ಇಂಥಾ ಹುಚ್ಚುಚ್ಚಾರಗಳಿಗೂ ಇತಿಶ್ರೀ ಸಿಕ್ಕೀತೇ?
ಭ್ರಷ್ಟಾಚರಣೆಯಿಲ್ಲದೆ ಪಕ್ಷಗಳನ್ನು ಸಂಘಟಿಸುವುದು ಅಸಾಧ್ಯವಂತೆ; ವೋಟುಗಳನ್ನು ಹುಟ್ಟಿಸುವುದು ಸಾಧ್ಯವಿಲ್ಲವಂತೆ! ಇದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಖಚಿತ ಅಭಿಪ್ರಾಯ. “ಛೆ! ಛೆ! ಸಕ್ರಿಯ ರಾಜಕಾರಣಿಯಿಂದ ಇಂಥಾ ಮಾತೇ?!” ಎಂದು ಬೂಟಾಟಿಕೆ ದಾಸಯ್ಯಗಳು ಬಯಿಮೇಲೆ ಬೆರಳಿಟ್ಟಾರು (ಟಿವಿ ಕ್ಯಾಮರ ಎದುರಿಗಿದ್ದಾಗ!) ಆದರೆ ಪ್ರಸಕ್ತ ವಿದ್ಯಮಾನ ನಡೆಯುವ ರೀತಿ-ನೀತಿಯ ಸತ್ಯವನ್ನು ಹೀಗೆ ಸಾರ್ವಜನಿಕರಿಗೆ ಬಿಡಿಸಿಹೇಳಿದ’ಗಂಡಸುತನ’ವನ್ನು ಮೆಚ್ಚಲೇಬೇಕಾಗುತ್ತದೆ!
ಆಳವಾದ ಭ್ರಷ್ಟಾಚಾರದ ವಿರುದ್ಧ ವ್ಯಾಪಕ ಜಾಗೃತಿ ಹುಟ್ಟಿಸಿದ್ದು ಅಣ್ಣಾ ಹಜಾರೆಯವರ ಸತ್ಸಾಧನೆಯೆನ್ನುವುದರಲ್ಲಿ ವಿವಾದವಿಲ್ಲ. ಆದರೆ ಸ್ವಯಂ ಮೇಧಾವಿಗಳು, “ಭ್ರಷ್ಟಾಚಾರ” ಶಬ್ದದ ನಿಜವಾದ ಡಿಕ್ಷನರಿ ವಿವರಣೆಯನ್ನಾದರೂ ಅರ್ಥೈಸಿಕೊಳ್ಳುವವರಾದರೆ ಸಂತೋಷವಾಗುತ್ತದೆ!
ಲೋಕಪಾಲ ಮೂಸೂದೆ ಬರೆಯುವ ಕಾಯ್ದೆ ಪಂಡಿತರ ಪ್ರತಿಭೋತ್ಸಾಹದ ಪದಾಕ್ಷರಗಳ ಬಿಗಿಕಟ್ಟಿನಿಂದ ಮಾತ್ರವೇ ದೇಶದ ಸಾರ್ವಜನಿಕ ಜೀವನ ಭ್ರಷ್ಟಾಚಾರದ ಕೊಳೆ-ಕೆಸರಿನಿಂದ ಮುಕ್ತವಾಗಿಬಿಡುತ್ತದೆಂದುಕೊಕೊಂಡುಬಿಟ್ಟಿರುವುದು ಇಂಥಾ ಅಣ್ಣಗಳ ಭ್ರಮಾಲೋಕ. ಅವರ ಅರ್ಥದಲ್ಲಿ “ಭ್ರಷ್ಟಾಚಾರ” ಎಂದರೆ, ಚಿಲ್ಲರೆ ಕಾಸಿನಿಂದ ಆರಂಭವಾಗಿ ಲೋಕಾಯುಕ್ತರು ಹಿಡಿದುಹಾಕುವ ನುರಾರು ಕೋಟಿ ಅಕ್ರಮ ಸಂಭಾವನೆಗೆ ಪರಿಸೀಮಿತ. ಅಂಥದಕ್ಕೆ ತಕ್ಕ ಶಿಕ್ಷೆಯಾಗುವ ವ್ಯವಸ್ಥೆಯಾಗಿಹೋದರೆ ಸಾಕೆಂಬ Fool’s Paradise!
ಆದರೆ ನಮ್ಮ ಕಣ್ಣೆದುರಿಗೇ ರಾಜಾರೋಷವಾಗಿ ನಡೆಯುವ ಜಾತಿ ರಾಜಕಾರಣ, ಸುಳ್ಳು-ಸುಳ್ಳು ಓಲೈಕೆ, ಅರ್ಥವಿಲ್ಲದ-ಭಾವವಿಲ್ಲದ ಮೀಸಲಾತಿ ಪದ್ಧತಿ ಇವೆಲ್ಲಾ ಔಟ್ ಅಂಡ್ ಔಟ್ ಭ್ರಷ್ಟಾಚಾರ ಎನ್ನಿಸುವುದೇ ಇಲ್ಲವೇ? ಮತಾಂತರವಾಗಲೀ, ಅದರ ವಿರುದ್ಧ ಉತ್ಕಟ ಹೋರಾಟವಾಗಲೀ ನಡೆಯುವುದೇಕೆ? ಆ ಹೆಸರಿನಿಂದಲೋ ಮತ್ತೊಂದು ನೆಪದಿಂದಲೋ, ಅಗಿಂದಾಗ್ಗೆ ಕೊಮು ಗಲಭೆಗಳನ್ನು ಭುಗಿಲೆಬ್ಬಿಸಿ ನಿರ್ದಿಷ್ಟ ಹಿತಾಸಕ್ತಿಗಳು ವ್ಯವಸ್ಥಿತವಾಗಿ ಬೇಳೆ ಬೇಯಿಸಿಕೊಳ್ಳುವುದನ್ನು ನಾವು ನೋಡುವುದೇ ಇಲ್ಲವೇ?ಇದಕ್ಕೆಲ್ಲಾ “ರಾಜಕೀಯ” ಎಂಬ ಮರ್ಯಾದೆಯನ್ನೇ ಕೊಟ್ಟುಬಿಡುತ್ತೇವೆ!
ಅಣ್ಣಾ ಹಜಾರೆ ಪ್ರಣೀತ ಲೋಕಪಾಲ ಮಸೂದೆಯಲ್ಲಿ ಇಂಥಾ ಹುಚ್ಚುಚ್ಚಾರಗಳಿಗೂ ಇತಿಶ್ರೀ ಸಿಕ್ಕೀತೇ?
Comments
ಉ: ಇಂಥಾ ಹುಚ್ಚುಚ್ಚಾರಗಳಿಗೂ ಇತಿಶ್ರೀ ಸಿಕ್ಕೀತೇ?
ಉ: ಇಂಥಾ ಹುಚ್ಚುಚ್ಚಾರಗಳಿಗೂ ಇತಿಶ್ರೀ ಸಿಕ್ಕೀತೇ?