ವವಾದಿಗಳು ಅಮೆರಿಕನ್ ಪ್ರಭುತ್ವದ ಕ್ರೌರ್ಯಗಳಿಗೆ ತಾತ್ವಿಕ ಬೆಂಬಲವನ್ನು ಒದಗಿಸುತ್ತಿದ್ದಾರೆ. ಪ್ರಭುತ್ವ ಅನಾದಿಕಾಲದಿಂದಲೂ  ಶ್ರೇಷ್ಠವಾದ ತತ್ವ ಪ್ರಸ್ಥಾನವನ್ನು ದುಡಿಸಿಕೊಂಡೇ ಬಂದಿದೆ. ಪ್ರಭುತ್ವಗಳು ಮನುಷ್ಯರ ಬದುಕನ್ನು ನಿರ್ನಾಮ ಮಾಡಲು ಹೊರಟಿದ್ದರೆ, ಬದುಕಿಗೆ ಅರ್ಥವಿಲ್ಲ ಎಂಬ ಈ ಬಗೆಯ ಸಿದ್ಧಾಂತಗಳು ಹಾಗೆ ನಿರ್ನಾಮವಾಗಲು ಮನುಷ್ಯಜಾತಿಯನ್ನು ಸಿದ್ಧಪಡಿಸುತ್ತಿವೆ. “ಬದುಕಿರುವುದು ಅರ್ಥಹೀನವೆಂದಾದರೆ ಆತ್ಮಹತ್ಯೆ ಮಾಡಿಕೊಳ್ಳಬಾರದೇಕೆ? ಯಾವ ಪುರುಷಾರ್ಥಕ್ಕೆ ನೀವಿನ್ನೂ ಉಸಿರಾಡುತ್ತಿರುವಿರಿ?” ಎಂದು ಒಮ್ಮೆ ನಾನು ಜಸ್ಪರ್ಸ್ ಹಾಗು ಸಾರ್ತ್ರೆ ಇಬ್ಬರಿಗೂ ಪತ್ರ ಬರೆದು ಕೇಳಿದ್ದೆ. ಇಬ್ಬರಿಂದಲೂ ನನಗೆ ಪ್ರತ್ಯುತ್ತರ ಬರಲಿಲ್ಲ. ಕೀರ್ಕೆಗಾರ್ಡ್‌ನಿಂದ ಹಿಡಿದು ಗೇಬ್ರಿಯಲ್ ಮಾರ್ಸೆಲ್‌ನ ವರೆಗಿನ ಎಲ್ಲ ಅಸ್ತಿತ್ವವಾದಿಗಳೂ ತಿಂದುಂಡು, ಎಲ್ಲ ಕೀರ್ತಿ ಪ್ರತಿಷ್ಠೆ ಅಧಿಕಾರ ಬಹುಮಾನಗಳನ್ನು ತೃಪ್ತಿಯಿಂದ ಅನುಭವಿಸಿ ಸುಖವಾಗಿಯೇ ಇದ್ದರು. ಆಂತರ್ಯದಲ್ಲಿ ಬದುಕು ಅರ್ಥಹೀನವೆಂದೇನೂ ಅವರಾರೂ ನಂಬಿರಲಿಲ್ಲ. ಹೊರಜಗತ್ತಿಗೆ ಮಾತ್ರ ಜೀವವಿರೋಧಿ ಹಾಗು ಮಾನವವಿರೋಧಿಯಾದ ರೋಗಗ್ರಸ್ಥ ಸಿದ್ಧಾಂತಗಳನ್ನು ಬೋಧಿಸಿದರು.

            ಬದುಕಿಗೆ ದೇವರು, ಪರಲೋಕ ಇತ್ಯಾದಿ ಗಹನವಾದ ಅರ್ಥವಿದೆ ಎಂದು ಬೋಧಿಸುತ್ತಿದ್ದ ಕ್ರಿಶ್ಚಿಯನ್ ಪಾದ್ರಿಗಳೇ ಬದುಕಿಗೆ ಅರ್ಥವಿಲ್ಲ ಎನ್ನುವ ಅಸ್ತಿತ್ವವಾದಿಗಳಿಗೆ ಜನ್ಮ ನೀಡಿದುದು. ಕ್ರಿಶ್ಚಿಯನ್ ನಂಬಿಕೆಗಳಿಂದ ರೋಸಿಹೋಗಿ ಸಾರ್ತ್ರ್, ಜಸ್ಪರ್ಸ್ ಮೊದಲಾದ ಅಸ್ತಿತ್ವವಾದಿಗಳು ಬದುಕಿನ ನಿರರ್ಥಕತೆಯನ್ನು ಪ್ರತಿಪಾದಿಸಿದರು. ಅರ್ಥಹೀನತೆ, ಅರ್ಥಪೂರ್ಣತೆಗಳು ನಮ್ಮ ಬುದ್ಧಿಗೆ ನಿಲುಕುವ ದ್ವಂದ್ವಾತ್ಮಕ ಪರಿಭಾಷೆಗಳು. ಅಸ್ತಿತ್ವವಾದರೂ ಬುದ್ಧಿಯ ಈ ದ್ವಂದ್ವಮಯ ನಿರ್ಣಯಗಳಿಗೆ ಹೊರತಾದುದು. ಬದುಕು ನಿರಂತರವಾಗಿ ಅನುಭವಗಳನ್ನು ನೀಡಬಹುದಲ್ಲದೆ ಅದು ತನ್ನೊಳಗೆ ಯಾವ ಅರ್ಥಗಳನ್ನೂ ಹೊಂದಿರುವುದಿಲ್ಲ. ಅಸ್ತಿತ್ವವಾದಿಗಳೆನಿಸಿಕೊಂಡವರಿಗೆ ಬದುಕಿನಲ್ಲಿ ಆತಂಕ, ತಲ್ಲಣ ಹಾಗು ಸಾವುಗಳಿಗಿಂತ ಗಹನವಾದ ಬೇರೆ ಮತ್ತೊಂದು ಅನುಭವ ಕಾಣಿಸಲಿಲ್ಲ. ಇದು ಕ್ರಿಶ್ಚಿಯನ್ ಹಾಗು ಯಹೂದಿ ನಂಬಿಕೆಗಳ ಫಲಶ್ರುತಿಯಾಗಿದೆ. ಅಲ್ಲದೆ ಈ ಹಿಂದೆ ಮನುಷ್ಯಜನಾಂಗ ಎಂದೂ ಇಷ್ಟೊಂದು ಆತಂಕ, ತಲ್ಲಣ, ಸಾವಿನ ಭಯಗಳನ್ನು ಅನುಭವಿಸಿರಲಿಲ್ಲ. ಸೂಕ್ಷ್ಮಜ್ಞತೆಯುಳ್ಳ ಜನಾಂಗಗಳು ಮಾತ್ರ ಬದುಕಿನ ದುರಂತಗಳಿಗೆ ಸದಾ ಸಂವೇದನಾಶೀಲವಾಗಿರುತ್ತವೆ. ಅದರಲ್ಲಿಯೂ ಇಂತಹ ದುರಂತಪ್ರಜ್ಞೆ ಸುಭಿಕ್ಷವಾದ ಜನಾಂಗಗಳನ್ನು ಮಾತ್ರ ಬಾಧಿಸುತ್ತದೆ. ಭಾರತದಂತಹ ದೇಶದಲ್ಲಿ ಜನ ಬದುಕಿನ ಮೂಲ ಪ್ರಶ್ನೆಯನ್ನು, ಮೂಲ ಆತಂಕವನ್ನು ಕುರಿತು ಎಂದೂ ತಲೆಕೆಡಿಸಿಕೊಂಡವರಲ್ಲ. ಹಸಿವು ಹೆಚ್ಚಾದಷ್ಟೂ ವೈಚಾರಿಕತೆಯನ್ನು ನಾಶ ಮಾಡಬಲ್ಲ ಮೂಢನಂಬಿಕೆಗಳು ಹೆಚ್ಚಾಗುತ್ತದೆ.

         ಆದರೆ ಎಲ್ಲ ಅಸ್ತಿತ್ವವಾದಿಗಳ ಮೂಲ ಪ್ರೇರಣೆಯಾಗಿದ್ದ ಫ್ರೆಡರಿಕ್ ನೀಷೆಯ ಕಥೆಯೇ ಬೇರೆ. ನಾನು ನೀಷೆಯೊಂದಿಗೆ ಬಹು ಸುಲಭವಾಗಿ ತಾದಾತ್ಮ್ಯ ಹೊಂದಬಲ್ಲೆ. ಏಕೆಂದರೆ ನಾನೂ ನೀಷೆಯಂತೆಯೇ ಅಪಾರ್ಥಕ್ಕೊಳಗಾದವನು ಅಥವ ಅವನಿಗಿಂತ ಹೆಚ್ಚು ಅಪಾರ್ಥಕ್ಕೊಳಗಾದವನು. ನೀಷೆ “ನಾನು ದೌರ್ಬಲ್ಯವನ್ನು ದ್ವೇಷಿಸುತ್ತೇನೆ” ಎಂದು ಹೇಳಿದಾಗ ಜನ “ಈತ ಶಕ್ತಿಶಾಲೀ ಸಾರ್ವಭೌಮರ ಸರ್ವಾಧಿಕಾರವನ್ನು ಬೆಂಬಲಿಸುವವನು” ಎಂದು ವ್ಯಾಖ್ಯಾನಿಸಿದರು. ಅವನು ಸಂಕಲ್ಪ ಬಲದ ಕುರಿತು (ವಿಲ್ ಟು ಪವರ್) ನುಡಿದಾಗ ಜನ ಅದನ್ನು “ಎಲ್ಲವನ್ನೂ ಸ್ವಾಧೀನ ಪಡಿಸಿಕೊಳ್ಳುವ ಲೋಭ” ಎಂದು ಅರ್ಥೈಸಿದರು. ನನ್ನ ವಿಷಯದಲ್ಲೂ ಹೀಗೆಯೇ ಆಗಿದೆ. ನಾನು “ಬಡತನವನ್ನು ದ್ವೇಷಿಸುತ್ತೇನೆ” ಎಂದು ಹೇಳಿದಾಗ “ಇವನು ಶ್ರೀಮಂತರ ಗುರು: ಎಂದು ಜರೆಯುತ್ತಾರೆ. ಲೋಕದ ಜನ ನಿಜಕ್ಕೂ ಪ್ರಾಮಾಣಿಕರಲ್ಲ. ಅರ್ಥವಾಗದಿದ್ದರೆ ಅವರು ತಮ್ಮ ಅಜ್ಞಾನವನ್ನು ಒಪ್ಪಿಕೊಳ್ಳುವುದಿಲ್ಲ ಬದಲಿಗೆ ಅಪಾರ್ಥಗಳನ್ನು ಹುಟ್ಟಿಸಿ ತಮ್ಮ ಅಜ್ಞಾನವನ್ನು ಮರೆಮಾಡಲು ಪ್ರಯತ್ನಿಸುತ್ತಾರೆ. ಇಂದು ಅಪಾರ್ಥಕ್ಕೊಳಗಾಗದ ಮೇಧಾವಿ ಮೇಧಾವಿಯೇ ಅಲ್ಲವೇನೋ ಎಂದು ನಿರ್ಣಯಿಸುವಂತಾಗಿಬಿಟ್ಟಿದೆ. “ನನ್ನ ಆಶ್ರಮವನ್ನು ಪ್ರವೇಶಿಸುವವರು ಎಲ್ಲ ಭರವಸೆಗಳನ್ನೂ ಮರೆತುಬಿಡಬೇಕು” ಎಂದು ಅಮೆರಿಕಾದ ಪಾದ್ರಿಗಳು ನನ್ನ ಬಗ್ಗೆ ಪ್ರಚಾರ ಮಾಡುತ್ತಿದ್ದರು. ತಾವು ಪರೋಕ್ಷವಾಗಿ ನನ್ನ ಸಂದೇಶವನ್ನೇ ಸಾರುತ್ತಿದ್ದೇವೆ ಎನ್ನುವುದು ಆ ಮೂರ್ಖರಿಗೆ ಅರ್ಥವಾಗಿರಲಿಲ್ಲ. ಎಲ್ಲ ಭರವಸೆಗಳನ್ನೂ ಬದಿಗಿರಿಸಿ “ಪ್ರತಿಕ್ಷಣವೂ ಅದೇ ಪರಮ ಸತ್ಯ ಎಂದು ಬದುಕಿರಿ” ಎಂದೇ ನಾನು ಉಪದೇಶಿಸುವುದು. ನನ್ನ ದೃಷ್ಟಿಯಲ್ಲಿ ಇದುವೆ ನಿಜವಾದ ಅಸ್ತಿತ್ವವಾದ.

            “ನಾನು ಕಾಲದಿಂದ ೧೦ ಸಾವಿರ ಅಡಿಗಳಷ್ಟು ಎತ್ತರದಲ್ಲಿದ್ದೇನೆ ಎಂದು ಇದ್ದಕ್ಕಿದ್ದಂತೆ ನನಗೆ ಭಾಸವಾಯಿತು” ಎಂದು ಬರೆದಿರುವ ನೀಷೆ ಆಂತರ್ಯದಲ್ಲಿ ಒಬ್ಬ ಅನುಭಾವಿಯಾಗಿದ್ದ ಎಂದು ತುಂಬ ಜನರಿಗೆ ಗೊತ್ತಿರಲಿಕ್ಕಿಲ್ಲ. ಇಂಥದೊಂದು ಅನುಭವ ಒದಗಿದ ಮರುಗಳಿಗೆಯೇ ಆ ಅನುಭವದ ತೀವ್ರತೆಯನ್ನು ನಿಭಾಯಿಸಲಾಗದೇ ಅವನು ’ಹುಚ್ಚ’ನಾದ. ಫ್ರೆಡರಿಕ್ ನೀಷೆ ತನ್ನ ’ಆಂಟಿ ಕ್ರೈಸ್ಟ್’ ಪುಸ್ತಕವನ್ನು ಬರೆದದ್ದು ಹುಚ್ಚಾಸ್ಪತ್ರೆಯ ಒಂದು ಕೋಣೆಯಲ್ಲಿ. ಮನೋವಿಜ್ಞಾನಿಗಳು ಆತ ಹುಚ್ಚನೆಂದು ತೀರ್ಮಾನಿಸಿದ್ದರೂ, ಅವರ ತೀರ್ಮಾನಗಳು ತಪ್ಪು ಎಂದು ’ಆಂಟಿ ಕ್ರೈಸ್ಟ್’ ರುಜುವಾತು ಪಡಿಸಿತು. ಮಾತ್ರವಲ್ಲ, ಆ ತಥಾಕಥಿತ ಮನೋವಿಜ್ಞಾನಿಗಳು ಮಾನಸಿಕವಾಗಿ ನಿಜಕ್ಕೂ ಸ್ವಸ್ಥರೇ ಎಂಬ ಅನುಮಾನವನ್ನೂ ಹುಟ್ಟಿಸಿತು. ಕೊನೆಯ ದಿನಗಳಲ್ಲಿ ಅವನ ನೆನಪಿನಿಂದ ಪ್ರತಿಯೊಂದೂ ಅಳಿಸಿ ಹೋಯಿತು. ಕೊನೆಕೊನೆಗೆ ಹಗಲಿರುಳೂ ಆರೈಕೆ ಮಾಡುತ್ತಿದ್ದ ತನ್ನ ಸ್ವಂತ ತಂಗಿಯನ್ನೂ ಅವನು ಗುರುತಿಸುತ್ತಿರಲಿಲ್ಲವಂತೆ. ಇಷ್ಟಾದರೂ ತನ್ನ ನಂಬಿಕೆಯ ಬಗ್ಗೆ ಅವನಿಗೆ ಅದೆಂತಹ ಶ್ರದ್ಧೆ ಇತ್ತೆಂದರೆ ಸಾಯುವ ಕಾಲದಲ್ಲೂ ’ಆಂಟಿ ಕ್ರೈಸ್ಟ್ ಫ್ರೆಡರಿಕ್ ನೀಷೆ’ ಎಂದೇ ಸಹಿ ಮಾಡುತ್ತಿದ್ದನಂತೆ! ಅವನು ಹುಚ್ಚಿನ ಸ್ಥಿತಿಯಲ್ಲಿ ಬರೆದ ಬರವಣಿಗೆಗಳು ತಾತ್ವಿಕವಾಗಿ ಅತ್ಯಂತ ಮಹತ್ವದ ಕೃತಿಗಳು ಎಂದು ನನ್ನ ಅನಿಸಿಕೆ. ನೀಷೆಗೆ ಹಿಡಿದ ಹುಚ್ಚು ಅವನ ಗಾಢ ಶ್ರದ್ಧೆಯ ಫಲ. ಅದು ಆತ ಯಾವ ಕ್ಷಣದಲ್ಲಾದರೂ ಆತ್ಮಾನುಭವಕ್ಕೆ ಧುಮುಕಲು ಸಿದ್ಧನಾಗಿದ್ದ ಎಂಬುದನ್ನು ಸೂಚಿಸುತ್ತದೆ. ಒಬ್ಬ ಹುಚ್ಚ ಹುಚ್ಚು ಹಿಡಿದ ಮೇಲೆ ’ಆಂಟಿ ಕ್ರೈಸ್ಟ್’ನಂತಹ ಕೃತಿಯನ್ನು ಬರೆಯಬಲ್ಲನೆಂದರೆ ಒಂದೇ ಸಮನೆ ಅಣ್ವಸ್ತ್ರಗಳನ್ನು ಗುಡ್ಡೆ ಹಾಕಿಕೊಳ್ಳುತ್ತಿರುವ ರೊನಾಲ್ಡ್ ರೇಗನ್ ತರಹದ ಆರೋಗ್ಯವಂತರಾಗಿ ಜೀವಿಸುವುದಕ್ಕಿಂತ ಹುಚ್ಚರಾಗುವುದೇ ಲೇಸಲ್ಲವೇ?

ನೀಷೆ “ಹುಟ್ಟಿದ ತಪ್ಪಿಗೆ ಪಾಪಪ್ರಜ್ಞೆಯನ್ನು ಅನುಭವಿಸಿ” ಎಂದು ಬೋಧಿಸುತ್ತಿದ್ದ ಪೂರ್ವದೇಶದ ಬುದ್ಧನನ್ನೂ ಹಾಗೆಯೇ ಪಶ್ಚಿಮದ ಯೇಸುಕ್ರಿಸ್ತನನ್ನೂ ಜೀವವಿರೋಧಿಗಳೆಂದು ಟೀಕಿಸುತ್ತಿದ್ದ. “ಮೊಟ್ಟಮೊದಲ ಹಾಗು ಕಟ್ಟ ಕಡೆಯ ಏಕಮಾತ್ರ ಕ್ರಿಶ್ಚಿಯನ್ ಅಂದೇ ಶಿಲುಬೆಯ ಮೇಲೆ ಸತ್ತು ಹೋದ” ಎಂದು ಹೇಳುತ್ತಿದ್ದ ನೀಷೆ ಯೇಸುವಿನ ಬೋಧನೆಯ ಹುಳುಕುಗಳನ್ನು ಸರಿಯಾಗಿಯೇ ಬೆದಕಿದ ಮೊದಲ ತತ್ವಜ್ಞಾನಿಯಾಗಿದ್ದಾನೆ. “ಒಬ್ಬ ವ್ಯಕ್ತಿ ಕೆನ್ನೆಗೆ ಹೊಡೆದರೆ ಅವನಿಗೆ ಇನ್ನೊಂದು ಕೆನ್ನೆಯನ್ನು ತೋರಿಸುವುದು ಇಡೀ ಮನುಷ್ಯಕುಲದ ಘನತೆಗೆ ಅವಮಾನ ಮಾಡಿದಂತೆ, ಹಾಗೆ ಕೆನ್ನೆ ತೋರಿಸಿದರೆ ’ನಾನು ನಿನಗಿಂತ ಹೆಚ್ಚು ಪವಿತ್ರಾತ್ಮ, ಹೆಚ್ಚು ಯೋಗ್ಯ ಎಂದು ಈಗಲಾದರೂ ನಿನಗೆ ತಿಳಿಯಿತೇ’ ಎಂದು ಹೊಡೆದವನ ತೇಜೋವಧೆ ಮಾಡಿದಂತಾಗುತ್ತದೆ” ಎಂದು ನೀಷೆ ಯೇಸುವಿನ ಮಾತುಗಳನ್ನು ವ್ಯಾಖ್ಯಾನಿಸುತ್ತಾನೆ. ಅವನ ಕೆನ್ನೆಗೆ ತಾನೂ ಒಂದು ಬಾರಿಸಿ ನಾನೇನೂ ನಿನಗಿಂತ ಹೆಚ್ಚಿನವನಲ್ಲ ನಾವಿಬ್ಬರೂ ಒಂದೇ ಮಟ್ಟದವರು ಎಂದು ಅವನಿಗೆ ಮನವರಿಕೆ ಮಾಡಿಸಿ ಸಮಾಧಾನ ಮಾಡತಕ್ಕದ್ದು ಎಂದು ನೀಷೆ ಸೂಚಿಸುತ್ತಾನೆ. ಯೇಸುಕ್ರಿಸ್ತ ಕೊನೆಯವರೆಗೂ ಜೀವವಿರೋಧೀ ಧೋರಣೆಯಿಂದ ಹಾಗು ಅದರಿಂದ ಹುಟ್ಟುವ ಒಂದು ಬಗೆಯ ಹುಂಬತನದಿಂದ ಮುಕ್ತನಾಗಿರಲಿಲ್ಲ ಎಂದು ನೀಷೆ ವಿವರಿಸುತ್ತಾನೆ. ಶಿಲುಬೆಯ ಮೇಲೆ ನೇತಾಡುವಾಗಲೂ ಆತ “ಭಗವಂತ, ಇವರನ್ನು ಕ್ಷಮಿಸಿಬಿಡು. ತಾವೇನು ಮಾಡುತ್ತಿರುವೆವು ಎಂದು ಇವರಿಗೆ ತಿಳಿಯುತ್ತಿಲ್ಲ” ಎನ್ನುತ್ತಾನೆ. ಯೇಸುವಿನ ಈ ಮಾತುಗಳನ್ನು “ಲೋಕಕ್ಕೆ ತಿಳಿದಿಲ್ಲ ಆದರೆ ತನಗೆ ತಿಳಿದಿದೆ ಎಂಬ ಹುಸಿ ಗರ್ವ ಈ ಮಾತಿನಲ್ಲಿ ಕಾಣಿಸುತ್ತದೆ” ಎಂದು ನೀಷೆ ವ್ಯಾಖ್ಯಾನಿಸುತ್ತಾನೆ. ನೀಷೆಗೆ “ತಾನೊಬ್ಬನೇ ಭಗವಂತನ ಔರಸ ಪುತ್ರ, ಕುರಿಹಿಂಡನ್ನು ಕೊಂಡೊಯ್ಯುವಂತೆ ತಾನು ಮನುಷ್ಯಜಾತಿಯನ್ನು ಎಲ್ಲ ನರಕದಿಂದ, ಪಾಪಕೂಪದಿಂದ, ಕತ್ತಲೆಯ ಸಂಕೋಲೆಗಳಿಂದ ಪಾರು ಮಾಡಿ ಪರಮಪಿತನ ಮನೆಬಾಗಿಲ ಮುಂದೆ ನಿಲ್ಲಿಸುತ್ತೇನೆ” ಎಂಬ ಯೇಸುವಿನ ಮಾತುಗಳನ್ನು ಕ್ಷಮಿಸಲಾಗಲಿಲ್ಲ. ಒಬ್ಬ ವ್ಯಕ್ತಿಯ ಅಹಂಕಾರ ತನ್ನ ಚರಮ ಸ್ಥಿತಿ ತಲುಪಿದಾಗ ಮಾತ್ರ ಈ ಥರದ ಮಾತುಗಳು ಅವನ ಬಾಯಲ್ಲಿ ಬರುತ್ತವೆ. ಆದರೆ ಯೇಸುವಿನ ಮಾತುಗಳು ಎಷ್ಟು ತಾದಾತ್ಮ್ಯ ಪೂರ್ಣವಾಗಿತ್ತೆಂದರೆ ಯಾರೂ ಅದನ್ನು ಪ್ರಶ್ನಿಸಲಿಲ್ಲ, ಎಷ್ಟು ಕಾವ್ಯಾತ್ಮಕವಾಗಿತ್ತೆಂದರೆ ಯಾರಿಗೂ ಅದರಲ್ಲಿ ಕುರೂಪ ಕಾಣಿಸಲಿಲ್ಲ.

ದೇವರು ಬದುಕಿದ್ದ ಎಂಬ ನಂಬಿಕೆಯನ್ನು ಹಿಂದೊಮ್ಮೆ ಇಟ್ಟುಕೊಳ್ಳದವನಿಗೆ ’ದೇವರು ಸತ್ತ’ ಎಂಬ ಮಾತುಗಳನ್ನು ಹೇಳಲಾಗುವುದೇ? ದೇವರು ಸತ್ತ ಎಂಬ ನೀಷೆಯ ಮಾತುಗಳು ಸತ್ಯ. ಆದರೆ ಆ ಮಾತು ಅರ್ಧಸತ್ಯ ಮಾತ್ರ, ಪೂರ್ಣಸತ್ಯವಲ್ಲ. ಏಕೆಂದರೆ ಅದು ನೀಷೆಯ ತಾರ್ಕಿಕ ನಿರ್ಣಯವೇ ವಿನಃ ಸ್ವಾನುಭವ ಸಿದ್ಧ ನುಡಿಗಳಲ್ಲ. ಈತನಕವೂ ದೇವರ ಕಲ್ಪನೆ ಮನುಷ್ಯ ಪ್ರತಿಭೆಯ ಹಾಗು ಅವನ ಎಲ್ಲ ಸೃಜನಶೀಲತೆಗಳ ಮೂಲಸ್ರೋತವಾಗಿದೆ. ಅದು ಮನುಷ್ಯ ಬದುಕಿನ ಕಟ್ಟಕಡೆಯ ಅರ್ಥವಾಗಿದೆ. ಅಂಥದೊಂದು ಪರಿಕಲ್ಪನೆಯನ್ನು ಮನುಷ್ಯನ ಕೈಯಿಂದ ಕಿತ್ತುಕೊಂಡರೆ ಅವನ ಬದುಕು ಪರಮಶೂನ್ಯವಾಗುತ್ತದೆ, ಅರ್ಥಹೀನವಾಗುತ್ತದೆ. ದೇವರ ಸಾವು ಒಂದು ಬಗೆಯ ಬಿಡುಗಡೆಯನ್ನು ನೀಡುವುದಾದರೂ ಆ ಬಿಡುಗಡೆಯನ್ನು ಇಟ್ಟುಕೊಂಡು ಏನು ಮಾಡುವುದು? ಆ ವಿಮೋಚನೆಗೆ ಸಾರ್ಥಕತೆ ಸಿಗುವುದು ಹೇಗೆ? ’ವಿಮೋಚನೆ’ ಎಂಬ ಪದವು “ಏತರಿಂದ ವಿಮೋಚನೆ” ಹಾಗು “ಏತಕ್ಕಾಗಿ ವಿಮೋಚನೆ” ಎಂಬ ಎರಡು ಪ್ರಶ್ನೆಗಳನ್ನು ಮುಂದಿಡುತ್ತದೆ. ನೀಷೆಯಲ್ಲಿ ಮೊದಲ ಪ್ರಶ್ನೆಗೆ ಉತ್ತರವಿತ್ತಾದರೂ ಎರಡನೆಯ ಪ್ರಶ್ನೆಗೆ ಉತ್ತರವಿರಲಿಲ್ಲ. ಆಸರೆ ಇಲ್ಲದ ಬದುಕು ಮನುಷ್ಯ ಬುದ್ಧಿಗೆ ಅರ್ಥಹೀನವೆಂದು ಭಾಸವಾಗುತ್ತದೆ. ಖಾಲಿತನ ನಿಸ್ಸಂಶಯವಾಗಿ ಹುಚ್ಚುತನದತ್ತ ದೂಡುತ್ತದೆ. ಕೊನೆಗೆ ನೀಷೆ ಹುಚ್ಚಾಸ್ಪತ್ರೆ ಸೇರಿದ್ದನ್ನು ಈ ಹಿನ್ನೆಲೆಯಲ್ಲಿ ಗಮನಿಸತಕ್ಕದ್ದು.

ದೇವರು ಎಂಬುದು ಒಂದು ಸುಳ್ಳು. ಆದರೆ ಸಾವಿರಾರು ವರ್ಷಗಳಿಂದಲೂ ಆ ಒಂದು ಸುಳ್ಳೇ ಮನುಷ್ಯನ ಅಂತರಂಗವನ್ನು ನಿಜವಾಗಿಯೂ ತಣಿಸುತ್ತ ಬಂದಿರುವುದು. ಕೆಲವು ಸಲ ಸುಳ್ಳುಗಳೂ ಪ್ರಯೋಜನಕಾರಿಯಾಗಬಹುದು ಎಂದು ನೀಷೆಗೆ ಗೊತ್ತಿರಲಿಲ್ಲ. “ಸುಳ್ಳು ಪ್ರಾರಂಭದಲ್ಲಿ ಸಿಹಿಯಾಗಿ ಕಂಡರೂ ಕೊನೆಗೆ ಅದು ಕಹಿಯಾಗಿ ಪರಿಣಮಿಸುತ್ತದೆ” ಎಂದು ಬುದ್ಧ ಒಂದೆಡೆ ಹೇಳಿದ್ದಾನೆ. ಆದ್ದರಿಂದಲೇ ನೀಷೆ ಕೊನೆ ಕೊನೆಗೆ ಆ ಕಹಿಯನ್ನುಂಡು ಅಸ್ವಸ್ಥನಾದುದು. ಬೌದ್ಧಿಕ ಕ್ಷಮತೆ ಮನುಷ್ಯನನ್ನು ನೇತಿ ಮಾರ್ಗದಲ್ಲಿ ಮಾತ್ರ ನಡೆಸಬಲ್ಲದು. ಬುದ್ಧಿಯ ನೆರವಿನಿಂದ ಸತ್ಯವನ್ನು ಬಗೆಯಲು ಹೊರಡುವವನಿಗೆ ಕೊನೆಗೆ ನೀಷೆಗಾದ ಗತಿಯೇ ಒದಗುತ್ತದೆ. ಪಾಪ, ಅವನು ಹುಚ್ಚು ಹಿಡಿಸಿಕೊಳ್ಳಲೆಂದೇ ಸತ್ಯಕ್ಕಾಗಿ ಹುಡುಕಾಟ ನಡೆಸಿದನೇ! ಇದು ಬರೀ ನೀಷೆಯ ವಿಧಿ ಮಾತ್ರ ಅಲ್ಲ. ಬುದ್ಧಿಯನ್ನು ನೆಚ್ಚಿ ಹೊರಟ ಎಷ್ಟೋ ಮೇಧಾವಿಗಳು, ಜಿಜ್ಞಾಸುಗಳು ಹುಚ್ಚು ಹಿಡಿಸಿಕೊಂಡಿದ್ದಾರೆ, ಆತ್ಮಹತ್ಯೆಗೆ ಶರಣಾಗಿದ್ದಾರೆ. ನೀಷೆ ಹಾಗು ಅವನನ್ನು ಅನುಸರಿಸಿದ ಎಷ್ಟೋ ಬುದ್ಧಿಜೀವಿಗಳು ಸುಳ್ಳಿನ ದೀಪವನ್ನಾರಿಸಿ ನಿಜದ ಕತ್ತಲೆಯಲ್ಲಿ ನಿಂತುಬಿಟ್ಟರು.

          ನೀಷೆ ದೇವರು ಸತ್ತನೆಂದು ಬರೆದ ಮೇಲೆಯೂ ತುಂಬ ವರ್ಷಗಳ ಕಾಲ ದೇವರ ಮೇಲೆ ದಾಳಿ ನಡೆಸುತ್ತಲೇ ಇದ್ದ. ದೇವರಿಲ್ಲದ ಬದುಕನ್ನು ಬದುಕಲಾರದೇ ಅವನು ಹುಚ್ಚನಾದ. ತತ್ವಜ್ಞಾನಿಯಾಗಿದ್ದ ನೀಷೆ ಗದ್ಯರೂಪದಲ್ಲಿ ಕಾವ್ಯವನ್ನು ಬರೆಯುತ್ತಿದ್ದ ಕವಿಯೂ ಹೌದು. ಆತ ಎಂದೂ ಕವಿತೆ ಬರೆಯಲು ಪ್ರಯತ್ನಿಸಿದವನಲ್ಲ. ಆದರೆ ಅವನ ವಿಚಾರಗಳೆಲ್ಲ ಅವನಿಗರಿವಿಲ್ಲದೆಯೇ ಕಾವ್ಯದ ರೂಪವನ್ನು, ರೂಪಕದ ಆಕೃತಿಯನ್ನು ಪಡೆಯುತ್ತ ಹೋದವು. ಅವನ ಪ್ರತಿಯೊಂದು ಸಾಲೂ ಕಾವ್ಯಾತ್ಮಕವಾದು, ಸಾಂಕೇತಿಕವಾದುದು. ನೀಷೆಯ ’ಝರತುಷ್ಟ್ರನ ವಚನಗಳು’ ಖಲೀಲ್ ಗಿಬ್ರಾನ್‌ನ ’ಪ್ರವಾದಿ’ಯಂತಹ ಕೃತಿಗೂ ಪ್ರೇರಣೆ ನೀಡಿತು. ಅದನ್ನು ಬರೆದಾಗ ಗಿಬ್ರಾನ್‌ಗೆ ಬರೀ ೨೧ ವರ್ಷ ವಯಸ್ಸು. ಮುಂದೆ ಸಾಯುವ ತನಕ ಗಿಬ್ರಾನ್ ಒಂದೇ ಸಮನೆ ೫೦ಕ್ಕೂ ಹೆಚ್ಚು ಕೃತಿಗಳನ್ನು ಬರೆದ. ಆದರೆ ಒಂದು ಪುಸ್ತಕವೂ ನೀಷೆಯ ಝರತುಷ್ಟ್ರನಿಂದ ಪ್ರಭಾವಿತವಾದ ’ಪ್ರವಾದಿ’ಗೆ ಸರಿಸಮನಾಗಲಿಲ್ಲ. ನೀಷೆ ತನ್ನ ನಿಲುವುಗಳನ್ನು ಪ್ರತಿಪಾದಿಸಲು ಝರತುಷ್ಟ್ರನೆಂಬ ಯಾರೂ ಅರಿಯದ ಅನುಭಾವಿಯನ್ನು ಆಯ್ದುಕೊಂಡ. ಅವನ ಬಾಯಲ್ಲಿ ತನ್ನ ವಿಚಾರಗಳನ್ನು ಹೇಳಿಸಿದ. ಪುಟಗಟ್ಟಲೆ ಹೇಳಬೇಕಾದುದನ್ನು ಒಂದೇ ಸಾಲಿನಲ್ಲಿ ಹೇಳಬಲ್ಲ ನೀಷೆ ಜಗತ್ತಿನ ಅತಿ ಹೆಚ್ಚು ಅಪಾರ್ಥಕ್ಕೊಳಗಾದ ತತ್ವಜ್ಞಾನಿಯಾಗಿದ್ದಾನೆ. ನೀಷೆಯ ’ಅತಿಮಾನವ’ ಎಂಬ ಪರಿಕಲ್ಪನೆ ಅಡಾಲ್ಫ್ ಹಿಟ್ಲರ್ ಎಂಬ ತಲೆಕೆಟ್ಟವನ ಕೈಗೆ ಸಿಕ್ಕು ಎರಡನೆಯ ಮಹಾಯುದ್ಧಕ್ಕೆ ಕಾರಣವಾಯಿತು. ಕೊನೆಗೆ ತನ್ನ ಪರಿಕಲ್ಪನೆಗಳು ಹೀಗೆ ಒಬ್ಬ ಅಪಾಯಕಾರಿ ಹುಚ್ಚನ ಕೈಯಲ್ಲಿ ಸಿಕ್ಕು ಭ್ರಷ್ಟವಾಗುತ್ತವೆಂದು ಬಹುಶಃ ನೀಷೆಯೂ ಊಹಿಸಿರಲಿಕ್ಕಿಲ್ಲ. ಆದರೆ ನೀಷೆ ಸರ್ವಾಧಿಕಾರೀ ಧೋರಣೆಯವನಲ್ಲ ಹಾಗೆಯೇ ಪ್ರಜಾಪ್ರಭುತ್ವವಾದಿಯೂ ಅಲ್ಲ. ಆತ್ಮಗೌರವವುಳ್ಳ ಚಿಂತಕರು ಎಂದಿಗೂ ಅರಾಜಕವಾದವನ್ನು ಪ್ರತಿಪಾದಿಸುತ್ತಾರೆ. ಫ್ರೆಡರಿಕ್ ನೀಷೆ, ಲಿಯೋ ಟಾಲ್ಸ್‌ಟಾಯ್ ಹಾಗು ಪ್ರಿನ್ಸ್ ಕ್ರೊಪೋಟ್‌ಕಿನ್ ಈ ಮೂವರು ಆಧುನಿಕಯುಗದ ಅರಾಜಕವಾದದ ಪ್ರತಿಪಾದಕರಾಗಿದ್ದಾರೆ.

’ಅತಿಮಾನವ’ರನ್ನು ಸೃಷ್ಟಿಸಲು ಹೊರಟ ಹಿಟ್ಲರ್ ಕೊನೆಗೆ ಮನುಷ್ಯಜಾತಿಯನ್ನು ಹೀನಾಯ ಸ್ಥಿತಿಗೆ ಇಳಿಸಿದ. ಹಿಟ್ಲರನಿಂದಾದ ಅನರ್ಥಗಳಿಗೆ ಹಿಟ್ಲರ್ ಕಾರಣನಲ್ಲ. ಬದಲಿಗೆ ನೀಷೆಯ ತಾತ್ವಿಕ ಗ್ರಹಿಕೆಯಲ್ಲಿದ್ದ ಕೆಲವು ದೋಷಗಳೇ ಕಾರಣವೆಂದು ನನ್ನ ಅಭಿಪ್ರಾಯ. ಡಾರ್ವಿನ್ನನ ’ಮಂಗನಿಂದ ಮಾನವ’ ಎಂಬ ವಿಕಾಸವಾದದ ಸಿದ್ಧಾಂತವನ್ನೆ ನಿಜವೆಂದು ನಂಬಿ ನೀಷೆ ’ಅತಿಮಾನವ’ ಕಲ್ಪನೆಯನ್ನು ರೂಪಿಸಿದ. ಈ ದೀರ್ಘವಾದ ವಿಕಾಸ ಮಾರ್ಗದಲ್ಲಿ ಮಾನವನು ವಿಕಾಸಗೊಂಡಿದ್ದಕ್ಕಿಂತ ಕುಬ್ಜನಾದದ್ದೇ ಹೆಚ್ಚು. ಶಿಲಾಯುಗದ ಮನುಷ್ಯ ನಮಗಿಂತ ಹೆಚ್ಚು ಶಕ್ತಿಶಾಲಿಯಾಗಿದ್ದ. ಇತ್ತೀಚೆಗೆ ಚೀನಾದ ಒಂದು ಪ್ರಾಂತದಲ್ಲಿ ಲಕ್ಷಾಂತರ ವರ್ಷಗಳ ಹಿಂದಿನ ಮನುಷ್ಯನ ತಲೆಬುರುಡೆಯ ಪಳೆಯುಳಿಕೆಯೊಂದು ಸಿಕ್ಕಿತು. ಅದರ ಅಧ್ಯಯನ ಮಾಡಿದ ವಿದ್ವಾಂಸರು. ಆತನ ಮೆದುಳಿನ ರಚನೆಗೂ ನಮ್ಮ ಮೆದುಳಿನ ರಚನೆಗೂ ಅಷ್ಟೇನೂ ವ್ಯತ್ಯಾಸವಿಲ್ಲ ಎಂದು ತೀರ್ಮಾನಿಸಿದ್ದಾರೆ. ನಾವು ಬಂದೂಕುಗಳನ್ನು, ಕತ್ತಿ ಗುರಾಣಿಗಳನ್ನು ತಯಾರು ಮಾಡಿಕೊಂಡಿರುವುದೇ ಆ ಕುಬ್ಜತೆ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳಲು. ಒಮ್ಮೆ ಸೂರ್ಯಾಸ್ತವನ್ನು ನೋಡುತ್ತ ಉದ್ಯಾನವನದಲ್ಲಿ ಕುಳಿತಿದ್ದ ನೀಷೆಗೆ ಉದ್ಯಾನವನದಾಚೆ ಶಸ್ತ್ರಸಜ್ಜಿತ ಸೈನಿಕರ ಕವಾಯತಿನ ಸದ್ದು ಕೇಳಿಸುತ್ತದೆ. ಆ ಸದ್ದು ತನ್ನ ಕಿವಿಗೆ ಬೀಥೋವನ್, ಮೊಜಾರ್ಟ್‌ರ ಸಂಗೀತದ ನಾದಕ್ಕಿಂತ ಇಂಪಾಗಿ ಕೇಳಿಸಿತು ಎಂದು ನೀಷೆ ಬರೆದುಕೊಂಡಿದ್ದಾನೆ. ಇಂತಹವನು ಅತಿಮಾನವನ ಕಲ್ಪನೆಯನ್ನು ಮಾತನಾಡಿದರೆ ಹಿಟ್ಲರ್ ಇನ್ನು ಹೇಗೆ ತಾನೇ ಅರ್ಥ ಮಾಡಿಕೊಳ್ಳಬಲ್ಲ!  

           ಮನುಷ್ಯನ ಅಂತರಂಗದಲ್ಲಿ ಖಾಲಿತನ ಮನೆಮಾಡಿದೆ ಎಂದು ಅನುಮಾನಿಸಿದ ಸಾರ್ತ್ರ್, ಮಾರ್ಸೆಲ್, ಹೈಡೆಗರ್, ಕಾಮು ಮೊದಲಾದ ೨೦ನೆಯ ಶತಮಾನದ ಚಿಂತಕರೆಲ್ಲರೂ ನೀಷೆಯ ಸಂತಾನಗಳಾಗಿದ್ದರು. ಈ ಶೂನ್ಯವಾದವನ್ನೇ ಅವರು ಅಸ್ತಿತ್ವವಾದ ಎಂದು ಕರೆದುಕೊಂಡರು. ಆದರೆ ಅದನ್ನು ನಾನು ಹಾಗೆ ಕರೆಯಲಾರೆ. ಖಾಲಿತನವೇ ನಿಜವಾದರೆ ಸೃಷ್ಟಿಗೇನು ಅರ್ಥ ಉಳಿದಿರುತ್ತದೆ? ಸೃಷ್ಟಿಯಲ್ಲಿ ಎಲ್ಲವೂ ಆಕಸ್ಮಿಕ ಎಂದು ಅವರು ಪ್ರತಿಪಾದಿಸುತ್ತಾರೆ. ಹಾಗಿದ್ದರೆ ಇವರ ಸಿದ್ಧಾಂತವನ್ನು ಇವರು ’ಆಕಸ್ಮಿಕವಾದ’ ಎಂದು ಕರೆದುಕೊಳ್ಳಬೇಕು, ಅಸ್ತಿತ್ವವಾದ ಎಂದಲ್ಲ. ಹೀಗೆ ದೊಡ್ಡ ದೊಡ್ಡ ಸುಳ್ಳುಗಳನ್ನು ಹೇಳಿ ಆತ್ಮವಂಚನೆ ಮಾಡಿಕೊಳ್ಳಬಾರದು. ಬುದ್ಧ ಉಪದೇಶಿಸಿದ ಧ್ಯಾನ ಪದ್ಧತಿ ನನ್ನ ದೃಷ್ಟಿಯಲ್ಲಿ ನಿಜವಾದ ಅರ್ಥದ ಅಸ್ತಿತ್ವವಾದವಾಗಿದೆ. ನಮ್ಮ ಅಂತರಂಗವು ಎಂದಿಗೂ ಖಾಲಿತನವನ್ನು ಒಪ್ಪುವುದಿಲ್ಲ, ಆಕಸ್ಮಿಕತೆಯನ್ನು ಪ್ರಮಾಣವೆಂದು ಸ್ವೀಕರಿಸುವುದಿಲ್ಲ, ಮನುಷ್ಯ ಸಂವೇದನೆಯು ಅಸ್ತಿತ್ವದೊಡನೆ ತಾನು ಒಂದಾಗಬೇಕು ಎಂದು ಹಂಬಲಿಸುತ್ತಿರುತ್ತದೆ ಎಂಬುದು ಇವರಾರಿಗೂ ಅರ್ಥವಾಗಲಿಲ್ಲ. ಆಕಸ್ಮಿಕ ವಾದವನ್ನೇ ಅಸ್ತಿತ್ವವಾದ ಎಂದು ಅಪವ್ಯಾಖ್ಯಾನ ಮಾಡಿದರು, ಜಿಜ್ಞಾಸೆಯ ಹಾದಿಯಲ್ಲಿ ಅರ್ಧಕ್ಕೇ ನಿಂತುಬಿಟ್ಟರು. ಇವರ ಮಾತುಗಳನ್ನೇ ನಿಜವೆಂದು ನಂಬಿದರೆ ಇಡೀ ಮನುಷ್ಯಜಾತಿಯೇ ನೀಷೆಯಂತೆ ಹುಚ್ಚುತನದ ಮೊರೆ ಹೋಗಬೇಕಾಗುತ್ತದೆ. ನೀಷೆ ಒಂದೆಡೆ “ನಾನು ಮನುಷ್ಯನಲ್ಲ, ನಾನೊಂದು ಅಪಾಯಕಾರೀ ಡೈನಮೇಟ್” ಎಂದು ಬರೆದುಕೊಳ್ಳುತ್ತಾನೆ. ನಿಸ್ಸಂಶಯವಾಗಿ ಆತ ಹಾಗೆ ಸ್ಫೋಟಗೊಂಡ ವ್ಯಕ್ತಿಯೇ. ಕೊನೆಗೆ ಅವನು ಒಂದು ನಕ್ಷತ್ರದಂತೆ ಉರಿದು ಸ್ಫೋಟಗೊಂಡ.

ದೇವರು ಹುಟ್ಟುವ ಮುನ್ನವೂ ಮನುಷ್ಯ ಖಾಲಿಯೇ ಆಗಿದ್ದ. ಆದರೆ ಆಗ ಖಾಲಿತನ ಅವನನ್ನು ಬಾಧಿಸಿರಲಿಲ್ಲ. ನೀಷೆಯ ನಂತರ ಈ ಖಾಲಿತನ ಮನುಷ್ಯ ಜಾತಿಗೆ ಜೀವನ್ಮರಣದ ಪ್ರಶ್ನೆಯಾಗಿ ಪರಿಣಮಿಸಿತು. ಮಹಾಯಾನ ಬೌದ್ಧಸೂತ್ರಗಳಲ್ಲಿ ಬೋಧಿಸತ್ವನಾದ ಮಂಜುಶ್ರೀಯ ಕುರಿತು ಪ್ರತಿದಿನ ಮರದಡಿ ಕುಳಿತು ಧ್ಯಾನಿಸುತ್ತಿದ್ದ. ಒಂದು ದಿನ ಅವನಿಗೆ ಆತ್ಮಬೋಧೆ ಉಂಟಾದಾಗ ಆ ಮರದ ಹೂವುಗಳೆಲ್ಲ ಒಮ್ಮೆಲೆ ಅರಳಿದವು, ಅವನ ಮೇಲೆ ಹೂವಿನ ಮಳೆಯನ್ನೇ ಕರೆದವು ಎಂಬ ಒಂದು ಉಲ್ಲೇಖವಿದೆ. ಈ ಕಥೆ ಒಂದು ರೂಪಕವಿರಬಹುದು. ಆದರೆ ಈ ರೂಪಕವು ನಮ್ಮ ಅಸ್ತಿತ್ವವು ಈ ಇಡೀ ಅಸ್ತಿತ್ವದೊಡನೆ ಬೇರೂರಿ ಒಂದಾಗಿದೆ ಎಂಬುದನ್ನು ಸೂಚಿಸುತ್ತದೆ. “ನಾವು ಪರಸ್ಪರ ಅಸಂಬಂಧಿಗಳು”, “ಅಂತರಂಗದಲ್ಲಿ ನಾವೆಲ್ಲ ಬರೀ ಲೊಳಲೊಟ್ಟೆ” ಇತ್ಯಾದಿ ನಂಬಿಕೆಗಳು ಅಸ್ತಿತ್ವದೊಂದಿಗಿನ ನಮ್ಮ ಬೇರುಗಳನ್ನು ಕ್ರಮೇಣ ಕತ್ತರಿಸಿಬಿಡುವವು. ಸುಳ್ಳುಗಳನ್ನು ಕೊಂದ ಮಾತ್ರಕ್ಕೆ ಸತ್ಯವನ್ನು ಸಂಪಾದಿಸಿದಂತೆ ಆಗುವುದಿಲ್ಲ. ಅಂತರಂಗವನ್ನು ಬೆದಕಿದಾಗ ಅದರ ಬೇರುಗಳು ಅಸ್ತಿತ್ವದ ಕೇಂದ್ರದಲ್ಲಿ ಹೆಣೆದುಕೊಂಡಿವೆ ಎಂದು ತಿಳಿಯುತ್ತದೆ. ನೀಷೆಗಾದರೂ ಅಂತರಂಗವನ್ನು ಬಗೆಯುವ ವಿದ್ಯೆ ಕರಗತವಾಗಿರಲಿಲ್ಲ. ಪಶ್ಚಿಮ ದೇಶದಲ್ಲಿ ಹುಟ್ಟಿದ್ದು ಅವನ ದುರದೃಷ್ಟ. ಆ ವಿದ್ಯೆಯನ್ನು ಬಲ್ಲ ಪೂರ್ವದೇಶದಲ್ಲಿ ಹುಟ್ಟಿದ್ದರೆ ಅವನು ಹಾಗೆ ಹುಚ್ಚನಾಗುತ್ತಿರಲಿಲ್ಲ, ಬುದ್ಧತ್ವಕ್ಕೆ ಪ್ರಾಪ್ತನಾಗುತ್ತಿದ್ದ. ಅಧ್ಯಾತ್ಮ ವಿದ್ಯೆಯನ್ನರಿಯದ ಪಶ್ಚಿಮ ದೇಶಗಳು ಈತನಕ ಎಲ್ಲ ಮೇಧಾವಿಗಳನ್ನೂ ನೋವಿಗೆ, ವಿಷಾದಕ್ಕೆ, ಹುಚ್ಚಿಗೆ ತಳ್ಳಿವೆ. ಐನ್‌ಸ್ಟೀನ್ ಸಾಯುವ ಮುನ್ನ “ಇನ್ನೊಮ್ಮೆ ಹುಟ್ಟಿ ಬರುವುದಾದರೆ ಒಬ್ಬ ಪ್ಲಂಬರ್ ಆಗಿ ಜೀವನೋಪಾಯ ನೋಡಿಕೊಳ್ಳುವೆನೇ ವಿನಃ ಅಣುವಿಜ್ಞಾನಿ ಮಾತ್ರ ಆಗುವುದಿಲ್ಲ” ಎಂದು ವಿಷಾದದಿಂದ ಹೇಳಿದ್ದನಂತೆ. 

            ಹಾಗೆ ನೋಡಿದರೆ ನೀಷೆಯನ್ನೂ ಒಳಗೊಂಡಂತೆ ಎಲ್ಲ ಅಸ್ತಿತ್ವವಾದಿಗಳನ್ನು ಆಳವಾಗಿ ಪ್ರಭಾವಿಸಿದ್ದ ದಸ್ತಯೇವ್‌ಸ್ಕಿ ದೇವರ ಸಾವಿನ ಕುರಿತು ನೀಷೆಗೂ ಮೊದಲೇ ನುಡಿದಿದ್ದ. ಅವನ ’ಕರಮಜೋವ್ ಸಹೋದರರು’ ಗೀತೆ, ಬೈಬಲ್, ಕುರಾನ್ ಮೊದಲಾದ ಗ್ರಂಥಗಳಿಗಿಂತ ಹೆಚ್ಚು ಮಹತ್ವದ್ದು ಎಂಬುದು ನನ್ನ ಅನಿಸಿಕೆ. ಆದರೆ ಅವನೂ ಕೊನೆಗೆ ಹುಚ್ಚನಾದ. ಬದುಕಿದ್ದಷ್ಟೂ ಕಾಲ ನೋವಿನಲ್ಲಿ, ದುಃಖದಲ್ಲಿ ವಿಷಾದದಲ್ಲಿ ಕಾಲ ಕಳೆದ. ಆ ಕಾದಂಬರಿ ಮೂರು ಜನ ಸಹೋದರರ ಕಥೆಯಾಗಿದೆ. ಮೂರನೆಯ ಸಹೋದರ ಮಹಾ ವಿನಯವಂತ, ಧಾರ್ಮಿಕ ವ್ಯಕ್ತಿ. ಚರ್ಚಿನಲ್ಲಿ ಪಾದ್ರಿಯಾಗಿ ಕಾಲ ಕಳೆಯಬೇಕು ಎಂದುಕೊಂಡಿರುತ್ತಾನೆ. ಎರಡನೆಯವನು ಕಿರಿಯವನಿಗೆ ತದ್ವಿರುದ್ಧ, ಮಹಾ ನಾಸ್ತಿಕ. “ದೇವರೇನಾದರೂ ಸಿಕ್ಕರೆ ಅವನ ಬದುಕನ್ನು ಅವನಿಗೇ ಹಿಂದಿರುಗಿಸುತ್ತೇನೆ. ನೀನು ಸೃಷ್ಟಿಸಿದ ಈ ಲೋಕದಲ್ಲಿ ನೀನೇ ಬದುಕಿಕೋ ಎಂದು ಹೇಳುತ್ತೇನೆ, ನನಗೆ ಹೇಳದೇ ಕೇಳದೇ ನನಗೇಕೆ ಜನ್ಮ ನೀಡಿದೆ? ಎಂದು ಕೇಳುತ್ತೇನೆ” ಎಂದು ತನ್ನ ತಮ್ಮನೊಂದಿಗೆ ಸದಾ ವಾದಿಸುತ್ತಿರುತ್ತಾನೆ. ಅವನು “ಮುಂದೊಂದು ದಿನ ಅವನನ್ನು ಹುಡುಕಿ ಕೊಂದು ಈ ಜಗತ್ತನ್ನು ಅವನ ಸರ್ವಾಧಿಕಾರದಿಂದ ವಿಮೋಚನೆಗೊಳಿಸುತ್ತೇನೆ” ಎನ್ನುತ್ತಿದ್ದ. ಹೀಗೆ ನೀಷೆ ದೇವರು ಸತ್ತ ಎಂದು ಹೇಳಿದರೆ ಅವನಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ದೇವರ ಕೊಲೆಯನ್ನೇ ಮಾಡಲು ನಿರ್ಧರಿದ್ದ ದಸ್ತಯೇವ್‌ಸ್ಕಿ ಮನುಷ್ಯ ಜಾತಿ ಅನುಭವಿಸಿರುವ ಎಲ್ಲ ಸಮಸ್ಯೆಗಳನ್ನೂ ತನ್ನೊಳಗೆ ಆವಾಹಿಸಿಕೊಂಡು ಅವನ್ನು ತನ್ನ ಕೃತಿಗಳಲ್ಲಿ ಚರ್ಚಿಸಿದ್ದಾನೆ. ದೇವರು ಸತ್ತದ್ದರಿಂದ ನಮಗೆ ಬಿಡುಗಡೆ ಸಿಕ್ಕಿತು ನಿಜ, ಆದರೆ ಯಾವ ಪುರುಷಾರ್ಥಕ್ಕಾಗಿ ಈ ಬಿಡುಗಡೆ? ಹೆದರಿ ತಲ್ಲಣಿಸಲೆಂದೇ, ಕೊಲೆಗಳನ್ನು ಮಾಡಲೆಂದೇ, ಆತ್ಮಹತ್ಯೆ ಮಾಡಿಕೊಳ್ಳಲೆಂದೇ?

          ಆಲ್ಬರ್ಟ್ ಕಾಮುನ ಕಾದಂಬರಿಯ ಒಂದು ಪಾತ್ರ ಸಮುದ್ರ ತೀರದಲ್ಲಿ ಒಬ್ಬ ಆಗಂತುಕನನ್ನು ಚೂರಿಯಿಂದ ಇರಿದು ಕೊಲೆ ಮಾಡುತ್ತದೆ. ಕೋರ್ಟಿನಲ್ಲಿ ಮ್ಯಾಜಿಸ್ಟ್ರೇಟ್ “ಅವನನ್ನು ಏಕೆ ಕೊಂದೆ?” ಎಂದು ಕೇಳಿದಾಗ “ಬೇರೇನೂ ಕೆಲಸವಿಲ್ಲದೆ ಒಂದೇ ಸಮನ ಬೇಸರವಾಗುತ್ತಿತ್ತು, ಅದಕ್ಕೇ ಕೊಂದೆ. ಅಷ್ಟಕ್ಕೂ ಅವನು ಬದುಕಿದ್ದು ಏನನ್ನು ಸಾಧಿಸುತ್ತಿದ್ದ, ಬದುಕಿಗಾದರೂ ಏನರ್ಥ, ನಾನು ಕೊಂದಿರದಿದ್ದರೆ ಅವನು ತನ್ನ ಆವರೆಗಿನ ಮೂರ್ಖ ಕೆಲಸಗಳನ್ನೇ ಕೊನೆಯವರೆಗೂ ಪುನರಾವರ್ತನೆ ಮಾಡುತ್ತಿದ್ದ ಅಷ್ಟೇ. ಮತ್ತೆ, ಈ ಕೊಲೆಗೆ ಯಾರೂ ಸಾಕ್ಷಿಯಿಲ್ಲ, ನಾನೇ ಕೊಲೆ ಮಾಡಿ ಬಂದೆ ಎಂದದ್ದಕ್ಕೆ ನೀವು ನನ್ನ ವಿಚಾರಣೆ ನಡೆಸುತ್ತಿದ್ದೀರಿ. ಒಂದು ವೇಳೆ ನಾನು ಸುಳ್ಳು ಹೇಳುತ್ತಿರಬಹುದು” ಎಂದು ಉತ್ತರಿಸಿದಾಗ ಮ್ಯಾಜಿಸ್ಟ್ರೇಟನಿಗೂ ಏನು ಹೇಳಬೇಕೆಂದು ತೋಚಲಿಲ್ಲ. ಆಮೇಲೆ ಸಾಂದರ್ಭಿಕ ಸಾಕ್ಷಿಯೊಬ್ಬನನ್ನು ಕರೆಸಿ ಕೇಳಿದಾಗ “ಈತ ಮಹಾ ವಿಚಿತ್ರ ವ್ಯಕ್ತಿ. ಕಳೆದ ಭಾನುವಾರ ಈತನ ತಾಯಿ ಸತ್ತ ವಿಷಯವನ್ನು ತಿಳಿಸಿದಾಗ ’ಆ ಕಿರಿಕಿರಿ ಹೆಂಗಸು ಕೊನೆಗೂ ಸತ್ತಳೇ, ಸಾಯುವವಳು ಎಲ್ಲ ಬಿಟ್ಟು ಭಾನುವಾರವೇ ಸಾಯಬೇಕಿತ್ತೇ? ಜೀವನವಿಡೀ ನನಗೆ ಉಪದ್ರವ ಮಾಡುತ್ತಿದ್ದವಳು ಸಾಯುವಾಗಲೂ ಸಿಗುವ ಒಂದು ರಜಾದಿನವನ್ನು ಹಾಳು ಮಾಡಿದಳಲ್ಲ’ ಎಂದಿದ್ದ” ಎಂದು ಕೋರ್ಟಿಗೆ ಹೇಳುತ್ತಾನೆ. ಆ ಪಾತ್ರ ತಾಯಿಯ ಶವಸಂಸ್ಕಾರ ಮಾಡಿದ ಮೇಲೆ ಮೋಜು ಮಾಡಲು ಡಿಸ್ಕೋಗೆ ಹೋಗುತ್ತದೆ. “ತಾಯಿ ಸತ್ತು ಇನ್ನೂ ಹನ್ನೆರಡು ಗಂಟೆಗಳು ಕಳೆದಿಲ್ಲ, ಹೀಗೆ ಮೋಜಿನ ಕುಣಿತಕ್ಕೆ ಬರುವುದೇ?” ಎಂದು ಅವನ ಗೆಳತಿ ಕೇಳಿದರೆ “ತಾಯಿ ಸತ್ತು ೧೨ ಗಂಟೆಗಳಾದುವೇ, ೧೨ ವರ್ಷಗಳಾದುವೇ ಎಂಬುದು ಮುಖ್ಯವಲ್ಲ. ಒಬ್ಬ ವ್ಯಕ್ತಿ ತಾಯಿ ಸತ್ತ ಮೇಲೆಯೂ ನರ್ತಿಸುವೆನೇ ಇಲ್ಲವೇ ಎಂಬುದಷ್ಟೇ ಮುಖ್ಯ. ತಾಯಿಯನ್ನು ಕಳೆದುಕೊಂಡವರಾರೂ ಕುಣಿಯುವುದೇ ಇಲ್ಲವೇ?” ಎಂದು ಕೇಳುತ್ತಾನೆ.

            ದೇವರಿಲ್ಲವೆಂಬ ತತ್ವ ಕೊನೆಗೆ ಈ ಬಗೆಯ ನಿರ್ಣಯಗಳಿಗೆ ತಂದು ನಿಲ್ಲಿಸುತ್ತದೆ. ಅವನ ಮಾತು ಆಲೋಚನೆಗಳು ತುಂಬ ತರ್ಕಬದ್ಧವೆನಿಸಿದರೂ ಮಾನವೀಯ ಎನಿವುದಿಲ್ಲ. ಸಾಕ್ರಟೀಸನಿಗೂ ಹಿಂದೆ ಗ್ರೀಕ್ ದೇಶದಲ್ಲಿದ್ದ ಜೆನೋ ಎಂಬ ತತ್ವಜ್ಞಾನಿ ಇದೇ ರೀತಿ ಆಲೋಚಿಸುತ್ತಿದ್ದ. “ಬದುಕಿರುವುದು ನಿಜಕ್ಕೂ ಅರ್ಥಹೀನ. ಸಾಯುವ ಧೈರ್ಯವಿಲ್ಲದ ಹೇಡಿಗಳು ಮಾತ್ರ ಬದುಕನ್ನು ನಡೆಸಿಕೊಂಡು ಹೋಗುತ್ತಾರೆ. ಆತ್ಮಹತ್ಯೆಯಾದರೂ ನಮ್ಮ ಧೀಮಂತಿಕೆಗೆ ರುಜುವಾತಾಗುತ್ತದೆ. ಹುಟ್ಟುವುದಂತೂ ನಮ್ಮ ಕೈಲಿರಲಿಲ್ಲ, ಅಸಹಾಯಕರಂತೆ ಹುಟ್ಟಿದೆವು. ಕೊನೆಯ ಪಕ್ಷ ಸಾವನ್ನಾದರೂ ನೇರವಾಗಿ ಮುಖಾಮುಖಿಯಾಗುವುದರಿಂದ ಬದುಕು ಪೂರ್ಣವಾಗುತ್ತದೆ, ನಮ್ಮ ಘನತೆಗೂ ನ್ಯಾಯ ಸಂದಂತಾಗುತ್ತದೆ” ಎಂದು ಬೋಧಿಸುತ್ತಿದ್ದ. ಇವನ ಮಾತುಗಳನ್ನು ನಂಬಿ ಗ್ರೀಸ್‌ನ ಸಾವಿರಾರು ಯುವಕರು ಆತ್ಮಹತ್ಯೆಗೆ ಶರಣಾದರಂತೆ. ಆದರೆ ಆತ ಮಾತ್ರ ಆತ್ಮಹತ್ಯೆ ಮಾಡಿಕೊಳ್ಳದೇ ತನ್ನ ತತ್ವವನ್ನು ಪ್ರಚಾರಮಾಡುವ ನೆವದಲ್ಲಿ ೯೦ರ ವಯಸ್ಸಿನವರೆಗೂ ಬದುಕಿದ್ದ.

            ಯೇಸುಕ್ರಿಸ್ತ ಕುಡಿಯುವ ನೀರನ್ನು ಮದ್ಯವನ್ನಾಗಿ ಪರಿವರ್ತನೆ ಮಾಡಿದನಂತೆ. ಅದು ಖಂಡಿತ ಪವಾಡವಲ್ಲ, ನನ್ನ ದೃಷ್ಟಿಯಲ್ಲಿ ಅದೊಂದು ಅಪರಾಧವಾಗಿದೆ. ಅದೊಂದು ಸಾಂಕೇತಿಕವಾದ ಘಟನೆಯಾಗಿದೆ. ಈವರೆಗಿನ ಎಲ್ಲ ಧರ್ಮಗಳೂ ಮನುಷ್ಯ ಬುದ್ಧಿಯನ್ನು ಅಮಲಿನ ಸ್ಥಿತಿಯಲ್ಲಿಡುವಲ್ಲಿ ಯಶಸ್ವಿಯಾಗಿವೆ. ಹಾಗೆ ನೋಡಿದರೆ ಮದ್ಯಪಾನವು ಎಲ್‌ಎಸ್‌ಡಿ ಹಾಗು ಗಾಂಜಾಗಳಿಗಿಂತ ಹೆಚ್ಚು ಅಪಾಯಕಾರಿ. ಆದರೆ ಯೇಸುಕ್ರಿಸ್ತ ಒಮ್ಮೆ ಮದ್ಯವನ್ನು ಕುಡಿದಿದ್ದ ಎಂಬ ಒಂದೇ ಕಾರಣದಿಂದ ಕ್ರಿಶ್ಚಿಯನ್ ದೇಶಗಳು ಮದ್ಯದ ಮೇಲೆ ನಿಷೇಧ ಹೇರದೇ ಜಗತ್ತಿನಾದ್ಯಂತ ಅದನ್ನೊಂದು ಗ್ರಾಹಕ ಪದಾರ್ಥವನ್ನಾಗಿ ಮಾಡಿದೆ. ನಾನೂ ಸಹ ನೀರನ್ನು ಮದ್ಯವನ್ನಾಗಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದರೆ ನನ್ನ ಮೇಲೆ ಇಷ್ಟೊಂದು ಆಪಾದನೆಗಳು ಬರುತ್ತಿರಲಿಲ್ಲವೇನೋ. ನನ್ನಿಂದ ಅವರು ಅಪೇಕ್ಷಿಸುವುದೂ ಅಂತಹ ಕ್ಷುಲ್ಲಕ ಪವಾಡಗಳನ್ನೇ. ಆದರೆ ನಾನು ಇವರ ಎಲ್ಲ ಸಾರಾಯಿ ಪದಾರ್ಥವನ್ನೂ ತಿಳಿನೀರನ್ನಾಗಿ ಪರಿವರ್ತನೆ ಮಾಡುತ್ತಿದ್ದೇನೆ. ಅದಕ್ಕೇ ಎಲ್ಲ ಪ್ರಭುತ್ವಗಳೂ, ಎಲ್ಲ ಸ್ಥಾಪಿತ ಧರ್ಮಗಳೂ ನನ್ನ ಮೇಲೆ ಆಕ್ರೋಶಗೊಂಡಿವೆ. ಶತಮಾನಗಳಿಂದ ಪ್ರವಾದಿಯ ಬರವಿನ ಭರವಸೆ ನೀಡುತ್ತಿದ್ದ ಚರ್ಚಿನ ಮಾತುಗಳನ್ನು ನಂಬಿದ್ದ ಯುರೋಪಿನ ಬುದ್ಧಿಜೀವಿಗಳು ಭ್ರಮನಿರಸನಗೊಂಡರು. ೨ನೆಯ ಮಹಾಯುದ್ಧದ ನಂತರ ಅವರು ಬದುಕಿನ ನಿರರ್ಥಕತೆಯನ್ನು ಪ್ರಚಾರ ಮಾಡಲಾರಂಭಿಸಿದರು. ಅಸ್ತಿತ್ವವಾದವು ವಾಸ್ತವವಾಗಿ “ಮನುಷ್ಯ ಭಗವಂತನ ಪ್ರತಿರೂಪ” ಎಂದು ಬೋಧಿಸುತ್ತಿದ್ದ ಚರ್ಚಿನ ವಿರುದ್ಧ ಪಶ್ಚಿಮದ ಬುದ್ಧಿಜೀವಿಗಳು ಸಾರಿದ ಸಮರವಾಗಿದೆ.

(’ಗಾಡ್ ಈಸ್ ಡೆಡ್: ನೌ ಜೆನ್ ಇಸ್ ದಿ ಓನ್‌ಲಿ ಲಿವಿಂಗ್ ಟ್ರುತ್’ ಕೃತಿಯ ಆಯ್ದ ಭಾಗಗಳು)